ಅಲ್ಪಸಂಖ್ಯಾತ, ದಲಿತ ಮತ್ತು ಬುಡಕಟ್ಟು ಸಮುದಾಯಗಳ ವಿದ್ಯಾರ್ಥಿಗಳಿಗೆ ನೀಡುವ ಮೆಟ್ರಿಕ್ಯುಲೇಷನ್ ನಂತರದ ಸರ್ಕಾರಿ ವಿದ್ಯಾರ್ಥಿವೇತನವನ್ನು ವಂಚನೆಯಿಂದ ಪಡೆದ ಕೆಲವು ಶಿಕ್ಷಣ ಸಂಸ್ಥೆಗಳ ವಿರುದ್ಧ ‘ಅಕ್ರಮ ಹಣ ವರ್ಗಾವಣೆ ಪ್ರಕರಣ’ಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಉತ್ತರ ಪ್ರದೇಶದ ಆರು ಜಿಲ್ಲೆಗಳ 22 ಸ್ಥಳಗಳಲ್ಲಿ ಶೋಧನೆ ನಡೆಸಿದೆ.
ಈ ಸಂಸ್ಥೆಗಳು 75 ಕೋಟಿ ರೂಪಾಯಿ ಮೌಲ್ಯದ ಸ್ಕಾಲರ್ಶಿಪ್ಗಳನ್ನು ಪಡೆದಿವೆ. ಕೆಲವು ಸ್ಕಾಲರ್ಶಿಪ್ಗಳನ್ನು ಏಳು ವರ್ಷದ ಮಕ್ಕಳ ಬ್ಯಾಂಕ್ ಖಾತೆಗಳ ಮೂಲಕ ತೆಗೆದುಕೊಳ್ಳಲಾಗಿದೆ ಎಂದು ತನಿಖೆಗಳು ಬಹಿರಂಗಪಡಿಸಿವೆ ಎಂದು ಇ.ಡಿ. ಹೇಳಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಸ್ಸಿ, ಎಸ್ಟಿ, ದೈಹಿಕ ವಿಕಲಚೇತನ ಅಭ್ಯರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ವಿವಿಧ ವಿದ್ಯಾರ್ಥಿವೇತನವನ್ನು ನೀಡುತ್ತವೆ. ಇದಲ್ಲದೆ, ಕೆಲವು ವಿದ್ಯಾರ್ಥಿವೇತನಗಳು ಅಲ್ಪಸಂಖ್ಯಾತ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳ (EWS) ವಿದ್ಯಾರ್ಥಿಗಳಿಗೆ ಮೀಸಲಾಗಿದೆ ಎಂದು ಇಡಿ ತಿಳಿಸಿದೆ.
“ಹೆಚ್ಚು ಹೆಚ್ಚು ವಿದ್ಯಾರ್ಥಿವೇತನ ನಿಧಿಯನ್ನು ಪಡೆಯುವುದಕ್ಕಾಗಿ ಈ ಕಾಲೇಜುಗಳು, ಸಂಸ್ಥೆಗಳು 7 ರಿಂದ 12 ವರ್ಷ ವಯಸ್ಸಿನ ಮಕ್ಕಳ, 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಬ್ಯಾಂಕ್ ಖಾತೆಗಳನ್ನು ಬಳಸುತ್ತವೆ” ಎಂದು ಇ.ಡಿ. ತನ್ನ ತನಿಖೆಯಲ್ಲಿ ಕಂಡುಕೊಂಡಿದೆ.
ಈ ಸಂಸ್ಥೆಗಳು ವಿವಿಧ ವ್ಯಕ್ತಿಗಳ ದಾಖಲೆಗಳನ್ನು ಬಳಸಿಕೊಂಡು ಸುಮಾರು 3,000 ಖಾತೆಗಳನ್ನು ತೆರೆದಿರುವುದು ಇದುವರೆಗೆ ನಡೆಸಿದ ತನಿಖೆಯಿಂದ ತಿಳಿದುಬಂದಿದೆ. ಹೆಚ್ಚಿನ ಖಾತೆಗಳು ಸಾಮಾನ್ಯ ಹಳ್ಳಿಗರ ಹೆಸರಿನಲ್ಲಿವೆ, ಈ ಸಾಮಾನ್ಯರಿಗೆ ಈ ಬ್ಯಾಂಕ್ ಖಾತೆಗಳ ಬಗ್ಗೆ ತಿಳಿದಿಲ್ಲ. ಇಲ್ಲಿಯವರೆಗೆ ಯಾವುದೇ ವಿದ್ಯಾರ್ಥಿವೇತನವನ್ನು ಪಡೆದಿಲ್ಲ” ಎಂದು ಇಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ರವಿ ಪ್ರಕಾಶ್ ಗುಪ್ತಾ ಸೇರಿದಂತೆ ವಿವಿಧ ಏಜೆಂಟ್ಗಳು ಇದರಲ್ಲಿ ಭಾಗಿಯಾಗಿರುವುದನ್ನು ಇ.ಡಿ. ಪತ್ತೆಹಚ್ಚಿದೆ. ಸಾಹಿಲ್ ಅಜೀಜ್, ಅಮಿತ್ ಕುಮಾರ್ ಮೌರ್ಯ, ತನ್ವೀರ್ ಅಹ್ಮದ್, ಜಿತೇಂದ್ರ ಸಿಂಗ್, ಮೊಹಮ್ಮದ್ ಸೇರಿದಂತೆ FINO ಪೇಮೆಂಟ್ ಬ್ಯಾಂಕ್ನ ಹಲವಾರು ಏಜೆಂಟ್ಗಳ ಸಹಾಯದಿಂದ ಹಗರಣವನ್ನು ನಡೆಸಲಾಗಿದೆ ಎಂದು ಶೋಧನೆಯಲ್ಲಿ ತಿಳಿದುಬಂದಿದೆ.
“FINO ಪೇಮೆಂಟ್ ಬ್ಯಾಂಕ್ನಲ್ಲಿ ಖಾತೆ ತೆರೆಯಲು ಅಳವಡಿಸಿಕೊಳ್ಳಲಾದ ಸಡಿಲವಾದ ವಿಧಾನಗಳನ್ನು ದುರುಪಯೋಗ ಮಾಡಿಕೊಂಡು ಹಗರಣವನ್ನು ಎಸಗಲಾಗಿದೆ. ಅಪರಾಧಿಗಳು FINO ಬ್ಯಾಂಕ್ನ ಲಕ್ನೋ ಮತ್ತು ಮುಂಬೈ ಶಾಖೆಗಳಲ್ಲಿ ಎಲ್ಲಾ ಬ್ಯಾಂಕ್ ಖಾತೆಗಳನ್ನು ತೆರೆದಿದ್ದರು. ವಿದ್ಯುನ್ಮಾನ ವರ್ಗಾವಣೆ ಮತ್ತು ವಿದ್ಯಾರ್ಥಿವೇತನ ನಿಧಿಯ ನಗದು ಹಿಂತೆಗೆದುಕೊಳ್ಳುವಿಕೆ ಎರಡರಲ್ಲೂ ಈ ಸಂಸ್ಥೆಗಳು FINO ಏಜೆಂಟ್ಗಳ ಸೇವೆ ಪಡೆದುಕೊಂಡಿವೆ”.
ನಿಯಮಗಳ ಅನುಸಾರ ವಿದ್ಯಾರ್ಥಿ ವೇತನದ ಹಣವನ್ನು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಾಗಿದೆ. ಆದರೆ ಡೀಫಾಲ್ಟ್ ಮಾಡಿದ ಸಂಸ್ಥೆಗಳು ನಿಯಮಗಳನ್ನು ಬೈಪಾಸ್ ಮಾಡಿ FINO ಬ್ಯಾಂಕ್ನ ಏಜೆಂಟ್ಗಳಿಂದ ಖಾತೆಯನ್ನು ದುರುಪಯೋಗ ಮಾಡಿಕೊಂಡಿವೆ.