ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಹೊಸ ಐಟಿ ನಿಯಮಗಳನ್ನು ಪ್ರಶ್ನಿಸಿ ದೆಹಲಿ ಹಾಗೂ ಕೇರಳ ಹೈಕೋರ್ಟ್ನಲ್ಲಿ ಅರ್ಜಿಗಳು ವಿಚಾರಣೆಗೆ ಬಂದಿವೆ. ಹೈಕೋರ್ಟ್ಗಳಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ಕೋರಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ದೆಹಲಿ ಮತ್ತು ಕೇರಳ ಹೈಕೋರ್ಟ್ನಲ್ಲಿ ನಡೆಯುತ್ತಿರುವ ಅರ್ಜಿ ವಿಚಾರಣೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಕೆಂದ್ರ ಸರ್ಕಾರಕ್ಕೆ ಹೆಳಿದೆ.
ಜಸ್ಟಿಸ್ ಎ.ಎಮ್ ಖಾನ್ವಿಲ್ಕರ್ ಮತ್ತು ಜಸ್ಟಿಸ್ ಸಂಜಯ್ ಖನ್ನಾ ಅವರಿದ್ದ ಪೀಠ ಇಂದು ಸರ್ಕಾರದ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿತು ಮತ್ತು ಯಾವುದೇ ಆದೇಶವನ್ನು ನೀಡಲಿಲ್ಲ. ಬದಲಾಗಿ ಕೇಂದ್ರದ ಮನವಿಯನ್ನು ವಿಶೇಷ ಅರ್ಜಿಯಾಗಿ ವರ್ಗಾಯಿಸಿತು.
ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಹೈಕೋರ್ಟ್ಗಳು ಬೇರೆ ಆದೇಶವನ್ನು ನೀಡಿದರೆ ಆಡಳಿತಾತ್ಮಕ ಗೊಂದಲಗಳು ಉಂಟಾಗುತ್ತವೆ. ಹೈಕೋರ್ಟ್ಗಳಲ್ಲಿ ದಾಖಲಾಗಿರುವ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ಗೆ ವರ್ಗಾಯಿಸಬೇಕೆಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು. ಮೆಹ್ತಾ ಅವರ ವಾದಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡದ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಜುಲೈ 16 ಕ್ಕೆ ಮುಂದೂಡಿತು.
ಕೇಂದ್ರ ಸರ್ಕಾರ 2021 ರಲ್ಲಿ ಹೊಸದಾಗಿ ಜಾರಿಗೆ ತಂದಿರುವ ಐಟಿ ನಿಯಮಾವಳಿಗಳ ಸಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ವೈರ್, ಆಲ್ಟ್ ನ್ಯೂಸ್, ಲೈವ್ ಲಾ, ದಿ ನ್ಯೂ ಮಿನಿಟ್ಸ್, ಮತ್ತು ಕ್ವಿಂಟ್ ಸುದ್ದಿ ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿವೆ.
ಓಟಿಟಿ ಫ್ಲಾಟ್ಫಾರ್ಮ್ ನಿಯಂತ್ರಣಕ್ಕೆ ಮುಂದಾಗಿರುವ ಐಟಿ ನಿಯಾಮವಳಿಗಳನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ನಲ್ಲಿಯೂ ಈಗಾಗಲೇ ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ: ಹೊಸ ಐಟಿ ನಿಯಮ: ಏಪ್ರಿಲ್ನಲ್ಲಿ 59,350 ಕಂಟೆಂಟ್ಗಳನ್ನು ಕಿತ್ತು ಹಾಕಿದ ಗೂಗಲ್!