ಭಾರತದ ಅತಿದೊಡ್ಡ ಐಟಿ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ನ ನೇಮಕಾತಿ ಹಗರಣದ ವಿವರವಾದ ತನಿಖೆಯ ನಂತರ ಕಂಪೆನಿಯು 16 ಉದ್ಯೋಗಿಗಳನ್ನು ವಜಾ ಮಾಡಿದೆ ಮತ್ತು ಮೂವರನ್ನು ಸಂಪನ್ಮೂಲ ನಿರ್ವಹಣೆ ಕಾರ್ಯಗಳಿಂದ ವಿಮುಕ್ತಿಗೊಳಿಸಲಾಗಿದೆ. ಜೊತೆಗೆ ಆರು ಮಾರಾಟಗಾರರನ್ನು ಕಂಪನಿಯೊಂದಿಗೆ ಯಾವುದೇ ಹೆಚ್ಚಿನ ವ್ಯವಹಾರವನ್ನು ನಡೆಸದಂತೆ ನಿರ್ಬಂಧ ವಿಧಿಸಿದೆ.
ನಮ್ಮ ತನಿಖೆಯ ವೇಳೆ ಅಕ್ರಮದಲ್ಲಿ 19 ಉದ್ಯೋಗಿಗಳು ಭಾಗಿಯಾಗಿರುವುದು ಕಂಡುಬಂದಿದೆ ಮತ್ತು ಎಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಗಾಗಿ 16 ಉದ್ಯೋಗಿಗಳನ್ನು ಕಂಪನಿಯಿಂದ ತೆಗೆದುಹಾಕಲಾಗಿದೆ ಮತ್ತು ಮೂವರು ಉದ್ಯೋಗಿಗಳನ್ನು ಸಂಪನ್ಮೂಲ ನಿರ್ವಹಣೆ ಕಾರ್ಯದಿಂದ ವಿಮುಕ್ತಿಗೊಳಿಸಲಾಗಿದೆ ಎಂದು ಟಿಸಿಎಸ್ ತಿಳಿಸಿದೆ.
ಇದಲ್ಲದೆ 6 ಮಾರಾಟ ಘಟಕಗಳು, ಅವುಗಳ ಮಾಲೀಕರು ಮತ್ತು ಅಂಗಸಂಸ್ಥೆಗಳು TCS ನೊಂದಿಗೆ ಯಾವುದೇ ವ್ಯವಹಾರವನ್ನು ಮಾಡದಂತೆ ನಿರ್ಬಂಧಿಸಿದೆ ಎಂದು ಹೇಳಿಕೆಯಲ್ಲಿ ಟಿಸಿಎಸ್ ತಿಳಿಸಿದೆ.
ಕೆಲವು ಹಿರಿಯ ಸಿಬ್ಬಂದಿಗಳು, ಉದ್ಯೋಗ ನೀಡಲು ಸಿಬ್ಬಂದಿ ನೇಮಕಾತಿ ಸಂಸ್ಥೆಗಳಿಂದ ಲಂಚವನ್ನು ಸ್ವೀಕರಿಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ನಂತರ ಕಂಪನಿಯು ಆರೋಪಗಳ ಕುರಿತು ತನಿಖೆ ನಡೆಸಲು ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ ಅಜಿತ್ ಮೆನನ್ ಅವರನ್ನು ಒಳಗೊಂಡ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು.
ಟಿಸಿಎಸ್ ಚೀಫ್ ಎಕ್ಸಿಕ್ಯೂಟಿವ್ ಕೆ.ಕೃತಿವಾಸನ್ ಈ ಕುರಿತು ಮಾತನಾಡಿದ್ದು, ಉದ್ಯೋಗಿಗಳ ವಿರುದ್ಧ ಕೈಗೊಂಡ ತನಿಖೆಯು ಮುಗಿದಿದೆ. ಸಮಗ್ರ ತನಿಖೆಯ ಬಳಿಕ ಉದ್ಯೋಗಿಗಳು ಹಗರಣದಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ. ಕಂಪನಿಯ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಕೆಲ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಇಲ್ಲಿಗೆ ಪ್ರಕರಣ ಅಂತ್ಯವಾಗಿದೆ ಎಂದು ಹೇಳಿದ್ದಾರೆ.
ಟಿಸಿಎಸ್ನಂತಹ ಐಟಿ ಕಂಪನಿಗಳು ಸಾಮಾನ್ಯವಾಗಿ ಸಿಬ್ಬಂದಿಯನ್ನು ಉದ್ಯೋಗಿಗಳ ರೆಫರಲ್ ಪ್ರೋಗ್ರಾಂ ಹಾಗೂ ಸಿಬ್ಬಂದಿ ಸಂಸ್ಥೆಗಳ ಮೂಲಕ ನೇಮಕ ಮಾಡಿಕೊಳ್ಳುತ್ತವೆ. ಈ ಸಂಸ್ಥೆಗಳು ಕಂಪನಿಗಳಿಗೆ ಅಭ್ಯರ್ಥಿಗಳ ಪಟ್ಟಿಗಳನ್ನು ಒದಗಿಸುತ್ತವೆ. ಇದಾದ ನಂತರ ಕಂಪನಿಗಳು ಪರೀಕ್ಷೆಗಳು ಅಥವಾ ಸಂದರ್ಶನಗಳನ್ನು ನಡೆಸಿ ನಂತರ ಅವುಗಳ ಅಗತ್ಯಕ್ಕೆ ಅನುಗುಣವಾಗಿ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುತ್ತವೆ.
ಇದನ್ನು ಓದಿ: UAPAಯಡಿ ಬಂಧನ ಪ್ರಶ್ನಿಸಿ ನ್ಯೂಸ್ ಕ್ಲಿಕ್ ಸಂಸ್ಥಾಪಕ ಸುಪ್ರೀಂ ಮೊರೆ