Homeಮುಖಪುಟ32,000 ಮಹಿಳೆಯರು ಐಎಸ್‌ಐಎಸ್ ಸೇರಿದ್ದಾರೆಂಬ ಟೀಸರ್‌ ತೆರವು ಮಾಡಲಾಗುವುದು: ‘ದಿ ಕೇರಳ ಸ್ಟೋರಿ’ ನಿರ್ಮಾಪಕ

32,000 ಮಹಿಳೆಯರು ಐಎಸ್‌ಐಎಸ್ ಸೇರಿದ್ದಾರೆಂಬ ಟೀಸರ್‌ ತೆರವು ಮಾಡಲಾಗುವುದು: ‘ದಿ ಕೇರಳ ಸ್ಟೋರಿ’ ನಿರ್ಮಾಪಕ

- Advertisement -
- Advertisement -

ಕೇರಳದಲ್ಲಿ 32,000ಕ್ಕೂ ಹೆಚ್ಚು ಮಹಿಳೆಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದೆ ಮತ್ತು ಭಯೋತ್ಪಾದಕ ಗುಂಪು ಇಸ್ಲಾಮಿಕ್ ಸ್ಟೇಟ್‌ಗೆ (ಐಎಸ್‌ಐಎಸ್‌) ಸೇರಿಸಿಕೊಳ್ಳಲಾಗಿದೆ ಎಂದು ಪ್ರತಿಪಾದಿಸಿರುವ ಟೀಸರ್ ಅನ್ನು ತೆಗೆದುಹಾಕುವುದಾಗಿ ‘ದಿ ಕೇರಳ ಸ್ಟೋರಿ’ ಸಿನಿಮಾ ನಿರ್ಮಾಕರು ಶುಕ್ರವಾರ ಕೇರಳ ಹೈಕೋರ್ಟ್‌ಗೆ ತಿಳಿಸಿದ್ದಾರೆ ಎಂದು ‘ಲೈವ್ ಲಾ’ ವರದಿ ಮಾಡಿದೆ.

ನವೆಂಬರ್‌ನಲ್ಲಿ ಟೀಸರ್‌ ಬಿಡುಗಡೆಯಾಗಿತ್ತು. ಸುಮಾರು 32,000 ಮಹಿಳೆಯರನ್ನು ಮತಾಂತರಿಸಿ, ಇಸ್ಲಾಮಿಕ್ ಸ್ಟೇಟ್‌ಗೆ ಸೇರಿಸಲಾಗಿದೆ ಎಂದು ಟೀಸರ್‌ನಲ್ಲಿ ಪ್ರತಿಪಾದಿಸಲಾಯಿತು. ಆದರೆ ಸಾಕ್ಷ್ಯವನ್ನು ನೀಡಲು ಚಿತ್ರತಂಡ ವಿಫಲವಾಗಿದೆ. “ಮೂವರು ಯುವತಿಯರ ನೈಜ ಕಥೆ ಇದಾಗಿದೆ” ಎಂದು ಚಿತ್ರದ ಟ್ರೈಲರ್‌ನಲ್ಲಿ ಬಿಂಬಿಸಲಾಗಿದೆ.

ಸುದೀಪ್ತೋ ಸೇನ್ ನಿರ್ದೇಶನದ ‘ಕೇರಳ ಸ್ಟೋರಿ’ ಶುಕ್ರವಾರ ಬಿಡುಗಡೆಯಾಗಿದೆ.

ಈ ಸಿನಿಮಾ ಪ್ರದರ್ಶನಕ್ಕೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ಶುಕ್ರವಾರ ಹೈಕೋರ್ಟ್‌ನಲ್ಲಿ ನಡೆಯಿತು. ಚಿತ್ರದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷದ ಮಾತುಗಳನ್ನು ಪ್ರಚಾರ ಮಾಡಲಾಗಿದೆ ಎಂದು ಅರ್ಜಿದಾರರು ವಾದಿಸಿದರು. ಆದರೆ “ಈ ಸಿನಿಮಾ ನಿಜವಾದ ಘಟನೆಗಳಿಂದ ಪ್ರೇರಿತವಾಗಿದೆ” ಎಂದು ಮಾತ್ರ ಚಿತ್ರತಂಡ ಹೇಳಿರುವುದನ್ನು ಗಮನಿಸಿದ ನ್ಯಾಯಾಲಯವು ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು.

ನ್ಯಾಯಮೂರ್ತಿ ಎನ್ ನಾಗರೇಶ್ ಮತ್ತು ನ್ಯಾಯಮೂರ್ತಿ ಸೋಫಿ ಥಾಮಸ್ ಅವರನ್ನೊಳಗೊಂಡ ವಿಭಾಗೀಯ ಪೀಠವು, “ಹಿಂದೂ ಪಾತ್ರಗಳನ್ನು ನಕಾರಾತ್ಮಕವಾಗಿ ಚಿತ್ರಿಸಿದ ಇತರ ಹಲವಾರು ಚಲನಚಿತ್ರಗಳಿವೆ” ಎಂದು ಹೇಳಿದೆ.

“ಹಿಂದೂ ಸನ್ಯಾಸಿಗಳನ್ನು ಕಳ್ಳಸಾಗಾಣಿಕೆದಾರರು ಮತ್ತು ಅತ್ಯಾಚಾರಿಗಳನ್ನಾಗಿ ತೋರಿಸಿರುವ ಅನೇಕ ಚಲನಚಿತ್ರಗಳಿವೆ” ಎಂದು ನ್ಯಾಯಮೂರ್ತಿ ನಾಗರೇಶ್ ಮೌಖಿಕವಾಗಿ ತಿಳಿಸಿದ್ದಾರೆ ಎಂದು ‘ಲೈವ್ ಲಾ’ ವರದಿ ಮಾಡಿದೆ. “ಯಾರೂ ಏನನ್ನೂ ಹೇಳುವುದಿಲ್ಲ. ಇಂತಹ ಸಿನಿಮಾಗಳನ್ನು ನೀವು ಹಿಂದಿ ಮತ್ತು ಮಲಯಾಳಂನಲ್ಲಿ ನೋಡಿರಬಹುದು. ಕೇರಳದಲ್ಲಿ ನಾವು ಜಾತ್ಯತೀತರು” ಎಂದಿದ್ದಾರೆ.

ಆದಾಗ್ಯೂ, 32,000 ಮಹಿಳೆಯರ ಮತಾಂತರದ ವಿಷಯ ಹೇಗೆ ಬಂದಿದೆ ಎಂದು ನ್ಯಾಯಮೂರ್ತಿ ನಾಗರೇಶ್ ಚಿತ್ರದ ನಿರ್ಮಾಪಕರ ವಕೀಲರನ್ನು ಪ್ರಶ್ನಿಸಿದರು. “ಸಿನಿಮಾ ನಿರ್ಮಾಪಕರು ಪಡೆದಿರುವ ಮಾಹಿತಿಯನ್ನು ಇದು ಆಧರಿಸಿದೆ” ಎಂದು ಪ್ರತಿಕ್ರಿಯಿಸಿರುವ ವಕೀಲರು, “ಟ್ರೇಲರ್‌ನಲ್ಲಿ ಇದನ್ನು ತೆಗೆದುಹಾಕಲಾವುದು” ಎಂದು ಒಪ್ಪಿಕೊಂಡರು.

ಸಿನಿಮಾ ಬಿಡುಗಡೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಲು ನಿರಾಕರಿಸಿತು. “ಚಲನಚಿತ್ರದ ನಿರ್ಮಾಪಕರು ಈ ಸಿನಿಮಾಕ್ಕೆ ಹಣವನ್ನು ಸುರಿದಿದ್ದಾರೆ, ನಟರ ಪರಿಶ್ರಮದ ಬಗ್ಗೆಯೂ ಅರ್ಜಿದಾರರು ಯೋಚಿಸಬೇಕು” ಎಂದಿತು.

ಇದರ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ಈ ಸಿನಿಮಾವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾರೆ.

ಕರ್ನಾಟಕದಲ್ಲಿ ಚುನಾವಣಾ ನಿಮಿತ್ತ ಬಳ್ಳಾರಿಯಲ್ಲಿ ನಡೆದ ಬಿಜೆಪಿ ರ್‍ಯಾಲಿಯಲ್ಲಿ ಮಾತನಾಡಿದ ಅವರು, “ದಕ್ಷಿಣ ರಾಜ್ಯದಲ್ಲಿ ಭಯೋತ್ಪಾದಕ ಪಿತೂರಿಗಳು ಇರುವುದನ್ನು ಕೇರಳ ಸ್ಟೋರಿ ಬಹಿರಂಗಪಡಿಸಿದೆ. ಭಯೋತ್ಪಾದಕ ಮನಸ್ಥಿತಿ ಹೊಂದಿರುವ ಜನರೊಂದಿಗೆ ಕಾಂಗ್ರೆಸ್ ರಹಸ್ಯವಾಗಿ ರಾಜಕೀಯ ಮಾಡುತ್ತಿದೆ” ಎಂದು ಆರೋಪಿಸಿದ್ದರು.

‘ದಿ ಕೇರಳ ಸ್ಟೋರಿ’ಯನ್ನು ಮಧ್ಯಪ್ರದೇಶದಲ್ಲಿ ತೆರಿಗೆ ಮುಕ್ತಗೊಳಿಸಲಾಗಿದೆ. ಮೋದಿಯವರ ಹೇಳಿಕೆಗಳ ನಂತರ, ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಶನಿವಾರ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ಘೋಷಿಸಿತು ಎಂದು ಪಿಟಿಐ ವರದಿ ಮಾಡಿದೆ.

ಒಂದು ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸಿದಾಗ, ಅದರ ಮೇಲೆ ಮನರಂಜನಾ ತೆರಿಗೆಯನ್ನು ವಿಧಿಸಲಾಗುವುದಿಲ್ಲ, ಹೀಗಾಗಿ ಟಿಕೆಟ್ ದರ ಕಡಿಮೆಯಾಗುತ್ತದೆ. ಐತಿಹಾಸಿಕ ವಿಷಯಗಳನ್ನು ಒಳಗೊಂಡ ಅಥವಾ ಸಾಮಾಜಿಕ ಕಾರಣಗಳನ್ನು ಒಳಗೊಂಡ ಸಿನಿಮಾಗಳಿಗೆ ಮಾತ್ರ ತೆರಿಗೆ ವಿನಾಯಿತಿಯನ್ನು ಸರ್ಕಾರಗಳು ಸಾಮಾನ್ಯವಾಗಿ ನೀಡುತ್ತವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪ್ರೊಪೊಗಾಂಡ ಸಿನಿಮಾಗಳಿಗೆ ತೆರಿಗೆ ವಿನಾಯಿತಿ ನೀಡಿರುವ ಉದಾಹರಣೆಗಳಿವೆ.

ಇದನ್ನೂ ಓದಿರಿ: ಚುನಾವಣಾ ಪ್ರಚಾರದಲ್ಲಿ ಕೋಮುದ್ವೇಷ ಭಾಷಣ: ಅಡ್ಡಂಡ ಕಾರ್ಯಪ್ಪ ವಿರುದ್ಧ ಎಫ್‌ಐಆರ್‌

“ನಾವು ಈಗಾಗಲೇ ಮಧ್ಯಪ್ರದೇಶದಲ್ಲಿ ಧಾರ್ಮಿಕ ಮತಾಂತರದ ವಿರುದ್ಧ ಕಾನೂನನ್ನು ಮಾಡಿದ್ದೇವೆ” ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪಿಟಿಐಗೆ ತಿಳಿಸಿದ್ದಾರೆ. “ಈ ಚಿತ್ರವು ಜಾಗೃತಿ ಮೂಡಿಸುತ್ತದೆ, ಪ್ರತಿಯೊಬ್ಬರೂ ಈ ಚಿತ್ರವನ್ನು ನೋಡಬೇಕು. ಪೋಷಕರು, ಮಕ್ಕಳು ಮತ್ತು ಹೆಣ್ಣುಮಕ್ಕಳು ಇದನ್ನು ವೀಕ್ಷಿಸಬೇಕು” ಎಂದು ಮನವಿ ಮಾಡಿದ್ದಾರೆ.

‘ಲವ್ ಜಿಹಾದ್’, ಧಾರ್ಮಿಕ ಮತಾಂತರ ಮತ್ತು ಭಯೋತ್ಪಾದನೆಯ ಪಿತೂರಿಗಳನ್ನು ಸಿನಿಮಾ ಬಯಲಿಗೆಳೆಯುತ್ತದೆ ಎಂದು ಚೌಹಾಣ್ ಹೇಳಿದ್ದಾರೆ.

‘ಲವ್ ಜಿಹಾದ್’ ಎಂಬುದು ಹಿಂದುತ್ವವಾದಿಗಳು ಸೃಷ್ಟಿಸಿರುವ ಪಿತೂರಿ ಸಿದ್ಧಾಂತವಾಗಿದೆ. ಹಿಂದೂ ಯುವತಿಯರನ್ನು ಇಸ್ಲಾಂಗೆ ಮತಾಂತರಿಸಲು ಮುಸ್ಲಿಂ ಪುರುಷರು ಪ್ರೇಮದೊಳಗೆ ಸಿಲುಕಿಸುತ್ತಾರೆಂಬುದು ಈ ಪಿತೂರಿ ಸಿದ್ಧಾಂತದ ಸಾರಾಂಶವಾಗಿದೆ.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಏಪ್ರಿಲ್ 30 ರಂದು ಪ್ರತಿಕ್ರಿಯಿಸಿ, ಈ ಸಿನಿಮಾದ ಮೂಲಕ ಕೇರಳ ರಾಜ್ಯವನ್ನು ಧಾರ್ಮಿಕ ಉಗ್ರವಾದದ ಕೇಂದ್ರವೆಂದು ಬಿಂಬಿಸಲು ಆರ್‌ಎಸ್‌ಎಸ್ ಯತ್ನಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...