ಮಧ್ಯಪ್ರದೇಶದ ಝಬುವಾದಲ್ಲಿ ಚರ್ಚ್ವೊಂದರ ಮೇಲೆ ಹತ್ತಿ ದುಷ್ಕರ್ಮಿಗಳು ಕೇಸರಿ ಧ್ವಜವನ್ನು ಹಾರಾಟ ನಡೆಸಿ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿದ್ದಾರೆ.
ಈ ಕುರಿತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವು ದುಷ್ಕರ್ಮಿಯೋರ್ವ ಚರ್ಚ್ ಮೇಲೆ ಹತ್ತಿ ಕೇಸರಿ ಧ್ವಜವನ್ನು ಹಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಕೇಸರಿ ಧ್ವಜದಲ್ಲಿ ಅಯೋಧ್ಯೆಯ ರಾಮ ಮಂದಿರದ ಚಿತ್ರವಿತ್ತು ಮತ್ತು ಅದರ ಮೇಲೆ ‘ಜೈ ಶ್ರೀ ರಾಮ್’ ಎಂದು ಬರೆಯಲಾಗಿತ್ತು.
ಈ ಕುರಿತು ಮಾತನಾಡಿದ ಚರ್ಚ್ನ ಪಾದ್ರಿ ನರ್ಬು ಅಮಲಿಯಾರ್, ಭಾನುವಾರದ ಪ್ರಾರ್ಥನೆ ಮುಗಿದ ಕೂಡಲೇ ಜನರ ಗುಂಪು ಘೋಷಣೆಗಳನ್ನು ಕೂಗುತ್ತಾ ಚರ್ಚ್ಗೆ ಬಂದಿದೆ. ನಾವು ನಮ್ಮ ಭಾನುವಾರದ ಪ್ರಾರ್ಥನೆಯನ್ನು ಮುಗಿಸುವಾಗ ಮಧ್ಯಾಹ್ನ 3 ಗಂಟೆಯಾಗಿತ್ತು. ಈ ವ್ಯಕ್ತಿಗಳು ಎಲ್ಲಿಂದಲೋ ಬಂದರು, ಜೈ ಶ್ರೀ ರಾಮ್ ಎಂದು ಕೂಗಿದರು. ಗುಂಪಿನಲ್ಲಿ ಕನಿಷ್ಠ 25 ಮಂದಿ ಇದ್ದರು ಮತ್ತು ಅವರಲ್ಲಿ ಕೆಲವರು ಧ್ವಜ ಹಿಡಿದುಕೊಂಡು ಚರ್ಚ್ನ ಮೇಲೆ ಹತ್ತಿದ್ದಾರೆ ಎಂದು ಹೇಳಿದ್ದಾರೆ.
ದುಷ್ಕರ್ಮಿಗಳ ಗುಂಪಿನಲ್ಲಿದ್ದ ಕೆಲವರನ್ನು ನಾನು ಗುರುತಿಸಿದ್ದು, ಅವರು ನೆರೆಯ ಗ್ರಾಮದವರಾಗಿದ್ದರು. ಅವರಲ್ಲಿ ಕೆಲವರ ಹೆಸರುಗಳೂ ನನಗೆ ಗೊತ್ತು. ಇದು ಸರಿಯಲ್ಲ ಎಂದು ಅವರಿಗೆ ತಿಳಿಹೇಳಲು ನಾನು ಪ್ರಯತ್ನಿಸಿದ್ದೆ. ನಾವು ಇಲ್ಲಿ ಕೇವಲ ದೇವರ ಆರಾಧಕರು ಮತ್ತು ಅವರು ನಮಗೆ ತೊಂದರೆ ನೀಡಬಾರದು ಎಂದು ನಾನು ಕೇಳಿಕೊಂಡಿದ್ದ, ಆದರೆ ಅವರು ಕೇಳಲಿಲ್ಲ. ಅಲ್ಲೇನು ನಡೆಯುತ್ತಿದೆ ಎನ್ನುವುದು ನನಗೆ ಅರ್ಥವಾಗಿರಲಿಲ್ಲ, ಹೀಗೆ ಹಿಂದೆಂದೂ ಸಂಭವಿಸಿರಲಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಜಬುವಾ ಪೊಲೀಸ್ ವರಿಷ್ಠಾಧಿಕಾರಿ ಆಗಮ್ ಜೈನ್, ಈ ಬಗ್ಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ನಮ್ಮ ತಂಡ ಭಾನುವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿದೆ. ಏನಾಯಿತು ಎಂದು ವಿಚಾರಿಸಿದೆವು. ಇದು ಒಬ್ಬ ವ್ಯಕ್ತಿಯ ಮನೆ ಅವನು ಪ್ರಾರ್ಥನೆಗಾಗಿ ಬಳಸುತ್ತಾನೆ, ಅದು ಚರ್ಚ್ ಅಲ್ಲ. ಹಾಗಾಗಿ ನಾವು ಸ್ವಯಂಪ್ರೇರಿತವಾಗಿ ಎಫ್ಐಆರ್ ದಾಖಲಿಸಿಲ್ಲ. ವ್ಯಕ್ತಿಯು ದೂರು ನೀಡಲು ಮುಂದೆ ಬಂದಿಲ್ಲ ಎಂದು ಹೇಳಿದ್ದಾರೆ.
ಇದು ಮನೆ ಎಂಬ ಪೊಲೀಸರ ಹೇಳಿಕೆಯನ್ನು ಪಾದ್ರಿ ನಿರಾಕರಿಸಿದ್ದು, ಇದು ಪ್ರಾರ್ಥನಾಲಯ, ನಾನು 2016 ರಲ್ಲಿ ಪ್ರಾರಂಭಿಸಿದ ಚರ್ಚ್. ಪ್ರತಿ ಭಾನುವಾರ 30-40 ಜನರು ಇಲ್ಲಿ ಪ್ರಾರ್ಥನೆಗೆ ಬರುತ್ತಾರೆ. ಇದು ಪೂಜಾ ಸ್ಥಳವಾಗಿದೆ. ನನ್ನ ಮನೆ ಪ್ರತ್ಯೇಕವಾಗಿದೆ. ಯುವಕರ ಗುಂಪು ನಂತರ ನನ್ನನ್ನು ಕರೆದು ಕ್ಷಮೆಯಾಚಿಸಿದರು. ಹಾಗಾಗಿ ನಾನು ಇನ್ನೂ ದೂರು ದಾಖಲಿಸಿಲ್ಲ. ನಾನು ನನ್ನ ಗ್ರಾಮದ ಸರಪಂಚರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಗ್ರಹಾಂ ಸ್ಟೇನ್ಸ್ ಮತ್ತು ಇಬ್ಬರು ಮಕ್ಕಳ ‘ಮಿಡ್ನೈಟ್’ ಮರ್ಡರ್ : ಬಲಪಂಥೀಯ ಕ್ರೌರ್ಯಕ್ಕೆ 25 ವರ್ಷ!