”ಇಸ್ಲಾಮಿಕ್ ಆಕ್ರಮಣಗಳಿಂದಾಗಿ ಭಾರತದಲ್ಲಿ ಮಹಿಳೆಯರಿಗೆ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿದೆ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಂಟಿ ಕಾರ್ಯದರ್ಶಿ ಕೃಷ್ಣ ಗೋಪಾಲ್ ಭಾನುವಾರ ಹೇಳಿದ್ದಾರೆ.
ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಮಹಿಳಾ ಸಬಲೀಕರಣ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೃಷ್ಣ ಗೋಪಾಲ್, ”ಇಸ್ಲಾಮಿಕ್ ರಾಜರುಗಳ ಆಕ್ರಮಣಕ್ಕಿಂತ ಮೊದಲು, ‘ಸತಿ’ ಪದ್ಧತಿಯು ಅಸ್ತಿತ್ವದಲ್ಲಿರಲಿಲ್ಲ ಮತ್ತು ವಿಧವೆ ಪುನರ್ವಿವಾಹಗಳ ಮೇಲೆ ಯಾವುದೇ ನಿರ್ಬಂಧಗಳಿರಲಿಲ್ಲ” ಎಂದು ಅವರು ಪ್ರತಿಪಾದಿಸಿದರು.
”1829ರಲ್ಲಿ ಮಹಿಳೆಯರನ್ನು ತಮ್ಮ ಗಂಡನ ಅಂತ್ಯಕ್ರಿಯೆಯ ಚಿತಾಗಾರದಲ್ಲಿ ಜೀವಂತವಾಗಿ ಸುಡುವಂತಹ ಪದ್ದತಿ ಜಾರಿ ಬಂದಿದೆ. ನಾವು ಮಧ್ಯಯುಗಕ್ಕೆ ಬರೋಣ, ಇಡೀ ದೇಶವು ಅಧೀನತೆಯೊಂದಿಗೆ ಹೋರಾಡುತ್ತಿರುವ ಅತ್ಯಂತ ಕಷ್ಟಕರ ಸಮಯವಾಗಿತ್ತು. ದೇವಾಲಯಗಳನ್ನು ಒಡೆಯಲಾಯಿತು, ವಿಶ್ವವಿದ್ಯಾನಿಲಯಗಳನ್ನು ನಾಶಪಡಿಸಲಾಯಿತು ಮತ್ತು ಮಹಿಳೆಯರು ಅಪಾಯದಲ್ಲಿದ್ದರು. ಲಕ್ಷಗಟ್ಟಲೆ ಮಹಿಳೆಯರನ್ನು ಅಪಹರಿಸಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿದೆ” ಎಂದೂ ಹೇಳಿದರು.
”ಅಹ್ಮದ್ ಷಾ, ಮೊಹಮ್ಮದ್ ಘೌರಿ ಮತ್ತು ಮಹಮೂದ್ ಗಜ್ನಿ ಎಲ್ಲರೂ ಇಲ್ಲಿಂದ ಮಹಿಳೆಯರನ್ನು ಕರೆದೊಯ್ದು ಮಾರಾಟ ಮಾಡಿದ್ದಾರೆ. ಅದೊಂದು ಮಹಾ ಅವಮಾನದ ಯುಗ. ಆದ್ದರಿಂದ, ನಮ್ಮ ಮಹಿಳೆಯರನ್ನು ರಕ್ಷಿಸಲು, ನಮ್ಮದೇ ಸಮಾಜವು ಅವರ ಮೇಲೆ ಅನೇಕ ನಿರ್ಬಂಧಗಳನ್ನು ಹಾಕಿದೆ” ಎಂದು ಸಮರ್ಥನೆ ಮಾಡಿಕೊಂಡರು.
”ತುರ್ತು ಪರಿಸ್ಥಿತಿ”ಯನ್ನು ಎದುರಿಸಲು ಈ ನಿರ್ಬಂಧಗಳು ಕ್ರಮಗಳಾಗಿವೆ ಎಂದು ಗೋಪಾಲ್ ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದ ವಿರುದ್ಧ ಮಹಿಳೆಯರಿಗೆ ಎಚ್ಚರಿಕೆ ನೀಡಿದ ಗೋಪಾಲ್ ಅವರು, ”ತಮ್ಮ ಆಯ್ಕೆಯ ವೃತ್ತಿಯನ್ನು ಅನುಸರಿಸಬೇಕು, ಆದರೆ ಮಹಿಳೆಯಾಗಿ ತಮ್ಮ ಗುರುತನ್ನು ಕಳೆದುಕೊಳ್ಳಬಾರದು” ಎಂದು ಹೇಳಿದರು.
”ನೀವು ತಂತ್ರಜ್ಞಾನವನ್ನು ಬಳಸುತ್ತೀರಿ, ವಿಮಾನಗಳನ್ನು ಹಾರಿಸುತ್ತೀರಿ, ಹಡಗುಗಳನ್ನು ನಡೆಸುತ್ತೀರಿ, ಇಸ್ರೋಗೆ [ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ] ಹೋಗಿ, ವಿಜ್ಞಾನಿ, ವೈದ್ಯ ಅಥವಾ ಇಂಜಿನಿಯರ್ ಆಗಿ ನೀವು ಇಷ್ಟಪಡುವದನ್ನು ಮಾಡಿ ಆದರೆ ಮಹಿಳೆಯಾಗಿ ಉಳಿಯಿರಿ. ಹೆಣ್ಣು ಮನೆಯ ಮುಖ್ಯ ಕೇಂದ್ರ, ಅದನ್ನು ನೆನಪಿಡಿ. ಮಕ್ಕಳಿಗೆ ಮತ್ತು ಕುಟುಂಬಕ್ಕೆ ಮೌಲ್ಯಗಳನ್ನು ನೀಡುವವಳು ಮಹಿಳೆ” ಎಂದು ಗೋಪಾಲ್ ಹೇಳಿದರು.
”ಇಂದು ಮಹಿಳೆಯರು, ‘ಅಡುಗೆ ಮಾಡುವುದು ನಮ್ಮ ಕೆಲಸವೇ?’ ಎಂದು ಕೇಳುತ್ತಾರೆ. ಆದರೆ ಮಹಿಳೆಯರು ಅಡುಗೆ ಮಾಡುವುದರಿಂದ ಮಕ್ಕಳು ನಿಮ್ಮೊಂದಿಗೆ ಇರುತ್ತಾರೆ, ಅವರು ತಾಯಿಯ ಪ್ರೀತಿಯನ್ನು ಅನುಭವಿಸುತ್ತಾರೆ. ಇಂದಿರಾಜಿ [ಮಾಜಿ ಪ್ರಧಾನಿ ಇಂದಿರಾಗಾಂಧಿ] ತಮ್ಮ ಅಡುಗೆ ಮನೆಯನ್ನು ತಾವೇ ನಿರ್ವಹಿಸುತ್ತಿದ್ದರು ಎಂದು ನಿಮಗೆ ತಿಳಿದಿದೆಯೇ? [ಜವಾಹರಲಾಲ್] ನೆಹರೂಜಿ ಪ್ರಧಾನಿಯಾಗಿದ್ದಾಗ, ಇಂದಿರಾಜಿ ಅಡುಗೆಮನೆಯನ್ನು ನಿಯಂತ್ರಿಸುತ್ತಿದ್ದರು” ಎಂದು ಮಹಿಳೆಯರನ್ನು ಅಡುಗೆ ಮನೆಗೆ ಸೀಮಿತಗೊಳಿಸುವ ಮಾತುಗಳನ್ನು ಕೃಷ್ಣ ಗೋಪಾಲ್ ಆಡಿದ್ದಾರೆ.
ಇದನ್ನೂ ಓದಿ: ಆರ್ಎಸ್ಎಸ್ ಆಳ ಮತ್ತು ಅಗಲ: ಭಾರತೀಯ ಜಾತ್ಯತೀತ ಹೋರಾಟಕ್ಕೆ ಹೊಸ ದೇವನೂರ ಭಾಷೆ – ಯೋಗೇಂದ್ರ ಯಾದವ್