ತಮಿಳುನಾಡಿನ ಸೇಲಂನ ಪೆರಿಯಾರ್ ವಿಶ್ವವಿದ್ಯಾನಿಲಯದ ಉಪಕುಲಪತಿ, ಕೃಷಿ ತಜ್ಞ, ಲೇಖಕ ಆರ್ ಜಗನ್ನಾಥನ್ ಅವರನ್ನು ವಂಚನೆ ಆರೋಪದ ಮೇಲೆ ಕರುಪ್ಪೂರ್ ಪೊಲೀಸರು ಬಂಧಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ ಜಗನ್ನಾಥನ್ ಅವರ ಬಂಧನ ನಿನ್ನೆ ನಡೆದಿದ್ದು, ವಿಶ್ವವಿದ್ಯಾನಿಲಯದ ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹಲವಾರು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಮತ್ತು ವಂಚನೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅವರ ಮೇಲೆ ಆರೋಪಿಸಲಾಗಿದೆ.
ಉಪಕುಲಪತಿಯಾಗಿ ಅಧಿಕಾರದಲ್ಲಿದ್ದಾಗ ಅವರು ತಮ್ಮ ಸಹಚರರೊಂದಿಗೆ ನಡೆಸುತ್ತಿರುವ ಖಾಸಗಿ ಕಂಪನಿಗೆ ಸಹಾಯ, ಉಪಕುಲಪತಿ ಹುದ್ದೆಯ ದುರ್ಬಳಕೆ ಮತ್ತು ತಮ್ಮ ಖಾಸಗಿ ಕಂಪನಿಯನ್ನು ನಿರ್ವಹಿಸಲು ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡರು ಎಂದು ಕೂಡ ಆರೋಪಿಸಲಾಗಿದೆ.
ವಿಶ್ವವಿದ್ಯಾನಿಲಯದಲ್ಲಿ ನೌಕರರ ಸಂಘದ ಕಾನೂನು ಸಲಹೆಗಾರರಾಗಿರುವ ಇಳಂಗೋವನ್ ಅವರು ನೀಡಿದ ದೂರಿನ ಆಧಾರದ ಮೇಲೆ ಕರುಪ್ಪೂರು ಪೊಲೀಸರು ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಸಂಜೆ ವಿ.ವಿ ಆವರಣದಿಂದ ಅವರನ್ನು ಬಂಧಿಸಲಾಗಿದೆ ಮತ್ತು ವಿಚಾರಣೆಯೂ ನಡೆಯುತ್ತಿದೆ.
ಕುಲಪತಿ ಅವರು ರಿಜಿಸ್ಟ್ರಾರ್ ಜೊತೆಗೂಡಿ ವಿ.ವಿ ಅನುದಾನವನ್ನು ದುರುಪಯೋಗಪಡಿಸಿಕೊಂಡು, ತಮ್ಮ ಹೆಸರಿನಲ್ಲಿ ಪೆರಿಯಾರ್ ವಿಶ್ವವಿದ್ಯಾಲಯದ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ಸಂಶೋಧನಾ ಪ್ರತಿಷ್ಠಾನ ಸ್ಥಾಪಿಸಿದ್ದಾರೆ ಎಂದು ಕೂಡ ಇಳಂಗೋವನ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಜಗನ್ನಾಥನ್ ಒಬ್ಬ ಕೃಷಿ ತಜ್ಞರಾಗಿದ್ದು, ಅವರು ಒಂದು ಪುಸ್ತಕವನ್ನು ಬರೆದಿದ್ದಾರೆ ಮತ್ತು 55 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಅವರು ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಕೃಷಿಯ ವಿಷಯದಲ್ಲಿ M.Sc ಸ್ನಾತಕೋತ್ತರ ಪದವಿ ಮತ್ತು Ph.D ಪದವಿಯನ್ನು ಪಡೆದಿದ್ದರು. ಅವರು ಈ ಹಿಂದೆ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದಲ್ಲಿ ಅಕಾಡೆಮಿಕ್ ಕೌನ್ಸಿಲ್ ಮತ್ತು ಬೋರ್ಡ್ ಆಫ್ ಸ್ಟಡೀಸ್ನ ಸದಸ್ಯರಾಗಿದ್ದರು ಮತ್ತು ನಾಮಕ್ಕಲ್ನ ಪಾವೈ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿದ್ದರು ಮತ್ತು ಬೋರ್ಡ್ ಆಫ್ ಸ್ಟಡೀಸ್ನ ಅಧ್ಯಕ್ಷರಾಗಿದ್ದರು.
ಅವರು 40 ವರ್ಷಗಳಿಂದ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದು, 2021ರಲ್ಲಿ ಪೆರಿಯಾರ್ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾಗಿ ನೇಮಕಗೊಂಡಿದ್ದರು. ಸೇಲಂನ ಪೆರಿಯಾರ್ ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಿ ಜಗನ್ನಾಥನ್ ಅವರನ್ನು ಅಂದಿನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ನೇಮಕ ಮಾಡಿದ್ದರು. ಅವರು ಈ ಹಿಂದೆ ಕೊಯಮತ್ತೂರಿನ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದಲ್ಲಿ ಡೀನ್ ಆಗಿ ಕೂಡ ಕೆಲಸವನ್ನು ನಿರ್ವಹಿಸಿದ್ದರು.
ಇದನ್ನು ಓದಿ: ರಾಮ ಮಂದಿರ ಉದ್ಘಾಟನಾ ಸಮಾರಂಭದ ಆಹ್ವಾನ ತಿರಸ್ಕರಿಸಿದ ಸಿಪಿಐ(ಎಂ)