ರಾಜಸ್ಥಾನ ವಿಧಾನಸಭೆಯ 200 ಸ್ಥಾನಗಳ ಪೈಕಿ 199 ಸ್ಥಾನಗಳಿಗೆ ಇಂದು ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆದಿದ್ದು, ಸಂಜೆ 5 ಗಂಟೆಯವರೆಗೆ ಶೇಖಡಾ 68ರಷ್ಟು ಮತ ಚಲಾವಣೆಯಾಗಿದೆ.
ರಾಜ್ಯದ ಶ್ರೀಗಂಗಾನಗರದ ಕರಣ್ಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಗುರ್ಮೀತ್ ಸಿಂಗ್ ಕೂನಾರ್ ನಿಧನರಾದ ಕಾರಣ ಚುನಾವಣೆಯನ್ನು ಮುಂದೂಡಲಾಗಿದ್ದು, ಹಾಗಾಗಿ ಇಂದು ಮತದಾನ ನಡೆದಿಲ್ಲ.
ಮತದಾನದ ವೇಳೆ ಸಿಕಾರ್ ಮತ್ತು ದೀಗ್ ಜಿಲ್ಲೆಗಳಲ್ಲಿ ಕಲ್ಲು ತೂರಾಟದ ಘಟನೆಗಳು ನಡೆದಿವೆ ಮತ್ತು ಧೋಲ್ಪುರದಲ್ಲಿ ಹಿಂಸಾಚಾರ ವರದಿಯಾಗಿದೆ.
ಮತದಾರರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಸಾರ, ವಿಧಾನಸಭಾ ಸ್ಪೀಕರ್ ಸಿಪಿ ಜೋಶಿ, ಪ್ರಮುಖ ಸಚಿವರಾದ ಶಾಂತಿ ಧರಿವಾಲ್, ಬಿಡಿ ಕಲ್ಲ, ಭನ್ವರ್ ಸಿಂಗ್ ಭಾಟಿ, ಸಲೇಹ್ ಮೊಹಮ್ಮದ್, ಮಮತಾ ಭೂಪೇಶ್, ಪ್ರತಾಪ್ ಸಿಂಗ್ ಖಚರಿಯಾವಾಸ್, ರಾಜೇಂದ್ರ, ಯಾದವ್, ಶಕುಂತ್ಲಾ ರಾವತ್, ಉದಯ್ ಲಾಲ್ ಅಂಜನಾ, ಮಹೇಂದ್ರಜೀತ್ ಸಿಂಗ್ ಮಾಳವಿಯಾ, ಅಶೋಕ್ ಚಂದನಾ ಸೇರಿದಂತೆ ಹಲವರ ಭವಿಷ್ಯ ಬರೆದಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಒಟ್ಟು 1,862 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಒಟ್ಟು ಮತದಾರರ ಸಂಖ್ಯೆ 5.25 ಕೋಟಿ ಇದೆ. ಇವರಲ್ಲಿ 1.71 ಕೋಟಿ ಮತದಾರರು 18 ರಿಂದ 30 ವರ್ಷದೊಳಗಿನವರಾಗಿದ್ದು, 22.61 ಲಕ್ಷ ಮಂದಿ 18-19 ವಯೋಮಾನದ ಹೊಸ ಮತದಾರರಿದ್ದಾರೆ. ಡಿಸೆಂಬರ್ 3ರಂದು ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲಿದೆ.
ಇದನ್ನೂ ಓದಿ: ಪ್ರಶ್ನೆಗಾಗಿ ನಗದು ಆರೋಪ: ಮಹುವಾ ಮೊಯಿತ್ರಾ ವಿರುದ್ಧ ತನಿಖೆ ಆರಂಭಿಸಿದ ಸಿಬಿಐ