Homeಮುಖಪುಟವಿಜ್ಞಾನ-ವಿಶೇಷ; ಹಡಗು ಹಾರುತಿದೆ ನೋಡಿದಿರಾ?: ವಿಶ್ವಕೀರ್ತಿ

ವಿಜ್ಞಾನ-ವಿಶೇಷ; ಹಡಗು ಹಾರುತಿದೆ ನೋಡಿದಿರಾ?: ವಿಶ್ವಕೀರ್ತಿ

- Advertisement -
- Advertisement -

ಈಚಿತ್ರವನ್ನು ಗಮನಿಸಿ. ಏನು ಕಾಣುತ್ತಿದೆ? ಹೌದು. ಸಮುದ್ರದಲ್ಲಿ ಒಂದು ಹಡಗು ತೇಲುತ್ತಿರುವಂತಿದೆ. ನೀರಿನ ಮೇಲಲ್ಲ ಗಾಳಿಯಲ್ಲಿ ಹಾರುತ್ತಿದೆ ಅಲ್ಲವೇ? ಇದು ಹೇಗೆ ಸಾಧ್ಯ? ಇದು ನಿಜವಾದ ಚಿತ್ರಾನ? ಏನೋ ಎಡಿಟ್ ಮಾಡಿರಬೇಕು ಅಂತ ಯೋಚನೆ ಮಾಡುತ್ತಿದ್ದಿರಾ. ಹಾಗಾದರೆ ಇಲ್ಲಿ ಕೇಳಿ,

ಇಂಗ್ಲೆಂಡ್‌ನ ಕಾರ್ನಾವಾಲ್‌ನಲ್ಲಿ, ಡೇವಿಡ್ ಮಾರಿಸ್ ಎನ್ನುವ ವ್ಯಕ್ತಿ ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದ ಚಿತ್ರ ಇದು. ಈ ಚಿತ್ರದಲ್ಲಿ ಯಾವುದನ್ನೂ ಎಡಿಟ್ ಮಾಡಿಲ್ಲ. ಚಿತ್ರದಲ್ಲಿ ಹಡಗು ಗಾಳಿಯಲ್ಲಿ ಹಾರುತ್ತಿರುವಂತೆ ನೀವು ಕಾಣುತ್ತಿರುವುದು ನಿಜ! ಚಿತ್ರ ತೆಗೆದ ಡೇವಿಡ್ ಕೂಡ ಇದನ್ನು ನೋಡಿ ಅಚ್ಚರಿಯಾಗಿದ್ದರು. ಈ ಚಿತ್ರ ಅಂರ್ಜಾಲದಲ್ಲಿ ಸಂಚಲನ ಮೂಡಿಸಿದ್ದು ಕೂಡ ನಿಜ.

ಅರೆರೆ ಏನಿದು, ವಿಜ್ಞಾನಿಗಳು ಗಾಳಿಯಲ್ಲಿ ಹಾರುವ ಹಡಗನ್ನು ಕಂಡುಹಿಡಿದು ಬಿಟ್ಟರಾ ಅಂತ ಯೋಚನೆ ಮಾಡ್ತಿದ್ದೀರಾ. ಅದರ ಅವಶ್ಯಕತೆ ಏನು ಎಂಬ ಚಿಂತೆ ಮೂಡಿತಾ? ಇಲ್ಲಾ ಇದು ಹಾರುವ ಹಡಗಲ್ಲ. ಇದು ನೀರಿನ ಮೇಲೆ ಚಲಿಸುತ್ತಿರುವ ಹಡಗೇ! ಹಡಗು ಗಾಳಿಯಲ್ಲಿ ಹಾರುತ್ತಿರುವಂತೆ ಕಾಣುತ್ತಿರುವುದು ಚಿತ್ರದಲ್ಲಿ ಮಾತ್ರ ಅಲ್ಲಾ, ಚಿತ್ರ ತೆಗೆದ ಡೇವಿಡ್ ಮಾರಿಸ್ ಅವರ ಬರಿಗಣ್ಣಿಗೂ ಇದು ಹಾರುತ್ತಿರುವಂತೆಯೇ ಕಂಡಿದೆ.

ಹಿಗೆ ಗೋಚರಿಸುವುದಕ್ಕೆ ಕಾರಣ ನಿಸರ್ಗದಲ್ಲಿ ಕಾಣುವ ಅಪರೂಪದ ದೃಷ್ಟಿಭ್ರಮೆ (Optical Illusion) ವಿಧ್ಯಮಾನದಿಂದ. ಇದನ್ನು ಮಿರಾಜ್ (mirage) ಎಂದು ಕರೆಯುತ್ತಾರೆ. ಕನ್ನಡದಲ್ಲಿ ಮಿರಾಜ್‌ಗೆ ಬಿಸಿಲುಕುದುರೆ, ಮರೀಚಿಕೆ, ಭ್ರಮೆ ಎಂಬ ಪದಗಳು ಬಳಕೆಯಲ್ಲಿವೆ.

ಹಾಗಿದ್ದರೆ ಹಡಗು ನಿಜಕ್ಕೂ ಹಾರಿದ್ದು ಹೇಗೆ?

ಡೇವಿಡ್ ಮೋರಿಸ್‌ರವರು ಸಮುದ್ರದ ತಟದಿಂದ ಬಹಳ ದೂರದಲ್ಲಿ ಕಾಣುವ ಹಡಗಿನ ಚಿತ್ರವನ್ನು ತೆಗೆದಿದ್ದಾರೆ. ಸಾಮಾನ್ಯವಾಗಿ ಸಮುದ್ರದ ನೀರು ತಂಪಾಗಿರುತ್ತದೆ. ಈ ಕಾರಣದಿಂದ, ನೀರಿನ ಹತ್ತಿರ ಇರುವ ಗಾಳಿಯು ತಂಪಾಗಿರುತ್ತದೆ. ಸಮುದ್ರದ ನೀರಿನ ಮಟ್ಟದಿಂದ ಮೇಲಕ್ಕೆ ಚಲಿಸಿದಂತೆ, ಅಂದಿನ ಆ ಸ್ಥಳದ ವಾತಾವರಣದ ಹವಾಮಾನಕ್ಕೆ ತಕ್ಕಂತೆ, ಗಾಳಿಯ ತಾಪಮಾನವು ಹೆಚ್ಚುತ್ತಿರುತ್ತದೆ. ಅಲ್ಲದೆ, ತಂಪಾಗಿರುವ ಗಾಳಿಯ ಸಾಂದ್ರತೆ (density) ಹೆಚ್ಚಿದ್ದು, ಬಿಸಿಯಾಗಿರುವ ಗಾಳಿಯ ಸಾಂದ್ರತೆ ಕಡಿಮೆ ಇರುವುದರಿಂದ, ತಂಪಾದ ಗಾಳಿಯ ಪದರ ಕೆಳಗಿದ್ದು, ಬಿಸಿಯಾದ ಗಾಳಿಯ ಪದರ ಅದರ ಮೇಲಿರುತ್ತದೆ. ಹೀಗೆ, ಸಮುದ್ರದಿಂದ ಮೇಲ್ಮುಖವಾಗಿ ಏರಿಕೆಯ ತಾಪಮಾನದ ಗಾಳಿಯ ಪದರಗಳು ರಚಿಸಲ್ಪಟ್ಟಿರುತ್ತವೆ.

ಅಲ್ಲದೆ, ನಾವು ಯಾವುದಾದರೊಂದು ವಸ್ತುವನ್ನು ನೋಡುತ್ತೇವೆ ಎಂದರೆ, ಆ ವಸ್ತುವಿನ ಮೇಲೆ ಬೆಳಕು ಬಿದ್ದು, ಅದು ನಮ್ಮಕಣ್ಣಿನ ಮೇಲೆ ಬಿದ್ದರೆ ಮಾತ್ರ ಆ ವಸ್ತು ನಮಗೆ ಕಾಣುತ್ತದೆ. ಬೆಳಕು ಸರಳರೇಖೆಯಲ್ಲಿಯೇ ಚಲಿಸುತ್ತದೆ ಎಂದು ತಿಳಿದಿದ್ದೇವೆ. ಆದುದರಿಂದಲೆ ನಮಗೆ ಕಾಣುವ ವಸ್ತು ಬೆಳಕಿನ ಕಿರಣಗಳ ಸರಳ ರೇಖೆಯ ದಿಕ್ಕಿನಲ್ಲಿದೆ ಎಂದು ನಾವು ಗ್ರಹಿಸುವುದು. ಆದರೆ ಬೆಳಕು, ಒಂದು ಸಾಂದ್ರತೆ ಇರುವ ಮಾಧ್ಯಮದಿಂದ (medium) ಮತ್ತೊಂದು ಸಾಂದ್ರತೆಇರುವ ಮಾಧ್ಯಮಕ್ಕೆ ಚಲಿಸಿದಾಗ ಹೆಚ್ಚು ಸಾಂದ್ರತೆ ಇರುವ ಮಾಧ್ಯಮದ ಕಡೆಗೆ ಬಾಗುತ್ತದೆ. ಇದನ್ನು ವಕ್ರೀಭವನ (refraction) ಎಂದು ಕರೆಯುತ್ತೇವೆ.

ಈಗ ಈ ಚಿತ್ರ ನೋಡಿ, ಈ ಚಿತ್ರದಲ್ಲಿ ಹಡಗಿನಿಂದ ಬರುತ್ತಿರುವ ಬೆಳಕಿನ ಕಿರಣಗಳು ನೇರವಾಗಿ (ಸರಳ ರೇಖೆಯಲ್ಲಿ) ಚಲಿಸದೆ ಬಾಗಿ ದಡದಲ್ಲಿರುವ ವ್ಯಕ್ತಿಯಕಣ್ಣಿಗೆ ಬೀಳುತ್ತಿದೆ. ಇದು ಏಕೆ ಎಂದು ಹೆಳಬಲ್ಲಿರಾ?

ಹೌದು, ನಾವು ಈಗಾಗಲೇ ತಿಳಿದಂತೆ, ವಾತಾವರಣದ ಹವಾಮಾನದಿಂದ ಸಮುದ್ರದ ನೀರಿನ ಬಳಿ ಹೆಚ್ಚು ಸಾಂದ್ರತೆ ಉಳ್ಳ ತಂಪಾದ ಗಾಳಿಯ ಪದರವಿದೆ. ಸಮುದ್ರದಿಂದ ಮೇಲ್ಮುಖವಾಗಿ ಚಲಿಸಿದಂತೆ ಕಡಿಮೆ ಸಾಂದ್ರತೆಯ, ಹೆಚ್ಚು ಉಷ್ಣವುಳ್ಳ ಗಾಳಿಯ ಪದರಗಳಿರುವುದರಿಂದ, ಬೆಳಕು ಹೆಚ್ಚು ಸಾಂದ್ರತೆಯ ಗಾಳಿಯ ಪದರದಿಂದ ಕಡಿಮೆ ಸಾಂದ್ರತೆಯ ಗಾಳಿಯ ಪದರದ ಕಡೆಗೆ ಚಲಿಸಿದಾಗ, ಹೆಚ್ಚು ಸಾಂದ್ರತೆವುಳ್ಳ ಗಾಳಿಯ ಪದರದ ಕಡೆಗೆ ಬಾಗುತ್ತಿದೆ. ಈ ಕಾರಣದಿಂದ ಹಡಗಿನಿಂದ ಬರುವ ಬೆಳಕಿನ ಕಿರಣಗಳು ಸಮುದ್ರ ಮಟ್ಟದಿಂದ ತಾಪಮಾನ ಹೆಚ್ಚಾಗುತ್ತಿರುವ ಗಾಳಿಯ ಪದರಗಳ ಮೂಲಕ ಹಾದು ಹಲವು ಬಾರಿ ವಕ್ರೀಭವನಗೊಂಡು ವ್ಯಕ್ತಿಯ ಕಣ್ಣಿಗೆ ಬೀಳುತ್ತಿದೆ.

ಬೆಳಕಿನ ಕಿರಣಗಳು ಆ ವ್ಯಕ್ತಿಯ ಕಣ್ಣಿಗೆ ಬಿದ್ದಾಗ, ಅದು ನೇರವಾಗಿ ಬಂದಿದ್ದರೆ ಯಾವ ಸ್ಥಳದಿಂದ ಬರುತ್ತಿತ್ತೋ ಆ ಸ್ಥಳದಲ್ಲಿಯೇ ಹಡಗು ಇದೆ ಎಂಬ ಚಿತ್ರ ವ್ಯಕ್ತಿಗೆ ಕಾಣುತ್ತದೆ. ಆತನ ಸ್ಥಾನದಲ್ಲಿ ಕ್ಯಾಮರಾ ಇದ್ದರೂ, ಅದೂ ಕೂಡ ಇದೆ ರೀತಿಯ ಚಿತ್ರವನ್ನು ಸೆರೆ ಹಿಡಿಯುತ್ತದೆ. ಆದರೆ ಇದು ನೈಜ ಚಿತ್ರವಲ್ಲ. ಬೆಳಕಿನ ವಕ್ರೀಭವನದಿಂದ ಉಂಟಾದ ದೃಷ್ಟ ಭ್ರಮೆಯ ಚಿತ್ರ ಇದಾಗಿದೆ. ಇದೆ ಹಾರುವ ಹಡಗಿನ ಚಿತ್ರದ ಹಿಂದಿನ ವಿಜ್ಞಾನ ರಹಸ್ಯ.

ಇಂತಹ ದೃಷ್ಟಭ್ರಮೆಯನ್ನು ಮಿರಾಜ್ ಎಂದು ಹೆಚ್ಚು ಜನಪ್ರಿಯವಾಗಿದೆ. ಮಿರಾಜ್ ಮೂಡುವುದು, ವಾತಾವರಣದ ಹವಾಮಾನ (ತಾಪಮಾನ), ಗಾಳಿಯ ವೇಗ ಮತ್ತು ಸೂರ್ಯನ ಬಿಸಿಲಿನ ಸೂಕ್ಷ್ಮ ಬದಲಾವಣೆಗಳಿಂದ. ಹಾಗಾಗಿ ಹಲವು ಸ್ಥಳಗಳಲ್ಲಿ ಇಂತಹ ವಿದ್ಯಮಾನಗಳನ್ನು ಕಾಣುವುದು ಅತೀ ಅಪರೂಪ.

ಮರಳು ಭೂಮಿಯಲ್ಲಿ ದೂರದಲ್ಲಿ ನೀರಿರುವಂತೆ ಕಾಣುವುದು, ಬೇಸಿಗೆಯಂದು ಹೆದ್ದಾರಿಗಳಲ್ಲಿ ವಾಹನಗಳ ಪ್ರತಿಫಲನವನ್ನು ರಸ್ತೆಯಲ್ಲಿ ಕಾಣುವುದು ಇವೆಲ್ಲವೂ ಮಿರಾಜ್‌ಗಳೆ. ಕೆಲವೊಮ್ಮೆ, ಕಡಲ ಕಿನಾರೆ ಬಳಿ ಸೂರ್ಯಾಸ್ತವನ್ನು ಕಂಡು ವಾಪಸ್ಸಾಗುವಾಗ ಮತ್ತೊಮ್ಮೆ ಸೂರ್ಯನನ್ನು ಕಾಣಬಹುದು. ಇದು ಕೂಡ ಹಾರುವ ಹಡಗಿನ ಚಿತ್ರದಂತೆಯೇ. ಮುಂದೊಮ್ಮೆ ಎಂದಾದರೂ ಸೂರ್ಯಾಸ್ತ ನೋಡುವಾಗ ಇದರ ಬಗ್ಗೆ ಗಮನ ಕೊಡಿ. ಅಂದಿನ ಹವಾಮಾನ ’ನಮ್ಮ ವೈಜ್ಞಾನಿಕ ಮನೋಭಾವ’ ವೃದ್ಧಿಗೆ ಸಹಕರಿಸಿದರೆ, ಸೂರ್ಯನ ಅತೀ ಅಪರೂಪದ ಮಿರಾಜ್‌ಅನ್ನು ಕಣ್ತುಂಬಿಕೊಳ್ಳಬಹುದು.

ವಿಶ್ವ ಕೀರ್ತಿ ಎಸ್.

ವಿಶ್ವ ಕೀರ್ತಿ ಎಸ್.
ವಿಜ್ಞಾನ ಮತ್ತು ಖಗೋಳ sದಲ್ಲಿ ಆಸಕ್ತಿ, ಹವ್ಯಾಸಿ ಆಕಾಶ ವೀಕ್ಷಣೆಗಾರ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಂಸ್ಥೆಯಲ್ಲಿ ವೈಜ್ಞಾನಿಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಸರ್ಕಾರದ ಸಂವಹನಕ್ಕೆ ಸಚಿವರ ಚರ್ಚೆಯ ವರದಿ; ಕಳೆ ಕೀಳುವ ನೆಪದಲ್ಲಿ ತೆನೆ ಚಿವುಟುವ ಹುನ್ನಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಹಿಂಸೆಗೆ ಪ್ರಚೋದಿಸುವ, ಮುಸ್ಲಿಮರ ವಿರುದ್ಧದ ಜಾಹೀರಾತುಗಳನ್ನು ಅನುಮೋದಿಸಿದ್ದ ಮೆಟಾ: ವರದಿ

0
ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ, ಈ ಮಧ್ಯೆ ತಪ್ಪು ಮಾಹಿತಿಯನ್ನು ಹರಡುವ ಸುದ್ದಿಗಳು,  ವೀಡಿಯೊಗಳು ದೇಶದ ಸಾಮರಸ್ಯಕ್ಕೆ ಪ್ರಮುಖ ಬೆದರಿಕೆಯಾಗಿ ಹೊರಹೊಮ್ಮಿವೆ. 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ತಪ್ಪು ಮಾಹಿತಿಯನ್ನು ಹರಡುವ ಹಲವಾರು...