ಭಾರತ ಮತ್ತು ಅಮೆರಿಕಾದಲ್ಲಿದ್ದ ಸಹಿಷ್ಣುತೆಯ ವಂಶವಾಹಿ ಕಣ್ಮರೆಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮೆರಿಕದ ಮಾಜಿ ರಾಜತಾಂತ್ರಿಕ ನಿಕೋಲಸ್ ಬರ್ನ್ಸ್ ಅವರೊಂದಿಗಿನ ಸಂಭಾಷಣೆಯಲ್ಲಿ ಹೇಳಿದ್ದಾರೆ.
ಚಿಂತಕರ ಜೊತೆಗಿನ ವಿಡಿಯೋ ಮಾತುಕತೆ ಸರಣಿಯ ಭಾಗವಾಗಿ ರಾಹುಲ್ ಗಾಂಧಿ ಅವರು ಕೊರೊನಾ ವೈರಸ್ ಬಿಕ್ಕಟ್ಟು ವಿಶ್ವವನ್ನು ಹೇಗೆ ಮರುರೂಪಿಸುತ್ತಿದೆ ಎಂಬುದರ ಕುರಿತು ನಿಕೋಲಸ್ ಬರ್ನ್ಸ್ ಅವರೊಂದಿಗೆ ಮಾತನಾಡುತ್ತಿದ್ದರು.
ಬಹಳ ವಿಶಾಲವಾಗಿದ್ದ ಭಾರತ-ಅಮೆರಿಕಾದ ಸಂಬಂಧವು ಈಗ ಮುಖ್ಯವಾಗಿ ರಕ್ಷಣೆಯ ವಿಷಯದ ಮೇಲಷ್ಟೇ ಕೇಂದ್ರೀಕರಿಸಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
“ಭಾರತ ಮತ್ತು ಅಮೆರಿಕಾದ ಪಾಲುದಾರಿಕೆ ಏಕೆ ಕೆಲಸ ಮಾಡುತ್ತದೆ ಎಂದರೆ ನಾವು ಸಹಿಷ್ಣುತೆ ವ್ಯವಸ್ಥೆಗಳನ್ನು ಹೊಂದಿದ್ದೆವು. ನೀವು ಪ್ರಸ್ತಾಪಿಸಿದಂತೆ ಅಮೆರಿಕಾ ವಲಸಿಗರ ರಾಷ್ಟ್ರ. ನಾವು ತುಂಬಾ ಸಹಿಷ್ಣು ರಾಷ್ಟ್ರವಾಗಿದ್ದೇವೆ. ಆದರೆ ಎರಡೂ ರಾಷ್ಟ್ರಗಳಲ್ಲಿನ ಬಲಪಂಥೀಯವಾದದಿಂದಾಗಿ ಪರಿಸ್ಥಿತಿ ದಿನೇ ದಿನೇ ಬದಲಾಗುತ್ತಿದೆ” ಎಂದು ಇಬ್ಬರೂ ವಿಷಾಧ ವ್ಯಕ್ತಪಡಿಸಿದ್ದಾರೆ.
ಧಾಮಿಕ ಸಹಿಷ್ಣುತೆ ಮತ್ತು ಜನಾಂಗೀಯ ಸಹೋದರತ್ವ ನಮ್ಮ ವಂಶವಾಹಿ ಆಗಿದ್ದವು. “ಆದರೆ ಆಶ್ಚರ್ಯಕರ ಸಂಗತಿಯೆಂದರೆ, ಈ ಸಹಿಷ್ಣುತೆಯ ವಂಶವಾಹಿಯೂ ಈಗ ಕಣ್ಮರೆಯಾಗಿದೆ. ಈಗ ನೋಡುವಾಗ ಭಾರತ ಹಾಗೂ ಅಮೆರಿಕಾದಲ್ಲಿ ಹಿಂದಿನ ಸಹಿಷ್ಣುತೆಯ ಮಟ್ಟ ನಾನು ಕಾಣುತ್ತಿಲ್ಲ” ಎಂದು ಅವರು ಅಮೆರಿಕದ ಮಾಜಿ ರಾಜತಾಂತ್ರಿಕರಿಗೆ ತಿಳಿಸಿದ್ದಾರೆ.
ಈ ಅಸಹಿಷ್ಣುತೆಯನ್ನು ಆಳುವ ಸರ್ಕಾರಗಳೇ ಪ್ರೋತ್ಸಾಹಿಸುತ್ತಿರುವುದು ದುರಂತವಾಗಿದೆ. ಸದ್ಯದ ಕೋವಿಡ್ ಬಿಕ್ಕಟ್ಟನ್ನು ಎರಡೂ ರಾಷ್ಟ್ರಗಳುಸೇರಿ ಒಟ್ಟಿಗೆ ಎದುರಿಸಲಿಲ್ಲ, ಬದಲಿಗೆ ಎರಡೂ ರಾಷ್ಟ್ರಗಳು ಅದನ್ನು ಎದುರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂಬು ಅಂಶಗಳು ಚರ್ಚೆಯಲ್ಲಿ ಕೇಳಿಬಂದಿವೆ.
ಕೊರೊನಾ ವೈರಸ್ ಬಿಕ್ಕಟ್ಟಿನ ನಂತರ ವಿಶ್ವವನ್ನು ಮರುರೂಪಿಸುವುದು, ಇಂಡೋ-ಅಮೆರಿಕಾ ಸಂಬಂಧಗಳ ಭವಿಷ್ಯ ಮತ್ತು ಅದನ್ನು ನಿರ್ಮಿಸುವಲ್ಲಿ ಅಮೆರಿಕಾದಲ್ಲಿ ಭಾರತೀಯ ವಲಸಿಗರು ವಹಿಸಿದ ಪ್ರಮುಖ ಪಾತ್ರದ ಮೇಲೆ ರಾಹುಲ್ ಗಾಂಧಿಯ ಸಂವಾದವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ನಿಕೋಲಸ್ ಬರ್ನ್ಸ್ ಪ್ರಸ್ತುತ ಹಾರ್ವರ್ಡ್ನ ಜಾನ್ ಎಫ್ ಕೆನಡಿ ಸ್ಕೂಲ್ ಆಫ್ ಗವರ್ನಮೆಂಟ್ನಲ್ಲಿ ಪ್ರಾಕ್ಟೀಸ್ ಆಫ್ ಡಿಪ್ಲೊಮಸಿ ಮತ್ತು ಇಂಟರ್ನ್ಯಾಷನಲ್ ಪಾಲಿಟಿಕ್ಸ್ ಪ್ರಾಧ್ಯಾಪಕರಾಗಿದ್ದಾರೆ.
ಬರ್ನ್ಸ್ ಅಮೆರಿಕಾದ ರಾಜಕೀಯ ವ್ಯವಹಾರಗಳ ರಾಜ್ಯ ಕಾರ್ಯದರ್ಶಿ ಆಗಿದ್ದರು ಹಾಗೂ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭಾರತ-ಅಮೆರಿಕಾ ಪರಮಾಣು ಒಪ್ಪಂದದ ಮುಖ್ಯ ಸಮಾಲೋಚಕರಾಗಿದ್ದರು.
ವೈರಸ್ ಬಿಕ್ಕಟ್ಟು ಪ್ರಾರಂಭವಾದಾಗಿನಿಂದ ರಾಹುಲ್ ಗಾಂಧಿ ಪ್ರಮುಖ ತಜ್ಞರೊಂದಿಗಿನ ಸರಣಿ ಸಂಭಾಷಣೆಯಲ್ಲಿ, ರಘುರಾಮ್ ರಾಜನ್, ಅಭಿಜಿತ್ ಬ್ಯಾನರ್ಜಿ, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಜೋಹಾನ್ ಗೀಸೆಕೆ ಮತ್ತು ಕೈಗಾರಿಕೋದ್ಯಮಿ ರಾಜೀವ್ ಬಜಾಜ್ ಮುಂತಾದವರೊಂದಿಗೆ ಮಾತನಾಡಿದ್ದಾರೆ.
ಓದಿ: ಕೊರೊನಾ ವಿಷಯದಲ್ಲಿ ರಾಹುಲ್ ಮಾತು ಕೇಳಿದ್ದರೆ ಭಾರತ ಇಟಲಿಯಾಗುತ್ತಿತ್ತು: ಯೋಗಿ ಆದಿತ್ಯನಾಥ್