ಬಿಜೆಪಿ ದೇಶಾದ್ಯಂತ ಒಡೆದು ಆಳುವ ನೀತಿಯ ಮೂಲಕ ಅಧಿಕಾರವನ್ನು ಹಿಡಿಯುತ್ತದೆ ಎಂಬ ಆರೋಪ ದೇಶದ ಅನೇಕ ರಾಜ್ಯಗಳಲ್ಲಿ ಕೇಳಿಬಂದಿದೆ. ಇದಕ್ಕೆ ತಾಜಾ ಉದಾಹರಣೆಯಾಗಿ ಎಲ್ಜೆಪಿ ಪಕ್ಷವನ್ನು ಬಿಜೆಪಿ ಒಡೆಯುವ ಪ್ರಯತ್ನಕ್ಕೆ ಕೈ ಹಾಕಿದೆ. ಹಾಗೇ ವರ್ಷಗಳ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಬೆಂಬಲಿತ ಸಂಘಟನೆಗಳು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟಿದ್ದರು. ಪಶ್ಚಿಮ ಬಂಗಾಳ ಚುನಾವಣೆಯ ಸಂದರ್ಭದಲ್ಲಿ ಅಲ್ಲಿ ಕೂಡ ಪ್ರತ್ಯೇಕ ಉತ್ತರ ಪ್ರಾಂತ್ಯದ ರಚನೆಗೆ ಬಿಜೆಪಿ ಪುಷ್ಠಿ ನೀಡಿತ್ತು. ಈಗ ತಮಿಳು ನಾಡಿನಲ್ಲಿ ಕೂಡ ಪ್ರತ್ಯೇಕ ರಾಜ್ಯ ರಚನೆಯ ಚರ್ಚೆಯನ್ನು ಬಿಜೆಪಿಯೇ ಹುಟ್ಟುಹಾಕಿದೆ. ಕೊಂಗನಾಡು ಪ್ರತ್ಯೇಕ ರಾಜ್ಯ ಬೇಡಿಕೆಯ ಕೂಗು ಮತ್ತೊಮ್ಮೆ ತಮಿಳುನಾಡಿನಲ್ಲಿ ಆರಂಭವಾಗಿದೆ.
ಬಿಜೆಪಿ ತಮಿಳು ನಾಡು ರಾಜ್ಯಾಧ್ಯಕ್ಷ ಎಲ್ ಮುರುಗನ್ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದೆ. ಇದೇ ಸಂದರ್ಭದಲ್ಲಿ ಕೊಂಗ ನಾಡು ಪ್ರತ್ಯೇಕ ರಾಜ್ಯದ ಬೇಡಿಕೆ ಮುನ್ನೆಲೆಗೆ ಬಂದಿರುವುದು ಕೇವಲ ಕಾಕತಾಳೀಯವಲ್ಲ. ಬಿಜೆಪಿ ಆರಂಭದಿಂದಲೂ ಕೊಂಗು ನಾಡು ಎಂದು ಕರೆಯಲ್ಪಡುವ ಪಶ್ಚಿಮ ತಮಿಳುನಾಡಿನ ನಾಯಕರನ್ನೇ ಪಕ್ಷದ ಮುಂಚೂಣಿಯಲ್ಲಿ ನಿಲ್ಲಿಸಿದೆ. ಬಿಜೆಪಿಯ ಮತ ಬ್ಯಾಂಕ್ ಇರುವುದೂ ಈ ಪ್ರಾಂತ್ಯದಲ್ಲಿಯೇ.
ದೆಹಲಿಯ ಅಧಿಕಾರ ಕೇಂದ್ರದ ಪಡಸಾಲೆಯಲ್ಲಿ ಕೆಲಸ ಮಾಡುವ ಕೆಲವರು ವಾರದ ಆರಂಭದಲ್ಲಿ ತಮಿಳುನಾಡು ಟ್ವಿಟರ್ ವಲಯದಲ್ಲಿ ಪ್ರತ್ಯೇಕತೆಯ ಚರ್ಚೆಗೆ ಮುನ್ನಡಿ ಬರೆದಿದ್ದಾರೆ. ಕೆಲವು ಅಧಿಕೃತ ಪ್ರಕಟಣೆಗಳಲ್ಲಿ, ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ರಾಜ್ಯ ಸಚಿವ ಎಲ್ ಮುರುಗನ್ ಅವರ ಬಯೋ ಡೇಟಾದಲ್ಲಿ ಹುಟ್ಟಿದ ಜಿಲ್ಲೆ ಊರುಗಳ ವಿಳಾಸದ ಬದಲಾಗಿ ಕೊಂಗು ನಾಡು ಎಂದು ನಮೂದಿಸಲಾಗಿದೆ. ಇದು ಆಕಸ್ಮಿಕವಾಗಿ ನಡೆದ ಬೆಳವಣಿಗೆಯಲ್ಲ. ಬಿಜೆಪಿ ಹೊಸದಾಗಿ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಕೂಡ ಅಣ್ಣಾಮಲೈ ಅವರನ್ನು. ಅಣ್ಣಾ ಮಲೈ ಕೂಡ ಇದೇ ಕೊಂಗು ನಾಡು ಪ್ರದೇಶದವರು.
ಇದನ್ನೂ ಓದಿ: ತಮಿಳುನಾಡು ಸರ್ಕಾರದ ಆರ್ಥಿಕ ಸಲಹಾ ಮಂಡಳಿಯ ಭಾಗವಾದ ರಘುರಾಂ ರಾಜನ್, ಎಸ್ತರ್ ಡುಫ್ಲೊ
2021ರ ವಿಧಾನಸಭೆ ಚುನಾವಣೆಯಲ್ಲಿ ಯಶಸ್ಸಿನ ಕನಸು ಕಾಣುತ್ತಿದ್ದ ಬಿಜೆಪಿಗೆ ಫಲಿತಾಂಶಗಳು ಅಷ್ಟು ಸಮಧಾನಕಾರಿಗಾಗಿ ಕಾಣಲಿಲ್ಲ. ತಮಿಳು ಸಂಸ್ಕೃತಿಯನ್ನು ಹಿಂದುತ್ವದ ಅಜೆಂಡಾದ ಮೂಲಕ ಒಡೆಯಲು ಸಾಧ್ಯವಿಲ್ಲವೆಂಬ ವಿಷಯ ಅರಿವಾಗುತ್ತಿದ್ದಂತೆ ಬಿಜೆಪಿ ತಮಿಳರನ್ನು ತಮಿಳರಿಂದಲೇ ಒಡೆಯುವ ಪ್ರಯತ್ನಕ್ಕೆ ಕೈ ಹಾಕಿದೆ.
ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ತಮಿಳು ನಾಡಿನಲ್ಲಿ ಅಧಿಕಾರವನ್ನು ಹಿಡಿಯುತ್ತಿದ್ದಂತೆ ಈ ಪ್ರತ್ಯೇಕತೆಯ ಕೂಗು ತೀವ್ರಗೊಂಡಿದೆ. ಸ್ಟಾಲಿನ್ ಕೇಂದ್ರ ಸರ್ಕಾರವನ್ನು ಒಕ್ಕೂಟ ಸರ್ಕಾರ ಎಂದು ಕರೆಯುವ ನಿರ್ಣಯ ಕೈಗೊಂಡಿರುವುದು ಹಾಗೂ ಜಿಎಸ್ಟಿ ಮತ್ತು ನೀಟ್ ಕುರಿತು ಪರಿಶೀಲನೆಗೆ ಸದನ ಸಮಿತಿಯನ್ನು ರಚಿಸಿರುವುದು ಕೇಂದ್ರ ಸರ್ಕಾರದ ಅಸಮಾಧಾನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಸ್ಟಾಲಿನ್ ತಂತ್ರಕ್ಕೆ ಬಿಜೆಪಿ ಪ್ರತಿ ತಂತ್ರವಾಗಿ ಪ್ರತ್ಯೇಕ ಕೊಂಗುನಾಡು ಬೇಡಿಕೆಯನ್ನು ಹುಟ್ಟುಹಾಕಿದೆ.
ಕೊಂಗು ನಾಡು ರಾಜ್ಯದ ಬೇಡಿಕೆ ಆರಂಭವಾಗಿರುವುದು ಇದೇ ಮೊದಲಲ್ಲ. 2013 ರಲ್ಲಿಯೂ ಇದೇ ಕೂಗು ಮತ್ತು ಆಗ್ರಹಗಳು ತಮಿಳುನಾಡಿನಲ್ಲಿ ಕೇಳಿಬಂದಿದ್ದವು. 1950 ರಲ್ಲಿ ಪ್ರತ್ಯೇಕ ಭಾಷಾವಾರು ಪ್ರಾಂತ್ಯದ ಆಧಾರದಲ್ಲಿ ರಾಜ್ಯಗಳ ರಚನೆಯಾದಾಗಿನಿಂದಲೂ ಈ ಬೇಡಿಕೆ ಕೇಳಿ ಬರುತ್ತಿದೆ. ಪ್ರತ್ಯೇಕ ರಾಜ್ಯ ಹೋರಾಟಕ್ಕಾಗಿ ಹಲವು ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಹುಟ್ಟಿಕೊಂಡಿವೆ. ಈ ಪಕ್ಷಗಳು ರಾಜಕೀಯದಲ್ಲಿ ಯಶಸ್ವಿಯಾಗದ್ದರಿಂದ ಮತ್ತು ಡಿಎಂಕೆ ಎಐಡಿಎಂಕೆಗಳ ಚೆನ್ನೈ ಕೇಂದ್ರಿತ ರಾಜಕಾರಣದಿಂದ ಕೊಂಗು ನಾಡು ಚರ್ಚೆ ಇದುವರೆಗೆ ಮುಖ್ಯವಾಹಿನಿಗೆ ಬಂದಿರಲಿಲ್ಲ. ಕಾಲ ಬದಲಾದಂತೆಲ್ಲ ತಮಿಳು ನಾಡಿನ ರಾಜಕೀಯ ಚಿತ್ರಣವೂ ಬದಲಾಗುತ್ತಿದೆ. 2 ದ್ರಾವಿಡ ಪಕ್ಷಗಳ ರಾಜಕೀಯ ಮೇಲಾಟದ ನಡುವೆ ರಾಜ್ಯದಲ್ಲಿ ಬೇರೂರಲು ಯತ್ನಿಸುತ್ತಿರುವ ಬಿಜೆಪಿಗೆ ಹದವಾದ ಮಣ್ಣು ಕೊಂಗು ನಾಡಿನಲ್ಲಿ ಕಾಣಿಸುತ್ತಿದೆ. ಬಿಜೆಪಿ ಈ ಪ್ರಾತ್ಯಂದಲ್ಲಿ ಪ್ರಬಲವಾದಂತೆಲ್ಲ ಪ್ರತ್ಯೇಕ ರಾಜ್ಯದ ಕೂಗು ಬಲಗಳ್ಳುತ್ತಿರುವುದು ವಿಶೇಷ.
ಇದನ್ನೂ ಓದಿ: ತಮಿಳುನಾಡು ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ- ಎಐಡಿಎಂಕೆಯಲ್ಲಿ ಬಂಡಾಯದ ಬಿರುಗಾಳಿ
ಏನಿದು ಕೊಂಗು ನಾಡು ?
ತಮಿಳು ನಾಡಿನ ಪಶ್ಚಿಮ ಭಾಗವನ್ನು ಕೊಂಗು ನಾಡು ಎಂದು ಕರೆಯಲಾಗುತ್ತದೆ. ಪ್ರಾಚೀನ ಕೊಂಗುನಾಡು ಪ್ರದೇಶವು ಹಲವಾರು ಜಿಲ್ಲೆಗಳು ಮತ್ತು ತಾಲ್ಲೂಕುಗಳಿಂದ ಕೂಡಿದ್ದು, ಇವುಗಳನ್ನು ಪ್ರಸ್ತುತ ಪಳನಿ, ಕರುರು, ಧರಪುರಂ, ತಿರುಚೆಂಗೋಡು, ಈರೋಡ್, ಪೊಲ್ಲಾಚಿ, ನಮ್ಮಕ್ಕಲ್, ಸೇಲಂ, ಧರ್ಮಪುರಿ, ನೀಲಗಿರಿ, ಅವಿನಾಶಿ, ಸತ್ಯಮಂಗಲಂ, ಕೊಯಮತ್ತೂರು ಎಂದು ಕರೆಯಲಾಗುತ್ತದೆ. ಬೃಹತ್ ಸಂಪತ್ತು, ಆಹ್ಲಾದಕರ ವಾತಾವರಣ ಮತ್ತು ವಿಶಿಷ್ಟ ಲಕ್ಷಣಗಳಿಂದ ಕೂಡಿರುವ ಕೊಂಗುನಾಡಿನಲ್ಲಿ ಚೇರ, ಪಾಂಡ್ಯ, ಚೋಳ, ಹೊಯ್ಸಳ, ಮುಸ್ಲಿಂ ಆಡಳಿತಗಾರರು ಮತ್ತು ಅಂತಿಮವಾಗಿ ಬ್ರಿಟಿಷರು ಆಳ್ವಿಕೆ ನಡೆಸಿದ್ದಾರೆ . ತಮಿಳುನಾಡಿನ ಇತರ ಭಾಗಗಳಿಂದ ಭಾಷಿಕ ಭಿನ್ನತೆ ಮತ್ತು ಭೌಗೋಳಿಕ ಭಿನ್ನತೆಯನ್ನು ಹೊಂದಿರುವ ಈ ಪ್ರದೇಶ ಕರ್ನಾಟಕದ ಗಡಿಗೆ ಹೊಂದಿಕೊಂಡಂತೆಯೇ ಇರುವುದು ವಿಶೇಷ. ಪ್ರಾಕೃತಿಕ ಸಂಪತ್ತಿನಿಂದ ಕೂಡಿರುವ ಈ ಭಾಗದಲ್ಲಿ ಅನೇಕ ನದಿಗಳು ಹರಿಯುತ್ತಿದ್ದು ಸಮೃದ್ಧ ಕೃಷಿಗೆ ಕೊಂಗುನಾಡು ಪ್ರಸಿದ್ಧವಾಗಿದೆ.
ಇಂದು ಸೇಲಂ, ಕೃಷ್ಣಗಿರಿ, ಕೊಯಂಬತ್ತೂರು ನಗರಗಳು ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕೆ ದೇಶಾದ್ಯಂತ ಪ್ರಸಿದ್ಧವಾಗಿವೆ.
ಇದನ್ನೂ ಓದಿ: ‘ಕೇಂದ್ರ ಸರ್ಕಾರ’ ಅಲ್ಲ, ‘ಒಕ್ಕೂಟ ಸರ್ಕಾರ’: ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್!
ತಮಿಳು ನಾಡಿನಲ್ಲಿ ಕಳೆದ 10 ವರ್ಷಗಳಲ್ಲಿ ಬಿಜೆಪಿಗೆ ನೆಲೆ ಸಿಕ್ಕಿರುವುದು ಇಲ್ಲಿ ಮಾತ್ರ. ಬಿಜೆಪಿ ತನ್ನ ಮತಬ್ಯಾಂಕ್ ವಿಸ್ತರಣೆಯ ಉದ್ದೇಶಕ್ಕೆ ಪ್ರತ್ಯೇಕತೆಯ ಕೂಗನ್ನು ಸಶಕ್ತವಾಗಿ ಬಳಸಿಕೊಳ್ಳಲು ಮುಂದಾಗಿದೆ ಎಂಬುದು ಪ್ರತ್ಯೇಕ ರಾಜ್ಯವನ್ನು ವಿರೋಧಿಸುವವರ ಆರೋಪವಾಗಿದೆ.
ಸುಮಾರು 61 ವಿಧಾನಸಭಾ ಕ್ಷೇತ್ರಗಳು ಹಾಗೂ 10 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಈ ಕೊಂಗು ನಾಡು ಪ್ರಾಂತ್ಯವನ್ನು ಪ್ರತ್ಯೇಕ ರಾಜ್ಯವನ್ನಾಗಿಸುವುದು ಅಥವಾ ಪುದಚ್ಚೇರಿ ಮಾದರಿಯಲ್ಲಿ ಕೇಂದ್ರಾಡಳಿತ ಪ್ರದೇಶವನ್ನಾಗಿಸುವುದು ಬೆಜೆಪಿಯ ಲೆಕ್ಕಾಚಾರ. ಹೆಚ್ಚುವರಿಯಾಗಿ ಸುತ್ತಲಿನ ಒಂದೆರಡು ಜಿಲ್ಲೆಗಳನ್ನು ಸೇರಿಸಿ 90 ವಿಧಾನಸಭಾ ಕ್ಷೇತ್ರಗಳನ್ನು ಹಾಗೂ 15 ಲೋಕಸಭಾ ಕ್ಷೇತ್ರಗಳನ್ನು ಒಗ್ಗೂಡಿಸಿ ಒಂದು ಹೊಸ ರಾಜ್ಯ ರಚನೆ ಮಾಡುವ ಚಿಂತನೆ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಲಯದಲ್ಲಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರತ್ಯೇಕ ಕೊಂಗು ನಾಡು ಬೇಡಿಕೆಗೆ ಹಲವು ಸಂಘಟನೆಗಳು, ಚಿಂತಕರು, ಸಾಹಿತಿಗಳು, ವಿದ್ಯಾರ್ಥಿಗಳು ಕೂಡ ಬೇಡಿಕೆಗೆ ಧ್ವನಿಗೂಡಿಸಿ ಕೊಂಗು ನಾಡು ಚರ್ಚೆ ಕಾವೇರಲು ಕಾರಣರಾಗಿದ್ದಾರೆ. ಬಿಜೆಪಿಯ ವಿಸ್ತರಣಾ ವಾದದ ಸಾಂದರ್ಭಿಕ ಶಿಶುವಾಗಿ ಕೊಂಗು ನಾಡು ರಾಜ್ಯ ರಚನೆಯಾಗಬಹುದೇ ? ಅಥವಾ ಡಿಎಂಕೆ ಮತ್ತು ಬಿಜೆಪಿ ನಡುವಿನ ರಾಜಕೀಯ ತಿಕ್ಕಾಟ ಪ್ರತ್ಯೇಕ ರಾಜ್ಯದ ರಚನೆಗೆ ದಾರಿ ಮಾಡಿ ಕೊಡಬಹುದೇ ಎಂಬುದಕ್ಕೆ ಕಾಲವೇ ಉತ್ತರಿಸಬೇಕು.
Kongu naadu it's a ultimate counter attack for that ondriam#KonguNadu #LMurugan pic.twitter.com/hqBnqB8q0p
— ?Sachin Rajavel?? (@RP_Rajavell) July 7, 2021
Kongu Nadu is the economic engine of Tamil Nadu. If DMK chooses to play petty politics by neglecting the region, then the consequences would be dirty.
— Srinivas Jayaprakash ?? (@CustosLegis_Jay) July 10, 2021
Lets start our business ?#KonguNadu pic.twitter.com/aQb3e76RDR
— Manikandan (@Manikan46513232) July 10, 2021
-ರಾಜೇಶ್ ಹೆಬ್ಬಾರ್
ಇದನ್ನೂ ಓದಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷನಾಗಿ ‘ಅಣ್ಣಾಮಲೈ’ ನೇಮಕ
26 ಕೋಟಿ ಜನಸಂಖ್ಯೆ ಇರುವ ಜಂಗಲ್ ರಾಜ್ಯ ಉತ್ತರ ಪ್ರದೇಶವನ್ನು 4 ಅಥವಾ 5 ರಾಜ್ಯವಾಗಿ ವಿಭಜಿಸಿ ಅಲ್ಲಿ ಅಭಿವ್ರಿದ್ಧಿಗೆ ಇಂಬು ಕೊಡುವ ಬದಲು , ದಕ್ಷಿಣದ ದ್ರಾವಿಡರನ್ನು ಒಡೆಯಲು ಕುತಂತ್ರಿ ಚಡ್ಡಿಗಳು ಪ್ರಯತ್ನಿಸುತ್ತಿರುವುದನ್ನು ಎಲ್ಲಾ
ದಕ್ಷಿಣ ಭಾರತೀಯರು ವಿರೋಧಿಸಬೇಕು.
೧೦೦% ನಿಜ ಸರ್