Homeಕರ್ನಾಟಕರೋಹಿತ್ ಚಕ್ರತೀರ್ಥ ಸಮಿತಿ ಪಠ್ಯ ಪರಿಷ್ಕರಣೆ ಸಂವಿಧಾನ ವಿರೋಧಿ ಕೆಲಸ ಏಕೆಂದರೆ....

ರೋಹಿತ್ ಚಕ್ರತೀರ್ಥ ಸಮಿತಿ ಪಠ್ಯ ಪರಿಷ್ಕರಣೆ ಸಂವಿಧಾನ ವಿರೋಧಿ ಕೆಲಸ ಏಕೆಂದರೆ….

- Advertisement -
- Advertisement -

ಕರ್ನಾಟಕ ಸರಕಾರ ಪಠ್ಯಪುಸ್ತಕಗಳನ್ನು ಅಕ್ರಮವಾಗಿ ಪರಿಷ್ಕರಿಸಲು ಅನುವು ಮಾಡಿಕೊಟ್ಟಿರುವುದು ಮತ್ತು ಆ ಅಕ್ರಮಗಳನ್ನು ಈಗ ಸಕ್ರಮಗೊಳಿಸಲು ಮುಂದಾಗಿರುವುದು ಇತ್ಯಾದಿಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದರೆ ಇಡೀ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸಂವಿಧಾನವನ್ನು ಅಪ್ರಸ್ತುತಗೊಳಿಸಲು ನಡೆಯುತ್ತಿರುವ ಹುನ್ನಾರದ ಭಾಗವಾಗಿ ಕಾಣಿಸುತ್ತದೆ. ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ಅನುಸರಿಸಿದ ಮಾರ್ಗ, ಪರಿಷ್ಕರಣೆ ಮಾಡಲು ಸರಕಾರ ಆರಿಸಿಕೊಂಡ ವ್ಯಕ್ತಿಗಳ ಹಿನ್ನೆಲೆ ಮತ್ತು ಪರಿಷ್ಕರಣೆಯ ಹೆಸರಿನಲ್ಲಿ ಪಠ್ಯಗಳಲ್ಲಿ ಮಾಡಿದ ಬದಲಾವಣೆಗಳು ಇತ್ಯಾದಿಗಳೆಲ್ಲವೂ ಒಂದಲ್ಲಒಂದು ರೀತಿಯಲ್ಲಿ ಸಂವಿಧಾನವನ್ನು ಅಣಕಿಸುವ ವಿಚಾರಗಳೇ ಆಗಿವೆ.

ಎಲ್ಲದಕ್ಕಿಂತಲೂ ಮುಖ್ಯವಾಗಿರುವ ಸಂವಿಧಾನ ವಿರೋಧಿ ನಡೆ ಎಂದರೆ ಹತ್ತನೆಯ ತರಗತಿಯ ಪರಿಷ್ಕೃತ ಕನ್ನಡ ಪಠ್ಯದಲ್ಲಿ ಆರ್.ಎಸ್.ಎಸ್ ಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್ ಅವರ ಭಾಷಣದ ಬರಹರೂಪವನ್ನು ಸೇರಿಸಿರುವುದು. ಉಳಿದ ಬದಲಾವಣೆಗಳೆಲ್ಲಾ ಮುನ್ನೆಲೆಗೆ ಬಂದಿರುವ ಕಾರಣ ಈ ಸೇರ್ಪಡೆಯ ಬಗ್ಗೆ ನಡೆಯಬೇಕಾಗಿರುವಷ್ಟು ಚರ್ಚೆಗಳು ನಡೆಯುತ್ತಿಲ್ಲ. ಅದೇನೇ ಇರಲಿ, ಇದು ಎಲ್ಲದಕ್ಕಿಂತಲೂ ಹೆಚ್ಚು ಗಂಭೀರ ವಿಚಾರ.

ಹತ್ತನೆಯ ತರಗತಿಯ ಪರಿಷ್ಕೃತ ಕನ್ನಡ ಪಠ್ಯಪುಸ್ತಕವನ್ನು ಊಹಿಸಿಕೊಳ್ಳಿ. ಮಕ್ಕಳು ಪುಸ್ತಕ ತೆರೆದಾಗ ಮೊದಲಿಗೆ ಕಾಣಿಸಿಕೊಳ್ಳುವುದು ಸಂವಿಧಾನದ ಪ್ರಸ್ತಾವನೆ. ಮುಂದಿನ ಪುಟದಲ್ಲಿ ಸಾಮಾನ್ಯವಾಗಿ ಎಲ್ಲಾ ಪಠ್ಯಪುಸ್ತಕಗಳಲ್ಲೂ ಇರುವಂತೆ ಸಂವಿಧಾನ-ಪ್ರಣೀತ ಪ್ರತಿಜ್ಞೆ ಕಾಣಿಸಿಕೊಳ್ಳಬಹುದು – ಭಾರತವು ನನ್ನ ದೇಶ. ಭಾರತೀಯರೆಲ್ಲರೂ ನನ್ನ ಸಹೋದರ ಸಹೋದರಿಯರು. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ ಮತ್ತು ಅದರ ಶ್ರೀಮಂತ ಮತ್ತು ವಿಭಿನ್ನ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತೇನೆ… ಪುಟ ತಿರುಗಿಸುತ್ತಾ ಹೋದಂತೆ ಓದಲು ಸಿಗುವುದು ಅರ್.ಎಸ್.ಎಸ್ ಸಂಸ್ಥಾಪಕರ ಭಾಷಣದ ಪಠ್ಯ! ದೇಶದ ಪಠ್ಯಪುಸ್ತಕಗಳ ಚರಿತ್ರೆಯಲ್ಲೇ
ಇದಕ್ಕಿಂತ ದೊಡ್ಡ ವಿರೋಧಾಭಾಸ ಎಂದೂ ಕಾಣಿಸಿರಲಾರದು. ಆರ್.ಎಸ್.ಎಸ್ ಒಂದು ದೇಶಭಕ್ತ ಸಂಘಟನೆ ಆಗಿರುವಾಗ, ಅದರ ಸ್ಥಾಪಕರ ಭಾಷಣವನ್ನು ಪಠ್ಯದಲ್ಲಿ ಸೇರಿಸಿದರೆ ತಪ್ಪೇನು ಅಂತ ಹಲವಾರು ವಾದಿಸುತ್ತಿದ್ದಾರೆ. ಮೇಲ್ನೋಟಕ್ಕೆ ಇದು ಸರಿಯಾದ ಪ್ರಶ್ನೆ ಆತನ ಅನ್ನಿಸಬಹುದು. ಆದರೆ ವಿಷಯ ಅಷ್ಟೊಂದು ಸಲೀಸಾಗಿಲ್ಲ.

ಅರ್.ಎಸ್.ಎಸ್ ದೇಶಭಕ್ತ ಸಂಘಟನೆಯೇ ಇರಬಹುದು. ಆದರೆ ಆರ್.ಎಸ್.ಎಸ್‌ನವರಿಗೆ ಭಕ್ತಿ ಇರುವುದು ಅವರ ಕಲ್ಪನೆಯ ಭಾರತದ ಮೇಲೆಯೇ ಹೊರತು ಸಂವಿಧಾನದ ಮೂಲಕ ’ಭಾರತದ ಜನರಾದ ನಾವು (We the People) ರೂಪಿಸಿದ ದೇಶದ ಮೇಲಲ್ಲ. ಸಂವಿಧಾನವನ್ನು ಸಂಘ ಎಷ್ಟರಮಟ್ಟಿಗೆ ಒಪ್ಪಿದೆ ಎನ್ನುವುದರ ಬಗ್ಗೆ ಗೊಂದಲವಿದೆ. ಆ ಸಂಘಟನೆಯನ್ನು ಕಾಲಕಾಲಕ್ಕೆ ಮುನ್ನಡೆಸಿದವರು ಈ ದೇಶದ ಸಂವಿಧಾನವನ್ನು ಖಂಡಿಸಿದ್ದಾರೆ, ದೇಶದ ಜನ ವಿವಿಧ ರಾಜ್ಯಗಳ ನೆಲ-ಜಲ-ಭಾಷೆಗಳಿಗೆ ಬದ್ಧರಾಗಿರುವುದನ್ನು ವಿರೋಧಿಸಿದ್ದಾರೆ, ಅರ್ಥಾತ್ ಒಕ್ಕೂಟ ವ್ಯವಸ್ಥೆಯ ಬಗ್ಗೆ ಅವರಿಗೆ ವಿರೋಧವಿದೆ. ಸಂವಿಧಾನ ಸಾರುವ ಸಮಾನತೆಯ ಬಗ್ಗೆ ಅವರಿಗೆ ಒಲವಿಲ್ಲ. ಸಂವಿಧಾನ ಎತ್ತಿಹಿಡಿಯುವ ಧರ್ಮನಿರಪೇಕ್ಷತೆಯ ನೆರಳು ಕಂಡರೆ ಅವರಿಗೆ ಆಗುವುದಿಲ್ಲ. ಸಂವಿಧಾನದ ಜೀವಾಳವಾದ ಬಹುತ್ವ ಅವರಿಗೆ ಕೂಡಿ ಬರುವುದಿಲ್ಲ. ಹೀಗೆ ಸಂವಿಧಾನದ ಮೌಲ್ಯಗಳ ಬಗ್ಗೆ ಮೂಲಭೂತ ಸಹಮತವೇ ಇಲ್ಲದ ಸಂಘಟನೆಯೊಂದರ ಸಂಸ್ಥಾಪಕರ ಬರೆಹವನ್ನು ಪಠ್ಯಪುಸ್ತಕಕ್ಕೆ ಸೇರಿಸುವ ಮೂಲಕ ಸರಕಾರ ಏನು ಮಾಡಲು ಹೊರಟಿದೆ? ಸಂವಿಧಾನದ ಪ್ರಸ್ತುತೆಗೆ ನೇರಾನೇರ ಸವಾಲು ಹಾಕುವಷ್ಟು ಧೈರ್ಯ ಆಳುವ ಪಕ್ಷಕ್ಕೆ ಇಲ್ಲ. ಆದಕಾರಣ ಸಂವಿಧಾನವನ್ನು ಎಂದೂ ಮನಸಾ ಸ್ವೀಕರಿಸದ ಸಂಘಟನೆಯೊಂದರ ಸ್ಥಾಪಕರಿಗೆ ಈ ರೀತಿಯ ಅಧಿಕೃತ ಮಾನ್ಯತೆ ದೊರಕಿಸಿಕೊಡುವ ಮೂಲಕ ಸಂವಿಧಾನವನ್ನು ಪರೋಕ್ಷವಾಗಿ ಅಮಾನ್ಯಗೊಳಿಸುವ ಮತ್ತು ಅವಮಾನಿಸುವ ಹುನ್ನಾರದ ವಾಸನೆ ಇಲ್ಲಿ ಅನುಭವಕ್ಕೆ ಬರುತ್ತದೆ. ಇದರ ಮುಂದುವರಿದ ಭಾಗವಾಗಿಯೇ ’ಅಂಬೇಡ್ಕರ್ ಸಂವಿಧಾನ ಶಿಲ್ಪಿ’ ಎನ್ನುವ ವಾಕ್ಯವನ್ನು ಜಾಣತನದಿಂದ ಕಿತ್ತುಹಾಕಲಾಗಿದೆ. ಒಮ್ಮೆ ಅಂಬೇಡ್ಕರ್ ಮತ್ತು ಸಂವಿಧಾನದ ಅವಿನಾಭಾವ ಸಂಬಂಧವನ್ನು ಜನಮನದಿಂದ ಮಾಸುವ ಹಾಗೆ ಮಾಡಿದರೆ ಮತ್ತೆ ಸಂವಿಧಾನವನ್ನು ಬೇಕಾದಂತೆ ಬದಲಿಸುವುದು ಬಲು ಸುಲಭ.

ಸಂವಿಧಾನ ಪ್ರಜ್ಞೆಗೆ ಪ್ರತಿಯಾಗಿ ಪಠ್ಯಪುಸ್ತಕ ಬದಲಾವಣೆಯ ಹಿನ್ನೆಲೆಯಲ್ಲಿ ಕೆಲಸಮಾಡುತ್ತಿರುವ ಹಿಂದುತ್ವ ಸಂಘಟನೆಗಳು ಬೆಳೆಸುವ ಪ್ರಜ್ಞೆ ಎಂತಹದ್ದಿರಬಹುದು ಎನ್ನುವುದನ್ನು ತಿಳಿಯಲು ಬಹುದೊಡ್ಡ ಸಾಕ್ಷಿ ಎಂದರೆ ಈಗ ವಿವಾದದ ಸುಳಿಯಲ್ಲಿರುವ ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷರು. ಅವರು ನಾಡಗೀತೆಯ ವಿಕಾರ ರೂಪವನ್ನು ಮೆಚ್ಚಿ ಅನುಮೋದಿಸಿದ್ದು, ನಾಡ ಧ್ವಜವನ್ನು ಅವಹೇಳನ ಮಾಡಿದ್ದು, ಬಸವಣ್ಣನವರ ಬಗ್ಗೆ ಹಿಂದಿನ ಪಠ್ಯದಲ್ಲಿದ್ದ ನೈಜ ಚಿತ್ರಣವನ್ನು ಬದಲಿಸಿ ಬಸವಾನುಯಾಯಿಗಳ ಅಸಮಾಧಾನಕ್ಕೆ ಕಾರಣವಾಗುವ ರೀತಿಯ ಪರಿಷ್ಕರಣೆಗಳನ್ನು ಮಾಡಿದ್ದು ಇತ್ಯಾದಿಗಳೆಲ್ಲದರ ಹಿಂದಿನ ಪ್ರೇರಕ ಶಕ್ತಿಯೂ ಆ ಪ್ರಜ್ಞೆ ತಾನೇ? ಹಾಗಾಗಿಯೇ ಸಂವಿಧಾನಕ್ಕೆ ಬದ್ಧರಾಗಿ ಬಹುತ್ವದ ಸಂಸ್ಕೃತಿಯನ್ನು ಆರಾಧಿಸುವವರು ಮತ್ತು ಆ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಬಳವಳಿಯಾಗಿ ನೀಡಬೇಕೆನ್ನುವವರು, ಈಗ ಸಂವಿಧಾನ ಕಿತ್ತೊಗೆಯುವ ಪ್ರಜ್ಞೆಯ ಮೂಲದಲ್ಲಿರುವ ವ್ಯಕ್ತಿಯ ಭಾಷಣ ಪಠ್ಯಪುಸ್ತಕಕ್ಕೆ ಸೇರಿರುವುದರಿಂದ ಆತಂಕಗೊಂಡಿದ್ದಾರೆ.

ಪರಿಷ್ಕೃತ ಪಠ್ಯಪುಸ್ತಕದಲ್ಲಿ ಯಾವುದೇ ಕಾರಣಕ್ಕೂ ಸೇರಬಾರದಾಗಿದ್ದ ಇನ್ನೊಂದು ಪಠ್ಯವಿದೆ. ಅದರ ವಸ್ತು ಏನೇ ಇರಲಿ, ಅದನ್ನು ಬರೆದ ವ್ಯಕ್ತಿಯ ಕಾರಣಕ್ಕಾಗಿ ಅದು ಪಠ್ಯಪುಸ್ತಕದಲ್ಲಿ ಸೇರಬಾರದಿತ್ತು. ಅದನ್ನು ಬರೆದಿರುವುದು ಕರ್ನಾಟಕದಲ್ಲಿ ಪ್ರಸಿದ್ಧ ವಾಗ್ಮಿ ಎಂದು ಗುರುತಿಸಿಕೊಳ್ಳುವ ಓರ್ವ ವ್ಯಕ್ತಿ. ಈ ವಾಗ್ಮಿ ತಮ್ಮ ಸಾರ್ವಜನಿಕ ಭಾಷಣಗಳಲ್ಲಿ ಸುಳ್ಳುಗಳನ್ನು ಹಾಗೂ ತಿರುಚಿದ ಸತ್ಯಗಳನ್ನು ಯಾವುದೇ ರೀತಿಯ ಅಂಜಿಕೆ ಅಳುಕು ಇಲ್ಲದೆ ಪ್ರಚಾರ ಮಾಡುತ್ತಿದ್ದಾರೆ. ಸುಳ್ಳುಗಳನ್ನೇ ಬಳಸಿ ಒಬ್ಬ ನಾಯಕನನ್ನು ಯದ್ವಾತದ್ವಾ ವೈಭವೀಕರಿಸುತ್ತಿದ್ದಾರೆ. ಬಳಸಬಾರದ ಭಾಷೆ ಬಳಸಿ ಮತೀಯ ದ್ವೇಷ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದು ಜನಜನಿತವಾಗಿದೆ. ಇವೆಲ್ಲಾ ಬರೀಯ ಅಪಾದನೆಗಳಲ್ಲ; ಪೂರಕವಾದ ಸಾಕ್ಷಾಧಾರಗಳು ಸಿಗುತ್ತವೆ. ಅವರ ಸುಳ್ಳುಗಳನ್ನೇ ಬಳಸಿಕೊಂಡು ತಮಾಷೆಯ ವಿಡಿಯೋಗಳನ್ನು ಮಾಡಿ ಹಂಚಲಾಗುತ್ತಿದೆ. ಅದಕ್ಕೆಂದೇ ಮೀಸಲಾದ ಯುಟ್ಯೂಬ್ ಗುಂಪುಗಳಿವೆ. ಇಂತಹ ಹಿನ್ನೆಲೆಯುಳ್ಳ ವ್ಯಕ್ತಿಯ ಬರಹವನ್ನು ಪಠ್ಯದಲ್ಲಿ ಸೇರಿಸಿರುವ ಏಕೈಕ ಕಾರಣ ಎಂದರೆ ಅವರು ದೇಶಭಕ್ತಿಯನ್ನು ಪ್ರೇರೇಪಿಸುವ ಭಾಷಣಗಳಿಗೆ ಹೆಸರುವಾಸಿ ಆಗಿದ್ದಾರೆ ಎಂಬುದಂತೆ. ಇಲ್ಲಿ ದೇಶ ಪ್ರೇಮ ಎಂದರೆ ಹಿಂದೂ ರಾಷ್ಟ್ರದ ಪ್ರತಿಪಾದನೆ ಅಥವಾ ಉಗ್ರ ಹಿಂದುತ್ವದ ಪ್ರತಿಪಾದನೆ ಎಂದು ಅರ್ಥ. ಅವರು ಮಾಡುವ ಭಾಷಣಗಳೆಲ್ಲಾ ಬಹುತೇಕ ಈ ರೀತಿಯವುಗಳೇ. ಜನರ ನಡುವೆ ದ್ವೇಷ ಸೃಷ್ಟಿಸುವ, ಜಾಣ ಸುಳ್ಳುಗಳನ್ನು ಬಿತ್ತರಿಸುವ ಮೂಲಕ ಯಾರಾದರೂ ದೇಶ ಪ್ರೇಮವನ್ನು ಸೃಷ್ಟಿಸಲು ಮುಂದಾಗುತ್ತಿದ್ದಾರೆ ಎಂದರೆ ಅವರು ಈ ದೇಶದ ಸಂವಿಧಾನಕ್ಕೆ ಅವಮಾನ ಮಾಡುತ್ತಿದ್ದಾರೆ. ಆದುದರಿಂದ ಅಂತಹ ಹಿನ್ನೆಲೆಯ ವ್ಯಕ್ತಿಯ ಬರಹಗಳನ್ನು ಪಠ್ಯಕ್ಕೆ ಸೇರಿಸುವುದು ಎಂದರೆ ಅದು ಕೂಡಾ ಸಂವಿಧಾನಕ್ಕೆ ಮಾಡುವ ಅವಮಾನ ಅಂತಲೇ ಭಾವಿಸಬೇಕಾಗುತ್ತದೆ.

ಅಕ್ರಮವಾಗಿರಲಿ, ಸಕ್ರಮವಾಗಿರಲಿ. ಪರಿಷ್ಕರಣೆ ಎಂದ ಮೇಲೆ ಕೆಲವೊಂದು ವಿಷಯಗಳನ್ನು ತೆಗೆಯುವುದು, ಕೆಲವೊಂದನ್ನು ಸೇರಿಸಿಕೊಳ್ಳುವುದು ಇದ್ದದ್ದೆ. ಆದರೆ ಈಗ ಪರಿಷ್ಕರಣೆಯ ಹೆಸರಲ್ಲಿ ಪಠ್ಯದಿಂದ ಕಿತ್ತು ಹಾಕಿದ್ದನ್ನು ಗಮನಿಸಿದರೆ ಅದರ ಹಿಂದಿನ ಸಂವಿಧಾನ ವಿರೋಧಿ ಧೋರಣೆ ಸ್ಪಷ್ಟವಾಗಿ ಗೋಚರಿಸುತ್ತದೆ. ಪ್ರಾದೇಶಿಕತೆಗೆ ಸಂಬಂಧಿಸಿದ ವಿಚಾರಗಳನ್ನು ಕಿತ್ತುಹಾಕಿರುವುದು ಅಥವಾ ಪ್ರಾದೇಶಿಕತೆ ಎಂದರೆ ಅದೇನೋ ದೊಡ್ಡ ರಾಷ್ಟ್ರ ವಿರೋಧಿ ಪರಿಕಲ್ಪನೆ ಎನ್ನುವಂತೆ ಬಿಂಬಿಸಿರುವುದು, ಪ್ರಾದೇಶಿಕ ನಾಯಕರಿಗೆ ಮತ್ತು ಪ್ರಾದೇಶಿಕ ಸಾಧುಸಂತರಿಗೆ ಸಂಬಂಧಿಸಿದ ವಿವರಗಳನ್ನು ಕೈಬಿಟ್ಟಿರುವುದು ಸಂವಿಧಾನ ಎತ್ತಿಹಿಡಿಯುವ ಬಹುತ್ವ ಮತ್ತು ಒಕ್ಕೂಟ ವ್ಯವಸ್ಥೆಯ ವಿರೋಧಿ ಮನೋಸ್ಥಿತಿಗೆ ಸಾಕ್ಷಿ. ಅದೇ ರೀತಿ, ಒಂದು ಜಾತಿಗೆ ಸೇರಿದ ದಾರ್ಶನಿಕರನ್ನು ಬಹುವಚನ ಬಳಸಿ ಗೌರವದಿಂದ ಸಂಭೋದಿಸಿ, ಇತರ ಸಮುದಾಯಗಳಿಗೆ ಸೇರಿದ ದಾರ್ಶನಿಕರ ಹೆಸರುಗಳನ್ನೂ ಏಕವಚನ ಬಳಸಿ-ಕೇವಲವಾಗಿ ಸಂಭೋದಿಸಿದ್ದು ಸಂವಿಧಾನ ತೋರಿಸಿಕೊಡುವ ಸಮಾನತೆ ಮತ್ತು ವ್ಯಕ್ತಿ ಗೌರವಗಳ ಆಶಯಕ್ಕೆ ವಿರೋಧವಾಗಿದೆ. ಅದೇ ರೀತಿ ಕಾಲ್ಪನಿಕ ಕತೆಗಳನ್ನು ಚರಿತ್ರೆ ಅಂತ ಚಿತ್ರಿಸುವ ಮೂಲಕ, ಮನುಸ್ಮೃತಿಯನ್ನು ವೈಭವೀಕರಿಸುವ ಮೂಲಕ ಸಂವಿಧಾನ ಪ್ರತಿಪಾದಿಸುವ ವೈಜ್ಞಾನಿಕ ಮನೋಭಾವದ ಆಶಯಕ್ಕೆ ವಿರೋಧವಾಗಿದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಇಡೀ ಪರಿಷ್ಕರಣೆಯನ್ನು ಮಾಡುವಲ್ಲಿ ಯಾವುದೇ ರೀತಿಯ ಸೂಕ್ತ ಆಡಳಿತಾತ್ಮಕ ಪ್ರಕ್ರಿಯೆಯನ್ನು ಅನುಸರಿಸಿಲ್ಲ ಎನ್ನುವುದು ಕೂಡಾ ಸಂವಿಧಾನಕ್ಕೆ ಮಾಡಿದ ಅಪಚಾರ. ಸಂವಿಧಾನ ಪ್ರಕಾರ ಸರಕಾರ ತಾನು ಮಾಡುವ ಒಂದು ಸಣ್ಣ ಕೆಲಸವನ್ನು ಕೂಡಾ ಕ್ರಮಬದ್ಧವಾಗಿ, ಸೂಕ್ತ ಕಾನೂನಿನ ಹಿನ್ನೆಲೆಯಲ್ಲೇ ಮಾಡಬೇಕಾಗುತ್ತದೆ. ಆದರೆ ಈ ಸಮಿತಿಗೆ ಪರಿಷ್ಕರಣೆಯ ಜವಾಬ್ದಾರಿಯನ್ನು ಕಾನೂನು ರೀತಿಯಲ್ಲಿ ವಹಿಸದೆ ಇದ್ದರೂ ಅದು ಆ ಕೆಲಸವನ್ನು ಮಾಡಿದ್ದು ಮತ್ತು ಅದಕ್ಕೆ ಸರಕಾರ ’ಘಟನೋತ್ತರ’ ಅನುಮೋದನೆ ನೀಡುವುದು ಇತ್ಯಾದಿ ಏನನ್ನು ತೋರಿಸುತ್ತದೆ ಎಂದರೆ ಕರ್ನಾಟಕದಲ್ಲೀಗ ಆಡಳಿತ ನಡೆಯುವುದು ಸಂವಿಧಾನಾತ್ಮಕವಾಗಿ ಅಲ್ಲ, ಬೇಕಾಬಿಟ್ಟಿಯಾಗಿ ಎಂದು. ಉತ್ತರ ಪ್ರದೇಶದ ಬುಲ್ಡೋಜರ್ ಆಡಳಿತ ಇನ್ನೊಂದು ಮಾದರಿ ಇದು.


ಇದನ್ನೂ ಓದಿ: ಇದನ್ನೂ ಓದಿ: ಪಠ್ಯ ಪರಿಷ್ಕರಣೆ; ಸಂವಿಧಾನದ ಮೇಲೂ ದಾಳಿ, ಮತ್ತೊಂದು ಕಡೆ ಸಂವಿಧಾನಶಿಲ್ಪಿಯ ಮೇಲೆಯೂ!

ಇದನ್ನೂ ಓದಿ: ಪಠ್ಯಪುಸ್ತಕ ಹಗರಣ – ‘ಬರಗೂರು ಸಮಿತಿ ಹಿಂದೆ ತುಕ್ಡೆ ಗ್ಯಾಂಗ್‌’: ಸಚಿವ ಬಿಸಿ ನಾಗೇಶ್‌…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಪ್ಪಿನಂಗಡಿ: ಸೂರ್ಯ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ, ಚಿಕಿತ್ಸೆಗೆಂದು ತೆರಳಿ ಶವವಾಗಿ ಮರಳಿದ ಬೀದಿಬದಿ ವ್ಯಾಪಾರಿ!

ಖಾಸಗಿ ಆಸ್ಪತ್ರೆಗಳ ಹಣದ ದಾಹ ಮತ್ತು ವೈದ್ಯಕೀಯ ಸಿಬ್ಬಂದಿಯ ಘೋರ ನಿರ್ಲಕ್ಷ್ಯಕ್ಕೆ ಮತ್ತೊಂದು ಬಡ ಜೀವ ಬಲಿಯಾಗಿದೆ. ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಮೊಹಮ್ಮದ್ ಶರೀಫ್ (35) ಎಂಬ ಬೀದಿ ಬದಿ...

ಬಿಸಿಲಿನ ಬೆಂಕಿಗೆ ‘ಎಲ್ ನಿನೊ’ ತುಪ್ಪ: 2026ರ ಮುಂಗಾರು ಕಥೆ ಏನು?

ದೇಶಾದ್ಯಂತ ತಾಪಮಾನ ದಿನೇ ದಿನೇ ಏರುತ್ತಿದ್ದು, ಭೀಕರ ಶಾಖದ ಅಲೆಗಳಿಗೆ (Heatwaves) ಜನ ತತ್ತರಿಸಿ ಹೋಗಿದ್ದಾರೆ. ಈ ಹೊತ್ತಿನಲ್ಲಿ ಎಲ್ಲರ ಕಣ್ಣುಗಳು ಸಾವಿರಾರು ಕಿಲೋಮೀಟರ್ ದೂರದ ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸುತ್ತಿರುವ ಹವಾಮಾನ ಬದಲಾವಣೆಯ...

ಸುಮಾರು 1 ಲಕ್ಷ ಶಾಲೆಗಳಲ್ಲಿ ಬಾಲಕಿಯರಿಗೆ ಶೌಚಾಲಯವಿಲ್ಲ, 61,000 ಶಾಲೆಗಳಲ್ಲಿ ಕ್ರಿಯಾತ್ಮಕ ಶೌಚಾಲಯಗಳಿಲ್ಲ: ನೀತಿ ಆಯೋಗ

ಶಿಕ್ಷಣವು ಒಂದು ದೇಶದ ಅಭಿವೃದ್ಧಿಯ ಬೆನ್ನೆಲುಬು ಅಂತಲೇ ಹೇಳಲಾಗುತ್ತದೆ. ಆದರೆ, ಭಾರತದ ಶಾಲಾ ಶಿಕ್ಷಣದ ಮೂಲಭೂತ ಸೌಕರ್ಯಗಳು ಮತ್ತು ವ್ಯವಸ್ಥೆಯ ಕುರಿತಾಗಿ ನೀತಿ ಆಯೋಗ ಹಾಗೂ ಯುಡಿಐಎಸ್ಇ+ (UDISE+ 2024–25) ಇತ್ತೀಚೆಗೆ ಬಿಡುಗಡೆ...

CJI ಹೇಳಿಕೆಯಿಂದ ರಾತ್ರೋರಾತ್ರಿ ಹುಟ್ಟಿಕೊಂಡ ‘ಕಾಕ್‌ರೋಚ್ ಜನತಾ ಪಾರ್ಟಿ’

ಒಂದು ರಾಜಕೀಯ ಪಕ್ಷವನ್ನು ಕಟ್ಟಿ, ಅದಕ್ಕೊಂದು ರೂಪ ಕೊಡಲು ಎಷ್ಟು ಸಮಯ ಬೇಕಾಗಬಹುದು? ಕೇವಲ 48 ಗಂಟೆಗಳು! ಹೌದು, ಕಳೆದ ಭಾನುವಾರ ನೀವು ಸಾಮಾಜಿಕ ಜಾಲತಾಣಗಳಲ್ಲಿ ಸ್ವಲ್ಪ ಸಮಯ ಕಳೆದಿದ್ದರೆ ನಿಮಗಿದು ಖಂಡಿತ...

ಬೆಂಗಳೂರು: ಗಂಗಸಂದ್ರ ದಲಿತರ ಭೂಮಿ ಕಿತ್ತುಕೊಳ್ಳಲು ಮುಗಿಬಿದ್ದ ಅರಣ್ಯ ಇಲಾಖೆ: ಮಿತಿಮೀರಿದ ಅಧಿಕಾರಿಗಳ ದರ್ಪ

ಕೆಂಗೇರಿ ಬಳಿಯ ಗಂಗಸಂದ್ರ ಗ್ರಾಮದಲ್ಲಿನ ದಲಿತರ ಭೂಮಿಯನ್ನು ಅರಣ್ಯ ಭೂಮಿಯೆಂದು ಅರಣ್ಯ ಇಲಾಖೆಯ ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ. 2026 ಮೇ 19ರ, ಮಂಗಳವಾರ  ಬೆಳ್ಳಂಬೆಳಗ್ಗೆಯೇ ಅಧಿಕಾರಿಗಳ ದರ್ಪ ತಾರಕಕ್ಕೇರಿದೆ. ದಲಿತ ನಿವಾಸಿಗಳ...

ಜನಾಂಗೀಯ ದ್ವೇಷ: ಅಮೆರಿಕಾದ ಸ್ಯಾನ್ ಡಿಯಾಗೋ ಮಸೀದಿ ಸಂಕೀರ್ಣದಲ್ಲಿ ಗುಂಡಿನ ದಾಳಿ: ಮೂವರು ಸಾವು

ಸ್ಯಾನ್ ಡಿಯಾಗೋ: ಅಮೆರಿಕದ ಸ್ಯಾನ್ ಡಿಯಾಗೋ ನಗರದ ಇಸ್ಲಾಮಿಕ್ ಸೆಂಟರ್ ಆಫ್ ಸ್ಯಾನ್ ಡಿಯಾಗೋ (ICSD) ಮಸೀದಿ ಸಂಕೀರ್ಣದಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಈ ಘಟನೆಯನ್ನು ಸಂಭಾವ್ಯ...

ರಸ್ತೆಗಳಲ್ಲಿ ಮುಕ್ತವಾಗಿ ಓಡಾಡುವುದು ಜನರ ಹಕ್ಕು: ಬೀದಿ ನಾಯಿಗಳ ದಯಾಮರಣಕ್ಕೂ ಸುಪ್ರೀಂ ಅಸ್ತು

ಸುಪ್ರೀಂ ಕೋರ್ಟ್ ಇಂದು (ಮೇ 19, ಮಂಗಳವಾರ) ಬೀದಿ ನಾಯಿಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿ ಮಹತ್ವದ ತೀರ್ಪು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ ಸಾರ್ವಜನಿಕರು...

ಹರಿಯಾಣದ ಕಾರ್ಮಿಕ ನಾಯಕ ಅಜಿತ್ ಸಿಂಗ್ ಬಂಧನ ‘ಅಕ್ರಮ’ ಎಂದ ಕೋರ್ಟ್; ಜಾಮೀನು ಮಂಜೂರು

ಬೆಲ್ಸೋನಿಕಾ ಆಟೋ ಕಾಂಪೊನೆಂಟ್ ಇಂಡಿಯಾ ಎಂಪ್ಲಾಯೀಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಅಜಿತ್ ಸಿಂಗ್ ಅವರಿಗೆ ಗುರುಗ್ರಾಮ್ ಜಿಲ್ಲಾ ನ್ಯಾಯಾಲಯವು (ಮೇ 18) ಜಾಮೀನು ನೀಡಿದೆ. ಅವರು ಮಾನೇಸರ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಪ್ರತಿಭಟನೆಗಳ...

ಉಮರ್, ಶಾರ್ಜೀಲ್‌ಗೆ ಜಾಮೀನು ನಿರಾಕರಿಸಿದ್ದಕ್ಕೆ ಆಕ್ಷೇಪ : ತನ್ನದೇ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ದೆಹಲಿ ಗಲಭೆ (2020ರ ಪ್ರಕರಣ) ಹಿಂದಿನ ದೊಡ್ಡ ಮಟ್ಟದ ಪಿತೂರಿ ಆರೋಪದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿ, 2026ರ ಜನವರಿಯಲ್ಲಿ ತನ್ನದೇ ಮತ್ತೊಂದು ದ್ವಿಸದಸ್ಯ ಪೀಠ...

ಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ...