ಒಳ ಮಣಿಪುರ ಲೋಕಸಭಾ ಕ್ಷೇತ್ರದ 11 ಮತಗಟ್ಟೆಗಳಲ್ಲಿ ಇಂದು (ಏ.22) ಮರು ಮತದಾನ ನಡೆಯುತ್ತಿದೆ. ಈ ಮತಗಟ್ಟೆಗಳಲ್ಲಿ ಮೊದಲ ಹಂತದ ಮತದಾನದ ವೇಳೆ ದುಷ್ಕರ್ಮಿಗಳ ಗುಂಪು ಗುಂಡಿನ ದಾಳಿ ನಡೆಸಿತ್ತು ಮತ್ತು ಇವಿಎಂಗಳನ್ನು ಒಡೆದು ಹಾಕಿತ್ತು.
ಏಪ್ರಿಲ್ 19ರಂದು ನಡೆದ ಮತದಾನದ ವೇಳೆ ಮತಗಟ್ಟೆಗಳಲ್ಲಿ ಹಿಂಸಾಚಾರ ನಡೆದಿತ್ತು. ಈ ಹಿನ್ನೆಲೆ ಇಂದು ಮತ್ತೊಮ್ಮೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಮತ್ತು ಸೇನೆ ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ.
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯದ ನಂತರ, ಮಣಿಪುರದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಒಳ ಮಣಿಪುರ ಲೋಕಸಭಾ ಕ್ಷೇತ್ರದ 11 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸಲಾಗುವುದು ಎಂದು ಘೋಷಿಸಿದ್ದರು. ಈ ಮತಗಟ್ಟೆಗಳಲ್ಲಿ ಏ.19ರಂದು ನಡೆದ ಮತದಾನ ‘ಅಸಿಂಧು’ ಎಂದು ತಿಳಿಸಿದ್ದರು.
ಮೊದಲ ಹಂತದ ಮತದಾನದ ವೇಳೆ ಇಂಫಾಲ್ ಪೂರ್ವ ಜಿಲ್ಲೆಯ ಮತದಾನ ಕೇಂದ್ರದ ಬಳಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಈ ಸಂಬಂಧ ಮೂವರನ್ನು ಮಣಿಪುರ ಪೊಲೀಸರು ಬಂಧಿಸಿದ್ದಾರೆ. ಮೊದಲ ಹಂತದಲ್ಲಿ ಮಣಿಪುರದಲ್ಲಿ ಶೇ. 69.18ರಷ್ಟು ಮತದಾನವಾಗಿದೆ.
ಮಣಿಪುರದ 47 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಕಾಂಗ್ರೆಸ್ ಪಕ್ಷ ಆಗ್ರಹಿಸಿದ್ದು, ಮತದಾನದ ವೇಳೆ ಮತ ಗಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರವೆಸಗಲಾಗಿದೆ ಎಂದು ಆರೋಪಿಸಿದೆ.
ಇದನ್ನೂ ಓದಿ : ಬಿಜೆಪಿಗೆ ನಿರ್ಗಮನ ಹಾದಿ ತೋರಿಸುತ್ತೇವೆ: ರಾಂಚಿಯಲ್ಲಿ ಇಂಡಿಯಾ ಮೈತ್ರಿಕೂಟದಿಂದ ಬೃಹತ್ ರ್ಯಾಲಿ