ಇಷ್ಟರಲ್ಲಿಯೇ ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ ಕಾರ್ಪೊರೇಟ್ ಚಿಲ್ಲರೆ ವ್ಯಾಪಾರಿ ಸಂಸ್ಥೆ ತುಮಕೂರಿನಲ್ಲಿ ತನ್ನ 28ನೇ ಮಳಿಗೆಯನ್ನು ತೆರೆಯಲಿದೆ. ಇದು ಭಾರತದಲ್ಲಿ ಆಳಕ್ಕೆ ಇಳಿಯುತ್ತಿರುವ ಜಾಗತೀಕರಣ. ಬೆಳೆಯುತ್ತಿದೆ ಎಂದು ಹೇಳಲಾಗುತ್ತಿರುವ ಭಾರತದ ಆರ್ಥಿಕತೆಯ ಪ್ರತಿಫಲನ. (ಭಾರತವನ್ನು ಒತ್ತಾಯ ಪೂರ್ವಕವಾಗಿ ಆರ್ಥಿಕತೆಯಾಗಿ ಪರಿವರ್ತಿಸಲಾಗುತ್ತಿದ್ದು, ಕುಸಿದಿದೆ ಎಂದು ಹೇಳಲಾಗುತ್ತಿರುವ ಇದು ತಾತ್ಕಾಲಿಕವಾದುದ್ದು. ಮುಂಬರುವ ದಿನಗಳಲ್ಲಿ ನಮ್ಮ ದೇಶವು ಕಾರ್ಪೋರೇಟ್ ಗಳಿಗೆ ಸುಸ್ಥಿರವಾದ ಮಾರುಕಟ್ಟೆಯಾಗಿ ಮಾರ್ಪಾಡಾಗಲಿದೆ)
ಇದು ಭಾರತದ ಭವಿಷ್ಯದ ಮಟ್ಟಿಗೆ ಬಹು ಗಂಭೀರವಾದ ಹಾಗೂ ಆತಂಕಪಡಬೇಕಾದ ಬೆಳವಣಿಗೆ. ಜನಸಾಮಾನ್ಯರ ನಿತ್ಯ ಬದುಕಿನ ಜೀವನಾವಶ್ಯಕ ಮತ್ತು ಆಹಾರಪದಾರ್ಥಗಳ ಚಿಲ್ಲರೆ ಮಾರಾಟ ಮಾಡುತ್ತಿರುವವರು ಮಾರುಕಟ್ಟೆಯನ್ನು ವಿಸ್ತರಿಸುವ ಮೂಲಕ ಆಹಾರದ ಮೇಲೆ ಏಕಸ್ವಾಮ್ಯ ಸಾಧಿಸುತ್ತಿದ್ದಾರೆ. ಹೀಗೆ ಏಕಸ್ವಾಮ್ಯ ಸಾಧಿಸುತ್ತಾ ಬೆಳೆಯುವ ಈ ಕಾರ್ಪೊರೇಟ್ ಕಂಪನಿಗಳು ಮಾರುಕಟ್ಟೆಯಲ್ಲಿ ತಲ್ಲಣವನ್ನೇ ಉಂಟು ಮಾಡುತ್ತಾರೆ. ಹಣದುಬ್ಬರ ತರುತ್ತಾರೆ. ಆ ಮೂಲಕ ನಮಗೆಲ್ಲ ಬೆಲೆ ಏರಿಕೆಯ ಬಿಸಿಯನ್ನು ತಟ್ಟಿಸುತ್ತಾರೆ. ಇದಕ್ಕೆ ಇಂದಿನ ಸಮಾಜ ಸಾಕ್ಷಿಯಾಗಿದೆ. ಬೆಲೆ ಏರಿಕೆ ಎಂಬುದು ನಿತ್ಯ ನಿರಂತರವಾಗಿ ಕಾಣಬಹುದಾಗಿದೆ.
ಕರೋನಾ ಕಾರಣದಿಂದ ಇಡೀ ಆರ್ಥಿಕತೆಯೇ ಸ್ಥಗಿತಗೊಂಡಿರುವತಹ ಸಮಯದಲ್ಲಿಯು ನಿತ್ಯ ನಿರಂತರವಾಗಿರುವ ಬೆಲೆ ಏರಿಕೆಯು ಇವರು ತರಬಹುದಾದ ಹಣದುಬ್ಬರವನ್ನು ಸಾಕ್ಷೀಕರಿಸುತ್ತದೆ.
ಈ ಕಾರ್ಪೊರೇಟ್ ಚಿಲ್ಲರೆ ಮಾರಾಟ ಕಂಪನಿಗಳು ದೇಸಿಯ ಸ್ಥಳೀಯ ಚಿಲ್ಲರೆ ಮಾರಾಟಗಾರಂತಲ್ಲ. ಸ್ಥಳೀಯ ಮಾರಾಟಗಾರರು ತಮ್ಮತಮ್ಮಲ್ಲೇ ಪೈಪೋಟಿ ನಡೆಸಿಕೊಳ್ಳುತ್ತಾ ವಹಿವಾಟು ನಡೆಸುವವರಾಗಿದ್ದು ಸರ್ಕಾರಿ ಮಟ್ಟದಲ್ಲಿ ಇವರ ಹಸ್ತಕ್ಷೇಪ ಕ್ಷೀಣವಾಗಿರುತ್ತದೆ ಅವರ ಬಹುಪಾಲು ವಹಿವಾಟು ಸ್ಥಳೀಯ ಆರ್ಥಿಕತೆಯ ಉತ್ತೇಜಕವಾಗಿರುತ್ತದೆ.
ಆದರೆ ಕಾರ್ಪೊರೇಟ್ ಕಂಪನಿಗಳು ಹಾಗಲ್ಲ. ಸರ್ಕಾರಕ್ಕೆ ಇವರೇ ನಿರ್ದೇಶಕರಾಗಿರುತ್ತಾರೆ, ನೆರಳಾಗಿರುತ್ತಾರೆ. ಇಂತಹ ಹಿನ್ನೆಲೆಯುಳ್ಳ ಲಾಭಕೋರರು ಒಂದೆಡೆ ತಮ್ಮ ಮಾರಾಟ ಮಳಿಗೆಗಳನ್ನು ನಿರಂತರವಾಗಿ ತೆರೆಯತ್ತಿರುತ್ತಾರೆ. ಇದಕ್ಕಾಗಿ ರಾಜಕೀಯ ಲಾಬಿ ನಡೆಸುತ್ತಾರೆ. ತತ್ಪರಿಣಾಮ ಅಧಿಕಾರಿ ವರ್ಗದಿಂದ ಬೀದಿ ವ್ಯಾಪಾರಿಗಳಿಗೆ ಕಿರುಕುಳಗಳು ಹೆಚ್ಚುತ್ತವೆ. ಪ್ರಜಾಪ್ರಭುತ್ವ ಸೋಗಿನಲ್ಲಿರುವ ಸರ್ಕಾರಗಳಿಂದ ಉಸಿರುಕಟ್ಟಿಸುವ ಕಾನೂನು, ನೀತಿ ನಿಯಮಾವಳಿಗಳು ಜಾರಿಯಾಗುತ್ತದೆ. ಸಂಚಾರ ದಟ್ಟನೆಯ ನೆಪವೊಡ್ಡಿ ನಗರಪ್ರದೇಶದಿಂದ ಎಪಿಎಂಸಿ, ಆರ್ಎಂಸಿ ಯಾರ್ಡ್ಗಳನ್ನು ನಗರಗಳಿಂದ ಹೊರಕ್ಕೆ ಎತ್ತಂಗಡಿ ಮಾಡಲಾಗುತ್ತದೆ
ಇದೇ ರೀತಿಯಲ್ಲಿ ತುಮಕೂರಿನ ಆರ್ಎಂಸಿಯನ್ನು ನಗರದಿಂದ ಹೊರವಲಯಕ್ಕೆ ಸ್ಥಳಾಂತರಿಸಿದರೆ, ಬೆಂಗಳೂರಿನ ಯಶವಂತಪುರದ ಆರ್ಎಂಸಿ ಯಾರ್ಡನ್ನು ನಗರದಿಂದ ಬಹುದೂರಕ್ಕೆ ಯಾವುದೇ ಸವಲತ್ತು ಇರದ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇದರ ದೆಸೆಯಿಂದಾಗಿ ನಗರ ಪ್ರದೇಶದ ಹೂ ತರಕಾರಿ ಹಣ್ಣು ವ್ಯಾಪಾರಿಗಳ ಸಾಗಾಣಿಕೆ ವೆಚ್ಚ ಹೆಚ್ಚುತ್ತಿದ್ದು, ನಗರ ಪ್ರದೇಶದಲ್ಲಿ ಇಂದು ತರಕಾರಿಗಳ ಬೆಲೆ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ಬೀದಿ ಬದಿ ವ್ಯಾಪಾರಿಗಳೆಡೆಗೆ ನಗರವಾಸಿಗಳು ಬೆನ್ನು ಮಾಡಿ ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ, ರಿಲಯನ್ಸ್ ಫ್ರೆಶ್ ನತ್ತ ಮುಖ ಮಾಡುತ್ತಿದ್ದಾರೆ.
ಇಂತಹ ಸರ್ವ ರೀತಿಯ ಮಸಲತ್ತನೊಂದಿಗೆ ಮಾರುಕಟ್ಟೆ ವಿಸ್ತರಿಸುತ್ತಿರುವ ಈ ಕಂಪನಿಗಳು ಮುಂಬರುವ ದಿನಗಳಲ್ಲಿ ನಾವು ಉಣ್ಣುವ ಪ್ರತೀ ಅಗುಳು ಅನ್ನದ ಮೇಲೆಯೂ ಏಕಸ್ವಾಮ್ಯ ಸಾಧಿಸಲಿದ್ದಾರೆ. ನಮ್ಮ ರೈತರೇ ಬೆಳೆ ಬೆಳೆದರೂ ಮಾರುಕಟ್ಟೆಯ ಮೇಲೆ ಕಾರ್ಪೋರೇಟ್ ಗಳು ಸಾಧಿಸುತ್ತಿರುರುವುದರಿಂದ ಆ ಬೆಳೆಗಳ ಒಡೆಯರು ಕಾರ್ಪೋರೇಟ್ ಗಳೇ ಆಗುತ್ತಾರೆ. ಒಮ್ಮೆ ಇವರು ಏಕಸ್ವಾಮ್ಯ ಸಾಧಿಸಿದರೆಂದರೆ ಮುಗಿಯಿತು. ತಮ್ಮ ಅನುಕೂಲಕ್ಕೆ ತಕ್ಕಂತೆ ಅವುಗಳ ಬೆಲೆಯಲ್ಲಿ ಏರಿಳಿತ ಉಂಟುಮಾಡುತ್ತಾರೆ. ಇಡೀ ವಿಶ್ವಾದ್ಯಂತ ತಮ್ಮ ಜಾಲ ಹೊಂದಿರುವ ಇವರು ಯಾವ ದೇಶದಲ್ಲಿ ಯಾವ ವಸ್ತು ಯಾವ ಬೆಲೆಗೆ ದೊರೆಯುತ್ತದೆ ಎಂಬುದರ ಸ್ಪಷ್ಟ ಪರಿಜ್ಞಾನ ಹೊಂದಿದ್ದಾರೆ ಮತ್ತು ಅವುಗಳನ್ನು ಅಲ್ಲಿಂದ ಇಲ್ಲಿಗೆ ತಂದು ಮಾರಾಟ ಮಾಡುವುದರ ಮೂಲಕ ಸ್ಥಳೀಯವಾಗಿ ಅದರ ಸುತ್ತ ತಲೆ ತಲಾಂತರದಿಂದ ಎಣೆದುಕೊಂಡಿರಬಹುದಾದ ಆರ್ಥಿಕ ಸಂರಚನೆಯನ್ನು ತುಂಡರಿಸುತ್ತಾರೆ.
ಮಾರುಕಟ್ಟೆಯ ಮೇಲೆ ಇವರ ಏಕಸ್ವಾಮ್ಯ ವಿಸ್ತರಿಸಿದಂತೆಲ್ಲ ಭಾರತೀಯ ಕೃಷಿ ಉತ್ಪನ್ನ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಲೇ ಸಾಗಿದೆ. 2000ನೇ ಇಸವಿಯಲ್ಲಿ ಶೇ. 85 ರಷ್ಟಿದ್ದ ಭಾರತದ ಕೃಷಿ ಉತ್ಪನ್ನ ಈಗ ಶೇ. 53ಕ್ಕೆ ಇಳಿಕೆ ಕಂಡಿದೆ. ಸದ್ಯ ಪ್ರತಿ ವರ್ಷ ಶೇ. 2.8 ಜನ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಭಾರತದ ಬೆಳೆಯುತ್ತಿರುವ ಆರ್ಥಿಕತೆಯ ಅಂತರಾಳವಿದು. ಕಾರ್ಪೋರೇಟ್ ಗಳ ಮಾರುಕಟ್ಟೆಯ ಮೇಲಿನ ಏಕಸ್ವಾಮ್ಯ ಇದೇ ರೀತಿ ಮುಂದುವರೆದರೆ ಮುಂಬರುವ ದಿನಗಳಲ್ಲಿ ಈ ಪರಿಮಾಣ ಇನ್ನೂ ಹೆಚ್ಚಾಗಲಿದೆ. ಇದರ ಒಂದು ಉದಾಹರಣೆಯಾಗಿ ತೊಗರಿಬೇಳೆಯ ವಿಚಾರವನ್ನೇ ತೆಗೆದುಕೊಳ್ಳಬಹುದು. ಇಡೀ ವಿಶಾಲ ಕರ್ನಾಟಕದ ಜನತೆ ನಿತ್ಯ ತೊಗರಿಬೇಳೆ ಉಪಯೋಗಿಸುತ್ತಿದ್ದರೂ ರೈತರಿಗೆ ಮಾತ್ರ ಅದು ಲಾಭ ತರುವ ಬೆಳೆಯಾಗಿಲ್ಲ. ಅಲ್ಲದೆ ವರ್ಷದಿಂದ ವರ್ಷಕ್ಕೆ ತೊಗರಿ ಬೇಸಾಯ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇದಕ್ಕೆ ಕಾರಣವಾಗಿರುವುದು ಯಾವುದೋ ದೂರದ ಕಡಿಮೆ ಬೆಲೆಗೆ ಸಿಗಬಹುದಾದ ದೇಶದಿಂದ ತೊಗರಿಬೇಳೆಯನ್ನು ಇಲ್ಲಿಗೆ ತಂದು ಸದ್ದಿಲ್ಲದೆ ಮಾರುವುದರ ಮೂಲಕ ನಮ್ಮದೇ ಮಾರುಕಟ್ಟೆ ನಮಗೆ ಇಲ್ಲದಂತೆ ಮಾಡುತ್ತಿರುವುದು.
ಕೃಷಿ ಪ್ರಧಾನವಾದ ಭಾರತದಲ್ಲಿನ ಎಲ್ಲ ರಾಷ್ಟ್ರೀಯತೆಗಳ, ಸಂಸ್ಕೃತಿಗಳ ಬೆನ್ನೆಲುಬು ಇಲ್ಲಿಯ ರೈತರು, ಇಲ್ಲಿಯ ಆರ್ಥಿಕತೆಯನ್ನವಲಂಬಿಸಿರುವ ಕುಶಲಕರ್ಮಿಗಳು ಸಣ್ಣ ಮತ್ತು ಬೀದಿ ವ್ಯಾಪಾರಿಗಳು. ಕಾರ್ಪೊರೇಟ್ ಗಳು ಹೊಂದುವ ಏಕಸ್ವಾಮ್ಯದಿಂದಾಗಿ ಇವರು ನೆಲೆ ಕಳೆದುಕೊಳ್ಳುವುದರೊಂದಿಗೆ ಎಲ್ಲಾ ಸ್ಥಳೀಯ, ಪುರಾತನ, ಸುಸ್ಥಿರ ಆರ್ಥಿಕತೆ ಸರ್ವನಾಶವಾಬಿಡುತ್ತದೆ. ಜೊತೆಗೆ ಭಾಷೆ, ರಾಷ್ಟ್ರೀಯತೆ ಸಂಸ್ಕೃತಿಯ ಅವಸಾನಕ್ಕೂ ಮುನ್ನುಡಿ ಬರೆಯುತ್ತದೆ.
ಇಂಥ ಕಂಪನಿಗಳಲ್ಲಿ ಪಡೆಯುವ ಒಂದೊಂದು ಗ್ರಾಹಕತ್ವ ನಮ್ಮ ರಾಷ್ಟ್ರೀಯತೆ ಭಾಷೆ-ಸಂಸ್ಕೃತಿಯ ಶವಪೆಟ್ಟಿಗೆಗೆ ಹೊಡೆಯುವ ಮೊಳೆ ಆಗಿರುತ್ತದೆ. ಜಾಗತೀಕರಣದ ಈ ಸಂದರ್ಭದಲ್ಲಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಸರಿಯಾಗಿ ಸಮಾಜ ಅರ್ಥಮಾಡಿಕೊಳ್ಳದಿದ್ದರೆ ಅದು ತನ್ನ ಅವನತಿಯನ್ನು ತಾನೇ ಮಾಡಿಕೊಳ್ಳುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲಕ್ಕಿಂತ ಆಳವಾಗಿ ಆರ್ಥಿಕತೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿರುವುದು ಸಮಾಜದ ಆದ್ಯ ಕರ್ತವ್ಯವಾಗಿದೆ. ಆರ್ಥಿಕತೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಭಾಷೆ-ಸಂಸ್ಕೃತಿ ರಾಷ್ಟ್ರೀಯತೆಗಳನ್ನು ಕಾಪಾಡಿಕೊಳ್ಳುತ್ತೇವೆ ಎಂದು ನಡೆಯುವ ಯಾವುದೇ ಹೋರಾಟಗಳು, ಚಳುವಳಿಗಳು, ಆಂದೋಲನಗಳು ಗುರಿ ತಲುಪುವಲ್ಲಿ ವಿಫಲಗೊಳ್ಳುತ್ತವೆ. ನಮ್ಮ ಸಂಸ್ಕೃತಿ, ನಮ್ಮ ಅಸ್ಮಿತೆ ನಮ್ಮ ರಾಷ್ಟ್ರೀಯತೆ ಉಳಿಯಬೇಕು ಎಂದರೆ ಇಂತಹ ಕಾರ್ಪೊರೇಟ್ ಕಂಪನಿಗಳು ನಾಡಿನಿಂದ ಹೊರಹಾಕುವುದರತ್ತ ಗಮನ ಕೇಂದ್ರೀಕರಿಸಬೇಕಿದೆ. ಮುಂಬರುವ ದಿನಗಳಲ್ಲಿ ಈ ಕಂಪನಿ ಇನ್ನಿತರ ನಗರಗಳಲ್ಲಿ ಹೊಸ ಹೊಸ ಮಳಿಗೆಗಳನ್ನು ತೆರೆಯುವ ಯೋಚನೆಯಲ್ಲಿದೆ. ಅರ್ಥಾತ್ ಸ್ಥಳೀಯ ಆರ್ಥಿಕತೆಯ ಭಾಷೆ ಸಂಸ್ಕೃತಿ ಅಸ್ಮಿತೆ ಮೇಲೆ ದಾಳಿ ಇನ್ನಷ್ಟು ಹೆಚ್ಚಲಿದೆ. ಪ್ರಸ್ತುತ ಸಂದರ್ಭದಲ್ಲಿ ಭಾಷೆ-ಸಂಸ್ಕೃತಿ ರಾಷ್ಟ್ರೀಯತೆಗಳ ಅಸ್ಮಿತೆಯ ರಕ್ಷಣೆಗಾಗಿ ತನ್ನದೇ ಆದ ಒಂದು ಕಾರ್ಯಸೂಚಿಯನ್ನು ಹಾಕಿಕೊಳ್ಳಬೇಕಾದ ಅನಿವಾರ್ಯತೆ ಸಮಾಜದ ಮುಂದಿದೆ.
- ಸೂರಜ್
ಇದನ್ನೂ ಓದಿ: ಮುಖ್ಯಮಂತ್ರಿಯನ್ನು ಕಂಡಕಂಡಲ್ಲಿ ಘೇರಾವ್ ಮಾಡಿ: ರೈತ-ದಲಿತ ಕಾರ್ಮಿಕ ಐಕ್ಯ ಹೋರಾಟ ಸಮಿತಿ ಕರೆ