ಗುಜರಾತ್ನ ಸೂರತ್ನಲ್ಲಿ ವಿಶ್ವದ ಅತೀ ದೊಡ್ಡ ಕಚೇರಿ ಕಟ್ಟಡ ‘ಸೂರತ್ ಡೈಮಂಡ್ ಬೋರ್ಸ್’ (ಎಸ್ಡಿಬಿ) ಅನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದ್ದಾರೆ. ಇದು ಅಂತಾರಾಷ್ಟ್ರೀಯ ವಜ್ರ ಮತ್ತು ಆಭರಣ ವ್ಯವಹಾರದ ಅತಿ ದೊಡ್ಡ ಕೇಂದ್ರ ಎನ್ನಲಾಗಿದೆ.
ಆದರೆ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ಸಿಪಿ) ನಾಯಕ ಶರದ್ ಪವಾರ್ ಅವರು ಮೋದಿ ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ. ಮುಂಬೈನಿಂದ ಸೂರತ್ಗೆ ವಜ್ರ ವ್ಯವಹಾರ ಕೇಂದ್ರ ಸ್ಥಳಾಂತರಿಸಿರುವುದನ್ನು ಅವರು ವಿರೋಧಿಸಿದ್ದಾರೆ.
ಮಹಾರಾಷ್ಟ್ರದ ರಾಯಗಢದಲ್ಲಿ ಆಯೋಜಿಸಿದ್ದ ಎನ್ಸಿಪಿಯ ಸ್ವಾಭಿಮಾನ ಸಭೆಯಲ್ಲಿ ಮಾತನಾಡಿದ ಪವಾರ್, ಈ ಮೊದಲು ವಜ್ರದ ವ್ಯಾಪಾರವು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ನಡೆಯುತ್ತಿತ್ತು. ಅದನ್ನು ಅಲ್ಲಿಂದ ಗುಜರಾತ್ಗೆ ಸ್ಥಳಾಂತರಿಸಲಾಗಿದೆ. ಇಂದು ಅಧಿಕಾರದಲ್ಲಿರುವವರಿಗೆ ದೇಶದ ಬಗ್ಗೆ ಯೋಚಿಸುವ ಶಕ್ತಿ ಇಲ್ಲ ಎಂದಿದ್ದಾರೆ.
ವಜ್ರದ ವ್ಯಾಪಾರವು ಸೂರತ್ಗೆ ಸ್ಥಳಾಂತರಗೊಳ್ಳುವುದರಿಂದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಮುಂಬೈ ಮಾರುಕಟ್ಟೆಯಿಂದ ಲಕ್ಷಗಟ್ಟಲೆ ಜನರಿಗೆ ಉದ್ಯೋಗ ಸಿಕ್ಕಿತ್ತು. ಸೂರತ್ಗೆ ವಜ್ರದ ವ್ಯಾಪಾರ ಸ್ಥಳಾಂತರವಾಗುವುದರಿಂದ ಸ್ಥಳೀಯರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಶರದ್ ಪವಾರ್ ಹೇಳಿದ್ದಾರೆ.
ನೈನಾ ಯೋಜನೆಯಿಂದಾಗಿ (ನವಿ ಮುಂಬೈ ವಿಮಾನ ನಿಲ್ದಾಣದ ಅಧಿಸೂಚಿತ ಪ್ರದೇಶ) ರೈತರ ಉದ್ಯೋಗ, ಸಂಪನ್ಮೂಲಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಇದೇ ವೇಳೆ ಶರದ್ ಪವಾರ್ ಕಿಡಿಕಾರಿದ್ದಾರೆ.
ಸೂರತ್ನ ಖಾಜೋದ್ ಪ್ರದೇಶದಲ್ಲಿ ನಿರ್ಮಿಸಲಾದ ‘ಸೂರತ್ ಡೈಮಂಡ್ ಬೋರ್ಸ್’ ರಾಜ್ಯ ಮತ್ತು ದೇಶದ ಆರ್ಥಿಕ ಅಭಿವೃದ್ಧಿಗೆ ಹೊಸ ಮೈಲಿಗಲ್ಲು ಆಗಲಿದೆ ಎಂದು ಹೇಳಲಾಗಿದೆ.
ವಿಶ್ವದ ಅತಿದೊಡ್ಡ ಕಾರ್ಪೋರೇಟ್ ಕಟ್ಟಡವಾದ ಡೈಮಂಡ್ ಬೋರ್ಸ್ ಅನ್ನು3,400 ಕೋಟಿ ರೂಪಾಯಿ ವೆಚ್ಚದಲ್ಲಿ ಸೂರತ್ನ 35.54 ಎಕರೆ ಜಾಗದಲ್ಲಿ ನಿರ್ಮಿಸಲಾಗಿದೆ. ಇದು ಒರಟು ಮತ್ತು ಪಾಲಿಶ್ ಮಾಡಿದ ವಜ್ರದ ವ್ಯಾಪಾರಕ್ಕೆ ಜಾಗತಿಕ ಕೇಂದ್ರವಾಗಲಿದೆ. ಇದರಿಂದ 1.5 ಲಕ್ಷ ಜನರಿಗೆ ಉದ್ಯೋಗವಕಾಶ ಸಿಗಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ : ಧಾರಾವಿ ಪುನರಾಭಿವೃದ್ಧಿ ಯೋಜನೆ ಅದಾನಿ ತೆಕ್ಕೆಗೆ: ಭುಗಿಲೆದ್ದ ಪ್ರತಿಭಟನೆ