Homeದಲಿತ್ ಫೈಲ್ಸ್ಜಾತಿ ತಾರತಮ್ಯ ನಿಷೇಧಿಸಿ ಅಮೆರಿಕದ ಸಿಯಾಟಲ್‌ ಸಿಟಿ ಕೌನ್ಸಿಲ್‌ನಿಂದ ಮಹತ್ವದ ಸುಗ್ರೀವಾಜ್ಞೆ

ಜಾತಿ ತಾರತಮ್ಯ ನಿಷೇಧಿಸಿ ಅಮೆರಿಕದ ಸಿಯಾಟಲ್‌ ಸಿಟಿ ಕೌನ್ಸಿಲ್‌ನಿಂದ ಮಹತ್ವದ ಸುಗ್ರೀವಾಜ್ಞೆ

- Advertisement -
- Advertisement -

ಉತ್ತರ ಅಮೆರಿಕಾದಲ್ಲಿನ ಭಾರತೀಯ ಮೂಲದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಹತ್ವದ ನಿರ್ಧಾರವನ್ನು ಸಿಯಾಟಲ್ ಸಿಟಿ ಕೌನ್ಸಿಲ್ ಮಂಗಳವಾರ ಕೈಗೊಂಡಿದೆ. ನಗರದಲ್ಲಿ ಜಾತಿ ತಾರತಮ್ಯವನ್ನು ನಿಷೇಧಿಸುವ ಮಹತ್ವದ ಸುಗ್ರೀವಾಜ್ಞೆಯನ್ನು 6-1 ಮತಗಳಿಂದ ಮತ ಅಂತರದಲ್ಲಿ ಅಂಗೀಕರಿಸಲಾದೆ.

ನಗರಸಭೆ ಸದಸ್ಯರಾದ ಕ್ಷಮಾ ಸಾವಂತ್ ಅವರು ಜನವರಿ 24ರಂದು ಸುಗ್ರೀವಾಜ್ಞೆಯನ್ನು ಪ್ರಸ್ತಾಪಿಸಿದ್ದರು. ಸಿಟಿ ಕೌನ್ಸಿಲ್‌ನಲ್ಲಿ ಸುಗ್ರೀವಾಜ್ಞೆಯನ್ನು ಪರಿಚಯಿಸಿದಾಗಿನಿಂದಲೂ ಇದಕ್ಕೆ ಅಮೆರಿಕ ಮತ್ತು ಭಾರತದಲ್ಲಿ ಹೆಚ್ಚಿನ ಬೆಂಬಲ ಸಿಕ್ಕಿದೆ.

ಜನವರಿ 30ರಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸುಗ್ರೀವಾಜ್ಞೆಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. “ಯಾವುದೇ ರೂಪದಲ್ಲಿ ಜಾತಿ ತಾರತಮ್ಯವನ್ನು ನಿರ್ಮೂಲನೆ ಮಾಡುವ ಪ್ರಗತಿಪರ ಹೆಜ್ಜೆ ಇದಾಗಿದೆ” ಎಂದು ಬಣ್ಣಿಸಿದ್ದರು.

ಉತ್ತರ ಅಮೆರಿಕದ ಪ್ರಭಾವಿ ಸೌತ್ ಏಷ್ಯನ್ ಬಾರ್ ಅಸೋಸಿಯೇಷನ್ (SABA) ಸಹ 17 ಫೆಬ್ರವರಿ 2023 ರಂದು ಸುಗ್ರೀವಾಜ್ಞೆಗೆ ಬೆಂಬಲವನ್ನು ಸೂಚಿಸಿತು.

“ಇದು ಸಹಜವಾಗಿ, ದೂರಗಾಮಿ ಪರಿಣಾಮಗಳನ್ನು ಹೊಂದಿದೆ. ಎಲ್ಲಾ ಕಂಪನಿಗಳು, ಸರ್ಕಾರಿ ಕಚೇರಿಗಳು ತಮ್ಮ ನೀತಿಗಳಲ್ಲಿ ಜಾತಿಯ ಪ್ರಾತಿನಿಧ್ಯವನ್ನು ಹೊಂದಿರಬೇಕು, ಜಾತಿ ಸಂವೇದನೆಗೆ ತರಬೇತಿ ನಡೆಸಬೇಕು ಮತ್ತು ಯಾವುದೇ ಜಾತಿ ತಾರತಮ್ಯ ಪ್ರಕರಣಗಳ ಬಗ್ಗೆ ನಿಗಾ ವಹಿಸಬೇಕು” ಎಂದು ಜಾತಿ ತುಳಿತಕ್ಕೊಳಗಾದ ಸಮುದಾಯಗಳನ್ನು ಪ್ರತಿನಿಧಿಸುವ ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ (ಎಐಸಿ) ಸದಸ್ಯ ಅನಿಲ್ ವಾಗ್ಡೆ (ಅಮೆರಿಕ) ತಿಳಿಸಿರುವುದಾಗಿ ‘ಸೌಂತ್‌ ಫಸ್ಟ್‌’ ಜಾಲತಾಣ ವರದಿ ಮಾಡಿದೆ.

ಸಿಯಾಟಲ್ ಇಂಡಿಯನ್-ಅಮೆರಿಕನ್ಸ್ (CSAI), ಸಮಾನತೆ ಲ್ಯಾಬ್ಸ್, ಟೆಕ್ಸಾಸ್‌ನ ಅಂಬೇಡ್ಕರ್ ಬೌದ್ಧರ ಸಂಘ, ಬೋಸ್ಟನ್ ಸ್ಟಡಿ ಗ್ರೂಪ್, ಅಂಬೇಡ್ಕರ್ ಕಿಂಗ್ಸ್ ಸ್ಟಡಿ ಸರ್ಕಲ್ ಮತ್ತು ಅಂಬೇಡ್ಕರ್ ಅಸೋಸಿಯೇಷನ್ ಆಫ್ ನಾರ್ತ್ ಅಮೇರಿಕಾ (AANA) ಜೊತೆಯಲ್ಲಿ ಎಐಸಿ ತಂಡವು ನಿರಂತರವಾಗಿ ಕೆಲಸ ಮಾಡಿದೆ. ಅದರ ಫಲವಾಗಿ ಸುಗ್ರಿವಾಜ್ಞೆ ಜಾರಿ ಸಾಧ್ಯವಾಗಿದೆ.

“ಈಗ ಕಾನೂನಿನ ಬಗ್ಗೆ ಅಜ್ಞಾನ ಹೊಂದಿರಬಾರದು. ಯಾವುದೇ ಕಂಪನಿಯು ಜಾತಿ ವಿಚಾರ ಕಾನೂನಿನ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ನೇಮಕಾತಿಯಲ್ಲಿ ಮತ್ತು ಕೆಲಸದ ಸ್ಥಳಗಳಲ್ಲಿ ಜಾತಿ ತಾರತಮ್ಯ ನಡೆಯುವುದಿಲ್ಲ ಎಂಬುದನ್ನು ಕಂಪನಿಗಳು ಖಚಿತಪಡಿಸಬೇಕು” ಎಂದಿದ್ದಾರೆ.

“ಪ್ರಬುದ್ಧ ಮೇಲ್ಜಾತಿಯ ಜನರೂ ಸೇರಿದಂತೆ ಸಿಖ್, ಮುಸ್ಲಿಂ, ಬೌದ್ಧರು ಮತ್ತು ಹಿಂದೂಗಳು ಈ ಸುಗ್ರೀವಾಜ್ಞೆಯನ್ನು ಬೆಂಬಲಿಸಿದ್ದಾರೆ” ಎಂದು ವಾಗ್ಡೆ ತಿಳಿಸಿದ್ದಾರೆ.

ಅಮೆರಿಕದಲ್ಲಿ ಜಾತಿ ತಾರತಮ್ಯ

ಅಮೆರಿಕದಂತಹ ದೇಶದಲ್ಲಿ ಭಾರತೀಯ ಮೂಲದ ದಲಿತರು, ಅಲ್ಲಿನ ಮೇಲ್ಜಾತಿಗಳಿಂದ ತಾರತಮ್ಯಗಳನ್ನು ಎದುರಿಸುತ್ತಿರುವ ಕುರಿತು ಹಲವಾರು ಪ್ರಕರಣಗಳು ವರದಿಯಾಗಿವೆ.

“ಜಾತಿ ಸಮಾನತೆಯ ಚರ್ಚೆಯಿಂದ ನಮ್ಮ ಜೀವಕ್ಕೆ ಅಪಾಯವಿದೆ” ಎಂದು ಹೇಳಿಕೊಂಡ ಉದ್ಯೋಗಿಗಳ ಒತ್ತಡಕ್ಕೆ ಮಣಿದ ಗೂಗಲ್ ಸಂಸ್ಥೆಯು, ಅಮೆರಿಕ ಮೂಲದ ದಲಿತ ಹೋರಾಟಗಾರ್ತಿ ತೇನ್ಮೋಳಿ ಸೌಂದರರಾಜನ್ ಅವರ ಭಾಷಣವನ್ನು ರದ್ದು ಮಾಡಿದ್ದ ಘಟನೆ ಕಳೆದ ವರ್ಷ ನಡೆದಿತ್ತು.

ಈಕ್ವಾಲಿಟಿ ಲ್ಯಾಬ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿರುವ ತೇನ್ಮೋಳಿ ಅವರು ’ಹಿಂದೂ ಫೋಬಿಕ್’ ಮತ್ತು ’ಹಿಂದೂ ವಿರೋಧಿ’ ಆಗಿದ್ದಾರೆ ಎಂದಿದ್ದ ಗೂಗಲ್‌ನ ಕೆಲವು ಉದ್ಯೋಗಿಗಳು, ಕಂಪನಿಗೆ ಸಾಮೂಹಿಕ ಇಮೇಲ್‌ಗಳನ್ನು ಕಳುಹಿಸಿರುವ ವಿಷಯವನ್ನು ’ವಾಷಿಂಗ್ಟನ್ ಪೋಸ್ಟ್’ ಬಹಿರಂಗಪಡಿಸಿತ್ತು.

ಹಿಂದುತ್ವ ಪರ ಗುಂಪುಗಳ ಅಪಪ್ರಚಾರದಿಂದಾಗಿ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ ಎಂಬುದೂ ಬೆಳಕಿಗೆ ಬಂದಿತ್ತು. ಗೂಗಲ್‌ನ ಹಿರಿಯ ಮ್ಯಾನೇಜರ್ ತನುಜಾ ಗುಪ್ತಾ ಅವರು ತೇನ್ಮೋಳಿ ಅವರನ್ನು ಭಾಷಣಕ್ಕೆ ಆಹ್ವಾನಿಸಿದ್ದೇ ಅಪರಾಧವಾಗಿಬಿಟ್ಟಿತ್ತು!

ತೇನ್ಮೋಳಿ ಅವರ ಭಾಷಣವನ್ನು ವಿರೋಧಿಸಿರುವ ಗೂಗಲ್ ಉದ್ಯೋಗಿಗಳು, “ಜಾತಿ ಸಮಾನತೆಯ ಚರ್ಚೆಯಿಂದ ನಮ್ಮ ಜೀವಕ್ಕೆ ಅಪಾಯವಿದೆ” ಎಂದುಬಿಟ್ಟದ್ದರು. 8,000 ಜನರಿರುವ ದಕ್ಷಿಣ ಏಷ್ಯಾದ ಉದ್ಯೋಗಿಗಳ ಗುಂಪಿಗೆ ಮೇಲ್ ಹೋಯಿತು ಎಂದು ಹೇಳಿತ್ತು ವಾಷಿಂಗ್‌ಟನ್ ಪೋಸ್ಟ್ ವರದಿ.

ಫೇಸ್‌ಬುಕ್ ಸಂಸ್ಥೆಯ ಸಾಫ್ಟ್‌ವೇರ್ ಇಂಜಿನಿಯರ್ ಆಗಿ, ಸುಮಾರು 450,000 ಡಾಲರ್ ಪ್ಯಾಕೇಜ್‌ನೊಂದಿಗೆ ಸಿದ್ಧಾಂತ್ ಎಂಬ ದಲಿತ ಯುವಕ ಕೆಲಸಕ್ಕೆ ಸೇರುತ್ತಾರೆ. ಅಮೆರಿಕಕ್ಕೆ ತೆರಳಿದ ಅವರಿಗೆ
ಕಹಿ ಅನುಭವವಾಗುತ್ತದೆ. ದಲಿತರು ತಮ್ಮ ಹಿನ್ನೆಲೆಯನ್ನು ವ್ಯಕ್ತಪಡಿಸಲು ಹಿಂಜರೆಯುತ್ತಾರೆ. “ಗುರುತನ್ನು ಹೇಳಿಕೊಳ್ಳುವುದು ಅಪಾಯಕಾರಿ. ಹೆಸರುಗಳನ್ನು ಬದಲಿಸಿಕೊಂಡು ಬದುಕಬೇಕಾಗುತ್ತದೆ” ಎಂಬುದು ಸಿದ್ಧಾಂತ್ ಅನುಭವ.

ಇದನ್ನೂ ಓದಿರಿ: ತೇನ್ಮೋಳಿ ಬಾಷಣ ರದ್ದುಪಡಿಸಿದ ಗೂಗಲ್; ’ಸಾಫ್ಟ್’ ಜಾತಿವಾದಕ್ಕೆ ಮದ್ದೇನು?

ಸಿಸ್ಕೋ ಸಂಸ್ಥೆಯ ಪ್ರಕರಣ ಹೊರಬಂದ ಬಳಿಕ ಅನೇಕ ದಲಿತ ಟೆಕ್ಕಿಗಳು ಹೊರಬಂದು ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಈಕ್ವಾಲಿಟಿ ಲ್ಯಾಬ್ಸ್ ಸಂಸ್ಥೆಯು (ದಕ್ಷಿಣ ಏಷ್ಯಾದ ನಾಗರಿಕ ಹಕ್ಕುಗಳ ಗುಂಪು) ಗೂಗಲ್, ನೆಟ್‌ಫ್ಲಿಕ್ಸ್, ಅಮೆಜಾನ್, ಫೇಸ್‌ಬುಕ್ ಮೊದಲಾದ ಸಂಸ್ಥೆಗಳ ನೌಕರರು ತಮ್ಮ ಸಹೋದ್ಯೋಗಿಗಳ ವಿರುದ್ಧ ಮಾಡಿದ 250ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಿದೆ ಎಂದು wired.com ವರದಿ ಮಾಡಿದೆ.

“ಹೊರಗಿನವರಿಗೆ ಜಾತಿಯ ಕುಂದುಕೊರತೆಗಳನ್ನು ಗುರುತಿಸುವುದು ಕಷ್ಟ. ಜಾತಿಯು ಅದೃಶ್ಯವಾದದ್ದು ಎಂಬುದೇ ಅತ್ಯಂತ ಅಪಾಯಕಾರಿ ಸಂಗತಿ” ಎಂದು ’ಕಮಿಂಗ್ ಔಟ್ ಆಸ್ ದಲಿತ್’ ಎಂಬ ಆತ್ಮಚರಿತ್ರೆ ಬರೆದ ಲೇಖಕಿ ಯಾಶಿಕಾ ದತ್ ಹೇಳುತ್ತಾರೆ.

“ಜಾತಿ ಅಗೋಚರವಾದದ್ದು, ನಮ್ಮ ಸುತ್ತಲೂ ಅನೇಕ ಸಂಕೇತಗಳು, ರಹಸ್ಯ ಭಾಷೆಗಳು ಅಸ್ತಿತ್ವದಲ್ಲಿವೆ. ವ್ಯಕ್ತಿಯ ಸರ್ ನೇಮ್, ಗ್ರಾಮದ ಬಗ್ಗೆ ಗಮನ ಹರಿಸುವುದೆಲ್ಲ ಜಾತಿಯನ್ನು ಹುಡುಕುವುದಕ್ಕಾಗಿಯಷ್ಟೇ. ಭುಜದ ಮೇಲೆ ತಟ್ಟುವುದು ಸ್ನೇಹಪೂರ್ವಕ ಶುಭಾಶಯವಾಗಿರಬಹುದು ಅಥವಾ ಬ್ರಾಹ್ಮಣರು ಧರಿಸುವ ಜನಿವಾರದ ಅನ್ವೇಷಣೆಯೂ ಆಗಿರಬಹುದು” ಎನ್ನುತ್ತದೆ wired.com ವರದಿ.

ಈ ನಿಟ್ಟಿನಲ್ಲಿ ಸಿಯಾಟಲ್ ಸಿಟಿ ಕೌನ್ಸಿಲ್ ಜಾರಿಗೊಳಿಸಿರುವ ಸುಗ್ರೀವಾಜ್ಞೆ ಮಹತ್ವದ್ದಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

0
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ 'ದಲಿತ ಅಲ್ಲ', ತನ್ನ “ನಿಜವಾದ ಜಾತಿಯ ಗುರುತು”...