ಉತ್ತರ ಪ್ರದೇಶದ ವಿರೋಧ ಪಕ್ಷವಾದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ತನ್ನ ಕನಸಿನಲ್ಲಿ ಶ್ರೀಕೃಷ್ಣ ಬಂದಿದ್ದಾಗಿ ಪ್ರತಿಪಾದಿಸಿದ್ದಾರೆ. ಕನಸಿನಲ್ಲಿ ಶ್ರೀಕೃಷ್ಣ ಬಂದು ತಾನು ಸರ್ಕಾರ ರಚನೆ ಮಾಡಿ, ರಾಜ್ಯದಲ್ಲಿ ರಾಮರಾಜ್ಯ ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ ಎಂದು ಅಖಿಲೇಶ್ ಸೋಮವಾರ ಹೇಳಿದ್ದಾರೆ.
ಬಿಜೆಪಿಯ ಬಹ್ರೈಚ್ ಶಾಸಕಿ ಮಾಧುರಿ ವರ್ಮಾ ಅವರನ್ನು ಸಮಾಜವಾದಿ ಪಕ್ಷಕ್ಕೆ ಸ್ವಾಗತಿಸಲು ಆಯೋಜಿಸಲಾದ ಸಮಾರಂಭದಲ್ಲಿ ಮಾತನಾಡುತ್ತಾ ಅಖಿಲೇಶ್ ಈ ಹೇಳಿಕೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷವು ಸರ್ಕಾರ ರಚಿಸುವ ಹಾದಿಯಲ್ಲಿದೆ ಎಂದು ಅವರು ಘೋಷಿಸಿದ್ದಾರೆ.
ಇದನ್ನೂ ಓದಿ:ಗಂಗಾ ಸ್ವಚ್ಛವಾಗಿಲ್ಲವೆಂದು ತಿಳಿದಿದ್ದರಿಂದಲೇ ಆದಿತ್ಯನಾಥ್ ಮೋದಿಯಂತೆ ಸ್ನಾನ ಮಾಡಿಲ್ಲ: ಅಖಿಲೇಶ್ ಯಾದವ್
ಸಮಾಜವಾದಿ (ಸಮಾಜವಾದ) ಮಾರ್ಗದ ಮೂಲಕ ರಾಮರಾಜ್ಯದ ಹಾದಿ ಇದೆ. ಸಮಾಜವಾದಿ ಸ್ಥಾಪನೆಯಾದ ದಿನ ರಾಜ್ಯದಲ್ಲಿ ರಾಮರಾಜ್ಯ ಸ್ಥಾಪನೆಯಾಗಲಿದೆ ಎಂದು ಅಖಿಲೇಶ್ ಹೇಳಿದ್ದಾರೆ.
ಈ ವೇಳೆ ಅವರು ತಮ್ಮ ಭಾಷಣದಲ್ಲಿ, “ಉತ್ತರ ಪ್ರದೇಶದಲ್ಲಿ ನಮ್ಮ ಸರ್ಕಾರ ಬರಲಿದೆ ಎಂದು ಹೇಳಲು ಭಗವಾನ್ ಶ್ರೀಕೃಷ್ಣ ಪ್ರತಿ ರಾತ್ರಿ ನನ್ನ ಕನಸಿನಲ್ಲಿ ಬರುತ್ತಾನೆ” ಎಂದು ಅವರು ಹೇಳಿದ್ದಾರೆ. ರಾಜ್ಯದಲ್ಲಿ ಆದಿತ್ಯನಾಥ್ ಸರ್ಕಾರ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.
ಸಮಾಜವಾದಿ ಪಕ್ಷದಲ್ಲಿ ಹಲವಾರು ಕ್ರಿಮಿನಲ್ಗಳು ಮತ್ತು ದರೋಡೆಕೋರರು ಇದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, “ಹಲವು ಘೋರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ವ್ಯಕ್ತಿಯನ್ನು ಯುಪಿ ಮುಖ್ಯಮಂತ್ರಿಯನ್ನಾಗಿ ಮಾಡಿರುವ ಬಿಜೆಪಿ ನಮ್ಮ ಪಕ್ಷದ ಮೇಲೆ ಆರೋಪ ಮಾಡುತ್ತಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಆದಿತ್ಯನಾಥ್ ಅವರನ್ನು ‘ವಿಷ’ ಎಂದು ಉಲ್ಲೇಖಿಸಿದ ಯುಪಿ BJP ಕಾರ್ಯಕಾರಿಣಿ ಸದಸ್ಯ!
ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸ್ಥಾನಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್ ಯಾದವ್, ಈ ಬಗ್ಗೆ ಪಕ್ಷವು ಸಾರ್ವಜನಿಕ ಘೋಷಣೆ ಮಾಡಲಿದೆ ಎಂದು ಉತ್ತರಿಸಿದ್ದಾರೆ.
ಯುಪಿ ಸಿಎಂ ಅನ್ನು ಲೇವಡಿ ಮಾಡುವ ಮೂಲಕ ಚೀನಾ ಅರುಣಾಚಲ ಪ್ರದೇಶದ ಗ್ರಾಮಗಳ ಹೆಸರನ್ನು ಬದಲಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆದಿತ್ಯನಾಥ್ ಅವರ ಹೆಸರನ್ನು ಬದಲಾಯಿಸುವ ಕಲೆಯನ್ನು ಚೀನಾ ಕರಗತ ಮಾಡಿಕೊಂಡಿದೆ ಎಂದು ಅಖಿಲೇಶ್ ವ್ಯಂಗ್ಯವಾಡಿದ್ದಾರ.
“ನಮ್ಮ ನೆರೆಯ ದೇಶವು ನಮ್ಮ ಮುಖ್ಯಮಂತ್ರಿಯಿಂದ ಕಲಿತುಕೊಂಡಿದೆ. ಅದು ನಮ್ಮ ಹಳ್ಳಿಗಳ ಹೆಸರನ್ನು ಬದಲಾಯಿಸಿದೆ. ಇದು ನಮ್ಮ ಮುಖ್ಯಮಂತ್ರಿಗಳಿಂದ ಪ್ರಾರಂಭಿಸಲ್ಪಟ್ಟ ಪ್ರವೃತ್ತಿಯಾಗಿದ್ದು, ಚೀನಾ ಕೂಡ ಇದನ್ನು ಅವರಿಂದ ಕಲಿತುಕೊಂಡಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:‘ಆದಿತ್ಯನಾಥ್’ ಬಗ್ಗೆ ವಿಶೇಷ ವರದಿ ಕೇಳಿದ ಗಂಟೆಗಳೊಳಗೆ ಪ್ರಧಾನ ಸಂಪಾದಕರನ್ನು ವಜಾಗೊಳಿಸಿದ ‘ಔಟ್ಲುಕ್’