ಬಿಕ್ಕಟ್ಟಿನಿಂದ ಬಳಲುತ್ತಿರುವ ಯೆಸ್ ಬ್ಯಾಂಕಿನ ಪುನರ್ನಿರ್ಮಾಣ ಯೋಜನೆಯನ್ನು ಸರ್ಕಾರ ಕೈಗೊಂಡಿದೆ. ಖಾತೆಗಳಿಂದ 50,000 ರೂ.ಗಳವರೆಗೆ ಮಾತ್ರ ಹಿಂಪಡೆಯುವ ನಿರ್ಬಂಧವನ್ನು ಬುಧವಾರದೊಳಗೆ ತೆಗೆದುಹಾಕಲಾಗುವುದು ಎಂದು ಸರ್ಕಾರ ಶುಕ್ರವಾರ ಅಧಿಸೂಚನೆಯಲ್ಲಿ ತಿಳಿಸಿದೆ.
ಈ ತಿಂಗಳ ಆರಂಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯೆಸ್ ಬ್ಯಾಂಕ್ ಅನ್ನು ನಿಷೇಧಕ್ಕೆ ಒಳಪಡಿಸಿತ್ತು. ಅಲ್ಲದೆ ಬ್ಯಾಂಕನ್ನು ತನ್ನ ನಿಯಂತ್ರಣಕ್ಕೆ ಒಳಪಡಿಸಿ ಎಪ್ರಿಲ್ 3 ರವರೆಗೆ ಬ್ಯಾಂಕಿನಿಂದ ಹಿಂಪಡೆಯಲು 50,000 ರೂ.ಗಳ ಮಿತಿಯನ್ನು ವಿಧಿಸಿತ್ತು. ಇದರಿಂದಾಗಿ ಯೆಸ್ ಬ್ಯಾಂಕ್ ಗ್ರಾಹಕರು ಇಂಟರ್ನೆಟ್ ಬ್ಯಾಂಕಿಂಗ್, ಯುಪಿಐ ಮೂಲಕ ಪಾವತಿ ಮಾಡಲು ಹಾಗೂ ಎಟಿಎಂಗಳಿಂದ ಹಣ ಪಡೆಯಲು ಪರದಾಡುವಂತಾಗಿತ್ತು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಸ್ತಾಪಿಸಿದಂತೆ ಯೆಸ್ ಬ್ಯಾಂಕಿನ ಪುನರ್ನಿರ್ಮಾಣ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. “ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯೆಸ್ ಬ್ಯಾಂಕಿನಲ್ಲಿ ಶೇ 49 ರಷ್ಟು ಷೇರುಗಳನ್ನು ಹೂಡಿಕೆ ಮಾಡುತ್ತದೆ ಮತ್ತು ಇತರ ಹೂಡಿಕೆದಾರರನ್ನು ಸಹ ಆಹ್ವಾನಿಸಲಾಗುತ್ತದೆ” ಎಂದು ಕೇಂದ್ರ ಸಚಿವ ಸಂಪುಟದ ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಒಪ್ಪಂದದ ಭಾಗವಾಗಿ ಯೆಸ್ ಬ್ಯಾಂಕಿನಲ್ಲಿರುವ ಎಲ್ಲಾ ಉದ್ಯೋಗಿಗಳನ್ನು ಉಳಿಸಿಕೊಳ್ಳಲಾಗುತ್ತದೆ ಎನ್ನಲಾಗಿದೆ.