2021ರ ನವೆಂಬರ್ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸುವ ಮೂಲಕ ಗಮನ ಸೆಳೆದಿದ್ದ ಉತ್ತರ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತೆ ರೀತಾ ಯಾದವ್ರವರಿಗೆ ಸೋಮವಾರ ಸಂಜೆ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಅವರನ್ನು ಸದ್ಯ ಸುಲ್ತಾನ್ಪುರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ.
2021ರ ನವೆಂಬರ್ ತಿಂಗಳಿನಲ್ಲಿ ಪೂರ್ವಾಂಚಲ್ ಎಕ್ಸ್ಪ್ರೆಸ್ವೇ ಉದ್ಘಾಟನೆಗೆ ಪ್ರಧಾನಿ ಮೋದಿ ಉತ್ತರ ಪ್ರದೇಶಕ್ಕೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಯೋಗಿ ಮುರ್ದಾಬಾದ್ ಎಂಬು ಘೋಷಣೆ ಕೂಗಿದ್ದ ರೀತಾ ಯಾದವ್ ಪ್ರಧಾನಿ ಮೋದಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದರು. ಅವರು ಸೋಮವಾರ ಸಂಜೆ 6.30ರ ಸಮಯದಲ್ಲಿ ಪಕ್ಷದ ಕಚೇರಿಯಿಂದ ಮನೆಗೆ ತೆರಳಿದ್ದ ವೇಳೆ ಲಕ್ನೋ-ವಾರಣಾಸಿ ಚತುಷ್ಪತ ಹೆದ್ದಾರಿ ಸುಲ್ತಾನ್ಪುರದ ಬಳಿ ದುಷ್ಕರ್ಮಿಗಳಿಂದ ಗುಂಡಿನ ದಾಳಿಗೆ ಒಳಗಾಗಿದ್ದಾರೆ.
ರೀತಾ ಯಾದವ್ರವರು ತಮ್ಮ ಬೊಲೆರೊ ವಾಹನದಲ್ಲಿ ತೆರಳುತ್ತಿದ್ದಾಗ 3 ಜನ ಗೂಂಡಾಗಳು ಪಲ್ಸರ್ ಬೈಕ್ನಲ್ಲಿ ಬಂದು ಅಡ್ಡಗಟ್ಟಿದ್ದಾರೆ. ಒಬ್ಬ ವ್ಯಕ್ತಿಯು ವಾಹನದಲ್ಲಿದ್ದ ಅವರ ಕಾಲಿಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ನಂತರ ಅವರ ಡ್ರೈವರ್ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ರೀತಾ ಯಾದವ್ ಚಿಕಿತ್ಸೆ ಪಡೆಯುತ್ತಿದ್ದು ಅವರ ಪರಿಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ರೀತಾ ಯಾದವ್ ಪ್ರಕಾರ, “ದುಷ್ಕರ್ಮಿಗಳು ಯಾರು ಎಂಬುದನ್ನು ಪತ್ತೆ ಹಚ್ಚಲಾಗಿಲ್ಲ. ಅವರ ಕಾರು ಅಡ್ಡಗಟ್ಟಿ ಆಕ್ಷೇಪಾರ್ಹ ಪದಗಳಿಂದ ನಿಂದಿಸಿ, ಬೆದರಿಕೆ ಹಾಕಿದರು. ನಂತರ ಡ್ರೈವರ್ಗೆ ಗನ್ ತೋರಿಸಿದಾಗ ನಾನು ಒಬ್ಬರ ಕಪಾಳಕ್ಕೆ ಹೊಡೆದೆ. ಆಗ ಆತ ಗುಂಡು ಹಾರಿಸಿ ಪರಾರಿಯಾದ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರೀತಾ ಯಾದವ್ 2021ರ ನವೆಂಬರ್ 16 ರಂದು ಪ್ರಧಾನಿಗೆ ಕಪ್ಪು ಬಾವುಟ ತೋರಿಸಿ ಪ್ರತಿಭಟಿಸಿದಾಗ ಬಂಧನಕ್ಕೊಳಗಾಗಿದ್ದರು. ಎರಡು ದಿನಗಳ ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಆರಂಭದಲ್ಲಿ ಸಮಾಜವಾದಿ ಪಕ್ಷದಲ್ಲಿದ್ದ ಅವರು ನಂತರ ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ ಪಕ್ಷದ “ನಾನು ಹುಡುಗಿ, ನಾನು ಹೋರಾಡಬಲ್ಲೆ” ಅಭಿಯಾನದಲ್ಲಿ ಸಕ್ರಿಯರಾಗಿದ್ದರು. ಜಾನ್ಸಿಯಲ್ಲಿ ಡಿಸೆಂಬರ್ ನಲ್ಲಿ ನಡೆದ ಹೆಣ್ಣುಮಕ್ಕಳ ಬೃಹತ್ ಮ್ಯಾರಥಾನ್ ಆಯೋಜಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ: “ನಾನು ಹುಡುಗಿ ಮತ್ತು ನಾನು ಹೋರಾಡಬಲ್ಲೆ”: ಯುಪಿ ಕಾಂಗ್ರೆಸ್ ಅಭಿಯಾನಕ್ಕೆ ಪ್ರಿಯಾಂಕಾ ಗಾಂಧಿ ಚಾಲನೆ
ಈ ದಾಳಿ ಕಂಡನಾರ್ಹ. ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು.
ದೇಶದಲ್ಲಿ ವೈಚಾರಿಕ ಭಿನ್ನಮತವನ್ನು ವೈಚಾರಿಕವಾಗಿ ಎದುರಿಸಲಾಗದ ಪ್ರತಿಗಾಮಿ ಶಕ್ತಿಗಳು ಆಳುವ ವರ್ಗದ ಅಕ್ರಮ, ಅನ್ಯಾಯಗಳನ್ನು ಪ್ರಜಾತಾಂತ್ರಿಕ ವಿಧಾನದ ಮೂಲಕ ವಿರೋಧ ವ್ಯಕ್ತಪಡಿಸುವ ಪ್ರಜೆಗಳ ಅಧಿಕಾರವನ್ನು ಕಸಿದುಕೊಳ್ಳುವ ಪ್ರಯತ್ನದ ಅಂಗವಾಗಿ ತಮ್ಮ ಕಾಲಾಳುಗಳ ಮೂಲಕ ಈ ಹೀನ ಕೃತ್ಯಗಳನ್ನು ಎಸಗುತ್ತಿದ್ದಾರೆ. ಇದು ಖಂಡನೀಯ, ಆದ್ದರಿಂದ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ದೇಶದ ಹಿತಬಯಸುವ ಪ್ರಜಾಸತ್ತೆಯ ಪರ ನಾಗರಿಕರು ಮತ್ತು ಸಂಘಟನೆಗಳು ಒಂದಾಗಿ ಹೋರಾಡುವ ಮೂಲಕ ದೇಶದ ಸಂವಿಧಾನದ ಆಶಯಗಳನ್ನು ರಕ್ಷಿಸಬೇಕಾಗಿದೆ.