ಹಿಂದೂ ಸಹಪಾಠಿಯೊಬ್ಬನಿಗೆ ಕಪಾಳಮೋಕ್ಷ ಮಾಡುವಂತೆ ಮುಸ್ಲಿಂ ವಿದ್ಯಾರ್ಥಿಗೆ ಆದೇಶಿಸುವ ಮೂಲಕ ಕೋಮು ದ್ವೇಷವನ್ನು ಎಬ್ಬಿಸಿದ ಶಾಲಾ ಶಿಕ್ಷಕಿಯನ್ನು ಉತ್ತರ ಪ್ರದೇಶ ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಸಂಭಾಲ್ ಜಿಲ್ಲೆಯ ದುಗಾವರ್ ಗ್ರಾಮದ ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಹಿಂದೂ ವಿದ್ಯಾರ್ಥಿಯ ತಂದೆ ಶೈಸ್ತಾ ಎಂಬ ಶಿಕ್ಷಕಿ ವಿರುದ್ಧ ದೂರು ದಾಖಲಿಸಿದ್ದಾರೆ.
”ನನ್ನ ಮಗ 5ನೇ ತರಗತಿ ವಿದ್ಯಾರ್ಥಿಯಾಗಿದ್ದು, ಆತ ಪ್ರಶ್ನೆಗೆ ಉತ್ತರಿಸಿಲ್ಲ ಎನ್ನುವ ಕಾರಣಕ್ಕೆ ಅವನಿಗೆ ಕಪಾಳಮೋಕ್ಷ ಮಾಡಲು ಶಿಕ್ಷಕಿಯು ಮುಸ್ಲಿಂ ಸಹಪಾಠಿಗೆ ಹೇಳಿದ್ದಾರೆ. ಇದರಿಂದ ಮಗನ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ” ಎಂದು ಅವರು ಆರೋಪಿಸಿದ್ದಾರೆ.
ಪೊಲೀಸರು ಶೈಸ್ತಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀಶ್ ಚಂದ್ರ ಹೇಳಿದ್ದಾರೆ.
ಕಳೆದ ತಿಂಗಳು ಉತ್ತರ ಪ್ರದೇಶದಲ್ಲಿ ಇಂತಯಹದ್ದೇ ಘಟನೆ ನಡೆದಿತ್ತು. ಮುಜಾಫರ್ನಗರದ ಖುಬ್ಬಾಪುರ ಗ್ರಾಮದಲ್ಲಿ ಮುಸ್ಲಿ ವಿದ್ಯಾರ್ಥಿ ಹೋಮ್ವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕೆ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಸಹಪಾಠಿಗಳಿಂದ ಮಗುವಿಗೆ ಕಪಾಳಮೋಕ್ಷ ಮಾಡಿದ್ದರು.
ಆ ಆರೋಪಿ ಶಿಕ್ಷಕಿ ತ್ರಿಪ್ತ ತ್ಯಾಗಿ ವಿರುದ್ಧ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಮುಜಾಫರ್ನಗರ ಪ್ರಕರಣ: ಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಯೋಗಿ ಆದಿತ್ಯನಾಥ್ಗೆ ಪತ್ರ ಬರೆದ ಕೇರಳದ ಶಿಕ್ಷಣ ಸಚಿವ