ಸಲಿಂಗ ವಿವಾಹಕ್ಕೆ ಮಾನ್ಯತೆ ನಿರಾಕರಿಸಿದ ತೀರ್ಪನ್ನು ಮರು ಪರಿಶೀಲಿಸಲು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿದೆ. ನವೆಂಬರ್ 28ರಂದು ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹಾಗೂ ಮತ್ತಿಬ್ಬರು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠದ ಮುಂದೆ ಅರ್ಜಿದಾರರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟಗಿ ವಿಷಯ ಪ್ರಸ್ತಾಪಿಸಿದ್ದಾರೆ.
ಸಲಿಂಗ ವಿವಾಹದ ಬಗ್ಗೆ ಅನೇಕರಿಗೆ ಒಲವು ಇದೆ. ಅನೇಕರು ಇದನ್ನು ಅವಲಂಬಿಸಿದ್ದಾರೆ. ಈ ಹಿಂದೆ ತೀರ್ಪು ನೀಡಿದ್ದ ಪೀಠ (ಸಾಂವಿಧಾನಿಕ ಪೀಠ) ದ ಎಲ್ಲಾ ನ್ಯಾಯಾಧೀಶರು ತಾರತಮ್ಯ ಅಥವಾ ತಪ್ಪಿದೆ ಎಂದು ಒಪ್ಪಿಕೊಂಡಿದ್ದಾರೆ. ತಾರತಮ್ಯ ಇದ್ದರೆ ಅದನ್ನು ಪರಿಹಾರ ಮಾಡಬೇಕು ಎಂದು ಮುಕುಲ್ ರೋಹಟಗಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ತೆರೆದ ನ್ಯಾಯಾಲಯದ ವಿಚಾರಣೆಗೂ ಮುಕುಲ್ ರೋಹಟಗಿ ಮನವಿ ಮಾಡಿದ್ದಾರೆ. ಈ ವಿಷಯವನ್ನು ನವೆಂಬರ್ 28ಕ್ಕೆ ವಿಚಾರಣೆಗೆ ಪಟ್ಟಿ ಮಾಡಲಾಗಿದೆ. ಅದನ್ನು ನೋಡಿಕೊಂಡು ತೀರ್ಮಾನಿಸುವುದಾಗಿ ಪೀಠ ಹೇಳಿದೆ.
ಅಕ್ಟೋಬರ್ 17ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ವಿಶೇಷ ವಿವಾಹ ಕಾಯ್ದೆಯಡಿ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಲು ನಿರಾಕರಿಸಿತ್ತು.
ಇದನ್ನೂ ಓದಿ : 142 ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಪ್ರಾಂಶುಪಾಲನ ಬಂಧನ