Homeಕರ್ನಾಟಕರಾಜೀವ ತಾರಾನಾಥ: ಜಾತ್ಯತೀತ ಪರಂಪರೆಯ ಮಾತು

ರಾಜೀವ ತಾರಾನಾಥ: ಜಾತ್ಯತೀತ ಪರಂಪರೆಯ ಮಾತು

- Advertisement -
- Advertisement -

ರಾಜೀವ ತಾರಾನಾಥರಿಗೆ 90 ವರ್ಷ ತುಂಬಿತು. ಅವರ ಶಿಷ್ಯರೂ ಅಭಿಮಾನಿಗಳು ಸೇರಿ, ಮೈಸೂರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದರಲ್ಲಿ ಅವರು ಮಾಡಿದ ಭಾಷಣದ ಕೆಲವು ಭಾಗಗಳು ಹೀಗಿವೆ: “ನನ್ನ ತಾಯಿಮಾತು, ಮಾತೃಭಾಷೆಯಲ್ಲ, ತಾಯಿನುಡಿ ಕನ್ನಡವಲ್ಲ. ತಮಿಳು. ಆದರೆ ಕನ್ನಡ ನನಗೆ ಮೈಗೂಡಿತು. ಎಷ್ಟೋ ಮಟ್ಟಿಗೆ ಬೇರೆಬೇರೆ ಅಭ್ಯಾಸಗಳನ್ನು ಬೇರೆಬೇರೆ ಪರಂಪರೆಗಳನ್ನು ಇಡೀ ಈ ಉಪಖಂಡದಲ್ಲಿ, ಈ ನಮ್ಮ ಕರ್ನಾಟಕದಲ್ಲಿ ಮಾತ್ರ ಕಾಣಬಹುದು. ಈ ಉಪಖಂಡದ ಎರಡೂ ಅಭಿಜಾತ ಸಂಗೀತಗಳು ಇಲ್ಲಿ ಬದುಕಿವೆ, ಬೆಳೆದಿವೆ, ಇವತ್ತೂ ಇವೆ. ಬೇರೆಬೇರೆ ಭಾಷೆಯವರು ತೆಲುಗು ಮಾತಾಡೋರು, ತಮಿಳು ಮಾತಾಡೋರು ಕೊಂಕಣಿ ಮಾತಾಡೋರು-ಅದು ನನ್ನ ಪಿತೃಭಾಷೆ-ಇವೆಲ್ಲವನ್ನು ಮೈಗೂಡಿಸಿಕೊಂಡ ಕರ್ನಾಟಕ ಇವಾಗ ಇದೆಯಾ? ಸ್ವಲ್ಪ ವಿಚಾರ ಮಾಡಬೇಕು. ಹಾಗೆ ಮಾಡಿದಾಗ ನನಗೆ ಬೇಸರ ಬರತದ. ಈ ಕರ್ನಾಟಕದಲ್ಲಿ ತಮಿಳರಾದ ಮಾಸ್ತಿ, ಪು.ತಿ. ನರಸಿಂಹಾಚಾರ್, ನ ರತ್ನ, ಬಹಳ ಚೆನ್ನಾಗಿ ಬರೆದರು. ಗಿರೀಶ್ ಕಾರ್ನಾಡ್, ಒಬ್ಬ ಕೊಂಕಣಿಗ. ಈ ಪಂಡಿತ ತಾರಾನಾಥ ಕೊಂಕಣೀನೂ ಹೌದು, ಕನ್ನಡಾನೂ ಹೌದು, ಉರ್ದೂನೂ ಹೌದು. ಎಲ್ಲ ಸೇರಿ ಒಂದು ಸೀಕರಣೆಯಾಗಿ ಈ ಕರ್ನಾಟಕದಲ್ಲಿ ನಾವು ಇದ್ದೀವಿ. ಆದರೆ ಇವತ್ತಿನ ದಿವಸ ನಾವು ಬೇವಿನ ರಸ ಕುಡೀತಿದೀವಿ ಅನಸ್ತದ. ಇದು ಹೋಗಬೇಕು. ಮತ್ತ ಆ ಸೀಕರಣೆ ಬರಬೇಕು. ಮತ್ತ ಈ ಸಿಹಿ ಬರಬೇಕು. ಮತ್ತ ನಾವೆಲ್ಲ ಒಟ್ಟಾಗಿ ಬದುಕಬೇಕು.

“ಏನೋ ಒಂದು ಇಮಾರತು ಅದ. ಅದನ್ನು ಹೊಡದ ಕೆಡವಿಬಿಡೋಣ. ಅದರ ಕೆಳಗೆ ಮತ್ತೇನನ್ನೋ ಹುಡುಕೋದು. ಎಲ್ಲಾ ಕಡೆ ಅದೇ ಹುಡಕೋದು. ಏನಾಗಿದೆ ನಮಗೆ? ವಿವೇಚನೆ ಸಹನೆ ವಿವೇಕ ಸೂಕ್ಷ್ಮತೆ ಇವೆಲ್ಲ ಹೋಗಿಬಿಟ್ಟಿವೆ. ನಮ್ಮ ಸಂಗೀತದಲ್ಲಿ ಅವನು ಗುಡೀಗೆ ಹೋಗ್ತಾನೊ ಮಸೀದಿಗೆ ಹೋಗ್ತಾನೊ ಪ್ರಶ್ನೇನೆ ಇಲ್ಲ. ನಾವೆಲ್ಲ ಸಂಗೀತಕ್ಕೆ ಹೋಗತೀವಿ. ಹೋಗೋ ಪ್ರಯತ್ನ ಮಾಡತೀವಿ. ಆ ಸಂಗೀತದಲ್ಲಿ ಬದುಕ್ತೀವಿ. ಸಂಗೀತದಲ್ಲೇ ಸಾಯತೀವಿ. ಬಹಳ ದೊಡ್ಡವರೊಬ್ಬರ ಕತೀ ಹೇಳತೇನಿ. ಖಾನಸಾಹೇಬ್ ಉಸ್ತಾದ್ ಅಬ್ದುಲ್ ಕರೀಂಖಾನ್ ಅಂತ ಹೇಳಿ. ಇಲ್ಲಿ ಆಳುವ ಮಹಾರಾಜರು ಅವರನ್ನ ಆಸ್ಥಾನ ವಿದ್ವಾಂಸರನ್ನಾಗಿ ಮಾಡಿದ್ದರು. ಅವರೊಮ್ಮೆ ಮದರಾಸಿನಿಂದ ಪಾಂಡಿಚೇರಿಗೆ ಹೋಗಬೇಕಾದರೆ, ದಾರಿಯೊಳಗೆ ಒಂದು ದೊಡ್ಡ ಜಂಕ್ಷನ್, ವೀಳ್ಳುಪುರಂ ಅಂತ. ಆಗ ಅವರಿಗೆ ಏನೋ ಅನಿಸಿತು. ಬೆಳಗಾನ ಮುಂಚೆ. ಅವರೂ ಅವರ ಶಿಷ್ಯರೂ ಇಳಿದರು. ಪ್ಲಾಟ್‌ಫಾರಂ ಮೇಲೆ ಕೂತ್ಕೊಂಡು, ತಂಬೂರಿ ಶೃತಿ ಮಾಡಕೊಂಡು ಭೈರವಿ ರಾಗ ಹಾಡಲಿಕ್ಕೆ ಶುರುಮಾಡಿದರು. ಅತ್ಲಾಗೆ ಸೂರ್ಯೋದಯ ಆಗತಾ ಇದ್ದಾಗಲೇ ಇಲ್ಲಿ ಇವರ ಪ್ರಾಣ ಹಂಗೇ ಹೋಗಿಬಿಡ್ತು. ಅದಕ್ಕೆ ಪುಣ್ಯಾ ಮಾಡಿರಬೇಕರಿ. ಅವರು ಹೋದೋರು ಮಾತ್ರ ಅಲ್ಲ, ಆ ಒಂದು ಗಳಿಗೆ ಬಗ್ಗೆ ತಿಳಿದವರು, ತಿಳಕೊಳ್ಳೋಕೆ ಬಯಸೋರು, ನೀವು ನಾವು ಎಲ್ಲರೂ ಪುಣ್ಯಾ ಮಾಡಿರಬೇಕು.

“ಸಂಗೀತಕ್ಕೆ ದಿಲ್‌ದಾರತನ, ದೊಡ್ಡಹೃದಯ ಇರಬೇಕು. ನಾವು ಇಂಥಾ ಅಬ್ದುಲ್ ಕರೀಂ ಖಾನಸಾಹೇಬರನ್ನ ನೆನೆಸೊ ಕ್ಷಮತಾ ಕಳಕೊಂಡುಬಿಟ್ಟಿದೀವಿ. ಯಾಕಂದರೆ, ಅವರು ನಮ್ಮ ಜಾತಿಯವರಲ್ಲ. ಆದರೆ ನಾವೆಲ್ಲ ಅವರಲ್ಲಿ ಕಲತೋರು. ಇಲ್ಲಿ ಸೇರಿದ ನಾವೆಲ್ಲರೂ ಅವರಿಂದ ಕಲತೋರು. ಅವರ ಮಕ್ಕಳು ಮೊಮ್ಮಕ್ಕಳು, ಅವರ ಮಾನಸ ಮಕ್ಕಳು ಮಾನಸ ಮೊಮ್ಮಕ್ಕಳಲ್ಲಿ ಕಲಿತವರು. ನನ್ನ ಗುರುಗಳು ಅಲಿ ಅಕಬರಖಾನರು ನನ್ನ ಕಡೆಯಿಂದ ಒಂದು ರೂಪಾಯಿ ತಗೊಂಡೋರಲ್ಲ. ಬೈದರು. ಬೈಯ್ಯಲಿ. ಅವರು ಸಂಗೀತದ ಗುಂಗಿನಲ್ಲಿದ್ದವರು.

“ಇವತ್ತು ಬೆಳಗಿನಿಂದ ನನ್ನ ಮನೆಯೊಳಗೆ ಒಂದು ದೊಡ್ಡ ಪ್ರವಾಹ, ಹೊಳೆ, ಬೆಳಗಿನ ಐದು ಗಂಟೆಯಿಂದ ಶುರುವಾಗಿಬಿಟ್ಟದೆ. ಇವತ್ತು ಮುಂಜಾನೆ ಒಂದು ಅಪರೂಪದ ರಾಗ ನೆನಪಾತು. ಲಲಿತಾಗೌರಿ. ಅದರಲ್ಲಿ ಒಂದು ಬಂದಿಶ್ ಗುರುಗಳು ಕಲಿಸಿದ್ದು ಹೀಂಗ ಬಂತು. ಹಾಡಿದೆ. ನಮ್ಮ ಫಯ್ಯಾಜ್ ಖಾನ್ ನನಗ ಇದು ಬೇಕು ಅಂತ ರೆಕಾರ್ಡ್ ಮಾಡಿಕೊಂಡರು.

“ನನಗ ತೊಂಬತ್ತು ವರ್ಷ. ನಾನು ಏನು ಮಾಡಬೇಕು? ಮಂದಿ ಹೇಳತಾರೆ ‘ನೀವು ಆರಾಮ ಮಾಡ್ರಿ, ದೇವರ ಧ್ಯಾನಾ ಮಾಡತಾ ಕೂಡ್ರಿ’ ಅಂತ. ಆದರೆ ನಮಗೆ ಸಂಗೀತವೇ ದೇವರು. ಅಲಿ ಅಕಬರಖಾನರೇ ದೇವರು. ಅವರೇ ಸಂಗೀತ. ಅಷ್ಟು ಸಾಕು. ಹಾಡ್ತಾ ಹೋಗ್ತೀನಿ.”

ಸುಮಾರು 16 ನಿಮಿಷಗಳ ತಮ್ಮ ಈ ಭಾಷಣವನ್ನು ರಾಜೀವ ತಾರಾನಾಥರು, ಉಸಿರಾಟದ ಸಮಸ್ಯೆಯಿಂದ ಒಂದೊಂದೇ ಪದವನ್ನು ನಿಧಾನವಾಗಿ ನಿಟ್ಟುಸಿರುಬಿಡುವಂತೆ ಮಾತಾಡಿದರು. ಅವರು ಉಪನ್ಯಾಸದಲ್ಲಿ ಮೂರು ಸಂಗತಿಗಳಿವೆ.

ಇದನ್ನೂ ಓದಿ: ಗುಂಡ್ಲುಪೇಟೆ: ದಲಿತ ಮಹಿಳೆಯ ಕೆನ್ನೆಗೆ ಥಳಿಸಿದ ಸಚಿವ ಸೋಮಣ್ಣ

1. ಭಾಷಾ ಸಾಮರಸ್ಯ. ಹಲವು ಭಾಷಿಕರು ಒಂದಾಗಿ ಬಾಳುವ ಕರ್ನಾಟಕ ಕಟ್ಟುವ ಭಾಷಾ ಬಹುತ್ವ ಮತ್ತು ಬಾಂಧವ್ಯಕ್ಕೆ ಬಹುಶಃ ಕರ್ನಾಟಕದಲ್ಲಿ ಹೆಚ್ಚಿನ ಧಕ್ಕೆ ಬಂದಿಲ್ಲ. ಬೇರೆಬೇರೆ ಮನೆಮಾತಿನವರು ಕನ್ನಡದಲ್ಲಿ ಬರೆಯುವುದರ ಬಗ್ಗೆ ಸ್ವಾಗತವಿದೆ. ಮನ್ನಣೆಯಿದೆ. ಅವರ ಮನೆಮಾತಿನ ಕಾರಣಕ್ಕೆ ಅವರ ಬರೆಹಕ್ಕೆ ಅನ್ಯಾಯವಾಗಿದೆ ಎನಿಸುವುದಿಲ್ಲ. ಟಿ.ಎಸ್.ವೆಂಕಣ್ಣಯ್ಯ, ತ.ಸು.ಶಾಮರಾಯ, ವಿಜಯಮ್ಮ (ತೆಲುಗು), ಬೇಂದ್ರೆ, ಶಂಬಾ (ಮರಾಠಿ) ಗಿರೀಶ್, ವಿವೇಕ, ಜಯಂತ್ (ಕೊಂಕಣಿ) ಕಟ್ಪಾಡಿ, ಬೊಳುವಾರು (ಬ್ಯಾರಿ), ರಶೀದ, ಸಾರಾ (ಮಲೆಯಾಳ), ನಿಸಾರ್ ಅಹಮದ್, ಶರೀಫಾ (ಉರ್ದು), ಲಲಿತಾ ನಾಯಕ (ಲಂಬಾಣಿ)-ಹೀಗೆ ಈ ಪಟ್ಟಿಯನ್ನು ಮುಂದುವರಿಸಬಹುದು. ಅಪಾರ ಜನಪ್ರಿಯತೆ ಪಡೆದಿದ್ದ ನಿಸಾರ್, ‘ನಿಮ್ಮೊಡನಿದ್ದೂ ನಿಮ್ಮಂತಾಗದೆ’ ಎಂದು ನೋವಿನ ಪದ್ಯ ಬರೆದಿದ್ದು, ಕನ್ನಡ ಲೇಖಕನಾಗಿ ಅನುಭವಿಸಿದ ಪಕ್ಷಪಾತದಿಂದಲ್ಲ. ಮುಸ್ಲಿಮನಾಗಿ ಮತೀಯವಾದಿ ರಾಷ್ಟ್ರೀಯವಾದದ ಕಣ್ಣಲ್ಲಿ ಶಂಕಿತನಾಗಿದ್ದಕ್ಕೆ.

2. ಸಂಗೀತಲೋಕದಲ್ಲಿರುವ ಜಾತ್ಯತೀತ ಪರಂಪರೆ. ಈ ಹೇಳಿಕೆ, ಕರ್ನಾಟಕ ಸಂಗೀತಕ್ಕಿಂತಲೂ ಹಿಂದೂಸ್ತಾನಿ ಸಂಗೀತಕ್ಕೆ ಹೆಚ್ಚು ಅನ್ವಯವಾಗುತ್ತದೆ. ನಮಗೆಲ್ಲ ತಿಳಿದಂತೆ ಮಲ್ಲಿಕಾರ್ಜುನ ಮನ್ಸೂರರು, ತಮ್ಮ ವಿದ್ಯಾಗುರುಗಳಾದ ಬುರ್ಜಿಖಾನ್ ಹಾಗೂ ಮಂಜಿಖಾನ್ ಅವರ ಪುಣ್ಯತಿಥಿಗಳನ್ನು ಕೊನೆಯ ತನಕ ಮಾಡುತ್ತಿದ್ದರು. ಆದರೆ ಭಾರತೀಯ ಸಮಾಜದಲ್ಲಿ ಮತೀಯವಾದವು ಎಲ್ಲ ಕ್ಷೇತ್ರಗಳನ್ನೂ ಪ್ರವೇಶಿಸಿದ್ದರಿಂದ ಈ ಪರಂಪರೆಯಲ್ಲೂ ಬಿರುಕುಗಳಿವೆ. ಮುಸ್ಲಿಮ ಕಲಾವಿದರ ಉಸ್ತಾದ್ ಪರಂಪರೆಯನ್ನು ಬದಿಗೆ ಸರಿಸುವ ವಿಸ್ಮೃತಿಗೆ ತಳ್ಳುವ ಯತ್ನಗಳು ಸೂಕ್ಷ್ಮಸ್ತರದಲ್ಲಿ ನಡೆಯುತ್ತಿವೆ. ಹಿಂದೂಸ್ತಾನಿ ಸಂಗೀತವನ್ನು ಮುಸ್ಲಿಂ ಉಸ್ತಾದರ ಹಿಡಿತದಿಂದ ತಪ್ಪಿಸಬೇಕೆಂದು 20ನೇ ಶತಮಾನದ ಆದಿಯಲ್ಲೇ ಪ್ರಯತ್ನಗಳು ಶುರುವಾಗಿದ್ದವು. ಇದನ್ನು ಪಂಡಿತ್ ಫಲುಸ್ಕರ್ ಹಾಗೂ ಉಸ್ತಾದ್ ಅಬ್ದುಲ್ ಕರೀಂಖಾನರನ್ನು ಇಟ್ಟುಕೊಂಡು ಚರ್ಚೆ ಮಾಡಿರುವ ಸಂಗೀತ ಚಿಂತಕರಾದ ಜಾನಕಿ ಭಾಕ್ಲೆಯವರು ವಿಶ್ಲೇಷಣೆ ಮಾಡಿರುವರು.

ರಾಜೀವ ತಾರಾನಾಥರು ಆದರ್ಶವೆಂದು ಪ್ರತಿಪಾದಿಸುವ ಕಲಾಲೋಕದ ಜಾತ್ಯತೀತತೆಯು, ಆಲೋಚನೆಯಾಗಿ ಹುಟ್ಟಿದದಲ್ಲ. ಅವರ ಸ್ವಂತ ಅನುಭವದಿಂದ ಹುಟ್ಟಿದ್ದು. ಈ ಜಾತ್ಯತೀತ ಕಲಾಸಂಬಂಧವು ರಕ್ತಸಂಬಂಧವಾಗಿ ಮುಂದುವರಿದಿದ್ದೂ ಇದೆ. ರಾಜೀವರ ಗುರು ಅಲಿ ಅಕಬರಖಾನರ ಸೋದರಿ ಅನ್ನಪೂರ್ಣಾದೇವಿ, ಪಂಡಿತ ರವಿಶಂಕರ್ ಅವರ ಜೀವನಸಂಗಾತಿಯಾದರು. ಸ್ವತಃ ರಾಜೀವರ ತಂದೆ ಪಂಡಿತ ತಾರಾನಾಥರು ಬೆಳೆಸಿದ ಸಂಗೀತ ಮತ್ತು ವೈದ್ಯ ಶಿಷ್ಯರಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರು ಇದ್ದರು. ಮುಸ್ಲಿಂ ಧಾರ್ಮಿಕ ಹಿನ್ನೆಲೆಯಿಂದ ಬಂದ, ಕರೀಂಖಾನರು ಭೈರವಿ ರಾಗವನ್ನು ಹಾಡುತ್ತ ಪ್ರಾಣವಿಸರ್ಜನೆ ಮಾಡುವ ಪ್ರಕರಣವು, ಹಿಂದೂಸ್ತಾನಿ ಸಂಗೀತ ಲೋಕದಲ್ಲಿರುವ ಜಾತ್ಯತೀತತೆಗೂ ಆತ್ಯಂತಿಕ ಪ್ರತೀಕವಾಗಿದೆ.

3. ವೃದ್ಧಾಪ್ಯದಲ್ಲಿಯೂ ಸಂಗೀತ ಅಥವಾ ತನ್ನ ಮಾಧ್ಯಮವನ್ನೇ ದೈವವನ್ನಾಗಿ ಭಾವಿಸಿ, ಅನುಸಂಧಾನ ಮಾಡುವ ಕಲಾವಿದರ ಹೊಸಧರ್ಮದ ಕಲ್ಪನೆ. ಕಲಾಧರ್ಮದ ಕಲ್ಪನೆ. ಬರವಣಿಗೆಯ ಲೋಕದಲ್ಲಿಯೂ ಅತ್ಯುತ್ತಮ ಸಾಹಿತ್ಯ ಸೃಷ್ಟಿಮಾಡುವುದನ್ನು ಜೀವನ್ಮರಣ ಪ್ರಶ್ನೆಯಾಗಿಸಿಕೊಂಡ ಲೇಖಕರು ಇದ್ದಾರೆ. ತನಗೆ ಬರವಣಿಗೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಲೇಖಕರೂ ಇದ್ದಾರೆ. ಆದರೆ ಸಂಗೀತದ ಲೋಕದಲ್ಲಿ ಕಲೆಯ ದೈವೀಕರಣವು, ಬೇರೆ ಬಗೆಯ ಆಧ್ಯಾತ್ಮಿಕ ಆಯಾಮವನ್ನು ಒಳಗೊಂಡಿದೆ. ಇದು ಸೂಫಿ ಕಬೀರಪಂಥ ಒಳಗೊಂಡಂತೆ ಸಂಗೀತವು ಟ್ರಾನ್ಸ್ ಅವಸ್ಥೆಗೆ ಕಲಾವಿದರು ಮತ್ತು ಕೇಳುಗರು ಹೋಗುವ ಸಾಧನೆಯ ಸಂಗತಿಯಾಗಿದೆ. ಹೀಗಾಗಿ, ಸಂಗೀತದಲ್ಲಿ ರಿಯಾಜ್ ಮಾಡಲು ಆಗದೆ ಇರುವುದು ಎಂದರೆ ಅವರಿಗೆ ಮರಣಕ್ಕೆ ಸಮಾನ. ತನ್ನ ಸಾವನ್ನು ಹಾಡುವಾಗಲೇ ಅನುಭವಿಸುವ ಕರೀಂಖಾನರ ಪ್ರಕರಣವು ಇದನ್ನು ಸೂಚಿಸುತ್ತಿದೆ.

ಆತಂಕವೆಂದರೆ, ರಾಜೀವರ ಈ ಆದರ್ಶ ಪ್ರತಿಪಾದನೆ ಮತ್ತು ವರ್ತಮಾನದ ವೈರುಧ್ಯಗಳ ಬಗೆಗಿನ ಸಂಕಟಗಳು, ಯಾವುದೊ ಕಾಲಕ್ಕೆ ಸೇರಿದ, ವರ್ತಮಾನಕ್ಕೆ ಸಲ್ಲದ ಗೊಣಗಾಟದಂತೆ ತೋರುವ ಹಾಗೆ ವಾತಾವರಣ ಬದಲಾಗಿರುವುದು. ಕಲಾಲೋಕದ ಆದರ್ಶದ ದಂತಕತೆಗಳನ್ನು ಕೇಳಿ ತಲೆದೂಗಿ ಚಪ್ಪಾಳೆ ಹೊಡೆದು ಎಂದಿನಂತೆ ಕೆಲವು ಕಲಾವಿದರು, ಕಲೆಯನ್ನು ಜಾತಿ ಮತ್ತು ಧರ್ಮಗಳ ಸಂಕುಚಿತ ಚೌಕಟ್ಟಿನೊಳಗೇ ಮುಂದುವರಿಸುವ ಸಾಧ್ಯತೆಯಿರುವುದು. ಕರ್ನಾಟಕ ಸಂಗೀತದ ಟಿ.ಎಂ. ಕೃಷ್ಣ ಅವರು ಅನುಭವಿಸುತ್ತಿರುವ ಒಂಟಿತನವನ್ನು ಗಮನಿಸಬಹುದು. ಸಂಗೀತ ಲೋಕದಲ್ಲಿರುವ ಬ್ರಾಹ್ಮಣರ ಯಜಮಾನಿಕೆ ಮತ್ತು ಜಾತೀಯತೆಗಳ ವಿರುದ್ಧ ದಿಟ್ಟವಾಗಿ ಮಾತಾಡುತ್ತಿರುವ, ಸಂಗೀತದೊಳಗೆ ಎಲ್ಲ ಧರ್ಮಗಳ ಸಂವೇದನೆಯನ್ನು ಪ್ರವೇಶಗೊಳಿಸುವಂತೆ ಹಾಡುತ್ತಿರುವ, ಮೃದಂಗವನ್ನು ಮಾಡುವ ಕ್ರೈಸ್ತ ಕುಟುಂಬಗಳ ಬಗ್ಗೆ ಗ್ರಂಥವನ್ನು ಬರೆದಿರುವ, ಜನಪದರ ದೇಶಿ ಸಂಗೀತದ ಜತೆ ಮಾರ್ಗ ಸಂಗೀತವನ್ನು ಬೆರೆಸಿನೋಡುವ ಅನುಸಂಧಾನ ಮಾಡುತ್ತಿರುವ ಕೃಷ್ಣ ಅವರಿಗೆ ಕಛೇರಿಗಳು ಸಿಗದಂತೆ, ಸಿಕ್ಕರೆ ಅವನ್ನು ರದ್ದುಗೊಳಿಸುವಂತೆ ಮಾಡಲಾಗುತ್ತಿದೆ. ಆಳುವ ರಾಜಕೀಯ ಪ್ರಭುತ್ವಕ್ಕೆ ವಿಮರ್ಶೆ ಮಾಡಿದ್ದಕ್ಕೆ ಪತ್ರಕರ್ತರನ್ನು ಜೈಲಿಗೆ ಅಟ್ಟಿರುವ, ಸ್ಟ್ಯಾಂಡ್‌ಅಪ್ ಕಮೆಡಿಯನ್ನರನ್ನು ಕಾರ್ಯಕ್ರಮ ಎಲ್ಲೂ ಮಾಡದಂತೆ ನಿಷೇಧ ಹೇರಿರುವ ಸಂಗತಿಗಳು ಇದಕ್ಕೆ ಪೂರಕವಾಗಿವೆ. ಜಾತ್ಯತೀತ ಮುಕ್ತತೆಯನ್ನು ಪ್ರತಿಪಾದಿಸುವ, ಪ್ರಭುತ್ವ ವಿಮರ್ಶಕವಾಗಿರುವ ಕಲಾಲೋಕವು ಎದುರಿಸುತ್ತಿರುವ ಬಿಕ್ಕಟ್ಟು ಕೇವಲ ಮತೀಯವಾದದಿಂದ ಮಾತ್ರ ಅಲ್ಲ. ಆಳುವ ಪ್ರಭುತ್ವದಿಂದ ಕೂಡ. ಯಾಕೆಂದರೆ ಪ್ರಭುತ್ವ ಮತ್ತು ಮತೀಯವಾದ ಎರಡೂ ಏಕೀಭವಿಸಿರುವ ವಿಚಿತ್ರ ಸನ್ನಿವೇಶವಿದು. ಇಂತಹ ಚಾರಿತ್ರಿಕ ಬಿಕ್ಕಟ್ಟಿನಲ್ಲಿ ರಾಜೀವ ತಾರಾನಾಥರ ಭಾಷಣದೊಳಗಿನ ಅಳಲು ಮತ್ತು ಆಶೋತ್ತರಗಳನ್ನು ಗಮನಿಸಬೇಕಾಗಿದೆ. ಕೆರೆಯ ನೀರು ಕಲುಷಿತವಾದರೆ ಅದು ಜಲಚರಗಳನ್ನು ಮಾತ್ರ ಉಸಿರುಗಟ್ಟಿಸುವುದಿಲ್ಲ; ವಿಹರಿಸಲು ಬರುವ ಹಕ್ಕಿಗಳನ್ನೂ, ದಂಡೆಯ ಗಿಡಮರ ಹುಲ್ಲನ್ನೂ ಬಾಧಿಸುತ್ತದೆ. ಸಾಹಿತ್ಯ ಸಂಗೀತ ಸಿನಿಮಾ ರಂಗಭೂಮಿಯನ್ನು ಒಳಗೊಂಡಂತೆ, ಜಾತ್ಯತೀತವಾಗಿರಬೇಕಾದ ಕಲಾಲೋಕದೊಳಗಿನ ನಂಜಿನ ವಾಸ್ತವವನ್ನು ರಾಜೀವರ ಭಾಷಣವು ವಿಷಾದದಿಂದ ಬೆರಳಿಟ್ಟು ತೋರಿಸುತ್ತಿದೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...