Homeಮುಖಪುಟಸ್ತ್ರೀಮತಿ-1: ನನ್ನನ್ನೀಗ ಯಾವ ಪಾತ್ರದ ಆಕಾರಕ್ಕೆ ಹೊಂದಿಸಲಿ! -ಡಾ. ಕಾವ್ಯಶ್ರೀ ಎಚ್

ಸ್ತ್ರೀಮತಿ-1: ನನ್ನನ್ನೀಗ ಯಾವ ಪಾತ್ರದ ಆಕಾರಕ್ಕೆ ಹೊಂದಿಸಲಿ! -ಡಾ. ಕಾವ್ಯಶ್ರೀ ಎಚ್

ಹೆಣ್ಣಿಗೆ ಬೇಕಿರುವುದು ನಿರ್ಬಂಧಸಹಿತ ಸಂರಕ್ಷಣೆಯಲ್ಲ, ತಾನು ತಾನಾಗಿಯೇ ಇರುವ ಸ್ವಾತಂತ್ರ್ಯ. ತನ್ನ ಪಾಡಿಗೆ ತಾನಿರಲು, ನಿರಾಳ ಉಸಿರಾಡಲು ಅವಳಿಗೆ ಸ್ವಲ್ಪ ಸ್ಪೇಸ್ ಕೊಡಿ ಪ್ಲೀಸ್!

- Advertisement -
- Advertisement -

ಲಾಕ್‌ಡೌನ್ ಮತ್ತು ದ್ವಿತೀಯ ಪಿಯುಸಿ ಉತ್ತರಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಮುಗಿದಮೇಲೆ ಎಂದಿನಂತೆ ಕಾಲೇಜು ಆರಂಭವಾಗಿದೆ. ಮೊನ್ನೆಯ ದಿನ ಕಾಲೇಜಿಗೆ ಹೋದಮೇಲೆ ಕಾಫಿ ಕುಡಿಯಲೇಬೇಕು ಅನಿಸಿತು. ಮೊದಲಿನಿಂದಲೂ ಕಾಲೇಜಿನಲ್ಲಿ ಅದೊಂದು ರಿಚ್ಯುವಲ್ ಆಗಿಬಿಟ್ಟಿರುವುದರಿಂದಲೂ ಮತ್ತು ನಮ್ಮ ಕ್ಯಾಂಟೀನಿನ ಶುಚಿತ್ವದ ಮೇಲಿರುವ ನಂಬಿಕೆಯಿಂದಲೂ ಕೊರೊನಾ ಸಮಯದಲ್ಲಿಯೂ ಧೈರ್ಯ ಮಾಡಿ ಹೋದೆ. ನನ್ನೊಂದಿಗೆ ಕಾಫಿಗೆ ಜೊತೆಯಾಗುತ್ತಿದ್ದ ಸಹೋದ್ಯೋಗಿಗಳ ವಾಲ್ಯುಯೇಶನ್ ವರ್ಕ್ ಇನ್ನೂ ಮುಗಿದಿರಲಿಲ್ಲವಾದ್ದರಿಂದ ಮತ್ತು ಅಲ್ಲಿದ್ದ ಇನ್ನುಳಿದವರಿಗೆ ಹೊರಬರುವ ಮನಸ್ಸಿರಲಿಲ್ಲವಾದ್ದರಿಂದಲೂ ನಾನೊಬ್ಬಳೇ ಕ್ಯಾಂಟೀನಿಗೆ ಹೊರಟೆ.

ಒಂದೇ ಕಟ್ಟಡದಲ್ಲಿ ಶಾಲೆ, ಕಾಲೇಜುಗಳೆರಡೂ ಇವೆ. ಎಸ್‌ಎಸ್‌ಎಲ್‌ಸಿ ಎಕ್ಸಾಮ್ ಅಂದು ಇರಲಿಲ್ಲವಾದ್ದರಿಂದ ಕ್ಯಾಂಟೀನ್ ತೆರೆದಿತ್ತು. ಕ್ಯಾಂಟೀನ್ ಕೇವಲ ಕಾಲೇಜಿನವರಿಗಷ್ಟೇ ಅಲ್ಲದೇ ಸಾರ್ವಜನಿಕರಿಗೂ ಸೇವೆಯೊದಗಿಸುತ್ತದೆ. ಕಾಫಿ ತೆಗೆದುಕೊಂಡು ಕುಡಿಯುತ್ತಾ ಸುತ್ತಮುತ್ತ ಕಣ್ಣಾಡಿಸಿದೆ. ಅಲ್ಲಿದ್ದ ಬಹುತೇಕರು ವಿಚಿತ್ರವಾಗಿ ನನ್ನನ್ನೇ ಗಮನಿಸುತ್ತಿದ್ದುದು ನೋಡಿ ಅಚ್ಚರಿಯಾಯಿತು. ಯೋಚಿಸುವಷ್ಟರಲ್ಲಿ ತಟ್ಟನೆ ಹೊಳೆಯಿತು. ಅಲ್ಲಿ ಅಂದು ಆ ಇಡೀ ಕ್ಯಾಂಟೀನಿನಲ್ಲಿ ನಾನೊಬ್ಬಳೇ ಹೆಂಗಸು! ಅಷ್ಟು ಪರಿಚಿತ ಮತ್ತು ಆಪ್ತವಾದ ಕ್ಯಾಂಟೀನ್ ಒಂದರೆಕ್ಷಣ ಅಪರಿಚಿತ ಭಾವವನ್ನು ಮೂಡಿಸಿ ಮರೆಯಾಯಿತು. ಮಾಸ್ಕ್ ತೆಗೆದು ನನ್ನ ಕಾಫಿಯನ್ನು ಹೀರುತ್ತಾ ಆಲೋಚನೆಗೆ ಬಿದ್ದೆ.

ಕ್ಯಾಂಟೀನಿಗೆ ಬೆಳಗ್ಗಿನ ವಾಕಿಂಗ್, ಜಾಗ್ಗಿಂಗ್ ಮುಗಿಸಿ ಬರುವವರು, ಇಲ್ಲಿಯ ಕಾಫಿ-ತಿಂಡಿಗೆಂದೇ ಪ್ರತಿದಿನ ಬರುವವರೂ ಇರುತ್ತಾರೆ. ನಾನೇನಾದರೂ ಮನೆಯಲ್ಲಿ ಕುಳಿತು ಬೇಸರವಾಗಿ ಹವಾಸೇವನೆಗೆಂದೊ, ಕಾಫಿ ಕುಡಿಯಲೆಂದೋ ಹೊರಬಂದರೆ ಹೇಗಿರುತ್ತದೆ. ಹೀಗೆ ಗಂಡಸರು ಮನೆಯಿಂದ ಹೊರಗೆ ಬರುವುದಿಲ್ಲವೇ. ನಿಂತಿದ್ದವರು ನಿಂತಿದ್ದ ಹಾಗೆಯೇ ಉಟ್ಟಬಟ್ಟೆಯಲ್ಲಿಯೇ ಚಪ್ಪಲಿಯೇರಿಸಿ ಸ್ವಲ್ಪ ಹೊರಗೆಹೋಗಿ ಬರ‍್ತೀನಿ ಅಂತ ಹೊರಟೇಬಿಡ್ತಾರೆ. ಆದರೆ ಹೆಣ್ಣುಮಕ್ಕಳು ಹಾಗೆ ಹೋಗುವುದಕ್ಕೆ ಸಾಧ್ಯವೇ ಯೋಚಿಸಿ ನೋಡಿ? ಕೊರೊನಾ ಕಾಲದಲ್ಲಿರಲಿ, ಕೊರೊನಾ ಪೂರ್ವದಲ್ಲಿಯೂ, ಕೊರೊನೋತ್ತರ ಕಾಲದಲ್ಲಿಯೂ ಕಲ್ಪಿಸಿಕೊಳ್ಳುವುದಕ್ಕೇ ಕಷ್ಟವಾಗುತ್ತಿದೆ ಅಲ್ಲವೇ? ಇಂತಹ ಸಂದರ್ಭದಲ್ಲಿಯೂ ಅವಳಿಗೆ ಹೊರಬರುವಂತಹ ಅವಶ್ಯಕತೆ ಏನಿದೆ? ಅಂಥಹದ್ದೇನಿರುತ್ತದೆ ಅವರಿಗೆ? ಹೌದಲ್ವಾ? ಸುಮ್ಮನೆ ಮನೆಯಲ್ಲಿದ್ದರೆ ಆಗುವುದಿಲ್ಲವೇ. ಸಾಮಾನ್ಯವಾಗಿ ಎಲ್ಲರ ಅಥವಾ ಬಹುತೇಕರ ಆಲೋಚನಾಧಾಟಿ ಹೀಗೇ ಇರುತ್ತದೆ.

ಇಷ್ಟು ಸಣ್ಣ, ಸೂಕ್ಷ್ಮ ವಿಚಾರಗಳೇ ಒಂದಿಡೀ ಮನೋಧರ್ಮವನ್ನು, ಆಲೋಚನಾಕ್ರಮವನ್ನು ರೂಪಿಸುತ್ತಿರುತ್ತದೆ, ಆದ್ದರಿಂದ ಮನಸ್ಸಿನಲ್ಲಿ ಹಾದುಹೋಗುವ ಇಂತಹ ಸಣ್ಣಸಣ್ಣ ಯೋಚನೆಗಳನ್ನು, ಭಾವನೆಗಳನ್ನೇ ನಾವು ಕೌಂಟರ್ ಮಾಡಬೇಕಿರುವುದು.

ಏಕೆಂದರೆ ಹೆಣ್ಣನ್ನು ಒಂದೊಂದು ಪಾತ್ರದ ಅಚ್ಚಿನೊಳಗೆ ತೂರಿಸಿ ಕೂರಿಸಲಾಗಿದೆ. ತಾಯಿ, ತಂಗಿ, ಹೆಂಡತಿ, ಗೆಳತಿ ಹೀಗೇ. ಕಾರ್ಯೇಶು ದಾಸಿ, ಕರಣೇಶು ಮಂತ್ರಿ, ಭುಜ್ಯೇಶು ಮಾತಾ, ಶಯನೇಶು ರಂಭಾ ಎನ್ನುವ ಸಾಲುಗಳನ್ನೂ ಅಲಿಖಿತ ಶಾಸನದಂತೆ, ಎಂದೂ ಬದಲಾಯಿಸಲಾಗದಂತೆ ಜನಮಾನಸದಲ್ಲಿ ಆಳವಾಗಿ ಕೆತ್ತಿಬಿಟ್ಟಿದ್ದಾರೆ. ಒಂದೊಂದು ಪಾತ್ರವನ್ನೂ ಒಂದೊಂದು ಚೌಕಟ್ಟಿನಲ್ಲಿ ಬಂಧಿಸಿಬಿಟ್ಟಿದ್ದೇವೆ, ನೀರನ್ನು ಪಾತ್ರೆಯ ಒಳಗೆ ಹಾಕಿದಂತೆ. ನೀರನ್ನು ಯಾವ ಪಾತ್ರೆಗೆ ಹಾಕುತ್ತೀರೋ ಆ ಆಕಾರವನ್ನು ಮೈವೆತ್ತುತ್ತದೆ. ಆದರೆ ಸಮಸ್ಯೆ ಎದುರಾಗುವುದು ನೀರು ಅದೇ ಆಕಾರದಲ್ಲಿರಬೇಕು ಎಂದು ನಿರೀಕ್ಷಿಸಿದಾಗ, ನಿರ್ದೇಶಿಸಿದಾಗ, ಫರ್ಮಾನು ಹೊರಡಿಸಿದಾಗ!

ಇತ್ತೀಚೆಗೆ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಧೀಶರೊಬ್ಬರು ಆ ಸಂದರ್ಭದಲ್ಲಿ ಅತ್ಯಾಚಾರಕ್ಕೊಳಗಾದ ಹೆಣ್ಣಿನ ಬಗ್ಗೆ ಆಡಿರುವ ಮಾತುಗಳು ಆಘಾತಕಾರಿಯಾಗಿದೆ. ಅತ್ಯಾಚಾರಕ್ಕೆ ಆಕೆಯೇ ಕಾರಣ ಎಂಬಂತೆ ಆಕೆಯ ವರ್ತನೆಯ ವಿಶ್ಲೇಷಣೆ ಮಾಡಿರುವ ನ್ಯಾಯಾಧೀಶರು ಅತ್ಯಾಚಾರವಾದ ನಂತರ ಆಕೆ ಸುಸ್ತಾಗಿ ಮಲಗಿಬಿಟ್ಟಿದ್ದನ್ನು ಒಬ್ಬ `ಭಾರತೀಯ ಮಹಿಳೆ’ಗೆ ತಕ್ಕುದಾದ ನಡವಳಿಕೆ ಅದಲ್ಲ ಎಂದು ಹೇಳಿದ್ದಾರೆ. ಹಾಗಿದ್ದರೆ ಇಲ್ಲಿ ಭಾರತೀಯ ಮಹಿಳೆಯಾಗಿ ಅವಳು ಚಂಡಿಚಾಮುಂಡಿಯ ರೂಪವನ್ನೋ, ಕಾಳಿಯ ಅವತಾರವನ್ನೋ ತಾಳಿ ಅವನನ್ನು ಸಂಹರಿಸಬೇಕಿತ್ತೇ? (ಆಕೆ ಮರುದಿನ ಬೆಳಗ್ಗೆ ಹೋಗಿ ದೂರನ್ನು ಸಲ್ಲಿಸಿದ್ದಾಳೆ)

ದೂರು ನೀಡಿರುವ ಮಹಿಳೆ ಆರೋಪಿಯೊಂದಿಗೆ ತಡರಾತ್ರಿಯವರೆಗೆ ಇದ್ದುದು ಏಕೆ ಎಂದು ಪ್ರಶ್ನಿಸುವುದಲ್ಲದೇ, ಪರೋಕ್ಷವಾಗಿ ಘಟನೆಗೆ ಆಕೆಯೇ ಕಾರಣಳಾಗುತ್ತಾಳೆ ಎಂದಿದ್ದಾರೆ. ಭಾರತೀಯ ಹೆಣ್ಣು `ಹಾಗಿರುವುದಕ್ಕೆ ಸಾಧ್ಯವಿಲ್ಲ’, `ಹಾಗಿರುವುದಿಲ್ಲ’ ಎಂದು ನ್ಯಾಯಾಧೀಶರೇ ತೀರ್ಪು ನೀಡಿದರೆ, ಸುಶಿಕ್ಷಿತರಾಗಿ ಅಷ್ಟು ಉನ್ನತ ಹುದ್ದೆಯನ್ನೇರಿ, ಸಾಮಾಜಿಕ ವ್ಯವಸ್ಥೆಯ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೂ ಒಬ್ಬ ಸಾಮಾನ್ಯ ಮನುಷ್ಯನಂತೆ ಸಂಕುಚಿತವಾಗಿ ಯೋಚಿಸುವುದಾದರೆ – ಈ ಪೂರ್ವಾಗ್ರಹಗಳು, ಸಮಾಜದ ಅಪ್‌ಬ್ರಿಂಗಿಂಗ್, ಕಂಡೀಶನಿಂಗ್‌ ನಿಂದ ಹೊರಬಂದು ಯೋಚಿಸುವುದು ಅಷ್ಟು ಕಷ್ಟವೆಂದಾದರೆ, ಆ ಆಕ್ಟೋಪಸ್ ಹಿಡಿತ ಎಷ್ಟು ಬಿಗಿಯಾಗಿದೆ. ಅದರಿಂದ ಬಿಡುಗಡೆ ಪಡೆಯುವುದಕ್ಕೆ ಇನ್ನೂ ಎಷ್ಟು ಶತಮಾನಗಳು ಬೇಕಾಗಬಹುದೋ.

`ಅನ್‌ಬಿಕಮಿಂಗ್ ಆಫ್ ಇಂಡಿಯನ್ ವುಮೆನ್’ ಎಂಬ ಸಾಲನ್ನು ಅವರು ಬಳಸಿದ್ದಾರೆ, ಇಲ್ಲಿ ಆಗಬೇಕಿರುವುದು `ಅನ್‌ಲರ್ನಿಂಗ್ ಆಫ್ ಜೆಂಡರ್ ಬಯಾಸ್’, `ಅನ್‌ಲರ್ನಿಂಗ್ ಆಫ್ ಪೆಟ್ರಿಯಾರ್ಕಿ’, `ಅನ್‌ಲರ್ನಿಂಗ್ ಆಫ್ ಮಿಸೊಜಿನಿ’. ರಾತ್ರಿ ಹೊರಗೆ ಹೋಗುವ, ಪುರುಷರೊಂದಿಗೆ ಮಾತನಾಡುವ ಮಹಿಳೆಯರ ನಡತೆ ಸರಿಯಿಲ್ಲ ಎನ್ನುವುದಾದರೆ ನಾವಿನ್ನೂ ಯಾವ ಯುಗದಲ್ಲಿದ್ದೇವೆ. ಮನೆಯಲ್ಲಿ ಅವಳನ್ನು ಕೂಡಿಹಾಕಿ ಪುರುಷ ಮಾತ್ರ ಹೊರಗೆಹೋಗಿ ದುಡಿದುಕೊಂಡು ಬರುವ ಕಾಲ ಇದಲ್ಲ. ಆಕೆಯೂ ಸಮಾನವಾಗಿ ದುಡಿಯುತ್ತಿರುವ ದಿನಮಾನಗಳಲ್ಲಿ ಮತ್ತು ರಾತ್ರಿಪಾಳಿಗಳಲ್ಲೂ ಕರ್ತವ್ಯ ನಿರ್ವಹಿಸಲಾರಂಭಿಸಿ ದಶಕಗಳೇ ಕಳೆದಿದ್ದರೂ, ಅವಳ ಮೇಲೆ ಇಂತಹ ನಿರ್ಬಂಧಗಳನ್ನು ಹೊರಿಸುವುದನ್ನು ಪ್ರಾಕ್ಟಿಕಲ್ ಆಗಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇನ್ನು ಇದನ್ನು ಆಧರಿಸಿ ಅವಳ ಚಾರಿತ್ರ್ಯದ ಬಗ್ಗೆ ತೀರ್ಪು ಕೊಡುವುದು ಎಷ್ಟು ಸರಿ. ಮಹಿಳೆಯರೂ ಕೂಡ ಇಂತಹ ಹೆಣ್ಣುಮಕ್ಕಳನ್ನು ಆಡಿಕೊಳ್ಳುವುದಿದೆ.

ನಾವು ಆ ಮನೋಧರ್ಮವನ್ನು ಸುಲಭವಾಗಿ ಬದಲಾಯಿಸಲು ಸಾಧ್ಯವೇ ಇಲ್ಲ. ಪುರುಷರದಷ್ಟೇ ಅಲ್ಲ ಮಹಿಳೆಯರದ್ದೂ ಕೂಡ. `ತಪ್ಪಡ್’ ಸಿನಿಮಾಗೆ ಬಂದ ಪ್ರತಿಕ್ರಿಯೆಗಳನ್ನು ಗಮನಿಸುತ್ತಿದ್ದಾಗ ಕೆಲವಷ್ಟು ಹೆಣ್ಣುಮಕ್ಕಳೇ ಆ ಕಥಾವಸ್ತು ಉತ್ಪ್ರೇಕ್ಷೆಯಿಂದ ಕೂಡಿದೆ, ಅಸಂಬದ್ಧವಾಗಿದೆ ಎಂದದ್ದನ್ನು ನೋಡಿದೆ. (ಆ ಚಿತ್ರದಲ್ಲಿನ ನಾಯಕಿ, ಗಂಡ ಪಾರ್ಟಿಯಲ್ಲಿ ತನ್ನ ಕಪಾಳಕ್ಕೆ ಹೊಡೆದ ಕಾರಣಕ್ಕೇ ಆತನಿಂದ ವಿಚ್ಛೇದನ ಪಡೆದುಕೊಳ್ಳುತ್ತಾಳೆ).

ಅಂದರೆ ಈ ಸಮಾಜ ಅವರನ್ನು ಎಷ್ಟರಮಟ್ಟಿಗೆ ಕಂಡೀಶನಿಂಗ್ ಮಾಡಿದೆ ಎಂಬುದು ತಿಳಿದುಬರುತ್ತದೆ. ಇನ್ನು ಮ್ಯಾರಿಟಲ್ ರೇಪ್‌ಅನ್ನು ಅರ್ಥಮಾಡಿಸಲು ಎಷ್ಟು ಶತಮಾನಗಳು ಬೇಕಾಗಬಹುದು. ಈ ಸಮಸ್ಯೆ ಕೇವಲ ಭಾರತೀಯ ಸಮಾಜಕ್ಕೆ ಮಾತ್ರ ಸೀಮಿತವಲ್ಲ.

ವೈಯಕ್ತಿಕ ನಿಲುವುಗಳು ಸಾಂಸ್ಥಿಕ ರೂಪ ಪಡೆದು ಇಡೀ ವ್ಯವಸ್ಥೆಯನ್ನೇ ಪ್ರಭಾವಿಸುವುದಕ್ಕೆ ಇದೊಂದು ಸಣ್ಣ ಉದಾಹರಣೆಯಷ್ಟೇ. ಈ ಘಟನೆಯಂತೂ ಕಾನೂನಾತ್ಮಕವಾಗಿ ಪಿತೃಪ್ರಧಾನ ಮನಸ್ಥಿತಿಗೆ ಒಂದು ಸಾಂವಿಧಾನಿಕ ಚೌಕಟ್ಟನ್ನೂ ಒದಗಿಸುತ್ತಿರುವಂತಿದೆ. `ನಥಿಂಗ್ ಪರ್ಸನಲ್’ ಎಂದು ನಯವಾಗಿ ನುಣುಚಿಕೊಳ್ಳುವುದರಿಂದ ಮುಂದಕ್ಕೆ ಸಾಗಿ `ಪರ್ಸನಲ್ ಇಸ್ ಪೊಲಿಟಿಕಲ್’ ಎನ್ನುವ ಅರಿವು ಮೂಡಬೇಕಿದೆ.

ಪಾತ್ರೆಯೊಳಗೆ ನೀರು ತುಂಬಿಸಿಟ್ಟಂತೆ ನೀನು ಹೀಗೇ ಇರಬೇಕು, ನಿನ್ನ ಪಾತ್ರವಿಷ್ಟೇ ಎಂದರೆ ಹೇಗೆ? ಸ್ತ್ರೀ ತನ್ನ ಪಾತ್ರವನ್ನು ಸ್ವತಂತ್ರವಾಗಿ ನಿರ್ವಹಿಸಲು ತಕ್ಕುದಾದ ಮನೋಭೂಮಿಕೆಯೊಂದನ್ನು ಸಿದ್ಧಪಡಿಸುವುದು ಹೇಗೆ? ಬದಲಾಗದ ಪಿತೃಪ್ರಧಾನ ಸಂಸ್ಕೃತಿಯನ್ನು ಬದಲಾಯಿಸಬೇಕು ಅಂದರೆ ನಾವು ಬದಲಾಗಬೇಕು. ಹೆಣ್ಣಿಗೆ ಬೇಕಿರುವುದು ನಿರ್ಬಂಧಸಹಿತ ಸಂರಕ್ಷಣೆಯಲ್ಲ, ತಾನು ತಾನಾಗಿಯೇ ಇರುವ ಸ್ವಾತಂತ್ರ್ಯ. ತನ್ನ ಪಾಡಿಗೆ ತಾನಿರಲು, ನಿರಾಳ ಉಸಿರಾಡಲು ಅವಳಿಗೆ ಸ್ವಲ್ಪ ಸ್ಪೇಸ್ ಕೊಡಿ ಪ್ಲೀಸ್!

ಕಾಫಿ ಮುಗಿಯುವುದರೊಂದಿಗೇ ಆಲೋಚನಾ ಸರಣಿಯೂ ತುಂಡಾಯಿತು. ಪೇಪರ್ ಕಪ್ಪಿನ ತಳದಲ್ಲಿ ಸ್ವಲ್ಪ ಕಾಫಿ ಉಳಿದಿತ್ತು. ಕಪ್ಪಿನ ಆಕಾರದಲ್ಲಿಯೇ ತಳದಲ್ಲಿದ್ದ ಕಾಫಿ ಅಂಚಿನ ಸುತ್ತಲೂ ಹರಡಿಕೊಂಡಿತ್ತು
ನೋಡುತ್ತಲೇ ಅನ್ನಿಸಿದ್ದು…..

ಹೌದು ನಾನೀಗ ಯಾವ ಪಾತ್ರೆಯ ಒಳಗೆ ಕೂರಲಿ?
ಅಲ್ಲಲ್ಲಾ ಯಾವ ಪಾತ್ರದ ಒಳಹೋಗಲಿ?
ನನ್ನನ್ನು ಈಗ ಯಾವ ಪಾತ್ರದ ಆಕಾರಕ್ಕೆ ಹೊಂದಿಸಲಿ?

ಚಿತ್ತಕಾವ್ಯ: ಇನ್ನೂ ಎಷ್ಟು ದಿನ ಹೇಳಿದ್ದನ್ನೇ ಹೇಳಿಕೊಂಡು ಇರುತ್ತೀರಾ? ಕಾಲ ಬದಲಾಗಿದೆ, ಪುರುಷರ ಮನಸ್ಥಿತಿ ಬದಲಾಗಿದೆ ಎನ್ನುವವರಿಗೇನೂ ಕೊರತೆಯಿಲ್ಲ. ಪುರುಷರ ಮೇಲೆ ಮಹಿಳೆಯರು ನಡೆಸುವ ದೌರ್ಜನದ ಬಗ್ಗೆ ಸ್ತ್ರೀವಾದಿಗಳು ಮಾತನಾಡುವುದಿಲ್ಲ! ಎಂದು ಕೊಂಕು ನುಡಿಯುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ಆದರೆ ನಾವಿಲ್ಲಿ ಮಾತನಾಡುತ್ತಿರುವುದು ಬಹುಜನಭಾರತದ ಬಹುಸಂಖ್ಯಾತರ ಬಗ್ಗೆ !!

ಎಲ್ಲಿಯವರೆಗೆ ಮಾಡಿದ್ದನ್ನೇ ಮಾಡುತ್ತಿರುತ್ತೀರೋ ಅಲ್ಲಿಯವರೆಗೆ ಹೇಳಿದ್ದನ್ನೇ ಹೇಳುತ್ತಿರಬೇಕಾಗುತ್ತದೆ.

ಡಾ. ಕಾವ್ಯಶ್ರೀ ಎಚ್, ಲೇಖಕಿ- ಉಪನ್ಯಾಸಕಿ. (ಲೇಖಕಿ-ಚಿಂತಕಿ ಚಿಮಮಾಂಡ ಅಡಿಚಿ ಅವರ ಫೆಮಿನಿಸ್ಟ್ ಮ್ಯಾನಿಫೆಸ್ಟೋ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ)


ಇದನ್ನೂ ಓದಿ: ಬಹುಜನ ಭಾರತ: ಲಾಭದ ಗುಲಾಮಗಿರಿಗೆ ಬಿದ್ದಿರುವ ಮಾಧ್ಯಮ! – ಡಿ.ಉಮಾಪತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸ್ಪೇಸ್ ಕೊಡಿ ಅಂತ ಕೇಳೋದಕ್ಕೆ ಅವರ್ಯಾರು? ನಾವೇ ಸೃಷ್ಟಿ ಮಾಡಿಕೊಳ್ಳಬೇಕಿದೆ ಮೇಡಂ.. ಚಂದದ ಬರಹ..

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...