ಬಿಹಾರದಲ್ಲಿ ನಡೆದ ಜಾತಿ ಸಮೀಕ್ಷೆಯ ಮಾದರಿಯಲ್ಲಿ ರಾಜಸ್ಥಾನದಲ್ಲಿ ಜಾತಿ ಸಮೀಕ್ಷೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶುಕ್ರವಾರ ರಾತ್ರಿ ಘೋಷಿಸಿದ್ದಾರೆ.
ಪಕ್ಷದ ವಾರ್ ರೂಂನಲ್ಲಿ ನಡೆದ ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿಯ (ಆರ್ಪಿಸಿಸಿ) ಕೋರ್ ಕಮಿಟಿ ಸಭೆಯಲ್ಲಿ ಈ ವಿಷಯ ಚರ್ಚಿಸಲಾಗಿದೆ.
ಈ ಸಭೆಯಲ್ಲಿ ರಾಜಸ್ಥಾನದ ಕಾಂಗ್ರೆಸ್ ಉಸ್ತುವಾರಿ ಸುಖಜೀಂದರ್ ರಾಂಧವಾ, ಸಿಎಂ ಗೆಹ್ಲೋಟ್, ಆರ್ಪಿಸಿಸಿ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಮತ್ತು ಇತರ ನಾಯಕರು ಭಾಗವಹಿಸಿದ್ದರು.
”ಬಿಹಾರದಲ್ಲಿ ನಡೆದ ಜಾತಿ ಸಮೀಕ್ಷೆಯಂತೆ ರಾಜಸ್ಥಾನ ಸರ್ಕಾರ ಕೂಡ ಜಾತಿ ಸಮೀಕ್ಷೆ ನಡೆಸಲಿದೆ” ಎಂದು ಸಭೆಯ ನಂತರ ಗೆಹ್ಲೋಟ್ ಸುದ್ದಿಗಾರರಿಗೆ ತಿಳಿಸಿದರು.
”ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜಾತಿ ಸಮೀಕ್ಷೆ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಭಾಗವಹಿಸುವ ಪರಿಕಲ್ಪನೆಯನ್ನು ರಾಜ್ಯದಲ್ಲಿ ಮುಂದುವರಿಸಲಾಗುವುದು” ಎಂದು ಹೇಳಿದರು.
”ಪಕ್ಷದ ಆದೇಶವನ್ನು ಗಮನದಲ್ಲಿಟ್ಟುಕೊಂಡು ರಾಜಸ್ಥಾನ ಸರ್ಕಾರ ಈ ಅಭಿಯಾನವನ್ನು ಘೋಷಿಸಬೇಕು ಎಂದು ನಾವು ನಿರ್ಧರಿಸಿದ್ದೇವೆ” ಎಂದು ಅವರು ಹೇಳಿದರು.
”ದೇಶದೊಳಗೆ ನಾನಾ ಜಾತಿಗಳಿವೆ.. ನಾನಾ ಧರ್ಮದ ಜನರು ಇಲ್ಲಿ ವಾಸಿಸುತ್ತಿದ್ದಾರೆ, ಜಾತಿಯವರು ಬೇರೆ ಬೇರೆ ಕೆಲಸ ಮಾಡುತ್ತಾರೆ, ಯಾವ ಜಾತಿಯ ಜನಸಂಖ್ಯೆ ಎಷ್ಟಿದೆ ಎಂದು ತಿಳಿದುಕೊಂಡರೆ ಅವರಿಗಾಗಿ ನಾವು ರೂಪಿಸಬೇಕಾದ ಯೋಜನೆಗಳೇನು ಎಂದು ತಿಳಿಯಬಹುದು. ಜಾತಿವಾರು ಯೋಜನೆಗಳನ್ನು ಸಿದ್ಧಪಡಿಸುವುದು ನಮಗೆ ಸುಲಭವಾಗಿದೆ” ಎಂದು ಅವರು ಹೇಳಿದರು.
”ಸಭೆಯಲ್ಲಿ ಜಾತಿ ಆಧಾರಿತ ಸಮೀಕ್ಷೆಯ ಹೊರತಾಗಿ ಪೂರ್ವ ರಾಜಸ್ಥಾನ ಕಾಲುವೆ ಯೋಜನೆ (ಇಆರ್ಸಿಪಿ) ವಿಷಯದ ಕುರಿತು ಯಾತ್ರೆಯ ಕುರಿತು ಚರ್ಚೆಗಳು ನಡೆದವು” ಎಂದು ರಾಂಧವಾ ಹೇಳಿದರು.
ಇದನ್ನೂ ಓದಿ: ಜಾತಿ ಗಣತಿ ಪ್ರಕಟಿಸುವ ಬಿಹಾರ ಸರ್ಕಾರದ ನಿರ್ಧಾರವನ್ನು ತಡೆಯುವುದಿಲ್ಲ: ಸುಪ್ರೀಂ