ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಶನಿವಾರ ಮತ್ತೊಮ್ಮೆ ರಾಜಸ್ಥಾನದಲ್ಲಿ ತಮ್ಮದೇ ಸರ್ಕಾರವನ್ನು ಟೀಕಿಸಿದ್ದಾರೆ. ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳುವಲ್ಲಿ ವಿಳಂಬವನ್ನು ಪ್ರಶ್ನಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
“ನಮ್ಮ ಮಕ್ಕಳು ವರ್ಷಗಳ ಕಾಲ ಕಷ್ಟಪಟ್ಟಿರುತ್ತಾರೆ, ಪೋಷಕರು ಮಕ್ಕಳ ಟ್ಯೂಷನ್ ತರಗತಿಗಳಿಗಾಗಿ ಅರೆಹೊಟ್ಟೆ ಮಾಡಿಕೊಂಡಿರುತ್ತಾರೆ” ಎಂದು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಪೈಲಟ್, ಬಾರ್ಮರ್ ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
“ಅವರು ಪರೀಕ್ಷೆಗಳಿಗೆ ಹಾಜರಾಗುತ್ತಾರೆ, ಪತ್ರಿಕೆ ಸೋರಿಕೆಯಾಗುತ್ತದೆ, ರದ್ದುಗೊಳ್ಳುತ್ತದೆ. ಅದರ ಮೇಲೆ ಕ್ರಮ ಕೈಗೊಳ್ಳಲು ಏಕೆ ಇಷ್ಟು ಸಮಯ ಬೇಕಾಗುತ್ತದೆ? ನ್ಯಾಯ ಪಡೆಯುವುದು ಏಕೆ ಕಷ್ಟ?” ಎಂದು ಪ್ರಶ್ನಿಸಿದ್ದಾರೆ.
#WATCH | Barmer, Rajasthan | Congress leader Sachin Pilot speaks of paper leak incidents.
He says, "We will have to embolden our voices against loot & corruption. I emboldened my voice against corruption. Maybe a few people didn't like it, but I don't care. I will continue to… pic.twitter.com/EViOQkHVeY
— ANI MP/CG/Rajasthan (@ANI_MP_CG_RJ) May 6, 2023
ಪ್ರಶ್ನೆ ಪತ್ರಿಕೆ ಸೋರಿಕೆಯ ಸರಣಿ ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಕಾಡಿದೆ.
ಟೋಂಕ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಪೈಲಟ್, “ಉನ್ನತ ಹುದ್ದೆಯಲ್ಲಿರುವವರಿಗೆ ಶಿಕ್ಷಣಕ್ಕಾಗಿ ಖರ್ಚು ಮಾಡುವ ಸಾವಿರಾರು ರೂಪಾಯಿಗಳ ಮೌಲ್ಯ ತಿಳಿದಿಲ್ಲ. ಆದ್ದರಿಂದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ತುಂಬಾ ಸಮಯ ತೆಗೆದುಕೊಳ್ಳಲಾಗುತ್ತದೆ” ಎಂದು ಆರೋಪಿಸಿದ್ದಾರೆ.
ಕಳೆದ ತಿಂಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಪೈಲಟ್ ಒಂದು ದಿನದ ಉಪವಾಸವನ್ನು ನಡೆಸಿದ್ದರು. ಭಾರತೀಯ ಜನತಾ ಪಕ್ಷದ ವಸುಂಧರಾ ರಾಜೇ ಸಿಂಧಿಯಾ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ನಡೆದಿರುವ ಭ್ರಷ್ಟಾಚಾರದ ವಿರುದ್ಧ ಕ್ರಮ ಜರುಗಿಸಬೇಕೆಂದು ಪೈಲಟ್ ಧರಣಿ ಕುಳಿತ್ತಿದ್ದರು.
ಇಂತಹ ಬೆಳವಣಿಗೆಗಳು ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ನೀಡಿದ ಎಚ್ಚರಿಕೆಯನ್ನು ಅವರು ಧಿಕ್ಕರಿಸಿದ್ದರು.
“ಕೆಲವು ಜನರಿಗೆ ಇಷ್ಟವಾಗದಿದ್ದರೂ ಭ್ರಷ್ಟಾಚಾರದ ವಿರುದ್ಧ ಹೋರಾಡುವುದನ್ನು ಮುಂದುವರಿಸುತ್ತೇನೆ” ಎಂದು ಪೈಲಟ್ ಶನಿವಾರ ಹೇಳಿದ್ದಾರೆ. 2018ರ ಡಿಸೆಂಬರ್ನಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದಾಗಿನಿಂದ ಗೆಹ್ಲೋಟ್ ಮತ್ತು ಪೈಲಟ್ ನಡುವೆ ಅಧಿಕಾರದ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿದೆ.
“ದೇಶ ಮತ್ತು ರಾಜ್ಯದಲ್ಲಿ ಲೂಟಿ, ಭ್ರಷ್ಟಾಚಾರದ ವಿರುದ್ಧ ನಾವು ಧ್ವನಿ ಎತ್ತಬೇಕಾಗಿದೆ” ಎಂದು ಸಚಿನ್ ಪೈಲಟ್ ಅಭಿಪ್ರಾಯಪಟ್ಟಿದ್ದಾರೆ. “ಭ್ರಷ್ಟಾಚಾರವು ಗೆದ್ದಲಿನಂತಿದ್ದು ಅದು ದೇಶವನ್ನು ಟೊಳ್ಳಾಗಿಸುತ್ತದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿರಿ: 32,000 ಮಹಿಳೆಯರು ಐಎಸ್ಐಎಸ್ ಸೇರಿದ್ದಾರೆಂಬ ಟೀಸರ್ ತೆರವು ಮಾಡಲಾಗುವುದು: ‘ದಿ ಕೇರಳ ಸ್ಟೋರಿ’ ನಿರ್ಮಾಪಕ