ಶಿರಾ ಉಪಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಇಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ದೇವರು ಬಲಗಡೆ ಹೂ ಕೊಟ್ಟಿದೆ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗುತ್ತಾರೆ ಎಂಬ ಬಗ್ಗೆ ಕಾರ್ಯಕರ್ತರ ನಡುವೆ ತೀವ್ರತರವಾಗಿ ಚರ್ಚೆಯಾಗುತ್ತಿದೆ. ಇದು ನಿಜವೋ ಸುಳ್ಳೋ ಬೇರೆ ಮಾತು. ಆದರೆ ಶಿರಾ ತಾಲೂಕಿನ ‘ಆ ಎರಡು’ ಗ್ರಾಮದ ಜನರ ‘ಮಾತು-ಮತ’ ನಿಜವೇ ಆದರೆ ‘ಕಮಲ’ ಬಾಡುವುದು ಗ್ಯಾರೆಂಟಿ ಎನ್ನಲಾಗುತ್ತಿದೆ.
‘ಆ ಎರಡು’ ಗ್ರಾಮಗಳಿಗೆ ಎಲ್ಲ ಪಕ್ಷಗಳಿಂದ ಹಣ ಹಂಚಿಕೆಯಾಗಿದೆ. ಒಬ್ಬರು ಹೆಚ್ಚು ಕೊಟ್ಟರೆ, ಮತ್ತೊಬ್ಬರು ಕಡಿಮೆ ಕೊಟ್ಟಿರಬಹುದು. 90 ಸಾವಿರ ಕೊಟ್ಟಿರುವ ಗ್ರಾಮದಲ್ಲಿ ‘ಆ’ ಪಕ್ಷಕ್ಕೆ ಹೆಚ್ಚೆಂದರೆ 10 ಓಟುಗಳು ಮಾತ್ರ ಬಿದ್ದಿರಬಹುದು. 2 ಲಕ್ಷ ಹಂಚಿಕೆ ಮಾಡಿರುವ ಗ್ರಾಮದಲ್ಲಿ 15 ಓಟುಗಳ ಬಿದ್ದಿದ್ದರೆ ಹೆಚ್ಚು ಎನ್ನುತ್ತವೆ ‘ಆ ಗ್ರಾಮ’ ಮೂಲಗಳು. ಮೂವರು ಸದಸ್ಯರು ಇರುವ ಕುಟುಂಬದಲ್ಲಿ ಹಣ ಪಡೆದ ಕಾರಣಕ್ಕೆ ಮೂರು ಪಕ್ಷಗಳಿಗೂ ಒಂದೊಂದು ಮತ ಹಾಕಿರುವ ನಿದರ್ಶನಗಳು ಸಾಕಷ್ಟಿವೆ.
ಇದನ್ನೂ ಓದಿ: ಶಿರಾ ಉಪಚುನಾವಣೆ: ಚುನಾವಣೋತ್ತರ ಸಮೀಕ್ಷೆಗಳು ಏನು ಹೇಳುತ್ತವೆ?
ಮೂರು ಪಕ್ಷಗಳಿಂದ ಹಣ ಪಡೆದಿದ್ದೇವೆ. ಮೂರು ಪಕ್ಷಗಳಿಗೂ ಒಂದೊಂದು ಮತ ಹಾಕುತ್ತೇವೆ. ದುಡ್ಡು ಕೊಟ್ಟ ಋಣ ತೀರಿಸುತ್ತೇವೆ. ಯಾರಿಗೂ ಮೋಸ ಮಾಡುವುದು ಬೇಡ. ಗೆಲ್ಲುವುದು ಬಿಡುವುದು ಅವರ ಹಣೆಬರಹ. ಹಣ ಪಡೆದವರು ಓಟೇ ಇಲ್ಲದ ಹುಡುಗರು. ಅವರು ಶಾಲುಹಾಕಿಕೊಂಡು ತಿರುಗಿ ಹಣ ಪಡೆದು ಕುಡಿದು ಹೋದರೆ ವಿನಃ ಬೇರೇನೂ ಅವರಿಂದ ಆಗಿಲ್ಲ. ಬಹುತೇಕ ಕುಟುಂಬಗಳ ಸದಸ್ಯರು ಯಾವುದೇ ಒಂದು ಪಕ್ಷಕ್ಕೆ ಓಟು ಹಾಕಿಲ್ಲ. ಕೊಟ್ಟ ಹಣ ಪಡೆದು ಮನದಲ್ಲಿದ್ದ ಪಕ್ಷಕ್ಕೆ ಮತ ಹಾಕಿರುವುದೇ ಹೆಚ್ಚು ಎಂದು ಹೇಳಲಾಗುತ್ತಿದೆ.
ಮತ್ತೊಂದು ಚರ್ಚೆ ಹೆಚ್ಚು ಚಾಲ್ತಿಯಲ್ಲಿದೆ. ಕಾಂಗ್ರೆಸ್ 75 ಸಾವಿರ ಮತ ಗಳಿಸಿದರೆ, ಬಿಜೆಪಿ 62 ಸಾವಿರ ಮತ ಹಾಗೂ ಜೆಡಿಎಸ್ 45 ಸಾವಿರ ಮತ, ಉಳಿದವರು 10 ಸಾವಿರ ಮತಗಳನ್ನು ಪಡೆಯುವ ಕುರಿತು ಬೆಟ್ಟಿಂಗ್ ನಡೆದಿದೆ. ಕಳ್ಳಂಬೆಳ್ಳ, ಗೌಡಗೆರೆ ಹೋಬಳಿಯಲ್ಲಿ ಕಾಂಗ್ರೆಸ್ಗೆ ಹೆಚ್ಚು ಮತ ಚಲಾವಣೆಯಾಗಿದೆ. ನಗರದಲ್ಲಿ ಮತಗಳು ಮೂರು ಭಾಗವಾಗಿದೆ. ಹೂಲಿಕುಂಟೆ ಹೋಬಳಿ ಮತ್ತು ಚಿಕ್ಕನಹಳ್ಳಿ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್ಚು ಮತ ಪಡೆದಿರುವ ಬಗ್ಗೆ ಚರ್ಚೆ ಮಾಡುತ್ತಿರುವ ಮತದಾರರು ಬಿಜೆಪಿ ಪರ ಬೆಟ್ ಕಟ್ಟಿದ್ದಾರೆ.
ಇದನ್ನೂ ಓದಿ: ಶಿರಾ ಉಪಚುನಾವಣೆ: ಕಾಂಗ್ರೆಸ್- ಜೆಡಿಎಸ್ ನಡುವೆ ನೇರ ಹಣಾಹಣಿ
ಕಳೆದ ಚುನಾವಣೆಯಲ್ಲಿ ಒಕ್ಕಲಿಗರು ಸಂಪೂರ್ಣವಾಗಿ ಶಾಸಕ ದಿವಂಗತ ಬಿ.ಸತ್ಯನಾರಾಯಣ ಅವರ ಕೈ ಹಿಡಿದಿದ್ದರು. ಈ ಬಾರಿ ಶೇ. 30 ರಷ್ಟು ಮತಗಳು ಕಾಂಗ್ರೆಸ್ ಪರ ಚಲಾವಣೆಯಾಗಿವೆ. ಶೇ.50 ರಷ್ಟು ನಾಯಕ ಸಮುದಾಯದ ಮತಗಳು ಮತ್ತು ಶೇ.30 ರಷ್ಟು ಗೊಲ್ಲ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬಿದ್ದಿವೆ. ಇದೇ ಮಾದರಿ ಯಲ್ಲಿ ಬಿಜೆಪಿಗೆ ಈ ಸಮುದಾಯದ ಮತಗಳು ಬಿದ್ದಿವೆ. ಜೆಡಿಎಸ್ ಪಕ್ಷ ಶೇ.25 ಕ್ಕೂ ಹೆಚ್ಚು ಮತಗಳನ್ನು ಪಡೆಯಲಿದೆ ಎಂಬ ಚರ್ಚೆ ನಡೆಯುತ್ತಿದ್ದು ನವೆಂಬರ್ 12 ಗಂಟೆಯ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.
“ಶಿರಾ ಕ್ಷೇತ್ರದ ಒಟ್ಟು 2,15,000 ಮತದಾರರಲ್ಲಿ 1,80,000 ಮತಗಳು ಚಲಾವಣೆಯಾಗಿವೆ. ಬಿದ್ದ ಮತ ಆಧರಿಸಿಯೇ ಆಯಾ ಪಕ್ಷಗಳು ಗೆಲುವಿನ ಅಂತರವನ್ನು ತೀರ್ಮಾನ ಮಾಡಿವೆ. ಶಿರಾ ಮತದಾರರ ಹಣಕ್ಕೆ ಮಾರಿಕೊಂಡಿಲ್ಲ. ಹೀಗೆಂದು ಹೇಳಿದರೆ ಮತದಾರರಿಗೆ ಮಾಡಿದ ಅವಮಾನ” ಎನ್ನುತ್ತಾರೆ ಮಂಜು.
ಇದನ್ನೂ ಓದಿ: ಶಿರಾ: ಹಣ ಹಂಚಿದ ಬಿಜೆಪಿ ಅಭ್ಯರ್ಥಿಯನ್ನು ಅನರ್ಹಗೊಳಿಸಿ; ಕಾಂಗ್ರೆಸ್ ದೂರು