ಸುಡಾನ್ನಲ್ಲಿ ಸೇನಾಪಡೆ ಹಾಗೂ ಅರೆ ಸೇನಾಪಡೆ ನಡುವಿನ ಸಂಘರ್ಷ ನಡೆಯುತ್ತಿದ್ದು, ಇದರಲ್ಲಿ ಭಾರತೀಯರು ಸಿಲುಕಿದ್ದರು. ಅವರನ್ನು ಸುರಕ್ಷಿತ ಸ್ಥಳಾಂತರಕ್ಕೆ ಕೇಂದ್ರ ಸರ್ಕಾರ ಕಾರ್ಯಾಚರಣೆ ನಡೆಸುತ್ತಿದೆ.
ಕರ್ನಾಟಕದ ಹಕ್ಕಿಪಿಕ್ಕಿ ಸಮುದಾಯದವರನ್ನು ಸೇರಿದಂತೆ ಭಾರತೀಯರೆಲ್ಲರನ್ನೂ ಸುರಕ್ಷಿತವಾಗಿ ಕರೆತರಬೇಕು ಎಂದು ಕಾಂಗ್ರೆಸ್ ಪಕ್ಷದ ನಾಯಕರು ಸರ್ಕಾರದ ಮೇಲೆ ಮುಗಿಬಿದ್ದಿದ್ದರು. ಇದೀಗ ಕೇಂದ್ರ ಸರ್ಕಾರ ಮಂಗಳವಾರ ಕರ್ನಾಟಕದವರನ್ನೂ ಸೇರಿದಂತೆ ಭಾರತದ ಹಲವು ಜನರನ್ನು ಕರೆತರುತ್ತಿದ್ದಾರೆ.
ಎಂಟು ದಿನಗಳಿಂದ ಸಂಕಷ್ಟ ಅನುಭವಿಸಿದ್ದ ಕನ್ನಡಿಗರು ಈ ಬೆಳವಣಿಗೆಯಿಂದಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಊಟವಿಲ್ಲದೇ ಪರಿತಪಿಸಿದ್ದವರು ಇದೀಗ ತಾಯ್ನಾಡಿ ತಲುಪಿದ್ದಾರೆ.
ಮಂಗಳವಾರ ಬೆಳಿಗ್ಗೆ ವ್ಯವಸ್ಥೆ ಮಾಡಿದ್ದ ಬಸ್ನಲ್ಲಿ ಪ್ರಯಾಣ ಆರಂಭಿಸಿದ ಸಂದರ್ಭದಲ್ಲಿ ಭಾರತೀಯರು ಹರ್ಷ ವ್ಯಕ್ತಪಡಿಸಿದರು. ”ಸದ್ಯ ನಮ್ಮ ಪ್ರಮಾಣ ಆರಂಭವಾಗಿದೆ. ಸುರಕ್ಷಿತವಾಗಿ ನಮ್ಮನ್ನು ಕರೆದೊಯ್ಯಲಾಗುತ್ತಿದೆ. ಭಾರತಕ್ಕೆ ಯಾವಾಗ ತಲುಪಲಿದ್ದೇವೆ ಎಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ” ಎಂದು ಹೇಳಿದ್ದರು.
ಇದನ್ನೂ ಓದಿ: ಸುಡಾನ್ ಸಂಘರ್ಷ: ಕರ್ನಾಟಕದ ಹಕ್ಕಿಪಿಕ್ಕಿ ಜನರ ರಕ್ಷಣೆಗಾಗಿ ಕೇಂದ್ರದ ವಿರುದ್ಧ ಕಿಡಿಕಾರಿದ ಕಾಂಗ್ರೆಸ್
ಮೂರನೇ ಬ್ಯಾಚ್ನಲ್ಲಿ 135 ಜನರು ಭಾರತದ ಕಡೆ ಬರುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿ.ಮುರಳೀಧರನ್ ತಿಳಿಸಿದ್ದಾರೆ.
‘ಪೋರ್ಟ್ ಸುಡಾನ್ನಿಂದ 135 ಭಾರತೀಯರನ್ನು ಒಳಗೊಂಡ ಮೂರನೇ ಬ್ಯಾಚ್ IAF C-130J ವಿಮಾನದ ಮೂಲಕ ಜಿದ್ದಾಕ್ಕೆ ಆಗಮಿಸಿದೆ. ಅಲ್ಲಿಂದ ಎಲ್ಲರನ್ನೂ ಭಾರತಕ್ಕೆ ಕರೆತರಲಾಗುವುದು’ ಎಂದು ಟ್ವೀಟ್ ಮಾಡಿದ್ದಾರೆ.
ಈಗಾಗಲೇ ಮೊದಲ ಬ್ಯಾಚ್ನಲ್ಲಿ 278 ಮತ್ತು ಎರಡನೇ ಬ್ಯಾಚ್ನಲ್ಲಿ 121 ಜನರನ್ನು ಭಾರತಕ್ಕೆ ಕರೆತರಲಾಗಿದೆ.
ಸುಡಾನ್ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಆಪರೇಷನ್ ಕಾವೇರಿ’ ಕಾರ್ಯಾಚರಣೆಗೆ ಸೋಮವಾರ ಚಾಲನೆ ನೀಡಿತ್ತು. ಮೂರು ಸಾವಿರಕ್ಕೂ ಅಧಿಕ ಭಾರತೀಯರು ಅಲ್ಲಿ ಸಿಲುಕಿದ್ದಾರೆ. ಅದರಲ್ಲಿ ಕನ್ನಡಿಗರ ಸಂಖ್ಯೆಯೂ ಹೆಚ್ಚಿದೆ.
ಸಧ್ಯ ಸುಡಾನ್ನಲ್ಲಿ ಕದನವಿರಾಮ ಘೋಷಣೆಯಾಗಿದ್ದರೂ ಯುದ್ಧ ನಿಂತಿಲ್ಲ. ಮಂಗಳವಾರವೂ ಕೆಲವೆಡೆ ಸಂಘರ್ಷ ಮುಂದುವರಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.