ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿ, ಪ್ರಚೋದನಕಾರಿ ಭಾಷಣ, ಮಾನಹಾನಿ ಪೋಸ್ಟ್ಗಳು ದೇಶದ ಭದ್ರತೆಗೆ ಅಪಾಯಕಾರಿ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಾದ ವಾಟ್ಸ್ಯಾಪ್, ಫೇಸ್ಬುಕ್ಗಳಿಗೆ ಸೂಕ್ತ ನೀತಿ, ನಿಯಮಾವಳಿ ರೂಪಿಸಬೇಕು. ಹೀಗಾಗಿ ಜನವರಿ 15 ರೊಳಗೆ ಸೂಕ್ತ ನಿಯಮಾವಳಿಗಳನ್ನು ರೂಪಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಹೇಳಿದೆ.
ಇದು ಬಳಕೆದಾರರ ಮೇಲೆ ನೇರ ಪರಿಣಾಮ ಬೀರಲಿದ್ದು ಜನರ ಜುಟ್ಟು ಸರ್ಕಾರಗಳ ಕೈಗೆ ಹೋಗುವ ಅಪಾಯವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈಗಾಗಲೇ ಬಾಂಬೆ, ಮದ್ರಾಸ್, ಮಧ್ಯಪ್ರದೇಶ ಹೈಕೋರ್ಟ್ಗಳಲ್ಲಿ ಸಾಮಾಜಿಕ ಜಾಲತಾಣಗಳಿಗೆ ನಿರ್ಬಂಧ ಹೇರುವುದು ಮತ್ತು ಆಧಾರ್ ಕಡ್ಡಾಯಗೊಳಿಸುವ ಅರ್ಜಿ ವಿಚಾರಣೆ ನಡೆಯುತ್ತಿದೆ. ಈಗ ಎಲ್ಲಾ ಕೇಸ್ಗಳನ್ನು ವರ್ಗಾಯಿಸಿಕೊಂಡು ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಜನವರಿ 15ರೊಳಗೆ ಎಲ್ಲಾ ರೂಪುರೇಷೆಯನ್ನು ಪೂರ್ಣಗೊಳಿಸಿ, ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸರ್ಕಾರ ಮತ್ತು ಕಂಪನಿಗಳಿಗೆ ತಿಳಿಸಿದೆ. ಅಲ್ಲದೇ ಜನವರಿ ಕೊನೆಯ ವಾರದಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.
ಇತ್ತ ಸೋಷಿಯಲ್ ಮೀಡಿಯಾ ಕಂಪನಿಗಳ ಪ್ರಕರಣವನ್ನು ಉನ್ನತ ನ್ಯಾಯಾಲಯಕ್ಕೆ ವರ್ಗಾಯಿಸುವ ಪ್ರಯತ್ನವನ್ನು ತಮಿಳುನಾಡು ಸರ್ಕಾರದ ಪರ ವಕೀಲ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ವಿರೋಧಿಸಿದ್ದಾರೆ. ಸರ್ಕಾರ ಬಯಸುವ ಮಾಹಿತಿಯನ್ನು ಡಿಕ್ರಿಪ್ಟ್ ಮಾಡುವಂತೆ ಹೇಳಿದ್ದಾರೆ.
ಇನ್ನು ವಾಟ್ಸ್ಯಾಪ್ ಮತ್ತು ಫೇಸ್ಬುಕ್ ಕಂಪನಿಗಳು ‘ಮಾಹಿತಿಯನ್ನು ಡಿಕ್ರಿಪ್ಟ್ ಮಾಡಲು ಯಾವುದೇ ‘ಕೀ’ (key) ನಮ್ಮಲ್ಲಿಲ್ಲ. ಆದರೆ ಅಧಿಕಾರಿಗಳಿಗೆ ಸಹರಿಸುವುದಾಗಿ’ ತಿಳಿಸಿವೆ. ಸರ್ಕಾರಕ್ಕೆ ಕಂಪನಿಗಳ ಮಾಲೀಕರಿಂದ ಅಗತ್ಯ ಮಾಹಿತಿ ಪಡೆಯಲು ಕೀ ಬೇಕು. ಆದರೆ ಕಂಪನಿಗಳ ಮಾಲೀಕರು ಆ ಕೀ ತಮ್ಮ ಬಳಿಯಿಲ್ಲ ಎಂದು ಸುಪ್ರೀಂಕೋರ್ಟ್ನ ನ್ಯಾಯಾಧೀಶ ದೀಪಕ್ ಗುಪ್ತಾ ಮತ್ತು ಅನಿರುದ್ಧ ಬೋಸ್ ಇರುವ ದ್ವಿಸದಸ್ಯ ಪೀಠಕ್ಕೆ ತಿಳಿಸಿದ್ದಾರೆ.
ಒಟ್ಟಿನಲ್ಲಿ ಇನ್ನುಮುಂದೆ ಸಾಮಾಜಿಕ ಜಾಲತಾಣಗಳ ಬಳಕೆದಾರರ ಮೇಲೆ ಹದ್ದಿನ ಕಣ್ಣಿಡುವುದು ನಿಜವಾಗಿದೆ. ಹತ್ತಾರು ಕೋಟಿ ಜನ ಬಳಸುವ ಇದರ ಮೇಲೆ ನಿಗಾ ಇಡುವುದು ಕಷ್ಟಸಾಧ್ಯವಾದ ಕೆಲಸ. ಮುಂದೆ ಏನಾಗುತ್ತೋ ಕಾದು ನೋಡಬೇಕಿದೆ.