Homeಮುಖಪುಟಕೇಂದ್ರೀಯ ವಿವಿ ನೇಮಕಾತಿ ಹಗರಣ: ಅಭ್ಯರ್ಥಿಗಳ ಪಟ್ಟಿ ಅನುಮೋದನೆಗೆ ವಿವಿಯ ಕಾರ್ಯಕಾರಿ ಮಂಡಳಿ ನಕಾರ..

ಕೇಂದ್ರೀಯ ವಿವಿ ನೇಮಕಾತಿ ಹಗರಣ: ಅಭ್ಯರ್ಥಿಗಳ ಪಟ್ಟಿ ಅನುಮೋದನೆಗೆ ವಿವಿಯ ಕಾರ್ಯಕಾರಿ ಮಂಡಳಿ ನಕಾರ..

- Advertisement -
- Advertisement -

ಕಲಬುರಗಿಯ ಕೇಂದ್ರೀಯ ವಿ.ವಿಯಲ್ಲಿ ಕಳೆದ ವರ್ಷ 67 ಹುದ್ದೆಗಳ ನೇಮಕಾತಿಯಲ್ಲಿ ನಡೆದಿದ್ದ ಭಾರೀ ಭ್ರಷ್ಟಾಚಾರದ ಕುರಿತು ಪತ್ರಿಕಾ ವರದಿಗಳು ಸ್ಫೋಟಗೊಂಡ ನಂತರ ನಿಯಮಾವಳಿ ಉಲ್ಲಂಘಿಸಿ ಕಾನೂನುಬಾಹಿರವಾಗಿ ಆಯ್ಕೆ ಮಾಡಿದ ಅಭ್ಯರ್ಥಿಗಳ ಪಟ್ಟಿಗೆ ಅನುಮೋದನೆ ಕೊಡಲು ವಿವಿಯ ಕಾರ್ಯಕಾರಿ ಮಂಡಳಿ (ಎಕ್ಸಿಕ್ಯುಟಿವ್ ಕೌನ್ಸಿಲ್) ನಿರಾಕರಿಸಿದೆ.

ವಿಶ್ವವಿದ್ಯಾಲಯದ ಅತ್ಯುನ್ನತ ಆಡಳಿತಾಂಗವಾದ ಕಾರ್ಯಕಾರಿ ಮಂಡಳಿ ಒಪ್ಪಿಗೆ ಇಲ್ಲದೇ ಆಯ್ಕೆಯಾದವರಿಗೆ ನೇಮಕಾತಿ ಆದೇಶ ಕೊಡುವುದಕ್ಕೆ ಸಾಧ್ಯವಿಲ್ಲ. ದಿ ಹಿಂದೂ ಮತ್ತು ನಾನುಗೌರಿ.ಕಾಂನಲ್ಲಿ ಅಕ್ರಮ ನೇಮಕಾತಿಯ ವಿವರಗಳು ಬಹಿರಂಗಗೊಂಡನಂತರ ಈ ಘಟನೆ ಜರುಗಿದ್ದು ಪ್ರಕರಣಕ್ಕೆ ಮತ್ತೊಂದು ತಿರುವು ದೊರೆತಿದೆ.

ಅಕ್ರಮ ನೇಮಕಾತಿಯನ್ನು ತಡೆಯಲು ಸಾಲು ಸಾಲು ಪ್ರಯತ್ನಗಳು ಜರುಗಿವೆ. ಮೊನ್ನೆ ತಾನೆ ಕಲಬುರಗಿ ಲೋಕಸಭಾ ಸದಸ್ಯರಾದ ಉಮೇಶ್ ಜಾಧವ್ ಕೇಂದ್ರದ ಮಾನವ ಸಂಪನ್ಮೂಲ ಸಚಿವರಿಗೆ ಪತ್ರ ಬರೆದು ಹಗರಣದ ತನಿಖೆ ನಡೆಸುವಂತೆ ಹಾಗೂ ಈ ನೇಮಕಾತಿಯನ್ನು ರದ್ದುಗೊಳಿಸಿ ಹೊಸದಾಗಿ ನೇಮಕಾತಿ ನಡೆಸುವಂತೆ ಕೋರಿದ್ದರು. ಅದಕ್ಕೂ ಮೊದಲು ಅಖಿಲ ಭಾರತ ವಿಶ್ವವಿದ್ಯಾಲಯಗಳ ನವಕರರ ಒಕ್ಕೂಟದ ರಾಷ್ಟ್ರೀಯ ಕಾರ್ಯದರ್ಶಿ ಎಂ.ಬಿ. ಸಜ್ಜನ್ ರಾಷ್ಟಪತಿಗೆ ಪತ್ರ ಬರೆದು ನೇಮಕಾತಿ ಅಕ್ರಮಗಳನ್ನು ಅವರ ಗಮನಕ್ಕೆ ತಂದು ನೇಮಕಾತಿ ರದ್ದುಗೊಳಿಸುವಂತೆ ಆಗ್ರಹಿಸಿದ್ದರು.


ಇದನ್ನೂ ಓದಿ: ಕಲಬುರಗಿ ಕೇಂದ್ರೀಯ ವಿವಿ ನೇಮಕಾತಿ ಹಗರಣ: ನಾನುಗೌರಿ, ದಿ ಹಿಂದೂ ವರದಿ ಆಧರಿಸಿ ತನಿಖೆಗೆ ಒತ್ತಾಯಿಸಿ ಪತ್ರ ಬರೆದ ಸಂಸದ ಜಾಧವ್‌


ಅಲ್ಲದೇ ಕಲ್ಯಾಣ ಕರ್ನಾಟಕದ ಹೋರಾಟಗಾರ ಲಕ್ಮಣ್ ದಸ್ತಿಯವರು ವಿಶ್ವವಿದ್ಯಾಲಯದ ಉಪಕುಲಪತಿ ಎಚ್.ಎಂ. ಮಹೇಶ್ವರಯ್ಯ ಅವರನ್ನು ಭೇಟಿ ಮಾಡಿ ನೇಮಕಾತಿ ಪ್ರಕ್ರಿಯೆಯನ್ನು ರದ್ದು ಮಾಡಿ ಹೊಸದಾಗಿ ಶುರು ಮಾಡುವಂತೆ ಕೋರಿದ್ದರು. ನಿನ್ನೆ ಮತ್ತೊಬ್ಬ ಹೋರಾಟಗಾರ ಮಹೇಶ್ ರಾಥೋಡ್ ನೇತೃತ್ವದಲ್ಲಿ ಕೆಲವು ಕಾರ್ಯಕರ್ತರು ಹೋಗಿ ಅಕ್ರಮ ನೇಮಕಾತಿ ರದ್ದು ಮಾಡುವಂತೆ ಆಗ್ರಹಿಸಿದ್ದರು.

ಆದರೂ ಛಲ ಬಿಡದ ಉಪಕುಲಪತಿಗಳು ಎಕ್ಸಿಕ್ಯುಟಿವ್ ಕೌನ್ಸಿಲ್ ಸಭೆಯಲ್ಲಿ ಈ ವಿಷಯ ಇಟ್ಟು ಅಕ್ರಮ ನೇಮಕಾತಿಗಳಿಗೆ ಕೌನ್ಸಿಲ್ ಒಪ್ಪಿಗೆ ಪಡೆಯಲು ಪ್ರಯತ್ನಿಸಿದರು. ಆ ಮೂಲಕ, ನೇಮಕಾತಿಯಲ್ಲಾದ ಅಕ್ರಮಗಳಿಗೆ ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರನ್ನೂ ಹೊಣೆಗಾರರನ್ನಾಗಿಸಲು ಪ್ರಯತ್ನಿಸಿದರು. ಆದರೆ ಅದಕ್ಕೆ ಎಕ್ಸಿಕ್ಯುಟಿವ್ ಕೌನ್ಸಿಲ್ ಅವಕಾಶ ಕೊಡಲಿಲ್ಲ. “ನೇಮಕಾತಿಯಲ್ಲಿ ಏನೂ ಅಕ್ರಮ ನಡೆದಿಲ್ಲ. ಮುಂದೆ ತನಿಖೆ ನಡೆದು ಏನಾದರೂ ಅಕ್ರಮ ಕಂಡುಬಂದರೆ ಅದಕ್ಕೆ ಸಂಪುರ್ಣ ನಾನೇ ಜವಾಬ್ದಾರ” ಅಂತ ಉಪಕುಲಪತಿಗಳು undertaking ಬರೆದು ಕೊಟ್ಟರೆ ಆಯ್ಕೆ ಪಟ್ಟಿಯನ್ನು ಅನುಮೋದಿಸುವುದಾಗಿ ಕೆಲ ಸದಸ್ಯರು ಪಟ್ಟು ಹಿಡಿದರು. ಅದಕ್ಕೆ ಉಪಕುಲಪತಿಗಳು ಒಪ್ಪಲಿಲ್ಲ, ಸದಸ್ಯರು ಆಯ್ಕೆ ಪಟ್ಟಿಗೆ ಅನುಮೋದನೆ‌ ನೀಡದೆ ಸಭೆ ಮುಗಿದಿದೆ.


ಇದನ್ನೂ ಓದಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬೃಹತ್ ನೇಮಕಾತಿ ಹಗರಣ ಬಯಲು


ಮಹೇಶ್ವರಯ್ಯನವರು ಏಪ್ರಿಲ್ 19ಕ್ಕೆ ನಿವೃತ್ತಿಯಾಗುತ್ತಿದ್ದಾರೆ. ನೇಮಕಾತಿ ಪ್ರಕ್ರಿಯೆ ಮುಗಿಯುವ ತನಕ ಅವರನ್ನು ಮುಂದುವರೆಸುವಂತೆ ಕುಲಸಚಿವರು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಆ ಬೇಡಿಕೆಯನ್ನು ಸಾರಾಸಗಟಾಗಿ ನಿರಾಕರಿಸಿತು. ಕುಲಸಚಿವರಿಗೆ ಪತ್ರ ಬರೆದ ಇಲಾಖೆಯ ಕಾರ್ಯದರ್ಶಿಗಳು ನೇಮಕಾತಿ ಪ್ರಕ್ರಿಯೆಯನ್ನು ಮುಂದೆ ಬರುವ ಹೊಸ ಉಪಕುಲಪತಿಗಳು ಮುಂದುವರೆಸುತ್ತಾರೆ ಎಂದರಲ್ಲದೇ ಫೆಬ್ರುವರಿ 18ರ ನಂತರ ಯಾವುದೇ ಹೊಸ ನೇಮಕಾತಿ ಮಾಡುವಂತಿಲ್ಲ ಎಂದೂ ಹೇಳಿದರು. ಇಷ್ಟು ಸ್ಪಷ್ಟವಾಗಿ ಹೇಳಿದ‌ ಮೇಲೂ ಮಹೇಶ್ವರಯ್ಯನವರು ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಿ ಎಕ್ಸಿಕ್ಯೂಟಿವ್ ಕೌನ್ಸಿಲ್ ಸಭೆಯಲ್ಲಿ ಆಯ್ಕೆ ಪಟ್ಟಿ ಇಟ್ಟು ಅನುಮೋದನೆ ಪಡೆಯುವ ಪ್ರಯತ್ನ‌ ನಡೆಸಿದರು. ಆದರೆ ಅದಕ್ಕೆ ಎಕ್ಸಿಕ್ಯುಟಿವ್ ಕೌನ್ಸಿಲ್ ಅವಕಾಶ ಕೊಡಲಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...