ಜೂನ್ 15, 2026ರಂದು ಪ್ರಕಟಗೊಂಡ ಇಂಡಿಯನ್ ಎಕ್ಸ್ಪ್ರೆಸ್ನ ‘ಐಡಿಯಾ ಎಕ್ಸ್ಚೇಂಜ್’ ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, “ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂದು ಹೇಳುವ ಮೂಲಕ ನೀವು ದೇಶದ ಚಾರಿತ್ರ್ಯಕ್ಕೆ ಮಸಿ ಬಳಿಯುತ್ತಿದ್ದೀರಿ” ಎಂದು ಬಹಳ ಗಟ್ಟಿ ಧ್ವನಿಯಲ್ಲಿ ಹೇಳಿದ್ದರು.
ಆದರೆ, ರಿಜಿಜು ಅವರ ಈ ಹೇಳಿಕೆಗೆ ಕೆಲವೇ ದಿನಗಳ ಮುನ್ನ ಮತ್ತು ನಂತರ ದೇಶದಾದ್ಯಂತ ನಡೆದ ಸರಣಿ ಘಟನೆಗಳು ಅವರ ಈ ಹೇಳಿಕೆಗೆ ತದ್ವಿರುದ್ಧವಾಗಿವೆ.
ಕಾರ್ಯಕ್ರಮದಲ್ಲಿ, ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಂಡು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಜಾರಿಗೆ ತಂದಿದ್ದ 15 ಅಂಶಗಳ ಕಾರ್ಯಕ್ರಮವನ್ನು ಪ್ರಸ್ತಾಪಿಸಿದ್ದ ಪತ್ರಕರ್ತೆ ಶ್ಯಾಮಲಾಲ್ ಯಾದವ್ ಅವರು, 2014-15ರಲ್ಲಿ ಎಲ್ಲಾ ಕೇಂದ್ರ ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಶೇಕಡ 8.71ರಷ್ಟು ಅಲ್ಪಸಂಖ್ಯಾತರನ್ನು ನೇಮಕ ಮಾಡಲಾಗಿತ್ತು ಎಂಬುವುದನ್ನು ಗಮನ ಸೆಳೆದಿದ್ದರು. ಅಲ್ಲದೆ, 2014-15ರಿಂದ ಇಂದಿನವರೆಗಿನ ಅವಧಿಯಲ್ಲಿ ಕೇಂದ್ರ ಸರ್ಕಾರದಲ್ಲಿ ನೇಮಕಗೊಂಡಿರುವ ಅಲ್ಪಸಂಖ್ಯಾತರ ಶೇಕಡಾವಾರು ಪ್ರಮಾಣ ಎಷ್ಟು ಎಂದು ಅವರು ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ರಿಜಿಜು ಅವರು, “ನಾನು ಕೇವಲ ಕೆಲವು ಸಂಸ್ಥೆಗಳಲ್ಲಿನ ನೇಮಕಾತಿಗಳನ್ನು ನೋಡುವುದಿಲ್ಲ” ಎಂದು ಹೇಳಿದ್ದರು. ಜೊತೆಗೆ ಅಲ್ಪಸಂಖ್ಯಾತರ ಒಟ್ಟಾರೆ ಪ್ರಗತಿಯನ್ನು ಪರಿಗಣಿಸುವ ಅಗತ್ಯವನ್ನು ಒತ್ತಿಹೇಳುತ್ತಾ, “ಮೋದಿ ಅವರು ಪ್ರಧಾನಿಯಾಗಿರುವ 12 ವರ್ಷಗಳಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರು ಉತ್ತಮ ಸ್ಥಿತಿಯಲ್ಲಿದ್ದಾರೆ. ಅಲ್ಪಸಂಖ್ಯಾತರು ಸುರಕ್ಷಿತವಾಗಿಲ್ಲ ಎಂಬ ಈ ಘೋಷಣೆಗಳನ್ನು ಪದೇ ಪದೇ ಕೂಗುತ್ತಿರುವುದು ಕಾಂಗ್ರೆಸ್ ಮತ್ತು ಎಡಪಂಥೀಯ ವ್ಯವಸ್ಥೆಯಾಗಿದೆ. ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎಂಬ ವಾಕ್ಯದ ಅರ್ಥ ಪ್ರತಿಯೊಂದು ಯೋಜನೆಯೂ ಎಲ್ಲರಿಗೆ ಎಂಬುವುದಾಗಿದೆ ಎಂದು ಹೇಳಿದ್ದರು.
ಮುಂದುವರಿದು, “ಧಾರ್ಮಿಕ ಕಿರುಕುಳದ ಕಾರಣದಿಂದಾಗಿ ಭಾರತವನ್ನು ತೊರೆದ ಒಬ್ಬ ವ್ಯಕ್ತಿಯ ಹೆಸರನ್ನು ಯಾರಾದರೂ ಹೇಳಬಲ್ಲಿರಾ?” ಎಂದು ಪ್ರಶ್ನಿಸಿದ್ದರು. “ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂದು ಹೇಳುವ ಮೂಲಕ ನೀವು ದೇಶದ ಚಾರಿತ್ರ್ಯಕ್ಕೆ ಮಸಿ ಬಳಿಯುತ್ತಿದ್ದೀರಿ” ಎಂದು ಪ್ರತಿಪಾದಿಸಿದ್ದರು.
ಆದರೆ, ಭಾರತದಲ್ಲಿ ಮುಸ್ಲಿಮರ ಸುರಕ್ಷತೆ, ಸಮೃದ್ಧಿ ಮತ್ತು ಯೋಗಕ್ಷೇಮದ ಕುರಿತಾದ ರಿಜಿಜು ಅವರ ಹೇಳಿಕೆಗೆ ತದ್ವಿರುದ್ಧವಾಗಿ, ಕಳೆದ ಒಂದು ವಾರದಲ್ಲಿ ದೇಶದಾದ್ಯಂತ ಮುಸ್ಲಿಮರ ವಿರುದ್ಧ ನಡೆದ ಸರಣಿ ಹಿಂಸಾಚಾರ, ಬೆದರಿಕೆ, ಉದ್ದೇಶಪೂರ್ವಕ ಕಿರುಕುಳ ಮತ್ತು ದ್ವೇಷಪೂರಿತ ಕೋಮು ಭಾಷಣಗಳ ಘಟನೆಗಳನ್ನು ಹತ್ತಾರು ವಿಡಿಯೋಗಳು ಬಹಿರಂಗಪಡಿಸಿವೆ.
ಅಹಮದಾಬಾದ್, ಜೂನ್ 15
ಕಿರಣ್ ರಿಜಿಜು ಮುಸ್ಲಿಮರು ಸೇಫ್ ಎಂದು ಹೇಳಿಕೆ ನೀಡಿದ ಜೂನ್ 15ರಂದೇ, ಗುಜರಾತ್ನ ಅಹಮದಾಬಾದ್ನಲ್ಲಿ, ವಿಶ್ವ ಹಿಂದೂ ಪರಿಷತ್ (ವಿಹೆಚ್ಪಿ) ಮತ್ತು ಬಜರಂಗದಳದೊಂದಿಗೆ ಗುರುತಿಸಿಕೊಂಡಿರುವ ಗಣೇಶ್ ವಂಝಾರಾ ಎಂಬಾತ ಮುಸ್ಲಿಂ ಬಾಡಿಗೆದಾರರೊಬ್ಬರ ಮನೆಗೆ ನುಗ್ಗಿ, ಅವರ ಆಧಾರ್ ಕಾರ್ಡ್ ತೋರಿಸುವಂತೆ ಒತ್ತಾಯಿಸಿದ್ದ. ಆ ವ್ಯಕ್ತಿಯ ಧಾರ್ಮಿಕ ಗುರುತನ್ನು ಖಚಿತಪಡಿಸಿಕೊಂಡ ನಂತರ, ವಂಝಾರಾ ಕಪೋಲಕಲ್ಪಿತ ‘ಲವ್ ಜಿಹಾದ್’ ಪಿತೂರಿ ಸಿದ್ಧಾಂತವನ್ನು ಪ್ರಸ್ತಾಪಿಸಿ ಮತ್ತು ಮುಸ್ಲಿಮರು ಹಿಂದೂ ಮಹಿಳೆಯರನ್ನು ಗುರಿ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಆ ಪ್ರದೇಶವನ್ನು ಖಾಲಿ ಮಾಡುವಂತೆ ಆ ವ್ಯಕ್ತಿಗೆ ತಾಕೀತು ಮಾಡಿದ್ದ ಎಂದು ವರದಿಯಾಗಿದೆ. ಈ ಕುರಿತ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ವಂಝಾರಾ ಮೊದಲು ಬಾಡಿಗೆದಾರನನ್ನು “ಕೌನ್ ಹೋ ತುಮ್?” (ನೀನು ಯಾರು?) ಎಂದು ಕೇಳಿರುವುದು. ಅದಕ್ಕೆ ಆ ವ್ಯಕ್ತಿ ತಾನು ‘ಮೊಹಮ್ಮದನ್’ (ಮುಸ್ಲಿಂ) ಎಂದು ಉತ್ತರಿಸಿರುವುದು. ಈ ವೇಳೆ ವಂಝಾರಾ ತಕ್ಷಣವೇ “ಚಲ್ ಆಧಾರ್ ಕಾರ್ಡ್ ಲಾ” (ನಡಿ, ಆಧಾರ್ ಕಾರ್ಡ್ ತಗೊಂಡು ಬಾ) ಎಂದು ಹೇಳಿ ಅವರ ಆಧಾರ್ ಕಾರ್ಡ್ ಕೇಳಿರುವುದು. ನಂತರ ತಾವು, ಹಿಂದೂ ಮಹಿಳೆಯರನ್ನು ‘ಲವ್ ಜಿಹಾದ್’ ಬಲೆಯಲ್ಲಿ ಸಿಲುಕದಂತೆ ಮತ್ತು ‘ಅಂತಿಮವಾಗಿ ರೆಫ್ರಿಜರೇಟರ್ ಒಳಗೆ ಸೇರದಂತೆ’ ರಕ್ಷಿಸಬೇಕಾಗಿದೆ ಎಂದು ಪ್ರತಿಪಾದಿಸಿ, ಆ ಪ್ರದೇಶದಿಂದ ಹೊರಡುವಂತೆ ಬಾಡಿಗೆದಾರನಿಗೆ ಸೂಚಿಸಿರುವುದು ಇದೆ.
ವಿಡಿಯೋದಲ್ಲಿ ಕಾಣುವಂತೆ, ವಂಝಾರಾ ಆ ವ್ಯಕ್ತಿಯನ್ನು ತನ್ನ ಊರಿಗೆ ಹಿಂತಿರುಗಲು ಮತ್ತು ಅಲಿ ಖಮೇನಿ ಅವರನ್ನು ಶ್ಲಾಘಿಸುವ ಘೋಷಣೆಗಳನ್ನು ಕೂಗಲು ಹೇಳಿದ್ದಾನೆ. ನಂತರ, ಆತ ಖಮೇನಿ ಯಾರೆಂದು ಗೊತ್ತೇ ಎಂದು ಆ ವ್ಯಕ್ತಿಯನ್ನು ಕೇಳಿದ್ದಾನೆ. ಅದಕ್ಕೆ ಆ ವ್ಯಕ್ತಿ ಉತ್ತರಿಸಿದಾಗ, ಅಲ್ಲಿದ್ದ ಜನರು ನಕ್ಕಿದ್ದಾರೆ ಮತ್ತು ವಂಝಾರಾ, “ಇರಾನ್ ಮೇ ಸೇ ಆವಾಝ್ ಆನೀ ಚಾಹಿಯೇ ಇನ್ಹೇ ಕಿ ‘ಹಿಂದೂಸ್ತಾನ್ ಉಡಾವೋ’, ಯೇ ಭಾಗ್ ಕೇ ಚಲೇ ಜಾಯೇಂಗೆ” (ಭಾರತವನ್ನು ಧ್ವಂಸ ಮಾಡಿ ಎಂದು ಇರಾನ್ನಿಂದ ಕರೆ ಬಂದರೆ, ಇವರು ತಕ್ಷಣವೇ ಅಲ್ಲಿಗೆ ಓಡಿ ಹೋಗುತ್ತಾರೆ) ಎಂದು ಟೀಕಿಸಿದ್ದಾನೆ. ಇದು ನೆರೆದಿದ್ದವರಲ್ಲಿ ನಗುವನ್ನು ಉಂಟುಮಾಡಿದೆ. ಅಲ್ಲಿದ್ದ ಮತ್ತೊಬ್ಬ ವ್ಯಕ್ತಿ, ಮುಸ್ಲಿಮರಿಗೆ ಭಾರತದೊಳಗಿನ ಘಟನೆಗಳಿಗಿಂತ ಇರಾನ್ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆಯೇ ಹೆಚ್ಚು ತಿಳಿದಿರುತ್ತದೆ ಎಂದು ಆರೋಪಿಸಿ ಆ ಬಾಡಿಗೆದಾರನನ್ನು ಲೇವಡಿ ಮಾಡಿದ್ದಾನೆ.
ವಿಡಿಯೋದ ಮುಂದಿನ ಭಾಗದಲ್ಲಿ, ಆ ಬಾಡಿಗೆದಾರ 4,000 ರೂಪಾಯಿ ಬಾಡಿಗೆ ಪಾವತಿಸುತ್ತಿದ್ದಾರೆ ಎಂದು ವಂಝಾರಾ ಹೇಳಿಕೊಂಡಿದ್ದಾನೆ. ಹಿಂದೂ ಮನೆ ಮಾಲೀಕರು ದುರಾಸೆಯಿಂದ ಮುಸ್ಲಿಮರಿಗೆ ಕಟ್ಟಡಗಳನ್ನು ಬಾಡಿಗೆಗೆ ನೀಡುತ್ತಿದ್ದಾರೆ. ಇದು ಆ ಪ್ರದೇಶದ ಹಿಂದೂ ಮಹಿಳೆಯರನ್ನು ಅಪಾಯಕ್ಕೆ ಸಿಲುಕಿಸುತ್ತಿದೆ. ಉತ್ತರ ಪ್ರದೇಶ ಮತ್ತು ಬಿಹಾರದ ಮುಸ್ಲಿಂ ವಲಸೆ ಕಾರ್ಮಿಕರು ದುರುದ್ದೇಶದೊಂದಿಗೆ ಈ ಪ್ರದೇಶಕ್ಕೆ ಬರುತ್ತಿದ್ದಾರೆ ಎಂದು ಅವರು ವಂಝಾರಾ ಆರೋಪಿಸಿದ್ದಾನೆ. “ಇನ್ಕಾ ಸಬ್ ಮಕ್ಸದ್ ಹೋತಾ ಹೈ” (ಇವರೆಲ್ಲರಿಗೂ ಒಂದು ಕಾರ್ಯಸೂಚಿ ಇರುತ್ತದೆ) ಎಂದು ಹೇಳಿದ ಆತ, “ಇನ್ ಸಬ್ ಕಾ ಟಾರ್ಗೆಟ್ ಏಕ್ ಹೀ ಹೈ” (ಇವರೆಲ್ಲರ ಗುರಿಯೂ ಒಂದೇ ಆಗಿರುತ್ತದೆ) ಎಂದು ಎಂದಿದ್ದಾನೆ.
ಲಖಿಂಪುರ, ಜೂನ್ 12
ಜೂನ್ 12ರಂದು, ಉತ್ತರ ಪ್ರದೇಶದ ಲಖಿಂಪುರದಲ್ಲಿ ನಡೆದ ರಾಷ್ಟ್ರೀಯ ಬಜರಂಗದಳದ ಸಭೆಯೊಂದರಲ್ಲಿ, ಪ್ರಾಂತೀಯ ಉಪಾಧ್ಯಕ್ಷ ದೇವ್ ಜುನೇಜಾ, “ಮುಸ್ಲಿಂ ತರಕಾರಿ ಮಾರಾಟಗಾರರು ಹಿಂದೂ ಕುಟುಂಬಗಳ ಬಗ್ಗೆ ವ್ಯವಸ್ಥಿತವಾಗಿ ಮಾಹಿತಿ ಸಂಗ್ರಹಿಸುತ್ತಾರೆ ಮತ್ತು ಅಂತಿಮವಾಗಿ ಹಿಂದೂ ಮಹಿಳೆಯರ ಚಲನವಲನಗಳನ್ನು ಪತ್ತೆಹಚ್ಚಿ, ಆ ಮಾಹಿತಿಯನ್ನು ಸಂಘಟಿತ ಜಾಲಗಳ ಮೂಲಕ ರವಾನಿಸುತ್ತಾರೆ. ಮಹಿಳೆಯರನ್ನು ‘ಲವ್-ಜಿಹಾದ್’ ಬಲೆಯಲ್ಲಿ ಸಿಲುಕಿಸಲು ಹೀಗೆ ಮಾಡುತ್ತಾರೆ” ಎಂದು ಆರೋಪಿಸಿದ್ದ.
ಮಂದುವರಿದು ಮಾತನಾಡಿದ್ದ ಆತ, “ಈ ಜನರು ಸಂಜೆ ತಲೆಗೆ ಟೋಪಿ ಮತ್ತು ಪೈಜಾಮಾಗಳನ್ನು ಧರಿಸಿ, ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಟ್ಯೂಷನ್ ಅಥವಾ ಕೋಚಿಂಗ್ಗಾಗಿ ಎಲ್ಲಿಗೆ ಹೋಗುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚುತ್ತಿರುತ್ತಾರೆ, ಇದು ಲವ್-ಜಿಹಾದ್’ ಯೋಜನೆ. ನಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರು ಎಲ್ಲಿಗೆ ಹೋಗುತ್ತಿದ್ದಾರೆ ಎಂಬುವುದರ ಕುರಿತು ನಾವು ಗಮನ ಹರಿಸಬೇಕು ಮತ್ತು ಜಾಗರೂಕರಾಗಿರಬೇಕು. ಎಚ್ಚರದಿಂದಿರುವುದು ಮುಖ್ಯ. ‘ಲವ್-ಜಿಹಾದ್’ ಎಂದರೇನು ಎಂಬ ಅರಿವಿಲ್ಲದಿದ್ದರೆ, ಆ ಪ್ರದೇಶದ ಮಹಿಳೆಯರು ವಿವಿಧ ವಸೀಮ್, ರಿಜ್ವಾನ್ ಮತ್ತು ಅಬ್ದುಲ್ ಎಂಬುವವರು ಹೆಣೆದ ಬಲೆಗೆ ಬೀಳಬಹುದು ಎಂದಿದ್ದ.
ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಆಕರ್ಷಿಸಲು ಹೆಚ್ಚಾಗಿ ಕೈಗೆ ಕಂಕಣ ಮತ್ತು ಹಣೆಗೆ ತಿಲ ಧರಿಸಿ, ಹಾಗೂ “ರಾಜು”, “ರಾಜೇಶ್” ಅಥವಾ “ಕರಣ್” ನಂತಹ ಹಿಂದೂ ಹೆಸರುಗಳನ್ನು ಬಳಸಿಕೊಂಡು ಹಿಂದೂಗಳಂತೆ ವೇಷ ಧರಿಸುತ್ತಾರೆ ಎಂದು ಜುನೇಜಾ ಮುಂದೆ ಪ್ರತಿಪಾದಿಸಿದ್ದ.
ಕಾರ್ಯಕ್ರಮದಲ್ಲಿ ಮಾತನಾಡಿದ್ದ ಇನ್ನೊಬ್ಬ ವ್ಯಕ್ತಿ, ಶುಕ್ರವಾರದ ಪ್ರಾರ್ಥನೆಯನ್ನು ಹಿಂದೂಗಳ ವಿರುದ್ಧ ಮುಸ್ಲಿಮರನ್ನು ಸಂಘಟಿಸಲು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದ. ಜನರು ಮಸೀದಿಗಳಲ್ಲಿ ಪ್ರಾರ್ಥನೆಗಾಗಿ ಅಲ್ಲ, ಇತರ ಉದ್ದೇಶಗಳಿಗಾಗಿ ಸೇರುತ್ತಾರೆ. ಅವರಿಗೆ ಒಂದೇ ಮಕ್ಸದ್ [ಉದ್ದೇಶ] ಇದೆ. ಪ್ರತಿ ಶುಕ್ರವಾರ ಅವರು ಜುಮ್ಮಾ ನಮಾಜ್ಗಾಗಿ ಮಸೀದಿಗಳಲ್ಲಿ ಒಟ್ಟುಗೂಡುತ್ತಾರೆ. ಆದರೆ, ಅವರು ಅಲ್ಲಾಗೆ ಪ್ರಾರ್ಥಿಸುವುದಿಲ್ಲ. ದೇಶದಾದ್ಯಂತ ಇರುವ ಮಸೀದಿಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಯುಧಗಳನ್ನು ಇರಿಸಲಾಗಿದೆ. ಹಿಂದೂಗಳ ವಿರುದ್ಧದ ದಾಳಿಗಳನ್ನು ಸಂಘಟಿಸಲು ಸಂಗ್ರಹಿಸಲಾಗಿದೆ ಎಂದು ಆರೋಪಿಸಿದ್ದ.
ಹಿಂದೂಗಳನ್ನು ನಾಶ ಮಾಡಲು ಆಯುಧಗಳನ್ನು ದಾಸ್ತಾನು ಮಾಡಲಾಗಿದೆ. ಈ ಬಗ್ಗೆ ನೀವು ಮಸೀದಿಗಳನ್ನು ಪರಿಶೀಲಿಸಬಹುದು. ದೊಡ್ಡ ಪ್ರಮಾಣದ ಶಸ್ತ್ರಾಗಳನ್ನು ಪತ್ತೆ ಹಚ್ಚಬಹುದು. ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಮುಸ್ಲಿಮರು ಶಸ್ತ್ರಾಸ್ತ್ರಗಳ ಖರೀದಿಗೆ ಹಣವನ್ನು ದಾನ ಮಾಡುತ್ತಾರೆ ಎಂದು ಹೇಳಿದ್ದ.
ಗ್ವಾಲಿಯರ್, ಜೂನ್ 14
ಜೂನ್ 14ರಂದು, ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದ ಹಿಂದೂ ರಕ್ಷಣಾ ದಳದ ವಿಸ್ತರಣಾ ಕಾರ್ಯಕ್ರಮದಲ್ಲಿ ಮುಸ್ಲಿಮರನ್ನು “ಜಿಹಾದಿ ಹಂದಿಗಳು” ಎಂದು ಅವಮಾನಿಸಿ ಭಾಷಣ ಮಾಡಲಾಗಿದೆ.
A post shared by Hindutva Watch (@hindutvawatchin)
ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಒಬ್ಬ ವ್ಯಕ್ತಿ ಮುಸ್ಲಿಮರನ್ನು “ಜಿಹಾದಿ ಸುವರ್” (“ಜಿಹಾದಿ ಹಂದಿಗಳು”) ಎಂದು ಉಲ್ಲೇಖಿಸಿ, ಅವರ ವಿರುದ್ಧ ಒಗ್ಗಟ್ಟಾಗಲು ಸಭಿಕರಿಗೆ ಕರೆ ನೀಡಿದ್ದ. ಮುಸ್ಲಿಮರು ಹಿಂದೂಗಳನ್ನು ವಿಭಜಿಸಲು ಮತ್ತು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಆತ ಆರೋಪಿಸಿದ್ದ. “ಯೇ ಜಾಂತೇ ಹೈ ಬಸ್ ಕಿ ಇನ್ಹೆ ಬಾಂತೋ ಔರ್ ಬಾದ್ ಮೇ ಕಾತೋ. ಹಮ್ ಇನ್ಕೆ ಲಿಯೇ ಕಾಫಿರ್ ಹೈ” (“ಅವರಿಗೆ ತಿಳಿದಿರುವುದು ನಮ್ಮನ್ನು ವಿಭಜಿಸಿ ನಂತರ ನಮ್ಮನ್ನು ಕೊಲ್ಲುವುದು. ಅವರಿಗೆ, ನಾವು ಕಾಫಿರರು”) ಎಂದಿದ್ದ.
ಮುಂದುವರಿದು, ಆತ ಹಿಂದೂಗಳ ನಡುವೆ ಬೇಷರತ್ ಒಗ್ಗಟ್ಟಿಗೆ ಕರೆ ನೀಡಿದ್ದ. ಸಮುದಾಯದ ಸಹ ಸದಸ್ಯರು “ಸರಿ ಇರಲಿ ಅಥವಾ ತಪ್ಪು ಇರಲಿ” ಹಿಂದೂಗಳು ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲಬೇಕು ಎಂದಿದ್ದ. “ಹಮಾರಾ ಹಿಂದೂ ಭಾಯಿ ಚಾಹೇ ಸಹಿ ಹೋ ಯಾ ಗಲತ್ ಹೋ, ಹಮಾರೆ ಲಿಯೇ ಹಿಂದೂ ಭಾಯಿ ಹೈ ಔರ್ ಹಮೇಶಾ ರಹೇಗಾ” (“ನಮ್ಮ ಹಿಂದೂ ಸಹೋದರ ಸರಿಯಾಗಿರಲಿ ಅಥವಾ ತಪ್ಪಾಗಿರಲಿ, ಆತ ನಮಗೆ ಸಹೋದರ ಮತ್ತು ಯಾವಾಗಲೂ ಹಾಗೇ ಇರುತ್ತಾನೆ”) ಎಂದು ಹೇಳಿದ್ದ.
‘ಲವ್-ಜಿಹಾದ್’ ಪಿತೂರಿ ಸಿದ್ಧಾಂತವನ್ನು ಪ್ರಸ್ತಾಪಿಸಿದ್ದ ಆತ, ಮುಸ್ಲಿಮರು ಹಿಂದೂ ಮಹಿಳೆಯರನ್ನು ಬಲೆಗೆ ಬೀಳಿಸುತ್ತಿದ್ದಾರೆ ಎಂದು ಆರೋಪಿಸಿದ್ದ. ತಮ್ಮ ಕುಟುಂಬದ ಮಹಿಳೆಯರು ಓಡಿಹೋಗುತ್ತಿರುವ ಬಗ್ಗೆ ಪುರುಷರು ಹೆಚ್ಚಾಗಿ ದೂರು ನೀಡುತ್ತಾರೆ ಎಂದು ಹೇಳಿದ ಆತ, ಹಿಂದೂಗಳು ಮಹಿಳೆಯರಿಗೆ ಧಾರ್ಮಿಕ ಆಚರಣೆಗಳ ಬಗ್ಗೆ ಕಲಿಸದಿರುವುದೇ ಇಂತಹ ‘ಪರಿಣಾಮಗಳಿಗೆ’ ಕಾರಣ ಎಂದು ದೂರಿದ್ದ. ಇದಲ್ಲದೆ, ಮುಸ್ಲಿಂ ಪುರುಷರು ಆಸ್ತಿಯನ್ನು ವಶಪಡಿಸಿಕೊಳ್ಳಲು ಮತ್ತು ಹಿಂದೂ ಕುಟುಂಬಗಳನ್ನು ಒಡೆಯಲು ನಿರ್ದಿಷ್ಟವಾಗಿ ಹಿಂದೂ ಮಹಿಳೆಯರನ್ನು ಗುರಿಮಾಡುತ್ತಾರೆ ಎಂದು ಆರೋಪಿಸಿದ್ದ.
ಪಶ್ಚಿಮ ಬಂಗಾಳ ಮತ್ತು ಕಾಶ್ಮೀರವನ್ನು ಉದಾಹರಣೆಗಳಾಗಿ ಉಲ್ಲೇಖಿಸಿದ ಆತ, ಹಿಂದೂಗಳು ಒಗ್ಗಟ್ಟಾಗಿ ಇರದಿದ್ದರೆ ದೇಶದ ಮತ್ತು ಹಿಂದೂ ಸಮುದಾಯದ ಭವಿಷ್ಯವು ಅಪಾಯಕ್ಕೆ ಸಿಲುಕುತ್ತದೆ ಎಂದು ಎಚ್ಚರಿಸಿದ್ದ. ಆತನ ಪ್ರಕಾರ, ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಹಿಂದೂಗಳು ಬದುಕುಳಿಯಲು ಸಾಧ್ಯವಿಲ್ಲ, ಏಕೆಂದರೆ ಅವರು ಹಾನಿಗೊಳಗಾಗುವ ಅಥವಾ ಕೊಲ್ಲಲ್ಪಡುವ ಸಾಧ್ಯತೆಯಿರುತ್ತದೆ ಎಂದಿದ್ದ. ಮುಂದುವರಿದು ಮಾತನಾಡಿದ್ದ ಆತ, ಹಿಂದೂಗಳಿಗೆ ಹಾನಿ ಮಾಡಲು ಯತ್ನಿಸುವ ಯಾವುದೇ “ಜಿಹಾದಿ ಮುಸ್ಲಿಂ ಹಂದಿಗಳ” ವಿರುದ್ಧ ಕ್ರಮ ಕೈಗೊಳ್ಳಲು ಹಿಂದೂ ರಕ್ಷಾ ದಳವು ಯಾವಾಗಲೂ ಸಿದ್ಧವಾಗಿದೆ ಎಂದು ಹೇಳಿದ್ದ.
ಜಲಗಾಂವ್, ಜೂನ್ 11
ಜೂನ್ 11ರಂದು ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪಾರೋಲಾದಲ್ಲಿ, ಮರುಳ ಗ್ರಾಮದ ಇಮಾಮ್ ಆಗಿರುವ ಹಾಫೀಝ್ ಕ್ವಾಝಿಮ್ ಅವರಿಗೆ ತೀವ್ರ ಬಲಪಂಥೀಯ ವ್ಯಕ್ತಿಗಳು ಬೆದರಿಕೆ ಹಾಕಿ, ಕಿರುಕುಳ ನೀಡಿ, “ಜೈ ಶ್ರೀ ರಾಮ್” ಮತ್ತು “ಜೈ ಸೀತಾ ರಾಮ್” ನಂತಹ ಹಿಂದೂ ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಬಲವಂತಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ವೈರಲ್ ವಿಡಿಯೋದಲ್ಲಿ, ಕೈಯಲ್ಲಿ ದೊಣ್ಣೆ ಹಿಡಿದಿದ್ದ ದುಷ್ಕರ್ಮಿಯೊಬ್ಬ ಇಮಾಮ್ ಕಡೆಗೆ ಬೆರಳು ತೋರಿಸುತ್ತಾ, “ಜೈ ಶ್ರೀ ರಾಮ್ ಬೋಲ್” ಎಂದು ಆಕ್ರಮಣಕಾರಿಯಾಗಿ ಒತ್ತಾಯಿಸಿರುವುದು, ಅದಕ್ಕೆ ಇಮಾಮ್ ಆತನ ಕೈಯನ್ನು ಕೆಳಗೆ ಇಳಿಸುವ ಮೂಲಕ ಪ್ರತಿಕ್ರಿಯಿಸಿದಾಗ ಆತ, “ತೂ ಮೇರೆ ಗಾಂವ್ ಮೇ ಕಿಸ್ ಲಿಯೇ ಆಯಾ ಹೈ?” (“ನೀನು ನನ್ನ ಹಳ್ಳಿಗೆ ಯಾಕೆ ಬಂದಿದ್ದೀಯಾ?”) ಎಂದು ಪ್ರಶ್ನಿಸಿರುವುದನ್ನು ನೋಡಬಹುದು. ಅದಕ್ಕೆ ಇಮಾಮ್, “ಮುಜೆ ಬುಲಾಯಾ ಗಯಾ ಹೈ” (“ನನ್ನನ್ನು ಕರೆಸಲಾಗಿದೆ”) ಎಂದು ಉತ್ತರಿಸಿರುವುದು ಇದೆ.
ಇಮಾಮ್ ಅವರನ್ನು ಇನ್ನಷ್ಟು ಬೆದರಿಸಲು, ದುಷ್ಕರ್ಮಿ ಸುತ್ತಲೂ ನೆರೆದಿದ್ದ ಜನಸಮೂಹದ ಕಡೆಗೆ ಕೈ ತೋರಿಸಿ, ತನ್ನ ಮಾತನ್ನು ಕೇಳದಿದ್ದರೆ ಎದುರಿಸಬೇಕಾಗಬಹುದಾದ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿರುವುದು. ಅದಕ್ಕೆ ಇಮಾಮ್ ಅವರು “ಜಬರ್ದಸ್ತಿ ನಹೀ ಕರ್ ಸಕ್ತೆ” (“ನೀವು ಬಲವಂತ ಮಾಡುವಂತಿಲ್ಲ”) ಮತ್ತು “ಮೇರಿ ಬಾತ್ ಸುನೋ” (“ನನ್ನ ಮಾತು ಕೇಳಿ”) ಎಂದು ಶಾಂತವಾಗಿ ಹೇಳುತ್ತಾ ಹಲವಾರು ಬಾರಿ ಪ್ರತಿರೋಧಿಸಲು ಪ್ರಯತ್ನಿಸಿರುವುದು. ದುಷ್ಕರ್ಮಿ “ಛತ್ರಪತಿ ಶಿವಾಜಿ ಮಹಾರಾಜ್ ಬೋಲ್” ಎಂದು ಕೂಗುವುದು ಮತ್ತು ಕೊನೆಗೆ ಇಮಾಮ್ ಆತ ಹೇಳಿದನ್ನು ಪುನವರ್ತಿಸುವುದನ್ನು ವಿಡಿಯೋದಲ್ಲಿ ನೋಡಬಹುದು.
ವಿಡಿಯೋದಲ್ಲಿ, ದುಷ್ಕರ್ಮಿ ಇಮಾಮ್ ಅವರಿಗೆ “ಜೈ ಛತ್ರಪತಿ ಶಿವಾಜಿ ಮಹಾರಾಜ್” ಎಂದು ಕೂಗುವಂತೆ ಒತ್ತಾಯಿಸಿದಾಗ, ಇಮಾಮ್ ಯಾವುದೇ ಹಿಂಜರಿಕೆಯಿಲ್ಲದೆ ಹಾಗೆ ಕೂಗಿದ್ದಾರೆ. ಆದರೆ, ಆತ “ಜೈ ಶ್ರೀ ರಾಮ್” ಎಂದು ಹೇಳುವಂತೆ ಒತ್ತಾಯಿಸಿದಾಗ ಇಮಾಮ್ ಹಿಂಜರಿದಿದ್ದಾರೆ. ಅಂತಿಮವಾಗಿ, ಒತ್ತಡಕ್ಕೆ ಮಣಿದ ಅವರು “ಜೈ ಶ್ರೀ ರಾಮ್” ಮತ್ತು “ಜೈ ಸೀತಾ ರಾಮ್” ಎಂದು ಉಚ್ಚರಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪಾರೋಲಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಎಐಎಂಐಎಂ ಪಕ್ಷದ ರಾಷ್ಟ್ರೀಯ ವಕ್ತಾರ ಮತ್ತು ಮುಂಬೈನ ಬೈಕುಲ್ಲಾ ಕ್ಷೇತ್ರದ ಶಾಸಕರಾಗಿರುವ ವಾರಿಸ್ ಪಠಾಣ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಮುಖ್ಯ ಆರೋಪಿ ತನ್ನ ಕೃತ್ಯಕ್ಕೆ ಕ್ಷಮೆಯಾಚಿಸುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಆಲ್ಟ್ ನ್ಯೂಸ್ ಪ್ರಕರಣದ ತನಿಖಾಧಿಕಾರಿ ನಿಲೇಶ್ ಸರುಂಖೆ ಅವರೊಂದಿಗೆ ಮಾತನಾಡಿದ್ದು, ಅವರು ಮೂವರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. “ಮೂವರನ್ನೂ ಗುರುತಿಸಿ ಬಂಧಿಸಲಾಗಿದ್ದು, ಸದ್ಯ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ” ಎಂದು ಹೇಳಿದ್ದಾರೆ. ಇವರೆಲ್ಲರೂ ಹಿಂದೂ ಸಮುದಾಯಕ್ಕೆ ಸೇರಿದವರೆಂಬುದನ್ನು ಅವರು ಖಚಿತಪಡಿಸಿದ್ದಾರೆ.
ಸುಲ್ತಾನಪುರ, ಜೂನ್ ಎರಡನೇ ವಾರ
ಉತ್ತರ ಪ್ರದೇಶದ ಸುಲ್ತಾನ್ಪುರ ಜಿಲ್ಲೆಯ ಫರ್ಮಾಪುರ್ ಗ್ರಾಮದಲ್ಲಿ, ತೀವ್ರ ಬಲಪಂಥೀಯ ಗುಂಪೊಂದು ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು ಮುಸ್ಲಿಂ ಯುವಕರನ್ನು ತಡೆದು ನಿಲ್ಲಿಸಿ, ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಲ್ಲದೆ, “ಜೈ ಶ್ರೀ ರಾಮ್” ಎಂದು ಕೂಗುವಂತೆ ಬಲವಂತಪಡಿಸಿದ ಆರೋಪ ಕೇಳಿ ಬಂದಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಹಲ್ಲೆಕೋರರಲ್ಲಿ ಒಬ್ಬನು, “ಹಿಂದೂಸ್ತಾನದಲ್ಲಿ ವಾಸಿಸುತ್ತಾ ‘ಜೈ ಶ್ರೀ ರಾಮ್’ ಎಂದು ಕೂಗದಿರಲು ನಿಮಗೆ ಎಷ್ಟು ಧೈರ್ಯ?” ಎಂದು ಹೇಳುತ್ತಿರುವುದು ಕೇಳಿಬಂದಿದೆ. ಆ ಇಬ್ಬರು ಯುವಕರಿಗೆ ಕಪಾಳಮೋಕ್ಷ ಮಾಡಿ, ಕಾಲಿನಿಂದ ಒದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಲಿಪಶುಗಳು ಅಂತಿಮವಾಗಿ ದಾಳಿಕೋರರ ಬೇಡಿಕೆಗೆ ಮಣಿದು ‘ಜೈ ಶ್ರೀ ರಾಮ್’ ಎಂದು ಕೂಗಿದ್ದಾರೆ ಮತ್ತು ಹಲ್ಲೆಯನ್ನು ನಿಲ್ಲಿಸುವಂತೆ ವಿನಂತಿಸಿಕೊಂಡಿದ್ದಾರೆ. ದಾಳಿಕೋರರು ಅವರ ಫೋನ್ಗಳನ್ನು ಸಹ ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ.
ಜೂನ್ 11ರಂದು ಸಂತ್ರಸ್ತರು ಈ ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿದ್ದು, ಇದು ಕೆಲವು ದಿನಗಳ ಹಿಂದೆ ನಡೆದಿದೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ, ಲಂಭುವಾ ಪ್ರದೇಶದ ಅಧಿಕಾರಿಯ ವಿಡಿಯೋ ಹೇಳಿಕೆಯೊಂದನ್ನು ಸುಲ್ತಾನ್ಪುರ ಪೊಲೀಸರ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಇಬ್ಬರು ದಾಳಿಕೋರರನ್ನು ಈಗಾಗಲೇ ಗುರುತಿಸಲಾಗಿದೆ ಮತ್ತು ಉಳಿದ ಆರೋಪಿಗಳನ್ನು ಬಂಧಿಸಲು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪುರ್ಣಿಯಾ, ಜೂನ್ 14
ಬಿಹಾರದ ಪೂರ್ಣಿಯಾದಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ, ದುಷ್ಕರ್ಮಿಗಳ ಗುಂಪೊಂದು ಒಬ್ಬರು ವಯಸ್ಕ ವ್ಯಕ್ತಿ ಮತ್ತು ಇಬ್ಬರು ಅಪ್ರಾಪ್ತರ ಮೇಲೆ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದುಷ್ಕರ್ಮಿಗಳು ಮೂವರಿಗೂ ಕೋಲು ಮತ್ತು ಪ್ಲಾಸ್ಟಿಕ್ ಕುರ್ಚಿಯಿಂದ ಹೊಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಮತ್ತು ಸಾರ್ವಜನಿಕವಾಗಿ ಅವಮಾನಿಸುತ್ತಿರುವುದು ಈ ವಿಡಿಯೋದಲ್ಲಿ ಸೆರೆಯಾಗಿದೆ.
ಈ ಘಟನೆಯು ಜೂನ್ 14ರಂದು ಗೋಕುಲ್ಪುರ ಸರಸಿಯಲ್ಲಿರುವ ‘ಖುಷ್ಬು’ ಎಂಬ ಹೋಟೆಲ್ನಲ್ಲಿ ನಡೆದಿದೆ. ಅಂಗಡಿ ಮಾಲೀಕ ಮೊಹಮ್ಮದ್ ತಜಮ್ಮುಲ್, ಅವರ 14 ವರ್ಷದ ಮಗ ಅಕ್ಮಲ್ ಮತ್ತು 15 ವರ್ಷದ ಸೋದರಳಿಯ ಈ ದಾಳಿಗೆ ಒಳಗಾದ ಸಂತ್ರಸ್ತರಾಗಿದ್ದಾರೆ. ದಾಳಿಕೋರರು ಮೂರೂ ಜನರಿಂದ ಬಸ್ಕಿ ಹೊಡೆಸುತ್ತಿರುವುದು ಮತ್ತು ಅವರು ಗೋಮಾಂಸ ಮಾರಾಟ ಮಾಡುತ್ತಿದ್ದದ್ದಾಗಿ ಒಪ್ಪಿಕೊಳ್ಳುವಂತೆ ಪೀಡಿಸುತ್ತಿರುವುದು ವಿಡಿಯೋದಲ್ಲಿ ಇದೆ. ದಾಳಿಕೋರರು ಸಂತ್ರಸ್ತರಿಂದ ಕ್ಷಮೆಯಾಚಿಸುವಂತೆ ಮಾಡಿದರಾದರೂ, ಅಷ್ಟಕ್ಕೇ ನಿಲ್ಲಿಸದೆ ಅವರ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುವುದನ್ನು ಮುಂದುವರಿಸಿದ್ದಾರೆ.
ಆಲ್ಟ್ ನ್ಯೂಸ್ ಜೊತೆ ಮಾತನಾಡಿರುವ ಹಲ್ಲೆಗೊಳಗಾದ ತಜಮ್ಮುಲ್, ಜೂನ್ 14ರಂದು ದುಷ್ಕರ್ಮಿಗಳು ನಮ್ಮ ಹೋಟೆಲ್ನಲ್ಲಿ ಊಟ ಮಾಡಿದ್ದರು. ನಾವು ಹಣ ಕೇಳಿದಾಗ, ಅವರು ನಮ್ಮನ್ನು ನಿಂದಿಸಲು ಪ್ರಾರಂಭಿಸಿದರು. ನಾವು ಗೋಮಾಂಸ ಮಾರಾಟ ಮಾಡುತ್ತಿದ್ದೇವೆ ಎಂದು ಆರೋಪಿಸಿದರು. ಅವರು ನನ್ನ ಮಕ್ಕಳ ಮುಂದೆಯೇ ನನ್ನನ್ನು ಹೊಡೆಯಲು ಪ್ರಾರಂಭಿಸಿದರು. ಮಕ್ಕಳ ಮೇಲೂ ಯಾವುದೇ ಕರುಣೆ ತೋರಿಸಿಲ್ಲ ಎಂದು ವಿವರಿಸಿದ್ದಾರೆ.
ಹೋಟೆಲ್ನಲ್ಲಿದ್ದ ಬೇರೆ ಯಾವುದೇ ಗ್ರಾಹಕರು ನನ್ನ ಮತ್ತು ಮಕ್ಕಳ ಸಹಾಯಕ್ಕೆ ಬರಲಿಲ್ಲ ಎಂಬುವುದನ್ನು ತಜಮ್ಮುಲ್ ಒತ್ತಿ ಹೇಳಿದ್ದಾರೆ. “ಅಲ್ಲಿ ನಮ್ಮನ್ನು ನೋಡುತ್ತಿರುವ ಅನೇಕ ಜನರಿದ್ದರು, ಆದರೆ ಯಾರೂ ನಮಗೆ ಸಹಾಯ ಮಾಡಲು ಬರಲಿಲ್ಲ. ಎಲ್ಲರೂ ಸುಮ್ಮನೆ ನಿಂತು ಅದನ್ನು ನೋಡುತ್ತಿದ್ದರು” ಎಂದು ಅವರು ಹೇಳಿದ್ದಾರೆ.
ನಾನು ಹೋಟೆಲ್ ಆರಂಭಿಸಿ ಕೇವಲ 2 ತಿಂಗಳಷ್ಟೇ ಆಗಿತ್ತು. ಆದರೆ, ಈ ಘಟನೆಯ ನಂತರ ನಾವು ಕತಿಹಾರ್ನಲ್ಲಿರುವ ನಮ್ಮ ಸ್ವಂತ ಗ್ರಾಮಕ್ಕೆ ಹಿಂತಿರುಗಿದ್ದೇವೆ. ಕಳೆದ ಐದು ದಿನಗಳಿಂದ ನಾವು ಹೋಟೆಲ್ ತೆರೆದಿಲ್ಲ. ಹಲ್ಲೆ ನಡೆಸಿದವರು ನಮ್ಮ ಹೋಟೆಲ್ನ ಕೀಲಿಗಳನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ ಎಂದು ತಜಮ್ಮುಲ್ ಆರೋಪಿಸಿದ್ದಾರೆ. “ಅವರು ನನ್ನ ಹೋಟೆಲ್ ಮುಚ್ಚಿಸಿ ಕೀಯನ್ನು ಸಹ ತೆಗೆದುಕೊಂಡು ಹೋದರು. ನಾನು ಒಂದು ವೇಳೆ ಕೀ ಕೊಡದೇ ಇದ್ದಿದ್ದರೆ, ಅವರು ಬಹುಶಃ ನಮ್ಮನ್ನು ಕೊಂದೇ ಬಿಡುತ್ತಿದ್ದರು ಎಂದು ಎಂದು ನೋವು ತೋಡಿಕೊಂಡಿದ್ದಾರೆ.
ತಜಮ್ಮುಲ್ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗಿದೆ. ಅವರ ಹೋಟೆಲ್ನಲ್ಲಿ ದನದ ಮಾಂಸದ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಎಂಬುದು ಬಹಿರಂಗವಾಗಿದೆ. ಜೂನ್ 17 ರಂದು ಪೂರ್ಣಿಯಾ ಪೊಲೀಸರು ಈ ಘಟನೆ ಮತ್ತು ತನಿಖೆಯ ವರದಿಗೆ ಸಂಬಂಧಿಸಿದಂತೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ.
“ಪೊಲೀಸರು ಜೂನ್ 18 ರಂದು ದಾಳಿಕೋರರಲ್ಲಿ ಒಬ್ಬನಾದ ಮೆಹಿನಗರದ ನಿವಾಸಿ 27 ವರ್ಷದ ಮನೀಶ್ ಕುಮಾರ್ನನ್ನು ಬಂಧಿಸಿದ್ದಾರೆ. ಮೂಲಗಳ ಸಹಾಯದಿಂದ, ಈ ಗುಂಪಿನಲ್ಲಿದ್ದ ಮತ್ತೊಬ್ಬ ದುಷ್ಕರ್ಮಿಯನ್ನು ಅಹೀರ್ ಅಭಿಜೀತ್ ಯಾದವ್ ಎಂದು ಗುರುತಿಸಿರುವುದಾಗಿ ಆಲ್ಟ್ ನ್ಯೂಸ್ ವರದಿ ಮಾಡಿದೆ.
ಉಳಿದ ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ
ಈ ಎಲ್ಲಾ ವಿಡಿಯೋಗಳನ್ನು ಸಾರ್ವಜನಿಕ ಆಕ್ರೋಶದ ಕಾರಣದಿಂದಾಗಿ ಅಥವಾ ಕಾನೂನು ಮಧ್ಯಸ್ಥಿಕೆಯ ನಂತರ ಡಿಲೀಟ್ ಮಾಡುವ ಮುನ್ನ, ಅಪರಾಧಿಗಳೇ ಸ್ವತಃ ಅಪ್ಲೋಡ್ ಮಾಡಿದ್ದರು. ಆಧಾರರಹಿತ ಆರೋಪಗಳ ಆಧಾರದ ಮೇಲೆ ವ್ಯವಸ್ಥಿತವಾಗಿ ಅಮಾನವೀಯವಾಗಿ ಚಿತ್ರಿಸುವ ವಾಕ್ಚಾತುರ್ಯ, ದ್ವೇಷಪೂರಿತ ಭಾಷಣ ಮತ್ತು ನೇರ ಹಿಂಸಾಚಾರದ ಈ ಆರು ಘಟನೆಗಳು ಮುಸ್ಲಿಮರ ಸುರಕ್ಷತೆ ಮತ್ತು ಘನತೆಗೆ ಧಕ್ಕೆ ತರುವುದಲ್ಲದೆ, ಇಡೀ ಸಮುದಾಯವನ್ನು ಸ್ವಾಭಾವಿಕವಾಗಿಯೇ ಹಗೆತನದಿಂದ ಕೂಡಿದ ಮತ್ತು ಅಪಾಯಕಾರಿ ಎಂಬಂತೆ ಬಿಂಬಿಸುತ್ತವೆ. ಇವು ಜೂನ್ 15 ರಂದು ರಿಜಿಜು ಅವರು ನೀಡಿದ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲನೆಗೆ ಒಳಪಡಿಸುವಂತೆ ಮಾಡುತ್ತವೆ.


