ಸೂಪರ್ಸ್ಟಾರ್ ರಜನಿಕಾಂತ್ ಜನವರಿಯಲ್ಲಿ ತಮ್ಮ ಹೊಸ ಪಕ್ಷವನ್ನು ಆರಂಭಿಸುವುದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ. ಪಕ್ಷ ಆರಂಭದ ವಿಚಾರಕ್ಕೆ ಸಂಬಂಧಿಸಿದ ವಿಚಾರಗಳನ್ನು ಡಿಸೆಂಬರ್ 31 ರಂದು ತಿಳಿಸಲಾಗುವುದು ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ದೃಢಪಡಿಸಿದ್ದಾರೆ.
ತಮಿಳುನಾಡು ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ನಟ ರಜನಿಕಾಂತ್ ತಮ್ಮ ಹೊಸ ಪಕ್ಷವನ್ನು ಘೋಷಣೆ ಮಾಡುತ್ತಿದ್ದಾರೆ. ಈಗಾಗಲೇ ತಮಿಳುನಾಡಿನಲ್ಲಿ ಚುನಾವಣಾ ಕಣ ರಂಗೇರುತ್ತಿದೆ.
ನಿನ್ನೆ ನಟ ರಜನಿಕಾಂತ್ ತಮ್ಮ ರಜಿನಿ ಮಕ್ಕಳ್ ಮಂದ್ರಮ್ ವೇದಿಕೆಯ ಹಿರಿಯ ಪದಾಧಿಕಾರಿಗಳನ್ನು ಭೇಟಿಯಾದ್ದರು. ನಂತರ ಸುದ್ದಿಗಾರರೊಂದಿಗೆ ಚುನಾವಣಾ ರಾಜಕೀಯದ ಯೋಜನೆಗಳ ಕುರಿತು ಶೀಘ್ರದಲ್ಲೇ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ಹೇಳಿದ್ದರು. ಇಂದು ಈ ಕುರಿತು ಅಧಿಕೃತ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ತಮಿಳುನಾಡು ಚುನಾವಣೆಯಲ್ಲಿ ಖಾತೆ ತೆರೆಯಲು ಬಿಜೆಪಿ ಶತಪ್ರಯತ್ನ!
ஜனவரியில் கட்சித் துவக்கம்,
டிசம்பர் 31ல் தேதி அறிவிப்பு. #மாத்துவோம்_எல்லாத்தையும்_மாத்துவோம்#இப்போ_இல்லேன்னா_எப்பவும்_இல்ல ?? pic.twitter.com/9tqdnIJEml— Rajinikanth (@rajinikanth) December 3, 2020
“ಜಿಲ್ಲಾ ಪದಾಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ನಾನು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಅವರ ಒಪ್ಪಿಗೆಯಿದೆ ಎಂದು ಹೇಳಿದ್ದಾರೆ. ನನ್ನ ನಿರ್ಧಾರವನ್ನು ಆದಷ್ಟು ಬೇಗ ಪ್ರಕಟಿಸುತ್ತೇನೆ” ಎಂದು ಚೆನ್ನೈನ ಪೋಯಸ್ ಗಾರ್ಡನ್ ನಿವಾಸದ ಹೊರಗೆ ಸುದ್ದಿಗಾರರಿಗೆ ತಿಳಿಸಿದ್ದರು.
ಕಳೆದ ತಿಂಗಳು, ಚುನಾವಣಾ ರಾಜಕೀಯಕ್ಕೆ ಅವರ ಪ್ರವೇಶ ವಿಳಂಬವಾಗಬಹುದು ಎಂದು ರಜನಿಕಾಂತ್ ಸುಳಿವು ನೀಡಿದ್ದರು. ನಟ ರಜನಿಕಾಂತ್ ಅವರಿಗೆ ಮೂತ್ರಪಿಂಡದ ಸಮಸ್ಯೆ ಇರುವುದರಿಂದ ಕೊರೊನಾ ಸೋಂಕಿಗೆ ಬೇಗ ಗುರಿಯಾಗಬಹುದು ಎಂಬ ಕಾರಣಕ್ಕೆ ಪ್ರಯಾಣ ಮಾಡದಂತೆ ವೈದ್ಯರು ಸೂಚಿಸಿದ್ದರು. ಆದರೆ, ಇವುಗಳೆಲ್ಲದರ ನಡುವೆಯೂ ನಟ ತಮ್ಮ ಪಕ್ಷವನ್ನು ಅಧಿಕೃತವಾಗಿ ಘೋಷಣೆ ಮಾಡುವುದಾಗಿ ಹೇಳಿದ್ದಾರೆ.
ಈಗಾಗಲೇ ತಮಿಳುನಾಡು ರಾಜಕೀಯದಲ್ಲಿ ನಟಿ, ರಾಜಕಾರಣಿ ಖುಷ್ಬೂ, ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿಗಳಾದ ಸಸಿಕಾಂತ್ ಸೆಂಥಿಲ್, ಅಣ್ಣಾಮಲೈ ಕೂಡ ರಾಜಕೀಯಕ್ಕೆ ಧುಮುಕಿದ್ದಾರೆ.
ಬಿಜೆಪಿ ತಮಿಳುನಾಡಿನಲ್ಲಿ ಸ್ಪಲ್ಪವಾದರೂ ಸ್ಥಾನ ಗಿಟ್ಟಿಸಿಕೊಳ್ಳಲು ವೆಟ್ರಿವೇಲ್ ಯಾತ್ರೆ ನಡೆಸಿ ಜನರಲ್ಲಿ ಧರ್ಮದ ರಾಜಕಾರಣ ಮಾಡಲು ಪ್ರಯತ್ನಿಸುತ್ತಿದೆ. ಇವುಗಳ ನಡುವೆ ನಟ ರಜನಿಕಾಂತ್ ಅವರ ಪಕ್ಷ ಯಾವ ರೀತಿಯ ಛಾಪು ಮೂಡಿಸಲು ಪ್ರಯತ್ನಿಸುವುದು ಎಂಬುದನ್ನು ನೋಡಬೇಕಾಗಿದೆ.