ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಅಧೀನದ ವಿದ್ಯಾನಿಲಯಗಳ ಗ್ರಂಥಾಲಯಗಳಿಗೆ ಪುಸ್ತಕ ಪೂರೈಕೆ ಮಾಡಲು ಅಲ್ಪಾವಧಿ ಟೆಂಡರ್ ಕರೆಯಲಾಗಿದೆ. ಇದು ನಿಯಮಾವಳಿಗಳಿಗೆ ವಿರುದ್ಧವಾಗಿದೆ ಎಂದು ಪ್ರಕಾಶಕರು ದೂರಿದ್ದಾರೆ.
ಈ ವಿದ್ಯಾನಿಲಯಗಳ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸಲು ಇಲಾಖೆಯ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ 18 ಸದಸ್ಯರ ರಾಜ್ಯಮಟ್ಟದ ಆಯ್ಕೆ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಶಿಫಾರಸು ಮಾಡಿದ ಬಳಿಕವಷ್ಟೇ ಪುಸ್ತಕಗಳ ಖರೀದಿಗೆ ಟೆಂಡರ್ ಕರೆಯಬೇಕು ಎಂದು ಪ್ರಕಾಶಕರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕರ್ನಾಟಕ ಪ್ರಕಾಶಕರ ಸಂಘದ ಸೃಷ್ಟಿ ನಾಗೇಶ್ ಮಾತನಾಡಿದ್ದು, “ಹಾಸನ ಜಿಲ್ಲೆಯಲ್ಲಿ ಅಲ್ಪಾವಧಿ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಅರ್ಜಿ ಸಲ್ಲಿಸಲು ಜನವರಿ 2 ಕೊನೆಯ ದಿನವಾಗಿತ್ತು. ಬೇರೆ ಜಿಲ್ಲೆಗಳಲ್ಲೂ ಇದೇ ರೀತಿಯ ಟೆಂಡರ್ ಕರೆಯಲಾಗಿದೆ ಎಂದು ಹೇಳಲಾಗಿದ್ದು, ಆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಮೂಲಕ ಯಾವುದೋ ಒಂದೆರಡು ಪ್ರಕಾಶನಗಳಿಗೆ ಅನುಕೂಲ ಮಾಡಿಕೊಡವ ಪ್ರಯತ್ನ ನಡೆದಿದೆ” ಎಂದು ಅವರು ಆರೋಪಿಸಿದರು.
ಇದನ್ನೂ ಓದಿ: ‘ಬಜೆಟ್ನಲ್ಲಿ ತೆಲಂಗಾಣಕ್ಕೆ ಕೊಟ್ಟಿದ್ದು ಶೂನ್ಯ’; ಬ್ಯಾನರ್ ಹಾಕಿಸಿದ ತೆಲಂಗಾಣ ಸರ್ಕಾರ
“ಸಮಾಜ ಜಲ್ಯಾಣ ಇಲಾಖೆ ತನ್ನ ಆದೇಶದಲ್ಲಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಆಯ್ಕೆ ಸಮಿತಿ ಮೂಲಕವೇ ಖರೀದಿಸಬೇಕು” ಎಂದು ತಿಳಿಸಿದೆ. ಆದರೆ ಇದೀಗ ಆ ಆದೇಶವನ್ನು ಪಾಲಿಸುತ್ತಿಲ್ಲ ಎಂದು ಅವರು ಹೇಳಿದರು.
ಈ ಬಗ್ಗೆ ‘ನಾನುಗೌರಿ.ಕಾಂ’ ಪ್ರತಿನಿಧಿಯೊಂದಿಗೆ ಮಾತನಾಡಿದ ಪ್ರಕಾಶಕರ ಸಂಘದ ಸೃಷ್ಟಿ ನಾಗೇಶ್ ಅವರು, “ಈ ಪುಸ್ತಕ ಖರೀದಿಗೆಂದೇ ಸಮಾಜ ಕಲ್ಯಾಣ ಇಲಾಖೆ ಪ್ರತಿವರ್ಷ 24 ಕೋಟಿ ರೂ. ವೆಚ್ಚ ಮಾಡುತ್ತದೆ. ಪುಸ್ತಕ ಖರೀದಿಗೆ ಬೆಲೆ ನಿಗದಿ ಮಾಡಲು ಒಂದು ಸಮಿತಿ ಇರಬೇಕು ಎಂದು ನಾವು ಮನವಿ ಸಲ್ಲಿಸಿದ್ದೆವು. ಅದರಂತೆ ರಾಜ್ಯ ಮಟ್ಟದ ಸಮಿತಿ ರಚನೆ ಮಾಡಿ ಕೆಲವು ನಿಯಮಗಳನ್ನು ಮಾಡಲಾಯಿತು. ಆ ನಿಯಮಗಳ ಅಡಿಯಲ್ಲಿ ಈ ಟೆಂಡರ್ ಪ್ರಕ್ರಿಯೆ ಕೂಡ ಬರುತ್ತದೆ” ಎಂದು ಹೇಳಿದರು.
“ನಿಯಮಾವಳಿಗಳ ಬಗ್ಗೆ ಮೇಲ್ಮಟ್ಟದ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ‘. ಆದರೆ ಜಿಲ್ಲಾಮಟ್ಟದ ಅಧಿಕಾರಿಗಳು ನಿಯಮ ಪಾಲಿಸುತ್ತಿಲ್ಲ. ನಿಯಮಾನುಸಾರ ಟೆಂಡರ್ ಕರೆದರೆ ಯಾವ ಪ್ರಕಾಶಕರಿಗೆ ಸಿಗತ್ತದೋ ಸಿಗಲಿ, ಆದರೆ ಅವರ ಮನಸೋ ಇಚ್ಛೆ ಟೆಂಡರ್ ಕರೆಯುವುದರಿಂದ ಅದು ಒಬ್ಬಿಬ್ಬರ ಪಾಲಾಗುತ್ತದೆ. ಅಲ್ಲಿ ಸರ್ಕಾರದ ಹಣ ಪೋಲಾಗಲೂಬಹುದು. ಹಾಗಾಗಿ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಖರೀದಿಸಲು, ಸಮಿತಿಯು ಶಿಫಾರಸು ಮಾಡಿದ ಬಳಿಕವಷ್ಟೇ ಪುಸ್ತಕಗಳ ಖರೀದಿಗೆ ಟೆಂಡರ್ ಕರೆಯಬೇಕು” ಎಂದು ಅವರು ಒತ್ತಾಯಿಸಿದರು.
ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ ಕೂಡ ಗ್ರಂಥಾಲಯಗಳಿಗೆ ಪುಸ್ತಕ ಖರೀದಿ ಹಾಗೂ ಪುಸ್ತಕ ಬೆಲೆ ನಿಗದಿ ವಿಚಾರವಾಗಿ ಸಿಎಂಗೆ ಪತ್ರ ಬರೆದಿದ್ದು, “ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಏಕವಗಾಕ್ಷಿ ಯೋಜನೆಯ ಪುಸ್ತಕ ಖರೀದಿಗೆ ಹಣ ಬಿಡುಗಡೆ ಮಾಡಬೇಕು ಮತ್ತು ಕನ್ನಡ ಪುಸ್ತಕಗಳ ಪುಟವಾರು ಬೆಲೆ ಪರಿಷ್ಕರಿಸಿ, ತಕ್ಷಣವೇ ಜಾರಿ ಮಾಡಬೇಕು” ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.