ಅಹವಾಲು ಸಲ್ಲಿಸಲು ಬಂದ ಮಹಿಳೆಯೊಬ್ಬರ ವಿರುದ್ಧ ದರ್ಪ ಮರೆದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರ ನಡೆಯನ್ನು ಬೆಂಗಳೂರಿನ ವೈಟ್ಫೀಲ್ಡ್ ಸಬ್ಡಿವಿಸನ್ ಎಸಿಪಿ ಶಾಂತ ಮಲ್ಲಪ್ಪ ಸಮರ್ಥಿಸಿಕೊಂಡಿದ್ದಾರೆ. ‘ಮಹಿಳೆಯ ವಿರುದ್ಧ ಶಾಕಸರು ಕೂಗಾಡದೆ, ಆರತಿ ಎತ್ತಬೇಕಿತ್ತೆ. ಶಾಸಕರು ಜನರ ಪರವಾಗಿ ಮಾತನಾಡಿದ್ದಾರೆ’ ಎಂದು ನಾನುಗೌರಿ.ಕಾಂ ಜೊತೆಗೆ ಹೇಳಿದ್ದಾರೆ.
ತನಗೆ ಅಹವಾಲು ಸಲ್ಲಿಸಲು ಬಂದ ಮಹಿಳೆಯೊಬ್ಬರ ವಿರುದ್ಧ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರು ಕಿರುಚಾಡಿ, ಮಹಿಳೆ ಎಂಬುವುದನ್ನು ನೋಡದೆ ಕೆಟ್ಟದಾಗಿ ನಡೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ಶನಿವಾರ ನಡೆದಿತ್ತು. ಶಾಸಕ ಲಿಂಬಾವಳಿ ಮಹಿಳೆಯನ್ನು ಬಂಧಿಸುವಂತೆ ಪೊಲೀಸರಿಗೆ ಹೇಳಿದ್ದು, ನಂತರ ಬಿಬಿಎಂಪಿ ಅಧಿಕಾರಿಗಳು ನೀಡಿದ ದೂರಿನ ಅನ್ವಯ ಅವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಬಗ್ಗೆ ವಿವರಣೆಗಾಗಿ ಸಂಪರ್ಕಿಸಿದ್ದ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ವೈಟ್ಫೀಲ್ಡ್ ಎಸಿಪಿ, “ಮಹಿಳೆಯ ಮೇಲೆ ಎಫ್ಐಆರ್ ಆಗಿರುವುದು ನಿಜ. ರಾಜಕಾಲುವೆಯನ್ನು ಒತ್ತುವರಿ ಮಾಡಿ ಕಾಂಪೌಂಡ್ ಕಟ್ಟಿದ್ದರಿಂದ ನೀರು ಸರಾಗವಾಗಿ ಹರಿಯದೆ 300 ಮನೆಗಳಿಗೆ ನೀರು ನುಗ್ಗಿದೆ. ಸಂತ್ರಸ್ತ ಜನರು ಊಟ ತಿಂಡಿಗಾಗಿ ಒದ್ದಾಡ್ತಾ ಇದ್ದಾರೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ದೂರು ಕೊಟ್ಟಿದ್ದರಿಂದ ಎಫ್ಐಆರ್ ದಾಖಲಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: ಅಹವಾಲು ಸಲ್ಲಿಸಲು ಬಂದ ಮಹಿಳೆಯ ಮೇಲೆ ದರ್ಪ ತೋರಿದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ
ಶಾಸಕನ ಜೊತೆಗೆ ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದಕ್ಕೆ ಎಫ್ಐಆರ್ ಆಗಿದೆಯೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಸಿಪಿ,“ಬಿಬಿಎಂಪಿ ಕಂದಾಯ ಅಧಿಕಾರಿಗಳ ದೂರಿನ ಆಧಾರದಲ್ಲಿ ಎಫ್ಐಆರ್ ಆಗಿದೆ. ಶಾಸಕರು ಮಾತನಾಡಿರುವುದು ಸಾರ್ವಜನಿಕರ ಪರವಾಗಿ, ಆದರೆ ಅದನ್ನು ಯಾರೂ ಹೇಳುತ್ತಿಲ್ಲ” ಎಂದು ಹೇಳಿದ್ದಾರೆ.
“ಶಾಸಕರು ಕೂಗಾಡದೆ ಏನ್ ಮಾಡಬೇಕಿತ್ತು? ಆರತಿ ಎತ್ತಬೇಕಿತ್ತೆ ಅವರಿಗೆ? ಈ ಮಹಿಳೆ ರಾಜಕಾಲುವೆ ಮೇಲೆ ಕಾಂಪೌಂಡ್ ಹಾಕಿದ್ದರಿಂದ, ಮುನ್ನೂರು ಮನೆಗಳಿಗೆ ಊಟ-ತಿಂಡಿ ಇಲ್ಲದೆ ಒದ್ದಾಡ್ತಾ ಇದ್ದಾರೆ. ಅವರ ವಸ್ತುಗಳೆಲ್ಲವೂ ನೆನೆದು ಹೋಗಿವೆ. ಅಲ್ಲಿ ಆಗಿರುವುದನ್ನು ಬಂದು ನೋಡಿ, ನಂತರ ಮಾತನಾಡಿ. ಬರಿ ಶಾಸಕರು ಕೂಗಾಡಿರುವುದನ್ನು ಹೇಳುವುದಲ್ಲ” ಎಂದು ಎಸಿಪಿ ಹೇಳಿದ್ದಾರೆ.
ಅರ್ಜಿಯೊಂದನ್ನು ತಂದು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಪ್ರಯತ್ನಿಸಿದ ಮಹಿಳೆಯಿಂದ ಮಹದೇವಪುರ ಬಿಜೆಪಿ ಶಾಸಕರೂ ಆಗಿರುವ ಲಿಂಬಾವಳಿ ಅವರು ಅರ್ಜಿಯನ್ನು ಕಿತ್ತುಕೊಂಡಿದ್ದಾರೆ. ಮಹಿಳೆಯ ವಿರುದ್ಧ ಆಕ್ರೋಶದಿಂದ ಕಿರುಚಿದ್ದಾರೆ. ನಂತರ ಮಹಿಳೆಯನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ. ಶಾಸಕರ ಈ ನಡೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: 2019ರ ಕೊಲ್ಕತ್ತಾ ರ್ಯಾಲಿ ವಿಡಿಯೊವನ್ನು ಮಂಗಳೂರಿನ ಕಾರ್ಯಕ್ರಮದೆಂದು ಬಿಂಬಿಸಿದ ಬಿಜೆಪಿ ನಾಯಕರು!
ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ವರ್ತೂರು ಕೆರೆಯ ಕೋಡಿ ಬಿದ್ದು ನೆರೆ ಉಂಟಾಗಿತ್ತು. ಹೀಗಾಗಿ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಅರವಿಂದ್ ಲಿಂಬಾವಳಿ ಭೇಟಿ ನೀಡಿದ್ದರು. ಈ ವೇಳೆ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮಹಿಳೆ ಕಾನೂನು ಬಾಹಿರವಾಗಿ ಕಾಂಪೌಂಡ್ ಕಟ್ಟಿದ್ದರೂ, ಶಾಸಕರು ಈ ರೀತಿ ಕೂಗಾಡಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತವಾಗಿದೆ. “ಜನಪ್ರತಿನಿಧಿಯೊಬ್ಬ ತಟಸ್ಥವಾಗಿದ್ದು ಮಹಿಳೆಯ ಅಹವಾಲನ್ನು ಕೂಡಾ ಕೇಳಬೇಕಾತ್ತು. ಮಹಿಳೆ ಕೂಡಾ ತಮ್ಮ ಬಳಿ ದಾಖಲೆಗಳಿವೆ ಎಂದು ಹೇಳಿದ್ದಾರೆ. ಅದನ್ನು ಪರಿಶೀಲಿಸಬೇಕಿತ್ತು” ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ನಾನುಗೌರಿ.ಕಾಂಗೆ ಹೇಳಿದ್ದಾರೆ.