ಬಿಜೆಪಿ ಪಕ್ಷವು ಇಡಿ ಮತ್ತು ಸಿಬಿಐಯನ್ನು ತನ್ನ ವಿಸ್ತೃತ ಇಲಾಖೆಯಾಗಿ ಪರಿವರ್ತಿಸಿ ವಿರೋಧ ಪಕ್ಷದ ನಾಯಕರ ಮೇಲೆ ದಬ್ಬಾಳಿಕೆಗೆ ಬಳಕೆ ಮಾಡುತ್ತಿದೆ, ನಾವು ಬಿಜೆಪಿಗೆ ನಿರ್ಗಮನ ದಾರಿಯನ್ನು ತೋರಿಸುತ್ತೇವೆ ಎಂದು ಜಾರ್ಖಾಂಡ್ನ ರಾಂಚಿಯಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಪ್ರತಿಪಕ್ಷದ ನಾಯಕರು ಹೇಳಿದ್ದಾರೆ.
ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಲೋಕಸಭೆ ಚುನಾವಣೆಯ ಹಿನ್ನೆಲೆ ಇಂಡಿಯಾ ಮೈತ್ರಿ ಪಕ್ಷದ ನಾಯಕರು ಒಟ್ಟಾಗಿ ಶಕ್ತಿ ಪ್ರದರ್ಶನವನ್ನು ಮಾಡಿದ್ದಾರೆ. ಜಾರ್ಖಂಡ್ನ ಪ್ರಭಾತ್ ತಾರಾ ಮೈದಾನದಲ್ಲಿ ನಡೆದ ‘ಉಲ್ಗುಲನ್ ನ್ಯಾಯ್ ರ್ಯಾಲಿ’ಯಲ್ಲಿ ಒಟ್ಟು 28 ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದ್ದಾರೆ.
ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಬಳಿ ಭ್ರಷ್ಟಾಚಾರವನ್ನು ತಕ್ಷಣವೇ ಸ್ವಚ್ಛಗೊಳಿಸುವ ವಾಷಿಂಗ್ ಪೌಡರ್ ಇದೆ. ಯಾವುದೇ ಭ್ರಷ್ಟರನ್ನು ಬಿಡುವುದಿಲ್ಲ ಎಂದು ಮೋದಿ ಹೇಳುತ್ತಾರೆ. ಇದು ಮೋದಿಯವರ ಗ್ಯಾರಂಟಿ. ಎಲ್ಲ ಭ್ರಷ್ಟರನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತೇವೆ ಎಂದರೆ ಅದು ಅವರ ಗ್ಯಾರಂಟಿ. ಇಂದು ಎಲ್ಲಾ ಭ್ರಷ್ಟ ನಾಯಕರು ಬಿಜೆಪಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಾತನಾಡಿ, ಕಳೆದ 10 ವರ್ಷಗಳಲ್ಲಿ ದೇಶವನ್ನು ನಾಶಪಡಿಸಿದ ಬಿಜೆಪಿಯನ್ನು ತೊಡೆದುಹಾಕಲು ಈ ಉಲಗುಲನ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಜಾರಿ ನಿರ್ದೇಶನಾಲಯ (ಇಡಿ), ಸಿಬಿಐ ಮತ್ತು ಐಟಿ ಬಿಜೆಪಿಯ ವಿಸ್ತೃತ ಇಲಾಖೆಗಳಾಗಿದ್ದು, ವಿರೋಧ ಪಕ್ಷಗಳು ಆಳುವ ರಾಜ್ಯಗಳಲ್ಲಿ ಸರ್ಕಾರಗಳನ್ನು ಹತ್ತಿಕ್ಕಲು ಅವುಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಶಿವಸೇನೆಯ ನಾಯಕಿ (ಯುಬಿಟಿ) ಪ್ರಿಯಾಂಕಾ ಚತುರ್ವೇದಿ ಆರೋಪಿಸಿದ್ದಾರೆ.
ದೇಶದಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಪ್ರತಿ ಮತವನ್ನು ಬಳಸಬೇಕು ಎಂದು ಟಿಎಂಸಿ ನಾಯಕ ವಿವೇಕ್ ಗುಪ್ತಾ ಹೇಳಿದ್ದಾರೆ.
ಬಿಜೆಪಿ ಮತ್ತು ಆರೆಸ್ಸೆಸ್ ಜಾರ್ಖಂಡ್ ಹೆಸರನ್ನು ‘ವನಂಚಲ್’ ಎಂದು ಬದಲಾಯಿಸಲು ಬಯಸಿವೆ ಎಂದು ಸಿಪಿಐ(ಎಂಎಲ್) ನಾಯಕ ದೀಪಂಕರ್ ಭಟ್ಟಾಚಾರ್ಯ ಹೇಳಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮಾತನಾಡಿ, ಬಿಜೆಪಿ ವಾಸ್ತವವಾಗಿ ‘ಭಾರತೀಯ ಜುಮ್ಲಾ ಪಕ್ಷ’ ಮತ್ತು ಜೈಲಿನಲ್ಲಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೇಸರಿ ಪಕ್ಷವನ್ನು ಅಳಿಸಿಹಾಕಲು ಸಮರ್ಥ ನಾಯಕರು. ಐ.ಎನ್.ಡಿ.ಐ.ಎ. ಮೈತ್ರಿ ಕೂಟವು ಏಪ್ರಿಲ್ 19ರಂದು ಮುಕ್ತಾಯಗೊಂಡ ಮೊದಲ ಹಂತದ ಚುನಾವಣೆಯಲ್ಲಿ 80 ರಿಂದ 90 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದ್ದಾರೆ.
ಹೇಮಂತ್ ಸೊರೆನ್ ಸಂದೇಶ ಓದಿದ ಪತ್ನಿ:
ಬಿಜೆಪಿಯು ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಸರ್ಕಾರಗಳನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಆದರೆ ಪ್ರಜಾಪ್ರಭುತ್ವವನ್ನು ವಿಫಲಗೊಳಿಸಲು ಬಿಡಲಾಗುವುದಿಲ್ಲ ಎಂದು ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಜೈಲಿನಿಂದ ನೀಡಿದ ಸಂದೇಶವನ್ನು ರ್ಯಾಲಿಯಲ್ಲಿ ಅವರ ಪತ್ನಿ ಕಲ್ಪನಾ ಓದಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ನನ್ನ ಪತಿ ಹೇಮಂತ್ ಸೋರೆನ್ ಅವರನ್ನು ಚುನಾವಣೆಗೆ ಕೆಲವೇ ತಿಂಗಳ ಮುನ್ನ ಬಂಧಿಸಲಾಗಿದೆ. ಇದು ಸರ್ಕಾರದ ವಿರುದ್ಧ ಪಿತೂರಿ ನಡೆಸುತ್ತಿದ್ದ ಶಕ್ತಿಗಳಿಂದ ನಡೆದ ಪಿತೂರಿ ಎಂದು ಹೇಳಿದ್ದಾರೆ. ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲು ಇಡಿ ಮತ್ತು ಸಿಬಿಐನಂತಹ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ, ಆದರೆ ಬಿಜೆಪಿ ಮತ್ತು ಅಂತಹ ಶಕ್ತಿಗಳನ್ನು ಜಾರ್ಖಂಡ್ನಿಂದ ಓಡಿಸಲಾಗುವುದು ಎಂದು ಅವರು ಪತಿಯ ಸಂದೇಶವನ್ನು ಓದಿದ್ದಾರೆ. ಬಿಜೆಪಿಗೆ “ನಿರ್ಗಮನ ಬಾಗಿಲು” ತೋರಿಸಲು ಜನರನ್ನು ಒತ್ತಾಯಿಸಿದ ಕಲ್ಪನಾ, ಈ ಚುನಾವಣೆಯಲ್ಲಿ ಪಕ್ಷವು ಗೆದ್ದರೆ ಅದು ಆದಿವಾಸಿಗಳಿಗೆ “ದೊಡ್ಡ ಅಪಾಯ” ಎದುರಾಗಲಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಸೂರತ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕರಿಸಿದ ಚುನಾವಣಾಧಿಕಾರಿ: ಹೈಕೋರ್ಟ್ ಮೊರೆ ಹೋಗಲು ನಿರ್ಧಾರ