ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಹಿರಿಯ ಸಹೋದ್ಯೋಗಿಗಳೊಂದಿಗೆ ಹಮಾಸ್ ಆಳ್ವಿಕೆಯಲ್ಲಿರುವ ಗಾಝಾದ ಕರಾವಳಿ ಪಟ್ಟಿಗೆ ತೆರಳಿ ಇಸ್ರೇಲ್ ಸೈನಿಕರನ್ನು ಭೇಟಿ ಮಾಡಿದ್ದಾರೆ. ಹಮಾಸ್ ಆಳ್ವಿಕೆಯ ಭೂ ಪ್ರದೇಶಕ್ಕೆ ನೆತನ್ಯಾಹು ಭೇಟಿ ಇಸ್ರೇಲ್ ಆ ಭೂಪ್ರದೇಶದ ಮೇಲೆ ಹಿಡಿತವನ್ನು ಸಾಧಿಸಿದೆ ಎನ್ನವುದನ್ನು ಸೂಚಿಸುತ್ತದೆ.
ನೆತನ್ಯಾಹು ಅವರು ಕಮಾಂಡರ್ಗಳು ಮತ್ತು ಸೈನಿಕರಿಂದ ಭದ್ರತೆಯ ಕುರಿತು ಮಾಹಿತಿಯನ್ನು ಪಡೆದಿದ್ದಾರೆ. ಯುದ್ಧದ ಗುರಿ ತಲುಪುವವರೆಗೂ ಸೈನಿಕರಿಗೆ ಮುಂದುವರಿಯಲು ಸೂಚಿಸಿದ್ದಾರೆ.
ನಾವು ನಮ್ಮ ವೀರ ಸೈನಿಕರೊಂದಿಗೆ ಗಾಝಾ ಪಟ್ಟಿಯಲ್ಲಿದ್ದೇವೆ. ನಮ್ಮ ಒತ್ತೆಯಾಳುಗಳನ್ನು ಹಿಂದಿರುಗಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಮತ್ತು ನಾವು ಅವರೆಲ್ಲರನ್ನೂ ಕರೆತಂದೇ ತೀರುತ್ತೇವೆ. ಈ ಯುದ್ಧದಲ್ಲಿ ನಮಗೆ 3 ಗುರಿಗಳಿವೆ. ಒಂದು ಹಮಾಸ್ನ್ನು ನಿರ್ನಾಮ ಮಾಡುವುದು. ನಮ್ಮ ಎಲ್ಲಾ ಒತ್ತೆಯಾಳುಗಳನ್ನು ಕರೆತರುವುದು ಮತ್ತು ಮುಂದೆಂದೂ ಗಾಝಾ ಇಸ್ರೇಲ್ ರಾಜ್ಯಕ್ಕೆ ಬೆದರಿಕೆಯಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದಾಗಿದೆ ಎಂದು ನೆತನ್ಯಾಹು ಹೇಳಿದ್ದಾರೆ.
ನಾನು ಈ ವಿಚಾರವನ್ನು ಸೈನಿಕರಿಗೆ ಹೇಳಲು ಇಲ್ಲಿ ಬಂದಿದ್ದೇನೆ. ಎಲ್ಲರೂ ನನಗೆ ಈ ವಿಷಯವನ್ನೇ ಹೇಳುತ್ತಾರೆ. ನಾನು ನಿಮಗೆ ಇದನ್ನು ಮತ್ತೆ ಪುನರಾವರ್ತಿಸುತ್ತೇನೆ. ಇಸ್ರೇಲ್ ನಾಗರಿಕರೆ ನಾವು ಕೊನೆಯವರೆಗೂ ಮುಂದುವರಿಯುತ್ತೇವೆ. ವಿಜಯದವರೆಗೆ ಮುಂದುವರಿಯುತ್ತೇವೆ. ಯಾರೂ ನಮ್ಮನ್ನು ತಡೆಯುವುದಿಲ್ಲ. ಯುದ್ಧಕ್ಕಾಗಿ ನಮ್ಮ ಎಲ್ಲಾ ಗುರಿಗಳನ್ನು ಸಾಧಿಸುವ ಶಕ್ತಿ, ಇಚ್ಛೆ ಮತ್ತು ಸಂಕಲ್ಪ ನಮ್ಮಲ್ಲಿದೆ ಮತ್ತು ಇದನ್ನು ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ.
ಇಸ್ರೇಲ್ ಪ್ರಧಾನ ಮಂತ್ರಿಯ ಜೊತೆ ಅವರ ಚೀಫ್ ಆಫ್ ಸ್ಟಾಫ್ ಟ್ಜಾಚಿ ಬ್ರೇವರ್ಮನ್, ರಾಷ್ಟ್ರೀಯ ಭದ್ರತಾ ಮಂಡಳಿಯ ನಿರ್ದೇಶಕ ತ್ಜಾಚಿ ಹನೆಗ್ಬಿ, ಮಿಲಿಟರಿ ಕಾರ್ಯದರ್ಶಿ ಮೇಜರ್-ಜನರಲ್ ಅವಿ ಗಿಲ್ ಮತ್ತು ಇಸ್ರೇಲ್ ರಕ್ಷಣಾ ಪಡೆಗಳ ಉಪ ಮುಖ್ಯಸ್ಥ ಮೇಜರ್ ಜನರಲ್ ಅಮೀರ್ ಬರಮ್ ಇದ್ದರು.
ಇಸ್ರೇಲ್ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಮತ್ತು ಚೀಫ್ ಆಫ್ ಸ್ಟಾಫ್ ಹರ್ಜಿ ಹಲೇವಿ ಮತ್ತು ಇತರ ಹಿರಿಯ ಇಸ್ರೇಲ್ ಅಧಿಕಾರಿಗಳು ಯುದ್ಧದ ಸಮಯದಲ್ಲಿ ಗಾಝಾ ಸ್ಟ್ರಿಪ್ನ ಉತ್ತರ ಭಾಗಕ್ಕೆ ಭೇಟಿ ನೀಡಿದ್ದಾರೆ. ಇದು ಈ ಭೂಪ್ರದೇಶದ ಮೇಲೆ ಇಸ್ರೇಲ್ ದೊಡ್ಡ ಮಟ್ಟದಲ್ಲಿ ನಿಯಂತ್ರಣ ಸಾಧಿಸಿದೆ ಎನ್ನುವುದನ್ನು ಸೂಚಿಸುತ್ತದೆ.
ಕತಾರ್, ಈಜಿಪ್ಟ್ ಮತ್ತು ಯುನೈಟೆಡ್ ಸ್ಟೇಟ್ಸ್ ಮಧ್ಯಸ್ಥಿಕೆಯಲ್ಲಿ ತಾತ್ಕಾಲಿಕ ನಾಲ್ಕು ದಿನಗಳ ಕದನ ವಿರಾಮದಲ್ಲಿ ಇಸ್ರೇಲ್ ಮತ್ತು ಹಮಾಸ್ ಒತ್ತೆಯಾಳುಗಳನ್ನು ವಿನಿಮಯ ಮಾಡಿಕೊಂಡಿವೆ. ಇಂಧನ ಸೇರಿದಂತೆ ಮಾನವೀಯ ಸಹಾಯವನ್ನು ಗಾಝಾ ಪಟ್ಟಿಗೆ ಪ್ರವೇಶಿಸಲು ಅನುವು ಮಾಡಿ ಕೊಟ್ಟಿದೆ.
ನಾಲ್ಕು ದಿನಗಳ ಕದನ ವಿರಾಮದ ವೇಳೆ 150 ಪ್ಯಾಲೇಸ್ತೀನ್ ಕೈದಿಗಳಿಗೆ ಬದಲಾಗಿ 50 ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ಕದನ ವಿರಾಮದ ವೇಳೆ ಹಲವು ಬಾರಿ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಇಸ್ರೇಲ್ ಮತ್ತು ಹಮಾಸ್ ಆರೋಪಿಸಿತ್ತು. ಪಶ್ಚಿಮದಂಡೆಯಲ್ಲಿ ಇಸ್ರೇಲ್ ಕದನ ವಿರಾಮದ ವೇಳೆ ನಡೆಸಿದ ಗುಂಡಿನ ದಾಳಿಯಲ್ಲಿ ಬಾಲಕ ಸಹಿತ 6 ಮಂದಿ ಮೃತಪಟ್ಟಿದ್ದಾರೆ ಮತ್ತು ಇತರ 6 ಮಂದಿ ಗಾಯಗೊಂಡಿದ್ದಾರೆ ಎಂದು ಫೆಲೆಸ್ತೀನಿಯನ್ ಆರೋಗ್ಯ ಇಲಾಖೆ ಹೇಳಿದೆ.
ಇದನ್ನು ಓದಿ: ಮೀರತ್: ಶಾಲಾ ಬಾಲಕನನ್ನು ಥಳಿಸಿ ಮುಖದ ಮೇಲೆ ಮೂತ್ರ ವಿಸರ್ಜನೆ