ಎಂಎಸ್ಪಿಗೆ ಶಾಸನಬದ್ದತೆ ಒದಗಿಸಲು ಸರ್ಕಾರ ರಚಿಸಿರುವ ಸಮಿತಿಗೆ ಐದು ಜನರ ಹೆಸರನ್ನು ಸಂಯುಕ್ತ ಕಿಸಾನ್ ಮೋರ್ಚಾ ಅಂತಿಮಗೊಳಿಸಿದೆ. ರೈತ ಮುಖಂಡರಾದ ಗುರ್ನಮ್ ಸಿಂಗ್ ಚದುನಿ, ಬಲ್ಬೀರ್ ಸಿಂಗ್ ರಾಜೇವಾಲ್, ಯುದ್ಧವೀರ್ ಸಿಂಗ್, ಅಶೋಕ್ ಧವಳೆ ಮತ್ತು ಶಿವಕುಮಾರ್ ಕಕ್ಕಾರವರು ರೈತರನ್ನು ಪ್ರತಿನಿಧಿಸಲಿದ್ದಾರೆ ಎಂದು ಎಸ್ಕೆಎಂ ತನ್ನ ಸಭೆಯಲ್ಲಿ ನಿರ್ಧರಿಸಿದೆ ಎಂದು ಟ್ರ್ಯಾಕ್ಟರ್ ಟು ಟ್ವಿಟರ್ ತಿಳಿಸಿದೆ.
ಕಳೆದ ಒಂದು ವರ್ಷದ ರೈತರ ನಿರಂತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಂಡಿದೆ. ಎಂಎಸ್ಪಿ ಖಾತ್ರಿಗಾಗಿ ಕಾನೂನು ರಚಿಸಬೇಕೆಂಬ ರೈತರ ಹಕ್ಕೊತ್ತಾಯಕ್ಕೆ ಪ್ರತಿಕ್ರಿಯಿಸಿದ್ದು ಸಮಿತಿ ರಚನೆ ಮಾಡಿದ್ದು 5 ರೈತರ ಹೆಸರು ನೀಡಲು ಮನವಿ ಮಾಡಿತ್ತು.
ಹಾಗಾಗಿ ಇಂದು ಸಿಂಘು ಗಡಿಯಲ್ಲಿ ಸಭೆ ಸೇರಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಎಂಎಸ್ಪಿ ಸಮಿತಿಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದು 5 ಜನ ಪ್ರತಿನಿಧಿಗಳನ್ನು ಹೆಸರಿಸಿದೆ. ಜೊತೆಗೆ ದೇಶಾದ್ಯಂತ ರೈತರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯುವುದು, 700ಕ್ಕೂ ಹೆಚ್ಚು ರೈತ ಹುತಾತ್ಮರ ಕುಟುಂಬಕ್ಕೆ ಪರಿಹಾರ, ಲಖಿಂಪುರ ಖೇರಿ ಪ್ರಕರಣಕ್ಕೆ ನ್ಯಾಯ ಸೇರಿದಂತೆ ಇತರೆ ಹಕ್ಕೊತ್ತಾಯಗಳ ಕುರಿತು ಚರ್ಚೆಯಾಗಿದೆ.
ಹರಿಯಾಣವೊಂದರಲ್ಲೆ ರೈತರ ಮೇಲೆ 48 ಸಾವಿರ ಪ್ರಕರಣಗಳು ದಾಖಲಾಗಿದ್ದು, ಅವುಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಲಾಗಿದೆ. ರೈತ ಹೋರಾಟದಲ್ಲಿ ಪ್ರಕರಣ ದಾಖಲಾಗಿರುವವರು ಅಥವಾ ತಮ್ಮ ವಾಹನಗಳ ಮೇಲೆ ಕೇಸು ದಾಖಲಾಗಿರುವವರು ಎಫ್ಐಆರ್ ನಂಬರ್ ಮತ್ತು ವಿವರಗಳನ್ನು ನೀಡಬೇಕೆಂದು ಎಸ್ಕೆಎಂ ಮನವಿ ಮಾಡಿದೆ.
ಅಲ್ಲದೇ ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ನಿರ್ಧರಿಸಿದ್ದಾರೆ. ತಮ್ಮ ಉಳಿದ ಹಕ್ಕೊತ್ತಾಯಗಳು ಈಡೇರಿದ ನಂತರವಷ್ಟೇ ಪ್ರತಿಭಟನೆ ಅಂತ್ಯಗೊಳಿಸುವುದಾಗಿ ಘೋಷಿಸಿದ್ದು, ನವೆಂಬರ್ 07 ರಂದು ಮುಂದಿನ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: MSP ಕುರಿತ ಆರು ಸುಳ್ಳು ಪ್ರಚಾರಗಳು ಮತ್ತು ಅಸಲೀ ವಾಸ್ತವಗಳು: ಯೋಗೇಂದ್ರ ಯಾದವ್