ಜನವರಿ 26 ರಂದು ಇಡೀ ದೇಶವೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿದೆ. ಇದೇ ದಿನ ಕಳೆದ ವರ್ಷ ದೇಶಾದ್ಯಂತ ಕಿಸಾನ್ ಗಣರಾಜ್ಯೋತ್ಸವ ಆಚರಿಸಲಾಗಿತ್ತು. ದೆಹಲಿಯಲ್ಲಿ ಪ್ರತಿಭಟನಾ ನಿರತ ರೈತರು ಕರೆ ಕೊಟ್ಟಿದ್ದ ಕಿಸಾನ್ ಗಣರಾಜ್ಯೋತ್ಸವಕ್ಕೆ ದೇಶದ ರೈತರು ಬೀದಿಗಿಳಿದಿದ್ದರು. ಟ್ರ್ಯಾಕ್ಟರ್ ಪರೇಡ್ ಮೂಲಕ ಜಿಲ್ಲಾ ಕೇಂದ್ರಗಳಿಗೆ ತಲುಪಿ ರೈತರಿಗೆ ಬೆಂಬಲ ನೀಡಿದ್ದರು.
ಆದರೂ ನವೆಂಬರ್ 2020 ರಿಂದಲೂ ನಡೆಯುತ್ತಿದ್ದ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆ ಮಾಧ್ಯಮಗಳಲ್ಲಿ ಚರ್ಚೆಗೆ ಬಂದಿದ್ದು ಮಾತ್ರ ಕಿಸಾನ್ ಗಣರಾಜ್ಯೋತ್ಸವದಂದೆ. ಏಕೆಂದರೆ ಅಲ್ಲಿ ನಡೆದ ಕೆಲವು ಕಹಿ ಘಟನೆಗಳನ್ನು ಮುಖ್ಯವಾಗಿರಿಸಿಕೊಂಡಿದ್ದ ಮಾಧ್ಯಮಗಳು ರೈತರ ಶಾಂತಿಯುತ ಪ್ರತಿಭಟನೆಗೆ ಹಿಂಸೆಯ ರೂಪ ನೀಡಲು ಹೊರಟಿದ್ದವು. ಆದರೆ, ಅವುಗಳನ್ನು ಮೀರಿ ರೈತರು ತಮ್ಮ ಐತಿಹಾಸಿಕ ಹೋರಾಟದಲ್ಲಿ ಗೆಲುವು ಕಂಡಿದ್ದಾರೆ.
ಕಳೆದ ಬಾರಿ 2021 ರ ಜನವರಿ 26 ರಂದು ಪ್ರತಿಭಟನಾ ನಿರತ ಗಡಿಗಳಿಂದ ಬೆಳಗಿನ 5 ಗಂಟೆಯಿಂದಲೇ ಟ್ರ್ಯಾಕ್ಟರ್ ಪರೇಡ್ ತಯಾರಿ ನಡೆದು, 8 ಗಂಟೆಗೆ ರ್ಯಾಲಿ ಆರಂಭವಾಗಿತ್ತು. ಪೊಲೀಸ್ ಇಲಾಖೆ 12 ಗಂಟೆಗೆ ಪರೇಡ್ ನಡೆಸಲು ಅನುಮತಿ ನೀಡಿತ್ತು. ಬ್ಯಾರಿಕೇಡ್, ಟ್ರ್ಯಾಕ್ಗಳನ್ನೂ ಬದಿಗೆ ಸರಿಸಿ ಟ್ರ್ಯಾಕ್ಟರ್ ಪರೇಡ್ಗೆ ಚಾಲನೆ ನೀಡಲಾಯಿತು. ಟ್ರ್ಯಾಕ್ಟರ್ ಪರೇಡ್ನಲ್ಲಿ ಭಾಗವಹಿಸಲು ಗಡಿಗಳಲ್ಲಿ ಲಕ್ಷಾಂತರ ಜನ ಜಮಾಯಿಸಿದ್ದರು.
ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ನೀಡಿದ್ದ ಮಾರ್ಗಸೂಚಿಯ ಪ್ರಕಾರ ರ್ಯಾಲಿ ನಡೆಯುತ್ತಿತ್ತು. ಗಣರಾಜ್ಯೋತ್ಸವದ ಪರೇಡ್ಗೆ ಸಿದ್ಧತೆ ಹೇಗಿರಬೇಕು ಎಂಬ ಅಂಶಗಳಿಂದ ಹಿಡಿದು, ಯಾವ ಮಾರ್ಗಗಳಲ್ಲಿ ಚಲಿಸಬೇಕು, ತಾವು ಯಾವುದಕ್ಕಾಗಿ ಈ ರ್ಯಾಲಿ ನಡೆಸುತ್ತಿದ್ದೇವೆ, ಎಂಬೆಲ್ಲಾ ವಿಚಾರಗಳ ಬಗ್ಗೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು. ಕೆಂಪುಕೋಟೆಯ ಮೇಲೆ ರೈತರ ಧ್ವಜವನ್ನು ಹಾರಿಸುವ ರೈತರ ಆಸೆಗೆ ಸರ್ಕಾರ ಮತ್ತು ದೆಹಲಿ ಪೊಲೀಸರು ಅನುಮತಿ ನೀಡಿರಲಿಲ್ಲ. ರೈತರು ನೀಡಿದ್ದ ಪರೇಡ್ ಮಾರ್ಗಕ್ಕೂ ಪೊಲೀಸರಿಂದ ಉತ್ತಮ ಸ್ಪಂದನೆ ಸಿಕ್ಕಿರಲಿಲ್ಲ. ನಂತರ ದೆಹಲಿಯ ಸುತ್ತ ಪರೇಡ್ ನಡೆಸಲು ಅನುಮತಿ ನೀಡಿದ್ದರು.
ಇದನ್ನೂ ಓದಿ: ರೈತ ಹೋರಾಟ ತಡೆಗೆ ಹಲವು ಕುತಂತ್ರಗಳು, ಜಗ್ಗದ ಅನ್ನದಾತರು: ವಿಶೇಷ ವರದಿ
ದೆಹಲಿ ಸುತ್ತ ಪರೇಡ್ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ ರೈತರು ದೆಹಲಿಯ ಒಳಗೆ ನುಗ್ಗಿ ಕೆಂಪು ಕೋಟೆ ಮೇಲೆ ಕಿಸಾನ್ ಧ್ವಜ ಹರಿಸಿದ್ದರು. ಸಿಂಘು ಗಡಿಯಿಂದ ಹೊರಟಿದ್ದ ನಮ್ಮ ನಾನುಗೌರಿ.ಕಾಂ ತಂಡಕ್ಕೆ ಒಟ್ಟು 5 ಕಡೆಯಲ್ಲಿ ಹೊಸದಾದ ಬ್ಯಾರಿಕೇಡ್ಗಳು ಕಾಣಿಸಿದವು. ಆದರೆ ಪ್ರತಿಭಟನಕಾರಾರು ಜೆಸಿಬಿಗಳ ಮೂಲಕ ಬ್ಯಾರಿಕೇಡ್ಗಳನ್ನು ತಳ್ಳುವ ಅನಿವಾರ್ಯಕ್ಕೆ ಬಿದ್ದರು. ಕೆಲವು ಬಾರ್ಡರ್ಗಳಲ್ಲಿ ಪೊಲೀಸರು ಅಶ್ರುವಾಯು, ಟಿಯರ್ ಗ್ಯಾಸ್ ಸಿಡಿಸಿದ್ದರು. ಮತ್ತೆ ಕೆಲವೆಡೆ ರೈತರನ್ನು ತಡೆಯುವ ಕೆಲಸ ಮಾಡಿದ್ದರು. ಈ ಸುದ್ದಿ ಹಲವು ರೈತರ ಗುಂಪುಗಳಲ್ಲಿ ಹರಿದಾಡಿ ಸಿಂಘು ಗಡಿಯಲ್ಲಿ ಉಳಿದಿದ್ದ ರೈತರು ಕೂಡ ಕೆಲ ಕಾಲ ತಬ್ಬಿಬ್ಬುಗೊಂಡಿದ್ದರು.
ಗಾಜಿಪುರ ಮತ್ತು ಸಿಂಘು ಭಾಗದ ರೈತರ ಗುಂಪುಗಳು ಕೆಂಪುಕೋಟೆಯಲ್ಲಿ ರೈತರ ಧ್ವಜವನ್ನು ಹಾರಿಸಿ, ನಂತರ ಅಲ್ಲಿಂದ ವಾಪಾಸ್ ಸಿಂಘುಗೆ ತೆರಳಿದರು. ಇಷ್ಟರಲ್ಲಿ ಕೆಲವು ಮಾಧ್ಯಮಗಳು ಬಿತ್ತರಿಸಿದ ಸುದ್ದಿಯಿಂದ ರೈತರು ಏನಾಗುತ್ತಿದೆ ಎಂಬ ಕಳವಳ ವ್ಯಕ್ತಪಡಿಸಿದ್ದರು. ಮಾಧ್ಯಮಗಳಲ್ಲಿ ರೈತರು ಖಲಿಸ್ತಾನಿ ಧ್ವಜ ಹಾರಿಸಿದ್ದಾರೆ ಎಂದು ಸುಳ್ಳು ಸುದ್ದಿ ಬಿತ್ತರಿಸಲಾಯಿತು.
ಟ್ರ್ಯಾಕ್ಟರ್ ಪರೇಡ್ನ ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತ ನಾಯಕರ ಮೇಲೆ ದೂರು ದಾಖಲಿಸಲಾಗಿತ್ತು. ಘಟನೆಯ ನೈತಿಕ ಹೊಣೆ ಹೊತ್ತು ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ಫೆಬ್ರವರಿ ಒಂದರಂದು ನಡೆಯಬೇಕಿದ್ದ ಪಾರ್ಲಿಮೆಂಟ್ ಚಲೋ ಪಾದಯಾತ್ರೆಯನ್ನು ಮುಂದೂಡಿದ್ದರು. ಜೊತೆಗೆ ಹುತಾತ್ಮ ದಿನದಂದು (ಜನವರಿ 30) ಉಪವಾಸ ಸತ್ಯಾಗ್ರಹ ನಡೆಸಿದ್ದರು.
ಪರಿಸ್ಥಿತಿಯ ಲಾಭ ಪಡೆಯಲು ಮುಂದಾದ ಸರ್ಕಾರ, ಕೊಂಚ ಮಟ್ಟಿಗೆ ಕಡಿಮೆ ಸಂಖ್ಯೆಯ ರೈತರಿದ್ದ ದೆಹಲಿ-ಉತ್ತರ ಪ್ರದೇಶ ಹೆದ್ದಾರಿಯ ಚಿಲ್ಲಾ ಬಾರ್ಡರ್ನಲ್ಲಿದ್ದ ರೈತರನ್ನು ಪೊಲೀಸರ ಸಹಾಯದಿಂದ ಹೆದರಿಸಿ, ಲಾಠಿ ಪ್ರಹಾರ ನಡೆಸಿ ಅಲ್ಲಿಂದ ಓಡಿಸಲಾಯಿತು. ತಮ್ಮ ಟೆಂಟ್, ಟ್ರ್ಯಾಲಿಗಳನ್ನು ಅಲ್ಲಿಯೇ ಬಿಟ್ಟು ಹಲವು ರೈತರು ಚಿಲ್ಲಾ ಬಾರ್ಡರ್ನಿಂದ ತಮ್ಮ ಹಳ್ಳಿಗಳಿಗೆ, ಮತ್ತೆ ಕೆಲವರು ಗಾಜಿಪುರ್ ಬಾರ್ಡರ್ಗಳಿಗೆ ತಲುಪಿದ್ದರು.
ಚಿಲ್ಲಾ ಬಾರ್ಡರ್ನಲ್ಲಿ ರೈತರನ್ನು ಒಕ್ಕಲೆಬ್ಬಿಸಿ ಗೆದ್ದ ಖುಷಿಯಲ್ಲಿ ಗಾಝಿಪುರ್ ಬಾರ್ಡರ್ ಕಡೆಗೆ ಸರ್ಕಾರದ ಗಮನ ಹರಿಸಿತ್ತು. ಅಲ್ಲಿಗೆ ವಿದ್ಯುಚ್ಛಕ್ತಿ ಮತ್ತು ನೀರಿನ ಸರಬರಾಜನ್ನು ಉತ್ತರ ಪ್ರದೇಶ ಸರ್ಕಾರ ನಿಲ್ಲಿಸಿತ್ತು. ಪೊಲೀಸರು ರೈತರನ್ನು ಓಡಿಸಲು ಪ್ರಯತ್ನ ನಡೆಸಿದರು. ಆದರೆ, ಅವರ ಈ ಪ್ರಯತ್ನ ಸರ್ಕಾರ ಮತ್ತು ಪೊಲೀಸರಿಗೆ ಮುಳುವಾಗಿ ಬದಲಾಯಿತು. ಪ್ರತಿಭಟನೆಯ ಕೇಂದ್ರ ಬಿಂದುವಾಗಿದ್ದ ಸಿಂಘು ಮತ್ತು ಟಿಕ್ರಿ ಗಡಿಗಳಿಂದ ಗಾಜಿಫುರ್ ಬಾರ್ಡರ್ ಮಾಧ್ಯಮಗಳಲ್ಲಿ ಹೆಚ್ಚು ಸದ್ದಾಗುವಂತಾಯಿತು. ರೈತ ನಾಯಕ ಟಿಕಾಯತ್ ಕಣಕ್ಕಿಳಿದು, ಸರ್ಕಾರಕ್ಕೆ ತಡೆಗೋಡೆಯಾಗಿ ನಿಂತರು.
ಇಷ್ಟಕ್ಕೆ ಸುಮ್ಮನಾಗದ ಸರ್ಕಾರ ಪ್ರತಿಭಟನಾ ಸ್ಥಳಗಳಾದ ಸಿಂಘು, ಟಿಕ್ರಿ, ಶಹಾಜಾನ್ಪುರ್ ಮತ್ತು ಗಾಝಿಪುರ್ ಗಡಿಗಳಲ್ಲಿ ಇಂಟರ್ನೆಟ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಿತು. ರೈತ ಹೋರಾಟದ ವಾಸ್ತವ ಸುದ್ದಿಗಳು ಜನರನ್ನು ತಲುಪದಿರಲು ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ರೈತರು ಕೊಂಚಮಟ್ಟಿಗೆ ಆತಂಕಕ್ಕೆ ಒಳಗಾಗಿದ್ದರು. ಮನೆಗಳಲ್ಲಿ ಮಾಧ್ಯಮಗಳ ಸುದ್ದಿಯನ್ನು ನೋಡಿ ಕರೆ ಮಾಡುವವರ ಸಂಖ್ಯೆ ಹೆಚ್ಚಾದಂತೆ ಪ್ರತಿಭಟನಾಕಾರರಲ್ಲೂ ಬೇಸರ ಶುರುವಾಗಿತ್ತು. ಇದನ್ನು ರೈತ ಮುಖಂಡರು ಉತ್ತಮ ರೀತಿಯಲ್ಲಿ ಬಗೆಹರಿಸುವಲ್ಲಿ ಸಫಲರಾದರು.
ಸರ್ಕಾರ ಇಂಟರ್ನೆಟ್ ಸಂಪರ್ಕ ತೆಗೆದುಹಾಕಿದ ಮೇಲೆ ರೈತ ಮುಖಂಡರು ತಮ್ಮ ವ್ಯಾನ್ಗಳಲ್ಲಿ ತೆರಳಿ ಮಾಹಿತಿ ನೀಡಲು ಆರಂಭಿಸಿದರು. ಯಾವ ಯಾವ ಗಡಿಗಳಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡುತ್ತಾ, ಪ್ರತಿಭಟನೆ ಹತ್ತಿಕ್ಕಲು ಆಡಳಿತ ವ್ಯವಸ್ಥೆ ಕುತಂತ್ರ ನಡೆಸುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರು. ಪ್ರತಿಭಟನಾ ಸ್ಥಳಗಳಲ್ಲಿ ಪೊಲೀಸರು ಮತ್ತು ಸರ್ಕಾರದ ಬೆಂಬಲಿಗರು ರೈತರ ಮೇಲೆ ಹಲ್ಲೆ ನಡೆಸುತ್ತಿರುವ ವಿಚಾರ ಎಲ್ಲಾ ಗಡಿಗಳಲ್ಲಿ ತಿಳಿದ ಮೇಲೆ ಸ್ವಯಂ ರಕ್ಷಣ ಪಡೆಗಳ ಸಂಖ್ಯೆಯನ್ನು ಹೆಚ್ಚು ಮಾಡಲಾಗಿತ್ತು.
ಸಿಂಘು ಗಡಿಯಲ್ಲಿರುವ ಸಂಯುಕ್ತ ಕಿಸಾನ್ ಮಜ್ದೂರ್ ಸಂಘರ್ಷ ಕಮಿಟಿಯ ಸದಸ್ಯರು ಕೆಲ ಬಿಜೆಪಿ ಬೆಂಬಲಿಗರ ಜೊತೆ ಸೇರಿ ಕೆಂಪುಕೋಟೆ ಪ್ರಕರಣ ನಡೆದು ಕಿಸಾನ್ ಆಂದೋಲನಕ್ಕೆ ಕಪ್ಪು ಚುಕ್ಕೆ ಬಂತು ಎಂದು ಹಲವು ರೈತರು ಆರೋಪಿಸಿದ್ದರು.
ಇಷ್ಟೆಲ್ಲಾ ಅಡೆತಡೆಗಳನ್ನು ದಾಟಿದ ರೈತರು ಒಂದು ವರ್ಷದ ಐತಿಹಾಸಿಕ ಹೋರಾಟವನ್ನು ಗೆದ್ದು ತಮ್ಮ ಕುಟುಂಬಗಳನ್ನು ಸೇರಿದ್ದಾರೆ. ಆದರೆ, ಈ ಒಂದು ವರ್ಷದಲ್ಲಿ 750 ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಅವರ ನಿಧನದ ನೋವು ಇನ್ನು ಶಮನವಾಗಿಲ್ಲ ಎಂಬುದಕ್ಕೆ ಮೊನ್ನೆ ಪಂಜಾಬ್ನಲ್ಲಿ ಪ್ರಧಾನಿಯವರ ಭೇಟಿಯನ್ನು ವಿರೋಧಿಸಿ ನಡೆಸಿದ ಪ್ರತಿಭಟನೆ ಸಾಕ್ಷಿಯಾಗಿದೆ. ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಇಂದಿಗೂ ಬಿಜೆಪಿ ನಾಯಕರನ್ನು ಗ್ರಾಮಗಳಿಂದ ವಾಪಸ್ ಕಳುಹಿಸುತ್ತಿದ್ದಾರೆ.
ಒಟ್ಟಾರೆ, ಪ್ರತಿಭಟನೆಯ ಹೊಸ ಸ್ಪರೂಪವನ್ನು ಈ ಐತಿಹಾಸಿಕ ರೈತ ಹೋರಾಟ ನೀಡಿದೆ. ಕಿಸಾನ್ ಗಣರಾಜ್ಯೋತ್ಸವ ಇತಿಹಾಸದಲ್ಲಿ, ಜನಮನದಲ್ಲಿ ಎಂದಿಗೂ ಉಳಿದುಕೊಂಡಿದೆ. ಕೆಲವು ಅಹಿತಕರ ಘಟನೆಯ ಹೊರತಾಗಿ ಕಿಸಾನ್ ಗಣರಾಜ್ಯೋತ್ಸವ ಶೇಕಡಾ 99 ರಷ್ಟು ಯಶ್ವಸಿಯಾಗಿತ್ತು. ರೈತ ನಾಯಕರ ಸಮಯೋಚಿತ ನಿರ್ಧಾರಗಳು, ಶಾಂತಿಯುತ ಪ್ರತಿಭಟನೆಗೆ ಅವರು ಅಂಟಿಕೊಂಡಿದ್ದ ಪರಿ ಇಡೀ ದೇಶ ಮತ್ತು ವಿಶ್ವದ ಗಮನ ಸೆಳೆದಿತ್ತು.
ಇದನ್ನೂ ಓದಿ: ಸರ್ಕಾರ ನಾರಾಯಣ ಗುರುಗಳ ಟ್ಯಾಬ್ಲೊ ನಿರಾಕರಿಸಿದ ದಿನ ಇಡೀ ರಾತ್ರಿ ಕಣ್ಣೀರು ಸುರಿಸಿದ್ದೆ: ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿ