ಇತ್ತೀಚೆಗೆ ಜೈಪುರ-ಮುಂಬೈ ಸೆಂಟ್ರಲ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ನಲ್ಲಿ ರೈಲಿನಲ್ಲಿ ಮೂವರು ಮುಸ್ಲಿಂ ಪ್ರಯಾಣಿಕರು ಮತ್ತು ಅವರ ಹಿರಿಯ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ ರೈಲ್ವೇ ರಕ್ಷಣಾ ಪಡೆ ಕಾನ್ಸ್ಟೆಬಲ್ ಚೇತನ್ಸಿನ್ಹ್ ಚೌಧರಿಯನ್ನು ಬುಧವಾರ ಸೇವೆಯಿಂದ ವಜಾಗೊಳಿಸಲಾಗಿದೆ.
ವಿಭಾಗೀಯ ಭದ್ರತಾ ಆಯುಕ್ತ ಎಸ್ಕೆಎಸ್ ರಾಥೋರ್ ಅವರು, ”ಘೋರ ಅಪರಾಧ ಮಾಡಿದ ಕಾರಣಕ್ಕಾಗಿ ಚೌಧರಿ ಅವರನ್ನು ವಜಾಗೊಳಿಸಲಾಗಿದೆ” ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಜುಲೈ 31ರಂದು ಜೈಪುರ-ಮುಂಬೈ ಸೆಂಟ್ರಲ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ನಲ್ಲಿ ರೈಲ್ವೇ ರಕ್ಷಣಾ ಪಡೆ ಕಾನ್ಸ್ಟೆಬಲ್ ಚೇತನ್ಸಿನ್ಹ್ ಚೌಧರಿ ಅವರು, ಸಹಾಯಕ ಸಬ್ ಇನ್ಸ್ಪೆಕ್ಟರ್ ಟಿಕಾರಾಂ ಮೀನಾ ಮತ್ತು ಮೂವರು ಮುಸ್ಲಿಂ ಪ್ರಯಾಣಿಕರಾದ ಅಬ್ದುಲ್ ಕದರ್ಭಾಯ್ ಭಾನ್ಪುರವಾಲಾ, ಸದರ್ ಮೊಹಮ್ಮದ್ ಹುಸೇನ್ ಮತ್ತು ಅಸ್ಗರ್ ಅಬ್ಬಾಸ್ ಶೇಖ್ ಅವರ ಮೇಲೆ ಗುಂಡು ಹಾರಿಸಿ ಕೊಂದಿದ್ದರು.
ಈ ಪ್ರಕರಣದಲ್ಲಿ ಚೌಧರಿ ಅವರು ಕೋಪದಲ್ಲಿ ಅವರ ಹಿರಿಯ ಅಧಿಕಾರಿ ಮೀನಾಳನ್ನು ಕೊಂದಿರಬಹುದು, ಆದರೆ ಮೂವರು ಪ್ರಯಾಣಿಕರನ್ನು ದ್ವೇಷದಿಂದ ಆಯ್ದು ಕೊಲ್ಲಲಾಗಿದೆ ಎಂಬುದು ತನಿಖೆಯಿಂದ ದೃಢಪಟ್ಟಿದೆ ಎಂದು ನ್ಯಾಯಾಲಯ ಹೇಳಿದೆ.
”ಚೌಧರಿ ಅವರ ಕ್ರಮಗಳು ಘೋರ ಅಪರಾಧದ ವರ್ಗಕ್ಕೆ ಸೇರಿರುವುದರಿಂದ, ಅವರನ್ನು ವಜಾಗೊಳಿಸುವ ಮೊದಲು ಆಂತರಿಕ ವಿಚಾರಣೆಯನ್ನು ಆಯೋಜಿಸುವುದು ಸಾಧ್ಯವಿಲ್ಲ” ಎಂದು ರೈಲ್ವೆ ರಕ್ಷಣಾ ಪಡೆ ಹೇಳಿದೆ.
ಈ ಆರೋಪಿಯು 2017ರಲ್ಲಿ ಮುಸ್ಲಿಂ ವ್ಯಕ್ತಿಗೆ ಕಿರುಕುಳ ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 31ರಂದು ನಡೆದ ಹತ್ಯೆಯ ಮೊದಲು, ಚೌಧರಿ ಕನಿಷ್ಠ ಮೂರು ಶಿಸ್ತು ಸಂಬಂಧಿತ ಘಟನೆಗಳಲ್ಲಿ ಭಾಗಿಯಾಗಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: ಮಧ್ಯಪ್ರದೇಶ: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಜೈಲಿನಲ್ಲಿದ್ದು ಹೊರಬಂದ ವ್ಯಕ್ತಿ, ಮಾಡಿದ್ದು ಮತ್ತದೇ ಹೇಯ ಕೃತ್ಯ