ಕಲಬುರಗಿಯ ಕೇಂದ್ರೀಯ ವಿ.ವಿಯಲ್ಲಿ ಕಳೆದ ವರ್ಷ 67 ಹುದ್ದೆಗಳ ನೇಮಕಾತಿಯಲ್ಲಿ ನಡೆದಿದ್ದ ಭಾರೀ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಲು ಸಮಿತಿ ನೇಮಿಸುವಂತೆ ಒತ್ತಾಯಿಸಿ ಕಲಬುರಗಿ ಲೋಕಸಭಾ ಸದಸ್ಯರಾದ ಉಮೇಶ್ ಜಾಧವ್ರವರು ಕೇಂದ್ರದ ಮಾನವ ಸಂಪನ್ಮೂಲ ಸಚಿವ ರಮೇಶ್ ನಿಶಾಂಕ್ ಪೋಖ್ರಿಯಾಲ್ರವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕದ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯವಾದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ ಕುರಿತು ’ದಿ ಹಿಂದೂ’ ಪತ್ರಿಕೆ ಪ್ರಕಟಿಸಿದ ತನಿಖಾ ವರದಿ ಮತ್ತು ಅದರ ಜಾಡು ಹಿಡಿದು GauriLankeshnews.com ಮತ್ತು ನಾನುಗೌರಿ.ಕಾಂ ಪತ್ರಿಕೆಗಳು ವಿಸ್ತೃತ ವರದಿ ಪ್ರಕಟಿಸಿದ್ದವು. ಪತ್ರದಲ್ಲಿ ಈ ವರದಿಗಳನ್ನು ಉಲ್ಲೇಖಿಸಿ ಲಗತ್ತಿಸಿದ್ದಾರೆ.
ಗುರುವಾರ ಪತ್ರವನ್ನು ಕೇಂದ್ರ ಸಚಿವರಿಗೆ ರವಾನಿಸಿರುವ ಅವರು, ದಿ ಹಿಂದೂ ಮತ್ತು ನಾನುಗೌರಿ ವರದಿಯ ವಿವರಗಳನ್ನು ಗಂಭೀರವಾಗಿ ಪರಿಗಣಿಸಿ ಹಗರಣದ ತನಿಖೆ ನಡೆಸುವಂತೆ ಹಾಗೂ ಈ ನೇಮಕಾತಿಯನ್ನು ರದ್ದುಗೊಳಿಸಿ ಹೊಸದಾಗಿ ನೇಮಕಾತಿ ನಡೆಸುವಂತೆ ಸಂಸದರು ಕೋರಿದ್ದಾರೆ.
25.09.2019ರಂದು ಹೊರಡಿಸಿದ ಅಧಿಸೂಚನೆಯಂತೆ ವಿ.ವಿಯ 30 ವಿಭಾಗಗಳಲ್ಲಿನ 67 ಪ್ರಾಧ್ಯಾಪಕ ಮತ್ತು ಸಹ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಯಲ್ಲಿ ಯುಜಿಸಿ ನಿಯಮಾವಳಿಗಳನ್ನು ಉಲ್ಲಂಘಿಸಿ, ಅರ್ಹರಲ್ಲದ, ಬೋಧನಾ ಅನುಭವವಿಲ್ಲದ ವ್ಯಕ್ತಿಗಳನ್ನೂ ಸಹ ಹಲವು ಹುದ್ದೆಗಳಿಗೆ ಕುಲಪತಿಗಳಾದ ಎಚ್.ಎಂ ಮಹೇಶ್ವರಯ್ಯನವರು ನೇಮಿಸಿಕೊಂಡಿದ್ದರು.
ಇದನ್ನೂ ಓದಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬೃಹತ್ ನೇಮಕಾತಿ ಹಗರಣ ಬಯಲು
ಯುಜಿಸಿ ನಿಯಮಾವಳಿಗಳಲ್ಲಿ ಇಂತಿಷ್ಟು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಬೇಕೆಂಬ ನಿಯಮವನ್ನು ಮೀರಿ ಕೆಲವರನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗಿದೆ. ಅನರ್ಹ ಅಭ್ಯರ್ಥಿಗಳನ್ನು ಸಹ ತಜ್ಞರ ಸಮಿತಿಯು ಮುಂದಿನ ಹಂತಕ್ಕೆ ಕಳಿಸಿ “ಅಂತಿಮ ತೀರ್ಮಾನ ಸಕ್ಷಮ ಪ್ರಾಧಿಕಾರಕ್ಕೆ ಬಿಟ್ಟಿದ್ದು” ಎಂದು ಷರಾ ಬರೆದು ಕಳಿಸಿಲಾಗಿದೆ. ಏಕೆಂದರೆ ಸಂದರ್ಶನ ಮಾಡುವವರು ಮತ್ತು ಸಕ್ಷಮ ಪ್ರಾಧಿಕಾರವೆಂದರೆ ಕುಲಪತಿಗಳಾದ ಮಹೇಶ್ವರಯ್ಯನವರೇ ಆಗಿದ್ದಾರೆ. ಇದಕ್ಕಾಗಿ ಅವರಿಂದ ತಲಾ 30-40 ಲಕ್ಷ ರೂ ಪಡೆದಿದ್ದಾರೆಂಬ ಸುದ್ದಿ ಇಡೀ ವಲಯದಲ್ಲಿ ಹರಿದಾಡುತ್ತಿದೆ.
ಇಂತಹ ಕೋಟ್ಯಾಂತರ ರೂಪಾಯಿಗಳ ಭ್ರಷ್ಟಾಚಾರ ಒಂದು ಕಡೆಯಾದರೆ, ಹೀಗೆ ಅನರ್ಹರು ಆಯ್ಕೆಯಾಗುವುದರಿಂದ ವಿ.ವಿಯ ಗುಣಮಟ್ಟ ಹಾಳಾಗುತ್ತಿದೆ. ಅಲ್ಲದೇ ಅರ್ಹ ಅಭ್ಯರ್ಥಿಗಳು ಪ್ರತಿಭಾವಂತರಾದರೂ ಸಹ ಈ ಹಗರಣದ ಬಲಿಪಶುಗಳಾಗುತ್ತಿದ್ದಾರೆ. ಹಾಗಾಗಿ ಈ ಕುರಿತು ತ್ವರಿತ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಿದೆ. ಇದು ಬೇರೆ ಬೇರೆ ವಿವಿಗಳಿಗೂ ಪಾಠವಾಗಬೇಕಿದೆ. ಶೈಕ್ಷಣಿಕ ಕ್ಷೇತ್ರ ಪಾರದರ್ಶಕವಾಗಿ, ಗುಣಮಟ್ಟದಿಂದ ಕೂಡಿರಬೇಕಾಗಿದೆ.
ಈ ನಿಟ್ಟಿನಲ್ಲಿ ಈ ಬೃಹತ್ ಹಗರಣದ ಕುರಿತು ಕಾಳಜಿವಹಿಸಿ ಸಂಸದರು ಪತ್ರ ಬರೆದಿರುವುದು ಪ್ರಕರಣಕ್ಕೆ ಮತ್ತಷ್ಟು ಬಲ ತುಂಬಿದೆ. ತನಿಖೆ ಬೇಗ ನಡೆಯಲಿ ಎಂಬುದು ನಮ್ಮ ಆಶಯವೂ ಆಗಿದೆ.