ಸಂಸತ್ತಿನ ವಿಶೇಷ ಅಧಿವೇಶನದಲ್ಲಿ 9 ಮುಖ್ಯ ವಿಚಾರಗಳ ಕುರಿತು ಚರ್ಚೆ ನಡೆಸಬೇಕೆಂದು ಆಗ್ರಹಿಸಿ ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಸೆ. 18ರಂದು ವಿಶೇಷ ಅಧಿವೇಶನಕ್ಕೆ ದಿನ ನಿಗದಿ ಮಾಡಿದ್ದರೂ ಯಾವುದೇ ಅಜೆಂಡಾವನ್ನು ಕೇಂದ್ರ ಸರಕಾರ ವಿವರಿಸಿಲ್ಲ. ಆದ್ದರಿಂದ ವಿಶೇಷ ಅಧಿವೇಶನದಲ್ಲಿ ಕೇಂದ್ರ-ರಾಜ್ಯಗಳ ನಡುವಿನ ಸಂಬಂಧ, ಕೋಮುವಾದ, ಮಣಿಪುರದ ಪರಿಸ್ಥಿತಿ ಮತ್ತು ಚೀನಾದೊಂದಿಗಿನ ಗಡಿ ಸಂಘರ್ಷ, ಆರ್ಥಿಕ ಸ್ಥಿತಿಗತಿ, ನಿರುದ್ಯೋಗ, ಬೆಲೆಯೇರಿಕೆ, ಅದಾನಿ ಗ್ರೂಪ್, ಜಾತಿ ಜನಗಣತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕು. ಈ ಬಗ್ಗೆ ಚರ್ಚೆ ನಡೆಯಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಸೋನಿಯಾ ಗಾಂಧಿ ಪತ್ರದಲ್ಲಿ ಹೇಳಿದ್ದಾರೆ.
ಇತರ ರಾಜಕೀಯ ಪಕ್ಷಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಈ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಅಧಿವೇಶನದ ಕಾರ್ಯಸೂಚಿಯ ಬಗ್ಗೆ ಯಾವುದೇ ವಿವರ ಪ್ರತಿಪಕ್ಷಗಳಿಗೆ ಇಲ್ಲ. ನಮಗೆ ಐದು ದಿನಗಳ ವಿಶೇಷ ಅಧಿವೇಶನ ಇದೆ ಎಂದು ಮಾತ್ರ ತಿಳಿಸಲಾಗಿದೆ ಎಂದು ಸೋನಿಯಾ ಗಾಂಧಿ ಪತ್ರದಲ್ಲಿ ಹೇಳಿದ್ದಾರೆ.
ಅಧಿಕೃತ G20 ಶೃಂಗಸಭೆಯ ಆಮಂತ್ರಣ ಪತ್ರಿಕೆಯಲ್ಲಿ “ಇಂಡಿಯಾ” ಬದಲಿಗೆ “ಭಾರತ್” ಪದವನ್ನು ಬಳಸಿದ ಸುದ್ದಿ ವೈರಲ್ ಆದ ಬೆನ್ನಲ್ಲೇ ಸೋನಿಯಾ ಗಾಂಧಿ ಜನ ಸಾಮಾನ್ಯರಿಗೆ ಸಂಬಂಧಿಸಿದ ಪ್ರಮುಖ ಅಂಶಗಳ ಚರ್ಚೆಗೆ ಅವಕಾಶ ಕಲ್ಪಿಸಲು ಪ್ರಧಾನಿಗೆ ಮನವಿಯನ್ನು ಮಾಡಿದ್ದಾರೆ.
ಸೆಪ್ಟೆಂಬರ್ 18 ರಿಂದ 22 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ದೇಶದ ಹೆಸರನ್ನು ಬದಲಾಯಿಸುವ ನಿರ್ಣಯವನ್ನು ಸರ್ಕಾರ ಸಂಸತ್ತಿನ ಮುಂದಿಡಬಹುದು ಎಂದು ಮೂಲಗಳು ಹೇಳುತ್ತವೆ. ವಿಶೇಷ ಅಧಿವೇಶನದ ಅಜೆಂಡಾದ ಬಗ್ಗೆ ಸರಕಾರ ಸ್ಪಷ್ಟನೆ ನೀಡದಿರುವುದು ಮತ್ತಷ್ಟು ಸಂಶಯಕ್ಕೆ ಕಾರಣವಾಗಿದೆ.
ಇದನ್ನು ಓದಿ: ಗಣೇಶ ಚತುರ್ಥಿ ದಿನದಿಂದ ಸಂಸತ್ತಿನ ಹೊಸ ಕಟ್ಟಡದಲ್ಲಿ ವಿಶೇಷ ಅಧಿವೇಶನ