ಡ್ರಾವಿಡ ಮುನ್ನೇಟ್ರಾ ಕಳಗಂ(ಡಿಎಂಕೆ) ಅಧ್ಯಕ್ಷ ಎಂ.ಕೆ. ಸ್ಟಾಲಿನ್ ತಮಿಳುನಾಡು ಮುಖ್ಯಮಂತ್ರಿ ಇ. ಪಳನಿಸ್ವಾಮಿ ಅವರಿಗೆ ಪತ್ರ ಬರೆದಿದ್ದು, ಕೇಂದ್ರದ ಕೃಷಿ ಕಾನೂನುಗಳ ವಿರುದ್ದ ನಿರ್ಣಯ ಮಂಡಿಸಲು ವಿಧಾನಸಭೆ ವಿಶೇಷ ಅಧಿವೇಶನ ಕರೆಯಬೇಕು ಎಂದು ಕೋರಿದ್ದಾರೆ.
ರೈತರ ಸಾಲವನ್ನು ಮನ್ನಾ ಮಾಡಿ ವಿದ್ಯುತ್ ಒದಗಿಸುವ ಮೊದಲ ರಾಜ್ಯ ತಮಿಳುನಾಡು ಎಂಬ ಕಾರಣಕ್ಕಾಗಿ, ರಾಜ್ಯವು ಒಗ್ಗೂಡಿ ಅವರೊಂದಿಗೆ ನಿಲ್ಲುವ ಸಮಯ ಬಂದಿದೆ ಎಂದು ಸ್ಟಾಲಿನ್ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕಳಚಿಕೊಳ್ಳುತ್ತಿದೆ NDA ನ ಒಂದೊಂದೇ ಕೊಂಡಿ – BJP ಗೆ ಆಘಾತ ನೀಡಿದ ತಮಿಳುನಾಡು!
“ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ತಮಿಳುನಾಡು ಅಸೆಂಬ್ಲಿಯಲ್ಲಿ ನಿರ್ಣಯವನ್ನು ಅಂಗೀಕರಿಸಬೇಕಾಗಿದೆ. ಅದಕ್ಕಾಗಿ ವಿಧಾನಸಭೆಯನ್ನು ತಕ್ಷಣವೇ ಕರೆಯಬೇಕು. ತಮಿಳುನಾಡು ರೈತರಿಗೆ ಸಾಲ ಮನ್ನಾ ಮತ್ತು ಉಚಿತ ವಿದ್ಯುತ್ ಒದಗಿಸುವ ಮೊದಲ ರಾಜ್ಯವಾಗಿದೆ. ಇಂತಹ ನಿರ್ಣಾಯಕ ಘಟ್ಟದಲ್ಲಿ ಯಾವುದೇ ಭೇದವಿಲ್ಲದೆ ರೈತರೊಂದಿಗೆ ನಿಂತು ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸುವುದು ಕಡ್ಡಾಯವಾಗಿದೆ” ಎಂದು ಪತ್ರದಲ್ಲಿ ಸ್ಟಾಲಿನ್ ತಿಳಿಸಿದ್ದಾರೆ.
ಇತ್ತೀಚೆಗೆ, ಕೇರಳ ಕೂಡ ಕೃಷಿ ಕಾನೂನುಗಳ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದೆ ಎಂದು ಸ್ಟಾಲಿನ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೂ ಮೊದಲು ಡಿಸೆಂಬರ್ 18 ರಂದು ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರ ಬೆಂಬಲವಾಗಿ ಚೆನ್ನೈನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಆಚರಿಸಿದ್ದವು.
ಇದನ್ನೂ ಓದಿ: ತಮಿಳುನಾಡು: ರೈತ ಹೊರಾಟವನ್ನು ಬೆಂಬಲಿಸಿ ಉಪವಾಸ ಸತ್ಯಾಗ್ರಹ ಕೈಗೊಂಡ ಡಿಎಂಕೆ