ಕೊರೊನಾ ವೈರಸ್ ಭೀತಿಯ ಕಾರಣದಿಂದಾಗಿ ನಾಳೆಯಿಂದ ಬೆಂಗಳೂರಿನಲ್ಲಿ ನಡೆಯಬೇಕಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್)ನ ಅಖಿಲ ಭಾರತೀಯ ಪ್ರತಿನಿಧಿ ಸಭೆಯನ್ನು (ಎಬಿಪಿಎಸ್) ಮುಂದೂಡಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.
ಮಾರ್ಚ್ 15ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ಪ್ರತಿನಿಧಿ ಸಭೆ ನಡೆಸಲು ಆಯೋಜಿಸಲಾಗಿತ್ತು. ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ, ವಿಎಚ್ಪಿ ಅಧ್ಯಕ್ಷ ವಿಷ್ಣು ಸದಾಶಿವ ಕೊಕ್ಜೆ, ಆರ್ಎಸ್ಎಸ್ ಸರಸಂಘ ಚಾಲಕ ಮೋಹನ್ ಭಾಗವತ್, ಸುರೇಶ ಭಯ್ಯಾಜಿ ಜೋಶಿ, ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಒಂದೂವರೆ ಸಾವಿರ ಪ್ರತಿನಿಧಿಗಳು ಭಾಗವಹಿಸಬೇಕಿತ್ತು.
ಪೌರತ್ವ ತಿದ್ದುಪಡಿ ಕಾಯ್ದೆ, 370ನೇ ವಿಧಿ ಮತ್ತು ಕೊರೊನಾ ವೈರಸ್ ಕುರಿತು ಜಾಗೃತಿ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಅದೇ ಕೊರೊನಾ ವೈರಸ್ನಿಂದಾಗಿ ಸಭೆಯು ಮುಂದೂಲ್ಪಟ್ಟಿರುವುದು ವಿಪರ್ಯಾಸವಾಗಿದೆ.
ಸಭೆ ನಾಳೆ ಆರಂಭವಾಗುವುದಿದ್ದರೂ ಅದನ್ನು ರದ್ದುಪಡಿಸುವ ಬಗ್ಗೆ ಇಂದೂ ಬೆಳಿಗ್ಗೆಯವರೆಗೂ ನಿರ್ಧಾರವಾಗಿರಲಿಲ್ಲ. ಸಭೆ ನಡೆಸಿಯೇ ಸಿದ್ದ ಎಂದು ಆರ್ಎಸ್ಎಸ್ ತೀರ್ಮಾನಿಸಿತ್ತು. ಇದಕ್ಕೆ ವ್ಯಾಪಕ ಟೀಕೆಗಳು ಸಹ ಕೇಳಿಬಂದಿದ್ದವು. ಇಡೀ ದೇಶಾದ್ಯಂತ ತುರ್ತುಪರಿಸ್ಥಿತಿಯಂತಹ ಪರಿಸ್ಥಿತಿ ಇರುವ ಸಮಯದಲ್ಲಿ ಸಭೆ ಬೇಕೆ ಎಂಬ ಪ್ರಶ್ನೆಗಳು ಎದ್ದಿದ್ದವು.
ಕೊರೋನಾ ಭೀತಿಯ ಹಿನ್ನಲೆಯಲ್ಲಿ ಸಾರ್ವಜನಿಕ ಸಮಾವೇಶ-ಸಮಾರಂಭಗಳ ಮೇಲೆ ರಾಜ್ಯ ಸರ್ಕಾರ ನಿರ್ಬಂಧ ಹೇರಿದೆ. ಆದರೆ ನಗರದಲ್ಲಿ ಆರ್ಎಸ್ಎಸ್ ಮಹಾಸಮಾವೇಶ ಇದೇ15 ರಿಂದ ನಗರದಲ್ಲಿ ಅನಿರ್ಬಂಧಿತವಾಗಿ ನಡೆಯಲಿದೆ. ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರೆ ಆರ್ಎಸ್ಎಸ್ಗೆ ಸರ್ಕಾರಿ ಆದೇಶ ಅನ್ವಯಿಸುವುದಿಲ್ಲವೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದರು.
Government has banned public events amidst Corona virus outbreak.
But a huge conference by RSS will be held on this 15th of March.
Mr @BSYBJP, Is the ban not applicable to RSS?
1/2 pic.twitter.com/j5PWB4b0Q0— Siddaramaiah (@siddaramaiah) March 14, 2020
ಇದೇ 15ರಿಂದ ನಗರದಲ್ಲಿ ನಡೆಯಲಿರುವ ಆರ್ಎಸ್ಎಸ್ ಸಮಾವೇಶದಲ್ಲಿ ದೇಶದ ಬೇರೆ ಕಡೆಗಳಿಂದ 1500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕನಿಷ್ಠ ಈ ಪ್ರತಿನಿಧಿಗಳ ಆರೋಗ್ಯದ ಕಾಳಜಿ ದೃಷ್ಟಿಯಿಂದಾದರೂ ಮಹಾಸಮಾವೇಶವನ್ನು ಮುಂದೂಡಿ. ಯಾವ ಸಿದ್ಧಾಂತವೂ ಮನುಷ್ಯನ ಪ್ರಾಣಕ್ಕಿಂತ ಹೆಚ್ಚಲ್ಲ ಎಂದು ಸಿದ್ದು ಟ್ವೀಟ್ ಮಾಡಿದ್ದರು.