ಅಸ್ಸಾಂನ ಧೇಮಾಜಿಯಲ್ಲಿ 13 ಶಾಲಾ ಮಕ್ಕಳು ಸೇರಿದಂತೆ 18 ಮಂದಿಯ ಸಾವಿಗೆ ಕಾರಣವಾಗಿದ್ದ ಬಾಂಬ್ ಸ್ಫೋಟದ ಎಲ್ಲಾ ಆರು ಅಪರಾಧಿಗಳನ್ನು ಗುಹಾಟಿ ಹೈಕೋರ್ಟ್ ಇಂದು ಖುಲಾಸೆಗೊಳಿಸಿದೆ.
2004ರಲ್ಲಿ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಅಸ್ಸಾಂನ ಧೇಮಾಜಿಯಲ್ಲಿ ಸ್ಫೋಟ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ 2019ರಲ್ಲಿ ಆರು ಮಂದಿಗೆ ಶಿಕ್ಷೆ ವಿಧಿಸಲಾಗಿತ್ತು.
ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ (ಉಲ್ಫಾ) ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು. ಘಟನೆಯಲ್ಲಿ 18 ಜೀವಗಳು ಬಲಿಯಾಗಿದ್ದು, 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
2019ರಲ್ಲಿ, ಧೇಮಾಜಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿ ಲೀಲಾ ಗೊಗೊಯ್, ದೀಪಾಂಜಲಿ ಬುರಾಗೊಹೈನ್, ಮುಹಿ ಹಂಡಿಕ್ ಮತ್ತು ಜತಿನ್ ದುಬೊರಿ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು ಮತ್ತು ಪ್ರಶಾಂತ ಭುಯಾನ್ ಮತ್ತು ಹೇಮೆನ್ ಗೊಗೊಯ್ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.
ಈ ತೀರ್ಪನ್ನು ಅಪರಾಧಿಗಳು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಗುವಾಹಟಿ ಹೈಕೋರ್ಟ್, ತನ್ನ ಆದೇಶದಲ್ಲಿ, ಆರು ಜನರನ್ನು ಖುಲಾಸೆಗೊಳಿಸಿ ತೀರ್ಪನ್ನು ನೀಡಿದೆ. ಅವರು ಭಾಗಿಯಾಗಿಲ್ಲ ಎಂದು ನ್ಯಾಯಾಲಯ ಹೇಳಿಲ್ಲ. ಆದರೆ, ಕ್ರಿಮಿನಲ್ ಪ್ರಕರಣಗಳಲ್ಲಿ ಅಪರಾಧವನ್ನು ಸಾಬೀತುಪಡಿಸಬೇಕು. ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ಗೆ ಅದನ್ನು ಮಾಡಲು ಸಾಧ್ಯವಾಗಿಲ್ಲ ಎಂದು ವಕೀಲ ಅಭಿಜಿತ್ ಖಣಿಕರ್ ಹೇಳಿದ್ದಾರೆ.
ಹೈಕೋರ್ಟ್ ನಮಗೆ ನ್ಯಾಯ ನೀಡುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ ಆದರೆ ಎಲ್ಲಾ ಅಪರಾಧಿಗಳನ್ನು ಖುಲಾಸೆಗೊಳಿಸಲಾಗಿದೆ. ನಾವು ಅಸಮಾಧಾನಗೊಂಡಿದ್ದೇವೆ ಎಂದು ಸಂತ್ರಸ್ತರ ಕುಟುಂಬಸ್ಥರು ಹೇಳಿದ್ದಾರೆ.
ಇನ್ನೋರ್ವ ಸಂತ್ರಸ್ತೆಯ ಸಂಬಂಧಿ, 2019 ರಲ್ಲಿ ಅವರನ್ನು ಕೆಳ ನ್ಯಾಯಾಲಯವು ತಪ್ಪಿತಸ್ಥರೆಂದು ಘೋಷಿಸಿತು ಮತ್ತು ಕೇವಲ ಮೂರು ವರ್ಷಗಳ ನಂತರ ಅವರನ್ನು ಬಿಡುಗಡೆಗೆ ಆದೇಶ ಮಾಡಲಾಗಿದೆ. ಇದು ನ್ಯಾಯವೇ? ಎಂದು ಪ್ರಶ್ನಿಸಿದ್ದಾರೆ.