ಮಹಾರಾಷ್ಟ್ರದ ರಾಜಕೀಯ ನಾಟಕೀಯ ಬೆಳವಣಿಗೆಗಳು ಇನ್ನು ನಿಂತಿಲ್ಲ. ಇಂದು ಮಧ್ಯಾಹ್ನ ಆರಂಭವಾಗಿ ವಿಶ್ವಾಸಮತ ಯಾಚನೆಗಾಗಿನ ಸದನದಲ್ಲಿ ಆರಂಭದಲ್ಲಿಯೇ ಉದ್ಧವ್ ಠಾಕ್ರೆ ವಿಶ್ವಾಸಮತ ಯಾಚನೆಗೆ ಬಿಜೆಪಿ ಅಡ್ಡಿಪಡಿಸಿದೆ. ಮಾಜಿ ಮುಖ್ಯಮಂತ್ರಿ ದೇವೇಂದ್ರ ಪಢ್ನವಿಸ್ ಮಹಾ ವಿಕಾಸ್ ಅಘಾಡಿ ಒಕ್ಕೂಟವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಹಾರಾಷ್ಟ್ರದ ಹಂಗಾಮಿ ತಾತ್ಕಾಲಿಕ ಸ್ಪೀಕರ್ ಆಗಿ ಎನ್ಸಿಪಿಯ ದಿಲಿಪ್ ಪಾಟೀಲ್ ರವರನ್ನು ನೇಮಕ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದೇವೇಂದ್ರ ಫಡ್ನವಿಸ್, ಹಂಗಾಮಿ ತಾತ್ಕಾಲಿಕ ಸ್ಪೀಕರ್ ಅನ್ನು ಕಾನೂನುಬಾಹಿರವಾಗಿ ಬದಲಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಹಂಗಾಮಿ ತಾತ್ಕಾಲಿಕ ಸ್ಪೀಕರ್ ಅನ್ನು ಬದಲಿಸುವ ಕ್ರಿಯೆ ಕಾನೂನುಬಾಹಿರ ಮತ್ತು ಇತಿಹಾಸದಲ್ಲಿ ಎಂದಿಗೂ ಸಂಭವಿಸಿಲ್ಲ ಎಂದ ಅವರು, “ಠಾಕ್ರೆ ಕ್ಯಾಬಿನೆಟ್ ಪ್ರಮಾಣವಚನ ಸ್ವೀಕರಿಸುವುದು ಸಂವಿಧಾನದ ನಿಬಂಧನೆಗಳ ಪ್ರಕಾರ ಇರಲಿಲ್ಲ” ಎಂದು ಆರೋಪಿಸಿದ್ದಾರೆ.
ಹಂಗಾಮಿ ಸ್ಪೀಕರ್ ದಿಲಿಪ್ ಪಾಟೀಲ್ “ಸುಪ್ರೀಂ ಕೋರ್ಟ್ನ ಆದೇಶದ ಪ್ರಕಾರ ಸದನದ ಮುಂದುವರಿಕೆಯನ್ನು ನೇರ ಪ್ರಸಾರ ಮಾಡಲಾಗುತ್ತಿದೆ. ಸದನದ ಘನತೆಯನ್ನು ಕಾಪಾಡಿಕೊಳ್ಳಲು ಸದಸ್ಯರನ್ನು ಕೋರಲಾಗಿದೆ” ಎಂದು ಹೇಳಿದ್ದಾರೆ.
“ಮಧ್ಯರಾತ್ರಿಯಲ್ಲಿ ಅಧಿವೇಶನದ ಬಗ್ಗೆ ನಮಗೆ ಮಾಹಿತಿ ನೀಡಲಾಯಿತು. ನಮ್ಮ ಸದಸ್ಯರನ್ನು ದೂರವಿಡಲು ಸರ್ಕಾರ ಬಯಸಿದೆ” ಎಂದು ಫಡ್ನವೀಸ್ ಮತ್ತೆ ದೂರಿದರು. ವಿಶೇಷ ಅಧಿವೇಶನವು ಸಾಂವಿಧಾನಿಕ ಕಾರ್ಯವಿಧಾನಕ್ಕೆ ಅನುಗುಣವಾಗಿಲ್ಲ ಎಂದು ಮಾಜಿ ಸಿಎಂ ಫಡ್ನವೀಸ್ ಹೇಳಿ ಸದನದಿಂದ ಪದಾತ್ಯಾಗ ಮಾಡಿದರು. ಜೊತೆಗೆ ಬಿಜೆಪಿ ಶಾಸಕರು ಜೋರಾಗಿ ಗದ್ದಲ ಮಾಡಿ ಪ್ರತಿಭಟನೆ ನಡೆಸಿದರು.