ಆಪ್ನಿಂದ ಬಂಡಾಯವೆದ್ದು ಹೊರಬಂದು ಪಂಜಾಬ್ ಏಕ್ತಾ ಪಕ್ಷ ಕಟ್ಟಿದ್ದ ಮೂವರು ಶಾಸಕರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಭೇಟಿಯಾಗಿ ತಮ್ಮ ಪಕ್ಷವನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸುವುದಾಗಿ ಘೋಷಿಸಿದ್ದಾರೆ.
ಸುಖ್ಪಾಲ್ ಸಿಂಗ್ ಖೈರಾ, ಜಗದೇವ್ ಸಿಂಗ್, ಮತ್ತು ಪಿರ್ಮಲ್ ಸಿಂಗ್ 2019ರಲ್ಲಿ ಆಪ್ನಿಂದ ಹೊರಬಂದು ಪಂಜಾಬ್ ಏಕ್ತಾ ಪಕ್ಷ ಕಟ್ಟಿದ್ದರು. ಸುಖ್ಪಾಲ್ ಸಿಂಗ್ ಖೈರಾ ಅಮರಿಂದರ್ ಸಿಂಗ್ ವಿರುದ್ಧ ಸಿಡಿದೆದ್ದು 2015ರಲ್ಲಿ ಕಾಂಗ್ರೆಸ್ ತ್ಯಜಿಸಿ ಆಪ್ ಸೇರಿ ಶಾಸಕರಾಗಿದ್ದರು. ಮಾಜಿ ವಿರೋಧ ಪಕ್ಷದ ನಾಯಕರು ಆದ ಅವರು 2019ರಲ್ಲಿ ಆಪ್ ತ್ಯಜಿಸಿ ಹೊಸ ಪಕ್ಷ ಕಟ್ಟಿದ್ದರು. ಈಗ ಆ ಮೂವರು ಸಹ ಕಾಂಗ್ರೆಸ್ ಜೊತೆ ಗುರುತಿಸಿಕೊಳ್ಳಲು ಮುಂದಾಗಿದ್ದಾರೆ.
ಪಂಜಾಬ್ನಲ್ಲಿ ಸಿಎಂ ಅಮರಿಂದರ್ ಸಿಂಗ್ ಮತ್ತು ನವಜ್ಯೋತ್ ಸಿಂಗ್ ಸಿಧು ಬಣದ ನಡುವೆ ಬಹಿರಂಗ ಗುದ್ದಾಟ ನಡೆಯುತ್ತಿರುವ ಸಂದರ್ಭದಲ್ಲಿ ಈ ಮೂವರು ಶಾಸಕರು ಅಮರಿಂದರ್ರವರ ಆಹ್ವಾನದ ಮೇರೆಗೆ ಕಾಂಗ್ರೆಸ್ ಜೊತೆ ವಿಲೀನಕ್ಕೆ ಮುಂದಾಗಿದ್ದಾರೆ.
2022 ರಲ್ಲಿ ಪಂಜಾಬ್ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲು ತೀವ್ರ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡಿರುವ ಶೀರೋಮಣಿ ಅಕಾಲಿ ದಳ ಬಿಎಸ್ಪಿಯೊಂದಿಗೆ ಹೊಸ ಮೈತ್ರಿ ಮಾಡಿಕೊಂಡಿದೆ. ಅದು ಸಿಎಂ ಅಮರಿಂದರ್ರವರು ತೀವ್ರ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿ ಬೃಹತ್ ಪ್ರತಿಭಟನೆ ನಡೆಸಿದೆ.
ಇದನ್ನೂ ಓದಿ: ಬಿಜೆಪಿ ಬಿಟ್ಟು ಟಿಎಂಸಿ ಸೇರಿದ ಮುಕುಲ್ ರಾಯ್: Z ರಕ್ಷಣೆ ವಾಪಸ್ ಪಡೆದ ಕೇಂದ್ರ