ಒಂದು ಕಡೆ ಸುಪ್ರೀಂ ಕೋರ್ಟ್ನ ಖ್ಯಾತ ವಕೀಲೆ ಇಂದಿರಾ ಜೈಸಿಂಗ್ ಅವರು ‘ಜಾರಕಿಹೊಳಿ ಸಿಡಿ ಹಗರಣ’ದಲ್ಲಿ ಸಂತ್ರಸ್ತೆ ಯುವತಿಯ ಪರ ವಕಾಲತು ನಡೆಸಲು ಒಪ್ಪಿಕೊಂಡಿದ್ದಾರೆ. ಇನ್ನೊಂದು ಕಡೆ ಮಾಜಿ ಸಚಿವ, ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿದ್ದಾರೆ. ಇದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ರಾಜ್ಯ ರಾಜಕಾರಣವನ್ನು ಅಲ್ಲೋಲ ಕಲ್ಲೋಲ ಮಾಡಿದ್ದ ಈ ಲೈಂಗಿಕ ಹಗರಣದಲ್ಲಿ, ನೀರಾವರಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಮೇಲೆ ಅತ್ಯಾಚಾರ ಆರೋಪ ಹೊರಿಸಲಾಗಿದೆ. ಇದರಿಂದಾಗಿ ಅವರು ತಮ್ಮ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡುವಂತಾಗಿತ್ತು. ರಮೇಶ್ ಜಾರಕಿಹೊಳಿ ಕೂಡಾ ಯುವತಿಯ ವಿರುದ್ದ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದರು. ಪ್ರಕರಣದ ಕಾವು ಹೆಚ್ಚುತ್ತಿದ್ದಂತೆ ರಾಜ್ಯ ಸರ್ಕಾರ ಪ್ರಕರಣವನ್ನು SIT ಗೆ ವಹಿಸಿತ್ತು.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಮಹಾನಾಯಕ ಪದ ಬಳಕೆಗೆ ಪ್ರಜ್ಞಾವಂತರ ವಿರೋಧ
ಪ್ರಕರಣ ಬೆಳಕಿಗೆ ಬಂದಿದ್ದ ಸಮಯದಲ್ಲಿ ವಿಡಿಯೊದಲ್ಲಿ ಇರುವುದು ತಾನಲ್ಲ ಎಂದು ಹೇಳಿದ್ದ ಜಾರಕಿಹೊಳಿ, ಇತ್ತೀಚೆಗೆ ಎಸ್ಐಟಿ ಮುಂದೆ ವಿಡಿಯೊದಲ್ಲಿ ಇರುವುದು ತಾನೆ ಎಂದು ಒಪ್ಪಿಕೊಂಡಿದ್ದರು. ಆದರೆ ಅತ್ಯಾಚಾರ ಪ್ರಕರಣ ದಾಖಲಾಗಿದ್ದರೂ ಆರೋಪಿ ಜಾರಕಿಹೊಳಿಯನ್ನು ಇದುವರೆಗೂ ಬಂಧಿಸಿಲ್ಲ. ಇದು ಸಂತ್ರಸ್ತೆ ಯುವತಿಯ ಅಸಮಾಧಾನಕ್ಕೆ ಕಾರಣವಾಗಿದ್ದು, ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿದ್ದರು.
ಕಾನೂನು ತಜ್ಞರು, “ಪ್ರಕರಣದ ತನಿಖೆ ಮುಂದುವರೆಯಬೇಕಾದರೆ, ಅತ್ಯಾಚಾರ ಆರೋಪಿಯ ವೈದ್ಯಕೀಯ ಸಾಕ್ಷ್ಯಗಳನ್ನು ಸಂಗ್ರಹಿಸುವ ಹಾಗೂ ಅತ್ಯಾಚಾರ ಆರೋಪಿಯ ಗಂಡಸುತನದ ವೈದ್ಯಕೀಯ ಪರೀಕ್ಷೆ ಕಡ್ಡಾಯವಾಗಿ ಆಗಲೇಬೇಕಿದೆ. ಈ ಕಾರಣದಿಂದ ತನಿಖಾಧಿಕಾರಿಯು ಆರೋಪಿಯನ್ನು ವಶಕ್ಕೆ ಪಡೆದು ವೈದ್ಯರ ಮುಂದೆ ಹಾಜರು ಪಡಿಸಬೇಕಿರುತ್ತದೆ. ಆದರೆ ಪ್ರಕರಣವು ರಾಜ್ಯದ ಪ್ರಭಾವಿ ರಾಜಕೀಯ ನಾಯಕನ ವಿರುದ್ದವೇ ಇರುವುದರಿಂದ ಈ ಪ್ರಕ್ರಿಯೆ ನಡೆಯುತ್ತಿಲ್ಲ” ಎಂದು ಅಭಿಪ್ರಾಯಪಡುತ್ತಾರೆ.
ಇನ್ನು ರಮೇಶ್ ಜಾರಕಿಹೊಳಿ ಲೈಂಗಿಕ ಹಗರಣದ ತನಿಖೆ ನಡೆಸುತ್ತಿದ್ದ ಎಸ್ಐಟಿ ಮುಖ್ಯಸ್ಥರು ರಜೆ ಮೇಲೆ ತೆರಳಿ, ತನಿಖೆ ಸ್ಥಗಿತಗೊಂಡಿರುವುದರಿಂದ, ಹೈಕೋರ್ಟ್ನ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆಯನ್ನು ಮುಂದುವರೆಸಬೇಕು ಹಾಗೂ ಆರೋಪಿ ರಮೇಶ್ ಜಾರಕಿಹೊಳಿಯನ್ನು ಕೂಡಲೇ ಬಂಧಿಸಬೇಕು ಎಂದು ರಾಜ್ಯ ಸರ್ಕಾರವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದರು.
ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಿ ಎಂದು ‘ಒಂಟೆ ಸವಾರಿ’ ಮಾಡಿ ಪ್ರತಿಭಟನೆ
ಈ ನಡುವೆ ರಮೇಶ್ ಜಾರಕಿಹೊಳಿ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದಾರೆ. ಈ ಭೇಟಿಯ ವೇಳೆ ಪ್ರಕರಣವನ್ನು ಮುಗಿಸಲು ಮತ್ತು ತನಗೆ ಸಚಿವ ಸ್ಥಾನ ಕೊಡಿಸುವಂತೆ ಜಾರಕಿಹೊಳಿ ಕೇಳಿಕೊಂಡಿದ್ದು, ಆದರೆ ಫಡ್ನವಿಸ್ ಮಾತ್ರ ಕರ್ನಾಟಕ ರಾಜಕೀಯದಲ್ಲಿ ತಾನು ತಲೆ ಹಾಕುವುದಿಲ್ಲ ಆದರೆ ತಮ್ಮ ಬೇಡಿಕೆಯನ್ನು ಹೈಕಮಾಂಡ್ಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆಂದು ವರದಿಯಾಗಿದೆ.
ರಮೇಶ್ ಜಾರಕಿಹೊಳಿ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ತಮ್ಮ ಆಪ್ತರೊಂದಿಗೆ ಹೇಳಿಕೊಂಡಿದ್ದಾರೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ. ಇದು ತನಗೆ ಸಚಿವ ಸ್ಥಾನ ಸಿಗದೆ ಇರುವ ಹಿನ್ನಲೆಯಲ್ಲಿ ಸರ್ಕಾರವನ್ನು ಬೆದರಿಸುತ್ತಿರುವ ತಂತ್ರ ಕೂಡಾ ಆಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಕೇಸ್: ಯುವತಿ ಪರ ಅಂತಾರಾಷ್ಟ್ರೀಯ ಖ್ಯಾತಿಯ ಇಂದಿರಾ ಜೈಸಿಂಗ್ ವಕಾಲತ್ತು