ಅಕ್ರಮ ಭೂ ಹಗರಣದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧಿತರಾಗಿರುವ ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಇಂದು ಬಿಗಿ ಭದ್ರತೆಯ ನಡುವೆ ವಿಧಾನಸಭೆಗೆ ಆಗಮಿಸಿದರು. ನೂತನ ಮುಖ್ಯಮಂತ್ರಿ ಚಂಪೈ ಸೊರೇನ್ ಅವರು ತಮ್ಮ ಸರ್ಕಾರದ ಬಹುಮತವನ್ನು ಸಾಬೀತುಪಡಿಸಲು ವಿಶ್ವಾಸ ಮತವನ್ನು ಎದುರಿಸುತ್ತಿದ್ದಾರೆ.
ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಸೊರೇನ್, ‘ನನ್ನ ಬಂಧನದಲ್ಲಿ ರಾಜಭವನದ ಪಾತ್ರವೂ ಇದೆ’ ಎಂದು ಆರೋಪಿಸಿದರು. ‘ಜನವರಿ 31ರ ರಾತ್ರಿ ದೇಶದಲ್ಲಿ ಮೊದಲ ಬಾರಿಗೆ, ಒಬ್ಬ ಮುಖ್ಯಮಂತ್ರಿಯನ್ನು ಬಂಧಿಸಲಾಯಿತು… ಈ ಘಟನೆಯಲ್ಲಿ ರಾಜಭವನವೂ ಭಾಗಿಯಾಗಿದೆ ಎಂದು ನಾನು ನಂಬುತ್ತೇನೆ’ ಎಂದು ಅವರು ಹೇಳಿದರು.
‘ಭಾರತದ ಇತಿಹಾಸದಲ್ಲಿ ಈ ದಿನ ಕಪ್ಪು ಅಧ್ಯಾಯವಾಗಿ ನೆನಪಿನಲ್ಲಿ ಉಳಿಯುತ್ತದೆ’ ಎಂದು ಸೋರೆನ್ ಹೇಳಿದರು. ‘ಜಾರ್ಖಂಡ್ ವಿಧಾನಸಭೆಯಲ್ಲಿ ಆಡಳಿತಾರೂಢ ಮೈತ್ರಿಕೂಟಕ್ಕೆ ಚಂಪೈನ್ ಸೊರೇನ್ ಸಂಪೂರ್ಣ ಬೆಂಬಲವನ್ನು ಹೊಂದಿದ್ದಾರೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಂಚಿಯ ವಿಶೇಷ ನ್ಯಾಯಾಲಯವು ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಕಾರ್ಯನಿರ್ವಾಹಕ ಅಧ್ಯಕ್ಷ ಹೇಮಂತ್ ಸೊರೇನ್ ಅವರಿಗೆ ವಿಶ್ವಾಸ ಮತದಲ್ಲಿ ಭಾಗವಹಿಸಲು ಅವಕಾಶ ನೀಡಿತು. ‘ನಾನು ವಿಧಾನಸಭೆಯ ಸದಸ್ಯನಾಗಿದ್ದೇನೆ ಮತ್ತು ತನ್ನ ಪಕ್ಷಕ್ಕೆ ನಿರ್ಣಾಯಕವಾದ ವಿಶೇಷ ಅಧಿವೇಶನದಲ್ಲಿ ಭಾಗವಹಿಸುವ ಹಕ್ಕಿದೆ’ ಎಂದು ಸೊರೇನ್ ನ್ಯಾಯಾಲಯದ ಮುಂದೆ ಮನವಿ ಮಾಡಿದ್ದರು.
ಹೇಮಂತ್ ಸೊರೇನ್ ಅವರನ್ನು ಬಂಧಿಸಿದ ಮೂರು ದಿನಗಳ ನಂತರ, ಜಾರ್ಖಂಡ್ ಮುಕ್ತಿ ಮೋರ್ಚಾದ ಹಿರಿಯ ನಾಯಕ ಚಂಪೈ ಸೊರೇನ್ ಅವರು ಕಳೆದ ಶುಕ್ರವಾರ ಜಾರ್ಖಂಡ್ನ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
₹600 ಕೋಟಿ ಭೂ ಹಗರಣ ಮತ್ತು ಅದರ ಆದಾಯದ ಲಾಂಡರಿಂಗ್ನಲ್ಲಿ ಹೇಮಂತ್ ಸೊರೇನ್ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಭೂ ಹಗರಣವು ಸರ್ಕಾರಿ ಜಮೀನಿನ ಮಾಲೀಕತ್ವವನ್ನು ಬದಲಾಯಿಸುವ ಮತ್ತು ಅದನ್ನು ಬಿಲ್ಡರ್ಗಳಿಗೆ ಮಾರಾಟ ಮಾಡುವ ‘ದೊಡ್ಡ ದಂಧೆ’ಯನ್ನು ಒಳಗೊಂಡಿದೆ ಎಂದು ಇಡಿ ಆರೋಪಿಸಿದೆ.
ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರು ಮತ್ತು ರಾಂಚಿಯ ಡೆಪ್ಯುಟಿ ಕಮಿಷನರ್ ಆಗಿ ಸೇವೆ ಸಲ್ಲಿಸಿದ 2011 ರ ಬ್ಯಾಚ್ ಐಎಎಸ್ ಅಧಿಕಾರಿ ಛಾವಿ ರಂಜನ್ ಸೇರಿದಂತೆ ಈ ಪ್ರಕರಣದಲ್ಲಿ ಸಂಸ್ಥೆ ಇದುವರೆಗೆ 14 ಜನರನ್ನು ಬಂಧಿಸಿದೆ.
ಇದನ್ನೂ ಓದಿ; ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ಸಂಜಯ್ ಸಿಂಗ್ಗೆ ಅನುಮತಿಸದ ರಾಜ್ಯಸಭಾ ಅಧ್ಯಕ್ಷ