‘ಸನಾತನ ಧರ್ಮ’ ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧವಾಗಿದೆ ಮತ್ತು ಅದನ್ನು ನಿರ್ಮೂಲನೆ ಮಾಡಬೇಕು ಎಂಬ ಹೇಳಿಕೆ ನೀಡಿದ್ದ ಉದಯನಿಧಿ ಸ್ಟಾಲಿನ್ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ಕೋರಿದ ಅರ್ಜಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಪ್ರತಿಕ್ರಿಯೆ ಕೇಳಿದೆ.
ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರ ಪೀಠವು ತಮಿಳುನಾಡು ಸರ್ಕಾರ ಮತ್ತು ಉದಯನಿಧಿಗೆ ನೋಟಿಸ್ ಜಾರಿಗೊಳಿಸಿದೆ.
ನೀವು ಇಲ್ಲಿ ಏಕೆ ಇದ್ದೀರ? ನೀವು ಹೈಕೋರ್ಟ್ಗೆ ಹೋಗಿ.. ಎಫ್ಐಆರ್ ದಾಖಲಾಗಬೇಕೆಂಬುದು ನಿಮ್ಮ ಮನವಿಯಾಗಿದ್ದರೆ, ಇದೇನು ಪೊಲೀಸ್ ಠಾಣೆಯೇ? ಹೈಕೋರ್ಟ್ಗೆ ಸಂಪರ್ಕಿಸುವಂತೆ ಅರ್ಜಿದಾರರಿಗೆ ಪೀಠ ಹೇಳಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರು, ದ್ವೇಷದ ಭಾಷಣಕ್ಕೆ ಸಂಬಂಧಿಸಿದ ವಿಷಯಗಳ ಪ್ರಕರಣಗಳು ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಉಳಿದಿದೆ ಎಂದು ತಿಳಿಸಿದರು.
”ರಾಜ್ಯ ಸರ್ಕಾರವೇ ಒಂದು ನಿರ್ದಿಷ್ಟ ಧರ್ಮದ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾಗ ಮತ್ತು ನಿರ್ದಿಷ್ಟ ಧರ್ಮದ ವಿರುದ್ಧ ಮಾತನಾಡಲು ಪ್ರೋತ್ಸಾಹಿಸುತ್ತಿರುವಾಗ ಅದಕ್ಕೆ ಸುಪ್ರೀಂ ಕೋರ್ಟ್ ಮಾತ್ರ ಪರಿಹಾರ ನೀಡಬೇಕು. ಮಕ್ಕಳು ಸನಾತನ ಧರ್ಮದ ವಿರುದ್ಧ ಮಾತನಾಡುತ್ತಾರೆ ಎಂದು ಎರಡು ದಿನಗಳ ಹಿಂದೆ ರಾಜ್ಯದ ಅಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ” ಎಂದು ಅವರು ಹೇಳಿದರು.
ಇದು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಪ್ರಕರಣವಾಗಿದ್ದು, ಆದ್ದರಿಂದ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾಯಿತು ಎಂದು ಹಿರಿಯ ವಕೀಲರು ಹೇಳಿದರು.
ಮದ್ರಾಸ್ ಹೈಕೋರ್ಟ್ನಲ್ಲಿ ವಕೀಲರಾಗಿದ್ದ ಬಿ ಜಗನ್ನಾಥ್ ಅವರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಪೀಠವು ಆರಂಭದಲ್ಲಿ ನಿರಾಕರಿಸಿತು. ಆದರೆ ಅಂತಿಮವಾಗಿ ಅರ್ಜಿಯನ್ನು ಸ್ವೀಕರಿಸಲು ಮತ್ತು ನೋಟಿಸ್ ನೀಡಲು ಒಪ್ಪಿಕೊಂಡಿತು.
ಅರ್ಜಿಯಲ್ಲಿ ಪ್ರತಿವಾದಿಗಳಾಗಿ ತಮಿಳುನಾಡು ಹಿಂದೂ ಧಾರ್ಮಿಕ ದತ್ತಿ ಸಚಿವ ಸೇಕರ್ ಬಾಬು, ಲೋಕಸಭಾ ಸದಸ್ಯ ಎ ರಾಜಾ, ಡಿಎಂಕೆ ಅಧ್ಯಕ್ಷ ವೀರಮಣಿ ಕೆ ವೀರಮಣಿ ಮತ್ತು ತಮಿಳುನಾಡು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಪೀಟರ್ ಅಲ್ಫೋನ್ಸ್ ಕೂಡ ಇದ್ದರು.
ತಮಿಳುನಾಡು ಪ್ರಗತಿಪರ ಲೇಖಕರ ಕಲಾವಿದರ ಸಂಘವು ಸೆ.2ರಂದು ‘ಸನಾತನ ನಿರ್ಮೂಲನೆ’ ವಿಷಯದ ಕುರಿತು ಚೆನ್ನೈನಲ್ಲಿ ಆಯೋಜಿಸಿದ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಉದಯನಿಧಿ, ಸನಾತನವು ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧವಾಗಿದ್ದು, ಅದನ್ನು ನಿರ್ಮೂಲನೆ ಮಾಡಬೇಕಿದೆ. ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅದನ್ನು ಮಾತ್ರ ರದ್ದುಗೊಳಿಸಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕರೋನಾವನ್ನು ವಿರೋಧಿಸಲು ಸಾಧ್ಯವಿಲ್ಲ. ನಾವು ಇದನ್ನು ನಿರ್ಮೂಲನೆ ಮಾಡಬೇಕು, ನಾವು ಸನಾತನವನ್ನು ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಹೇಳಿದ್ದರು.
ಅವರ ಹೇಳಿಕೆಗಳು ರಾಜಕೀಯ ಗದ್ದಲವನ್ನು ಸೃಷ್ಟಿಸಿತು. ಬಿಜೆಪಿ ನಾಯಕರು ಉದಯನಿಧಿ ಮೇಲೆ ಮುಗಿಬಿದ್ದು ದಾಳಿ ಮಾಡಿದರು, ಆದರೂ ಉದಯನಿಧಿ ಮಾತ್ರ ”ಯಾವುದೇ ಕಾನೂನು ಸವಾಲನ್ನು ಎದುರಿಸಲು ಸಿದ್ಧ” ಎನ್ನುವ ಮೂಲಕ ತಮ್ಮ ಹೇಳಿಕೆ ಮೇಲೆ ನಿಂತರು.
ಇದನ್ನೂ ಓದಿ: ಸನಾತನ ನಿರ್ಮೂಲನೆಯ ಬಗ್ಗೆ ಉದಯನಿಧಿ ಎಬ್ಬಿಸಿದ ಬಿರುಗಾಳಿ ಮತ್ತು ಪೆರಿಯಾರ್ ಪರಂಪರೆ