ತೆಲಂಗಾಣದಲ್ಲಿ 119 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಈ ಮಧ್ಯೆ ನಲ್ಗೊಂಡ ಜಿಲ್ಲೆಯಲ್ಲಿ ನಾಗಾರ್ಜುನ ಸಾಗರ ಅಣೆಕಟ್ಟಿನ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ತೆಲಂಗಾಣ ಸರ್ಕಾರದ ನಿಯಂತ್ರಣದಲ್ಲಿ ಇರಬೇಕಾದ ಅಣೆಕಟ್ಟನ್ನು ಅದರ ಅರ್ಧಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸುವ ಮೂಲಕ ಆಂಧ್ರ ಪ್ರದೇಶ ಸರ್ಕಾರವು ಸ್ವಾಧೀನಪಡಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.
ಈ ಕುರಿತ ವಿಡಿಯೋಗಳು ಅಣೆಕಟ್ಟಿನ ಆವರಣದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರು ತಿರುಗುತ್ತಿರುವುದನ್ನು ತೋರಿಸುತ್ತಿದೆ.
ತೆಲಂಗಾಣ ಸರ್ಕಾರ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕುರಿತು ಪರಿಶೀಲಿಸುವಂತೆ ನಲ್ಗೊಂಡ ಪೊಲೀಸರು ಮತ್ತು ಜಿಲ್ಲಾಧಿಕಾರಿಗೆ ಸೂಚಿಸಿದೆ. ಆಂಧ್ರ ಮತ್ತು ತೆಲಂಗಾಣ ಭಾಗಗಳಿಗೆ ನೀರು ಸರಬರಾಜು ಮಾಡುವ ನಾಗಾರ್ಜುನ ಸಾಗರ ಅಣೆಕಟ್ಟನ್ನು ಕೃಷ್ಣಾ ನದಿಗೆ ನಿರ್ಮಿಸಲಾಗಿದೆ. ಕೃಷ್ಣಾ ನದಿಗೆ ನಿರ್ಮಿಸಲಾದ ಶ್ರೀಶೈಲಂ ಅಣೆಕಟ್ಟು ಆಂಧ್ರ ಮತ್ತು ತೆಲಂಗಾಣದ ನಂದ್ಯಾಲ್ ಮತ್ತು ನಾಗರಕರ್ನೂಲ್ ಜಿಲ್ಲೆಗಳನ್ನು ವ್ಯಾಪಿಸಿದೆ.
2014ರಲ್ಲಿ ತೆಲಂಗಾಣ ರಚನೆಯ ನಂತರ ಕೃಷ್ಣಾ ನದಿ ನಿರ್ವಹಣಾ ಮಂಡಳಿಯನ್ನು (ಕೆಆರ್ಎಂಬಿ) ರಚಿಸಿದ ಕೇಂದ್ರ ಸರ್ಕಾರವು ಅಂತಿಮವಾಗಿ ಶ್ರೀಶೈಲಂ ಅಣೆಕಟ್ಟಿನ ನಿಯಂತ್ರಣವನ್ನು ಆಂಧ್ರ ಸರ್ಕಾರಕ್ಕೆ ಮತ್ತು ನಾಗಾರ್ಜುನ ಸಾಗರ್ ಅಣೆಕಟ್ಟಿನ ನಿಯಂತ್ರಣವನ್ನು ತೆಲಂಗಾಣಕ್ಕೆ ನೀಡಿತ್ತು.
ನಾಗಾರ್ಜುನ ಸಾಗರ್ ಅಣೆಕಟ್ಟಿನ ಅರ್ಧ ಭಾಗವನ್ನು ಆಂಧ್ರ ಸರ್ಕಾರ ಆಕ್ರಮಿಸಿಕೊಂಡಿದೆ. ಆದರೆ ಅವರು ಅದನ್ನು ಹೇಗೆ ಮಾಡುತ್ತಾರೆ? ಅವರು 13 ಗೇಟ್ಗಳನ್ನು ಆಕ್ರಮಿಸಿಕೊಂಡಿದ್ದಾರೆ ಮತ್ತು ಅನೇಕ ಆಂಧ್ರ ಪೊಲೀಸ್ ಸಿಬ್ಬಂದಿಯೂ ಅಲ್ಲಿದ್ದರು. ನಾವು ಮತ ಚಲಾಯಿಸಲು ಹೋದ ದಿನದಲ್ಲಿ ಅವರು ಏನು ಮಾಡಲು ಪ್ರಯತ್ನಿಸುತ್ತಿದ್ದಾರೆ? ನಮ್ಮ ಸರ್ಕಾರ ಚುನಾವಣಾ ತಯಾರಿಯಲ್ಲಿ ನಿರತರಾಗಿದ್ದರಿಂದ ಅವರು ಈ ರೀತಿ ಮಾಡಿದ್ದಾರೆ ಎಂದು ತೆಲಂಗಾಣ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಂಧ್ರ ಸರ್ಕಾರದ ಅಧಿಕಾರಿಗಳು ನಾಗಾರ್ಜುನ ಸಾಗರ್ ಅಣೆಕಟ್ಟಿನ ಯಾವುದೇ ಭಾಗವನ್ನು ಆಕ್ರಮಿಸಿಕೊಂಡಿಲ್ಲ ಎಂದು ಹೇಳಿದ್ದು, ತೆಲಂಗಾಣದ ಆರೋಪವನ್ನು ತಳ್ಳಿ ಹಾಕಿದೆ.
ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಘಟನೆಯು ಅನುಮಾನಾಸ್ಪದವಾಗಿದೆ. ಇದು ಭಾರತ್ ರಾಷ್ಟ್ರ ಸಮಿತಿಯ ಚುನಾವಣಾ ಗಿಮಿಕ್ನ ಭಾಗವಾಗಿರುವಂತಿದೆ. ನಾಗಾರ್ಜುನ ಸಾಗರ ಅಣೆಕಟ್ಟು ಎಲ್ಲಿಯೂ ಹೋಗುವುದಿಲ್ಲ. ಗೇಟ್ಗಳು ಮತ್ತು ನೀರು ಎಲ್ಲಿಯೂ ಹೋಗುವುದಿಲ್ಲ. ತೆಲಂಗಾಣದ ಜನರು ಬುದ್ಧಿವಂತರು. ಅತಿ ಶೀಘ್ರದಲ್ಲಿ ಹೊಸ ಸರ್ಕಾರ ರಚನೆಯಾಗಲಿದ್ದು ಈ ಜಲ ವಿವಾದ ಬಗೆಹರಿಯಲಿದೆ. ಒಂಬತ್ತೂವರೆ ವರ್ಷಗಳಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಕಳಪೆ ಆಡಳಿತದಿಂದಾಗಿ ಈ ನೀರಿನ ಸಮಸ್ಯೆಗಳು ಬಗೆಹರಿಯಲಿಲ್ಲ ಎಂದು ಹೇಳಿದ್ದಾರೆ.
ತೆಲಂಗಾಣ ರಾಜ್ಯದ 119 ಕ್ಷೇತ್ರಗಳಿಗೆ ಇಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಚುನಾವಣೆಯ ಮತ ಎಣಿಕೆ ಡಿ.3ರಂದು ನಡೆಯಲಿದೆ. ಇದಲ್ಲದೆ ಡಿ.3ರಂದು ದೇಶದ ಇತರ 4 ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ಮಿಜೋರಾಂನಲ್ಲಿ ಕೂಡ ಮತ ಎಣಿಕೆ ನಡೆಯಲಿದೆ.
ಇದನ್ನು ಓದಿ: ಎಲ್ಗರ್ ಪರಿಷತ್ ಪ್ರಕರಣ: ವರವರ ರಾವ್ ಹೈದರಾಬಾದ್ ಪ್ರಯಾಣಕ್ಕೆ ಕೋರ್ಟ್ ಅನುಮತಿ