ಕೋವಿಡ್ ಇದ್ದ ಕಾರಣ ಎರಡು ವರ್ಷ ದುಡಿದಿದ್ದೇವೆ. ಮೇ ತಿಂಗಳಿನಲ್ಲಿಯೇ ಕಡ್ಡಾಯ ಸೇವೆಗೆ ನಮ್ಮನ್ನು ನೇಮಕಾತಿ ಮಾಡಿಕೊಳ್ಳಬೇಕಿತ್ತು. ಅದು ಆಗಲಿಲ್ಲ, ಹೋಗಲಿ ಈಗಲಾದರೂ ನೇಮಕಾತಿ ಮಾಡಿಕೊಳ್ಳಿ ಎಂದರೆ ನಾವು ಪಡೆದ ಮೆರಿಟ್ಗೂ ಖಾಲಿ ಇರುವ ಹುದ್ದೆಗಳಿಗೂ ತಾಳೆಯೇ ಆಗುತ್ತಿಲ್ಲ. ನಾನು ಎಂಡಿ ಎಮರ್ಜೆನ್ಸಿ ಮೆಡಿಸನ್ ಮಾಡಿದ್ದೀನಿ. ಬಿಎಂಸಿಯಲ್ಲಿ ಎರಡು, ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಎರಡು ಖಾಲಿ ಹುದ್ದೆ ಇವೆ ಎಂದು ನಮಗೆ ಗೊತ್ತು. ಆದರೆ ಅಲ್ಲಿ ಆಯ್ಕೆ ಮಾಡಿಕೊಳ್ಳಲು ಹೋದರೆ ತೋರಿಸುತ್ತಿಲ್ಲ.. ಇದು ವೈದ್ಯ ಹುದ್ದೆಗೆ ಅರ್ಜಿ ಸಲ್ಲಿಸಿರುವ ತಜ್ಞ ವೈದ್ಯೆಯೊಬ್ಬರ ಅಳಲಾಗಿದೆ..
ಸ್ನಾತಕೋತ್ತರ ವೈದ್ಯಕೀಯ ಪದವಿ, ಸ್ನಾತಕೋತ್ತರ ಡಿಪ್ಲೋಮಾ ಮತ್ತು ಸೂಪರ್ ಸ್ಪೆಷಾಲಿಟಿ ಕೋರ್ಸ್ಗಳಲ್ಲಿ ಪದವಿ ಪಡೆದಿರುವ ತಜ್ಞ ವೈದ್ಯರನ್ನು ಒಂದು ವರ್ಷದ ಕಡ್ಡಾಯ ಸರ್ಕಾರಿ ಸೇವೆಗೆ ನಿಯೋಜಿಸುವ ಪ್ರಕ್ರಿಯೆ ನಾಲ್ಕು ತಿಂಗಳು ವಿಳಂಬವಾಗಿದೆ. ಮೆರಿಟ್ ಲಿಸ್ಟ್ಗೆ ಅನುಗುಣವಾಗಿ ಸೀಟು ಆಯ್ಕೆ ಮಾಡಿಕೊಳ್ಳಲು ಹೋದರೆ ಖಾಲಿ ಹುದ್ದೆಗಳೇ ತೋರಿಸುತ್ತಿಲ್ಲ. ಒಂದು ಕಾಲೇಜಿನಲ್ಲಿ 30 ಖಾಲಿ ಹುದ್ದೆಗಳಿದ್ದರೂ ಕೇವಲ 05 ಹುದ್ದೆಗಳು ಮಾತ್ರ ತೋರಿಸುತ್ತಿದೆ. ಇದರ ಹಿಂದೆ ಸೀಟ್ ಬ್ಲಾಕಿಂಗ್ ದಂಧೆ ನಡೆದಿರಬಹುದು ಎಂದು ವೈದ್ಯರು ಆರೋಪಿಸಿದ್ದಾರೆ.
ಈ ಕುರಿತು ದಯಾನಂದ್ ಸಾಗರ್ ಎಂಬುವವರು 18 ನಿಮಿಷದ ವಿಡಿಯೋ ಒಂದನ್ನು ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡಿದ್ದಾರೆ. “ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲ, ಮೆರಿಟ್ ಪಡೆದವರಿಗೆ ತಮಗೆ ಬೇಕಾದ ಕಡೆ ಆಯ್ಕೆ ಸಿಗುತ್ತಿಲ್ಲ, ಪ್ರಮುಖ ನಗರ ಮತ್ತು ಪ್ರಮುಖ ಕಾಲೇಜುಗಳಲ್ಲಿ ಖಾಲಿ ಹುದ್ದೆ ಮುಚ್ಚಿಡುವ ಮೂಲಕ ಅನ್ಯಾಯವೆಸಗಲಾಗುತ್ತಿದೆ” ಎಂದು ಕಿಡಿಕಾರಿದ್ದಾರೆ.
ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಹುಬ್ಬಳ್ಳಿಯಲ್ಲಿ 40 ಹುದ್ದೆಗಳಿ ಖಾಲಿ ಇವೆ. ಆದರೆ ಸ್ಥಳ ಆಯ್ಕೆಗೆ ಲಾಗಿನ್ ಆದರೆ ಕೇವಲ 10 ಹುದ್ದೆಗಳನ್ನು ಮಾತ್ರ ತೋರಿಸಲಾಗುತ್ತಿದೆ. ಉಳಿದ 30 ಹುದ್ದೆಗಳನ್ನು ಏಕೆ ಮುಚ್ಚಿಡಲಾಗಿದೆ? ಅದೇ ರೀತಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ವಿಭಾಗದಲ್ಲಿ 19 ಖಾಲಿ ಹುದ್ದೆಗಳಿವೆ. ಆದರೆ ಒಂದೇ ಒಂದನ್ನು ಮಾತ್ರ ತೋರಿಸುತ್ತಿದೆ. ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ಎರಡು ಹುದ್ದೆ ಇದ್ದರೂ ಒಂದು ಮಾತ್ರ ತೋರಿಸುತ್ತಿದೆ. ಈ ರೀತಿಯಾಗಿ ಕರ್ನಾಟಕದಲ್ಲಿರುವ ಒಟ್ಟು 14 ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಷ್ಟು ಸೀಟುಗಳನ್ನು ಮುಚ್ಚಿಟ್ಟಿದ್ದೀರಿ ಎಂದು ಅವರು ಕಿಡಿಕಾರಿದ್ದಾರೆ.
ರಾಜ್ಯದ ಹಲವು ಮೆಡಿಕಲ್ ಕಾಲೇಜುಗಳಲ್ಲಿ, ಆಸ್ಪತ್ರೆಗಳಲ್ಲಿ ಖಾಲಿ ಹುದ್ದೆಗಳಿವೆ. ಆದರೆ ಅಲ್ಲಿಗೆ ನೇಮಕಾತಿ ಮಾಡುತ್ತಿಲ್ಲ, ಬದಲಿಗೆ ಪ್ರವೇಟ್, ಮ್ಯಾನೇಜ್ ಮೆಂಟ್ ಸೇರಿ ದುಡ್ಡು ಕೊಟ್ಟವರಿಗೆ ಈ ಹುದ್ದೆಗಳನ್ನು ಮಾರಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ವೈದ್ಯೆಯೊಬ್ಬರು, “2022ರ ಮೇ ಒಳಗೆ ನಮ್ಮ ಕಡ್ಡಾಯ ಸೇವೆ ಸೇರಿ ಕೋರ್ಸ್ ಮುಗಿದಿರಬೇಕು. ಆದರೆ ಈ ರೀತಿ ವಿಳಂಬವಾಗುತ್ತಿರುವುದು ಹಲವರ ವೃತ್ತಿ ಬದುಕಿನಲ್ಲಿ ಕೆಟ್ಟ ಪರಿಣಾಮ ಬೀರಲಿದೆ. ನಾವು ರಾಜ್ಯದ ಯಾವುದೇ ಭಾಗಕ್ಕೆ ಹೋಗಿ ಸೇವೆ ಮಾಡಲು ಸಿದ್ದರಿದ್ದೇವೆ. ಆದರೆ ಮೆರಿಟ್ ಪಡೆದವರು ಸೌಲಭ್ಯ ಇಲ್ಲದೆ ಕಡೆ ಹೋಗಬೇಕು ಮತ್ತು ಲಂಚ ಕೊಟ್ಟವರು ಬೆಂಗಳೂರಿನಲ್ಲಿಯೇ ಕೆಲಸ ಮಾಡಬಹುದು ಎಂಬುದು ಯಾವ ನ್ಯಾಯ? ಅದಕ್ಕಾಗಿ ವಕೀಲರ ಮೂಲಕ ಹೈಕೋರ್ಟ್ನಲ್ಲಿ ಈ ಅನ್ಯಾಯವನ್ನು ಪ್ರಶ್ನಿಸುತ್ತೇವೆ” ಎಂದಿದ್ದಾರೆ.
ಅನಸ್ತೇಷಿಯ ತಜ್ಞರನ್ನು, ಸರ್ಜರಿ ತಜ್ಞರನ್ನು ಶಸ್ತ್ರಚಿಕಿತ್ಸಾ ಘಟಕ ಇಲ್ಲದೆ ಇರೋ ಕಡೆ ನೇಮಿಸಿದರೆ ಏನು ಪ್ರಯೋಜನ? ನಾವು ಓದಿದ್ದನ್ನು ಹೇಗೆ ಅನ್ವಯಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ನೀಟ್ ಪರೀಕ್ಷಾ ಫಲಿತಾಂಶ ಘೋಷಿಸಿ: ಸುಪ್ರೀಂ ಕೋರ್ಟ್